Home ಕರ್ನಾಟಕ ಚುನಾವಣೆ - 2023 ದಕ್ಷಿಣ ಕನ್ನಡ | ಪ್ರಣಾಳಿಕೆ ಮತ್ತು ಒಗ್ಗಟ್ಟು ಕಾಂಗ್ರೆಸ್ಸನ್ನು ಸೋಲಿಸಿತೇ?

ದಕ್ಷಿಣ ಕನ್ನಡ | ಪ್ರಣಾಳಿಕೆ ಮತ್ತು ಒಗ್ಗಟ್ಟು ಕಾಂಗ್ರೆಸ್ಸನ್ನು ಸೋಲಿಸಿತೇ?

0

ಬಜರಂಗಿ ಪ್ರಣಾಳಿಕೆ, ಶಿಥಿಲ ಸಂಘಟನಾ ವ್ಯವಸ್ಥೆ, ಸಂಘ ಪರಿವಾರದ ಪ್ರೊಪಗಾಂಡಕ್ಕೆ ಬಲಿಯಾಗುವ ಕಾಂಗ್ರೆಸ್ ಮುಖಂಡರು, ಅತ್ಯಂತ ದುರ್ಬಲವಾದ ಸೋಶಿಯಲ್ ಮಿಡಿಯಾ ಬಳಕೆ, ಅಭ್ಯರ್ಥಿಗಳ ಬದಲಾವಣೆ ಮಾಡದಿರುವುದೂ ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ -ರಾಜೇಶ್‌

ಕರ್ನಾಟಕ ರಾಜ್ಯದಲ್ಲಿ ನಿರೀಕ್ಷೆಯಂತೆ 138 (137+1) ಶಾಸಕರನ್ನು ಗೆದ್ದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸರಕಾರ ರಚಿಸಲಿದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು. ಇತ್ತೀಚೆಗೆ ನಡೆದ ಚುನಾವಣಾ ಫಲಿತಾಂಶ ಅತ್ಯಂತ ನಿಖರವಾಗಿಯೇ ಬಂದಿದೆ. ರಾಜ್ಯದ ಎಲ್ಲೆಡೆ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಕೊಡಗು, ಚಿಕ್ಕಮಗಳೂರಿನಂತಹ ಹಿಂದೂತ್ವದ ವಾಸನೆ ದಟ್ಟವಾಗಿ ಇರುವ ಜಿಲ್ಲೆಗಳಲ್ಲಿ ಕೂಡ ಬಿಜೆಪಿ ಧೂಳೀಪಟವಾಗಿದೆ. ಆದರೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಿಜೆಪಿ ದೊಡ್ಡ ಪ್ರಮಾಣದ ಮತಗಳ ಅಂತರದಿಂದ ಜಯ ಕಸಿದುಕೊಂಡಿದೆ.

ದಕ್ಷಿಣ ಕನ್ನಡದ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಆರು ಶಾಸಕರನ್ನು ಗೆದ್ದು  ಎರಡು ಕ್ಷೇತ್ರಗಳನ್ನು ಕಳಕೊಂಡಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಜನಬಲ, ಹಣಬಲ, ಸಮಾಜ ಸೇವೆಯ ನೆರವಿನಿಂದ ಕಾಂಗ್ರೆಸ್ ಬುಟ್ಟಿಗೆ ಒಂದು ಸ್ಥಾನ ಹೆಚ್ಚಿಗೆ ಬಂದಿದೆ. ಮಾಮೂಲಿನಂತೆ ಉಳ್ಳಾಲದಲ್ಲಿ ಯು.ಟಿ.ಖಾದರ್ ಗೆಲುವು ಸಾಧಿಸಿದ್ದು ಇದರೊಂದಿಗೆ ಸತತ ನಾಲ್ಕು ಬಾರಿ ಇವರು ಗೆದ್ದಂತಾಯಿತು. ಇವರ ತಂದೆ ಯು.ಟಿ.ಫರೀದ್ ಕೂಡ ನಾಲ್ಕು ಬಾರಿ ಶಾಸಕರಾಗಿದ್ದರು.

ಮಂಗಳೂರು ಉತ್ತರ (ಸುರತ್ಕಲ್) ಕ್ಷೇತ್ರದಲ್ಲಿ ಬಂಡಾಯವಿದ್ದರೂ ಆ ಕಾರಣಕ್ಕಾಗಿ ಕಾಂಗ್ರೆಸ್ ಸೋತಿಲ್ಲ. ಕನಿಷ್ಟ ಎರಡು ತಿಂಗಳ ಮೊದಲೇ ಇನಾಯತ್ ಆಲಿಗೆ ಟಿಕೇಟ್ ನೀಡಿದ್ದರೆ ನಿಕಟ ಸ್ಪರ್ಧೆ ಉಂಟಾಗುತಿತ್ತು.

ಮಂಗಳೂರು ದಕ್ಷಿಣದಲ್ಲಿ ಹಾಲಿ ಬಿಜೆಪಿ ಶಾಸಕರ ವಿರುದ್ಧ ಪಕ್ಷದ ಕಾರ್ಯಕರ್ತರಿಗೇ ಅಸಮಾಧಾನವಿದ್ದರೂ ಕೂಡ ಚುನಾವಣೆಯಲ್ಲಿ ಸೋಲಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯ ಆಗಲಿಲ್ಲ ಎಂಬುದು ಸೋಜಿಗದ ವಿಚಾರವಾಗಿದೆ. ಮಾಜಿ ಶಾಸಕ ಜೆ.ಆರ್.ಲೋಬೊ ಅವರ ಕಳೆದ ಚುನಾವಣೆಯ ವಿಚಾರಗಳೇ ಅವರನ್ನು ಈ ಬಾರಿ ಕೂಡ ಸೋಲಿಸಿತು. ಜಿಲ್ಲೆಯ ಇತರ ಕ್ಷೇತ್ರಗಳಂತೆ ಮಂಗಳೂರು ದಕ್ಷಿಣದಲ್ಲಿ ಬೂತು ಸಮಿತಿಗಳೇ ಇರಲಿಲ್ಲ. ಒಂದು ಸುಮಾರಾದ ಸೋಶಿಯಲ್ ಮೀಡಿಯಾ ತಂಡ ಇರಲಿಲ್ಲ. ಇಂತಹ ಮೂಲಭೂತ ಆವಶ್ಯಕತೆಗಳಿಲ್ಲದೆ ಯಾವುದೇ ಚುನಾವಣೆ ಗೆಲ್ಲುವುದು ಇಂದಿನ ಕಾಲದಲ್ಲಿ ಸಾಧ್ಯವಿರುವುದಿಲ್ಲ.

ಬಂಟ್ವಾಳದಲ್ಲಿ ಕಾಂಗ್ರೆಸ್ ಪಕ್ಷದ ಹಿತದೃಷ್ಟಿಯಿಂದ ಅಭ್ಯರ್ಥಿಯನ್ನು ಬದಲಾಯಿಸ ಬೇಕಾಗಿತ್ತು. ಕಾಂಗ್ರೆಸ್ ನಡೆಸಿದ ಮೂರು ಸರ್ವೇಗಳಲ್ಲಿ ಕೂಡ ಮಾಜಿ ಸಚಿವ ರಮಾನಾಥ ರೈ ಸೋಲುತ್ತಾರೆ ಎಂದು ವರದಿಯಾಗಿದ್ದರು ಕೂಡ, ತನಗೆ ಗೆಲುವು ಕಷ್ಟಕರ ಎಂದು ಗೊತ್ತಿದ್ದು ರಮಾನಾಥ ರೈ ಅವರು ಕಣಕ್ಕಿಳಿದು ಸೋತೇ ಹೋದರು. ಬಂಟ್ವಾಳದಲ್ಲಿ ಒಬ್ಬ ಬಿಲ್ಲವ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಇಡೀ ಜಿಲ್ಲೆಯ ಚಿತ್ರಣ ಬೇರೆಯೇ ಆಗಿರುತಿತ್ತು. ರಮಾನಾಥ ರೈ ಮತ್ತು ಅದರೊಂದಿಗೆ ಕಾಂಗ್ರೆಸ್ ಸೋಲುವುದು ತಪ್ಪುತ್ತಿತ್ತು.

ಸುಳ್ಯದಲ್ಲಿ ಗೊಂದಲ ಇರದೇ ಇರುತ್ತಿದ್ದರೆ, ಏಐಸಿಸಿ ವೀಕ್ಷಕರು 15 ದಿವಸ ಮೊದಲೇ ಸುಳ್ಯದಲ್ಲಿ ಮೊಕ್ಕಂ ಹೂಡಿದ್ದರೆ ಸುಳ್ಯದ ಫಲಿತಾಂಶದಲ್ಲಿ ಬದಲಾವಣೆ ಮಾಡಲು ಸಾಧ್ಯವಿತ್ತು. ಬೆಳ್ತಂಗಡಿಯಲ್ಲಿ ರಕ್ಷಿತ್ ಶಿವರಾಮ್ ಗೆ ಹಿರಿಯ ಕಾಂಗ್ರೆಸ್ಸಿಗರು ಸ್ವಲ್ಪ ಮಾರ್ಗದರ್ಶನ ಮಾಡಿದ್ದರೆ, ಅದೇ ರೀತಿ ಅರೆಭಾಷೆ ಗೌಡರು ಮತ್ತು ಬಿಲ್ಲವ ಸಮುದಾಯದವರು ಎಚ್ಚೆತ್ತು ಕೊಂಡಿದ್ದರೆ ಇನ್ನೂ ನಿಕಟ ಸ್ಪರ್ಧೆ ನೀಡಬಹುದಿತ್ತು.

ಮೂಡಬಿದಿರೆಯಲ್ಲಿ ಯುವ ಮುಖಂಡ ಮಿಥುನ್ ರೈ ಕಳೆದ ಕೆಲವು ವರ್ಷಗಳಿಂದ ಮೂಡಬಿದಿರೆಯಲ್ಲಿ ಕೆಲಸ ಮಾಡಿದರೂ ನಿಕಟ ಸ್ಪರ್ಧೆ ನೀಡಲು ಕೂಡ ವಿಫಲರಾಗಿದ್ದಾರೆ. ಆದರೆ, ಮಂಗಳೂರಿನ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು ಕೂಡ ಮಿಥುನ್ ರೈ ಗೆಲ್ಲುವ ಅವಕಾಶ ವಿತ್ತು. ಮೂಡಬಿದಿರೆಯಲ್ಲಿ ಹಾಲಿ ಶಾಸಕ ಉಮಾನಾಥ ಕೋಟ್ಯಾನ್ ವಿರುದ್ಧ ಮತದಾರರ ಅಸಮಾಧಾನ ಹೆಚ್ಚೇನು ಇರಲಿಲ್ಲ.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರ ಪಾತ್ರ ಎಲ್ಲ ಚುನಾವಣೆಯಲ್ಲಿ ಗೌಣ ಆದಂತೆ ಈ ಬಾರಿಯು ಅವರ ಕೊಡುಗೆ ಗೆಲ್ಲಲು ಸಹಾಯಕ್ಕೆ ಬರಲಿಲ್ಲ.

ಬಜರಂಗಿ ಪ್ರಣಾಳಿಕೆ

ಇಡೀ ರಾಜ್ಯದಲ್ಲಿ ಮತದಾರರ ಒಲವು ಕಾಂಗ್ರೆಸ್ ಕಡೆಗಿದ್ದಾಗ, ದಕ್ಷಿಣ ಕನ್ನಡ ಉಡುಪಿಯಲ್ಲಿ ಬಿಜೆಪಿ ಮುನ್ನಡೆ ಪಡೆಯಲು ಕಾಂಗ್ರೆಸ್ ಪಕ್ಷದ ಬಜರಂಗಿ ಪ್ರಣಾಳಿಕೆಯೂ ಒಂದು ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಇದರೊಂದಿಗೆ ಶಿಥಿಲ ಸಂಘಟನಾ ವ್ಯವಸ್ಥೆ, ಸಂಘ ಪರಿವಾರದ ಪ್ರೊಪಗಾಂಡಕ್ಕೆ ಬಲಿಯಾಗುವ ಕಾಂಗ್ರೆಸ್ ಮುಖಂಡರು, ಅತ್ಯಂತ ದುರ್ಬಲವಾದ ಸೋಶಿಯಲ್ ಮಿಡಿಯಾ ಬಳಕೆ, ಅಭ್ಯರ್ಥಿಗಳ ಬದಲಾವಣೆ ಮಾಡದಿರುವುದು ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ.

ಚುನಾವಣೆಯ ಕೊನೆಯ ಹಂತದಲ್ಲಿ ಬಿಡುಗಡೆಯಾದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗಲಿಬಿಲಿಯನ್ನುಂಟು ಮಾಡಿದರೆ, ಬಿಜೆಪಿಯವರಿಗೊಂದು ಪ್ರಬಲ ಪ್ರಚಾರದ ಅಸ್ತ್ರವಾಗಿ ಪರಿಣಮಿಸಿತು. ಮಾಜಿ ಗೃಹ ಸಚಿವ ಡಾ.ಜಿ.ಪರಮೇಶ್ವರರವರ ಅಧ್ಯಕ್ಷತೆಯ ಕೆಲವು ಪ್ರೊಫೆಸರುಗಳನ್ನು ಒಳಗೊಂಡ ಸಮಿತಿ ಹೊರತಂದ ಪ್ರಣಾಳಿಕೆಯಲ್ಲಿ ಸಂವಿಧಾನವನ್ನು ಉಲ್ಲಂಘಿಸುವ ಭಜರಂಗದಳ ಮತ್ತು ಪಿಎಫ್ಐ ನಂತಹ ಸಂಘಟನೆಗಳನ್ನು ನಿಷೇಧ ಮಾಡಲಾಗುವುದು ಎಂದು ಹೇಳಲಾಗಿದೆ. ಪಿಎಫ್ಐ ಈಗಾಗಲೇ ನಿಷೇಧ ಆಗಿದೆ. ಬಿಜೆಪಿಯು ಯಾವುದೇ ವಿಚಾರಗಳನ್ನು ತಿರುಚಿ ಪ್ರಚಾರ ಮಾಡಬಲ್ಲ ಸಕಲ ವ್ಯವಸ್ಥೆ ಹೊಂದಿರುವಾಗ ಕಾಲಾಳುಗಳೇ ಇಲ್ಲದ ಕಾಂಗ್ರೆಸ್ ಪಾರ್ಟಿಗೆ ಆ ಅಪಪ್ರಚಾರವನ್ನು ಎದುರಿಸುವ mechanism ಇಲ್ಲದೆ ಇರುವಾಗ ಇಂತಹ ಎಡವಟ್ಟುಗಳನ್ನು ಮಾಡುವ ಅಗತ್ಯ ಇರಲಿಲ್ಲ.

ಬಿಜೆಪಿಯ ಬಜರಂಗಿ ಅಪಪ್ರಚಾರಕ್ಕೆ ಮೊದಲು ತಬ್ಬಿಬ್ಬಾಗಿದ್ದೆ ಕಾಂಗ್ರೆಸ್ ಕಾರ್ಯಕರ್ತರು. ಅದು ಹಾಗಲ್ಲ ಹೀಗೆ ಎಂದು ಸ್ಪಷ್ಟೀಕರಣ ನೀಡುವ ಗೋಜಿಗೆ ಇಬ್ಬರು ಮಾಜಿ ಸಚಿವರಾಗಲಿ, ಇಬ್ಬರು ಎಂಎಲ್ಸಿಗಳಾಗಲಿ ಹೋಗಲಿಲ್ಲ. ದಕ್ಷಿಣ ಕನ್ನಡದ ಕಾಂಗ್ರೆಸ್ ಮುಖಂಡರು ಕಾಂಗ್ರೆಸ್ ಪರವಾಗಿ ಹೇಳಿಕೆ ನೀಡಲು ಭೀತಿ ಪಡುತ್ತಾರೆ. ಅಂತಹ ಪುಕ್ಕಲು ಮಂದಿಯನ್ನು ಕಟ್ಟಿಕೊಂಡು ಪಕ್ಷ ಚುನಾವಣೆ ಎದುರಿಸಲುಂಟೇ?

ಬಜರಂಗಿ ಪ್ರಣಾಳಿಕೆ ಹೊರಬರುತ್ತಿದ್ದಂತೆ ದಕ್ಷಿಣ ಕನ್ನಡದ ಬಿಜೆಪಿ ಮುಂಖಂಡರು, ಗುಂಪುಗಳ ಮುಖಂಡರು ಭಜನಾ ಮಂದಿರ, ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸ ಪಠಿಸಲು ತೊಡಗಿದರು ಮಾತ್ರವಲ್ಲದೆ ಹನುಮಾನ್, ಶ್ರೀರಾಮನ ಪೂಜೆಗೆ ನಿಷೇಧ ಮಾಡಲಾಗುತ್ತದೆ ಎಂದು ಅಪಪ್ರಚಾರ ಮಾಡಲಾಯಿತು. ಇದು ಸಾಲದು ಎಂಬಂತೆ ಇತ್ತೀಚೆಗೆ ನಡೆದ ಪಡೀಲ್ ಕುಕ್ಕರ್ ಸ್ಪೋಟ ಪ್ರಕರಣ ಅದಕ್ಕೆ ಮೊದಲೇ ದೊಡ್ಡ ಪ್ರಮಾಣದಲ್ಲಿ ಪ್ರಚಾರದಲ್ಲಿತ್ತು.

ಹಲವು ಕ್ಷೇತ್ರಗಳಲ್ಲಿ ವ್ಯಕ್ತಿಗತ ಭಿನ್ನಭಿಪ್ರಾಯ, ಗುಂಪುಗಾರಿಕೆಯನ್ನು ಮರೆತು ಕಾಂಗ್ರೆಸ್ಸಿರು ಒಂದಾದರು ಕೂಡ ಮಾನಸಿಕವಾಗಿ ಒಗ್ಗಟ್ಟಾಗಿರಲಿಲ್ಲ. ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆಯಲ್ಲೂ ಹಿಂದುಳಿದಿತ್ತು. ಹೀಗೆ ಹಲವಾರು ಕಾರಣಗಳಿಂದ ಕಾಂಗ್ರೆಸ್ಸಿಗೆ ಸೋಲಾಯಿತು.

ರಾಜೇಶ್‌, ಮಂಗಳೂರು

ಇದನ್ನೂ ಓದಿhttps://peepalmedia.com/congress-democratic-win/ http://ಕಾಂಗ್ರೆಸ್ಸಿನಲ್ಲಿ ಸರ್ವಜನಾಂಗದವರಿಗೂ ಜಯ: ಯಾವ ಸಮುದಾಯ ಎಷ್ಟು ಸ್ಥಾನ ಗೆದ್ದಿದೆ? ಇಲ್ಲಿದೆ ಸಂಪೂರ್ಣ ವರದಿ

You cannot copy content of this page

Exit mobile version