Home ರಾಜಕೀಯ ದತ್ತಾಂಶಗಳ ವಾಸ್ತವವೂ ನಿರಾಕರಣೆಯ ನೀತಿಯೂ

ದತ್ತಾಂಶಗಳ ವಾಸ್ತವವೂ ನಿರಾಕರಣೆಯ ನೀತಿಯೂ

0

ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯ ಸರ್ಕಾರಗಳು ತಮ್ಮದೇ ಸಂಸ್ಥೆಗಳು ನಡೆಸುವ ಸಮೀಕ್ಷೆಗಳನ್ನೂ ಅಲ್ಲಗಳೆಯುವುದಲ್ಲದೆ, ಸ್ವತಂತ್ರವಾಗಿ ನಡೆಸಲಾಗುವ ಹಲವು ಸಮೀಕ್ಷೆಗಳ ವರದಿಗಳನ್ನು ಸಾರಾಸಗಟಾಗಿ ನಿರಾಕರಿಸಿವೆ. ಹಸಿವು, ಬಡತನ ಇತ್ಯಾದಿಗಳ ಸೂಚಕಗಳಲ್ಲಿ ಜಾಗತಿಕ ಶ್ರೇಣಿಯನ್ನು ಮಾನಾಪಮಾನದ ಮಾನದಂಡವಾಗಿ ಕಾಣುತ್ತಾ, ಕಳಪೆ ಶ್ರೇಣಿಯನ್ನು ಅಪಮಾನಕರ ಎಂದು ಭಾವಿಸುವುದು ಆತ್ಮದ್ರೋಹವಾಗುತ್ತದೆ- ನಾ ದಿವಾಕರ, ಚಿಂತಕರು

ಭಾರತದ ಸಂವಿಧಾನ ಆಶಿಸುವ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಆಯಾ ಕಾಲಕ್ಕೆ ಸರ್ಕಾರಗಳು ಜಾರಿಗೊಳಿಸುವ ಆಡಳಿತ ನೀತಿಗಳು ಹಾಗೂ ಆರ್ಥಿಕ ಯೋಜನೆಗಳು ಮಹತ್ತರ ಪಾತ್ರ ವಹಿಸುತ್ತವೆ. ದೇಶದ ಮುಕ್ಕಾಲು ಪಾಲು ಜನಸಂಖ್ಯೆ ಇಂದಿಗೂ ತಮ್ಮ ಜೀವನೋಪಾಯದ ಸುಸ್ಥಿರ ಮಾರ್ಗಗಳನ್ನು ಕಂಡುಕೊಳ್ಳದೆ ಇರುವ ಭಾರತದಲ್ಲಿ ಈ ಯೋಜನೆಗಳೇ ಬಹುಸಂಖ್ಯಾತ ಜನತೆಯ ಜೀವನವನ್ನು ಸುಸ್ಥಿರಗೊಳಿಸದಿದ್ದರೂ, ಸುಗಮವಾಗಿಸುತ್ತವೆ. ಭಾರತದಲ್ಲಿ ಪ್ರಾದೇಶಿಕ ವೈವಿಧ್ಯತೆಯೂ ಸಂಕೀರ್ಣವಾಗಿರುವುದರಿಂದ ತಳಮಟ್ಟದ ಸಾಮಾಜಿಕ ಜನಜೀವನವನ್ನು ಸುಧಾರಿಸುವ ನಿಟ್ಟಿನಲ್ಲಿ ಆಯಾ ಕಾಲಕ್ಕೆ ಸಂಗ್ರಹಿಸಲಾಗುವ ಸಾಂಖ್ಯಿಕ ಅಂಕಿ ಅಂಶಗಳು ಹಾಗೂ ದತ್ತಾಂಶಗಳು ನೆರವಾಗುತ್ತವೆ. ಈ ತಾತ್ವಿಕ ನೆಲೆಯಲ್ಲೇ ಸ್ವಾತಂತ್ರ್ಯಾನಂತರದ ಯೋಜನಾ ಆಯೋಗಗಳೂ ಸಹ ಕಾರ್ಯನಿರ್ವಹಿಸುತ್ತಾ ಬಂದಿವೆ. ಜನಸಾಮಾನ್ಯರ ಜೀವನಮಟ್ಟ ಸುಧಾರಣೆಗಾಗಿ ರೂಪಿಸಲಾಗುವ ಆಡಳಿತ ಯೋಜನೆಗಳಿಗೆ ಅಗತ್ಯವಾದ ದತ್ತಾಂಶಗಳನ್ನು ಸಂಗ್ರಹಿಸುವ ಸಲುವಾಗಿಯೇ ಹಲವು ಕೇಂದ್ರೀಯ ಸಂಸ್ಥೆಗಳನ್ನೂ ಸ್ಥಾಪಿಸಲಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-ನ್ಯಾಶನಲ್‌ ಫ್ಯಾಮಿಲಿ ಹೆಲ್ತ್‌ ಸರ್ವೆ)) ನಡೆಸುವ  ಅಂತರರಾಷ್ಟ್ರೀಯ ಜನಸಂಖ್ಯಾ ವಿಜ್ಞಾನ ಸಂಸ್ಥೆ (IIPS – International Institute for Population Sciences) ಇಂತಹ ಅರೆ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

National Family Health Survey (NFHS)

ದೇಶದ ಜನತೆಯ ಆರೋಗ್ಯ ಸ್ಥಿತಿಗತಿ, ಪೌಷ್ಟಿಕಾಂಶದ ಪ್ರಮಾಣ, ಸಾಕ್ಷರತೆ, ಪ್ರಾಥಮಿಕ ಶಿಕ್ಷಣ ಮತ್ತು ಆರೋಗ್ಯ ಸೇವೆಯ ಲಭ್ಯತೆ ಮತ್ತು ಶೌಚಾಲಯ ಸೌಲಭ್ಯಗಳನ್ನು ಸಮೀಕ್ಷೆ ನಡೆಸುವ ಮೂಲಕ NFHS ನಾಲ್ಕೈದು ವರ್ಷಗಳಿಗೊಮ್ಮೆ ಸರ್ಕಾರಕ್ಕೆ ವಾಸ್ತವ ಅಂಕಿಅಂಶಗಳನ್ನು ಒದಗಿಸುತ್ತದೆ. ಈ ವರದಿಯನ್ನು ಆಧರಿಸಿಯೇ ಸರ್ಕಾರಗಳು ಬಡತನ, ಅಪೌಷ್ಟಿಕತೆ, ನಿರ್ಗತಿಕತೆ ಹಾಗೂ ಅನೈರ್ಮಲ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸುತ್ತವೆ. ಈ ವರದಿಯ ಮೂಲಕವೇ ಸರ್ಕಾರವು ಅವಕಾಶವಂಚಿತ ಜನತೆಯ ಸಂಖ್ಯೆಯನ್ನೂ ಅಳೆಯಲು ಸಾಧ್ಯವಾಗುತ್ತದೆ. ತನ್ಮೂಲಕ ಸಾಮಾಜಿಕ-ಆರ್ಥಿಕ ಸಮಾನತೆಯನ್ನು ಸರಿದೂಗಿಸಲು ಆಯಾ ಕ್ಷೇತ್ರಗಳಿಗೆ ಒದಗಿಸಬಹುದಾದ ಅನುದಾನದ ಪ್ರಮಾಣವನ್ನು ನಿರ್ಧರಿಸಲಾಗುತ್ತದೆ. 2019ರಲ್ಲಿ NFHS ಐದನೆಯ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದ್ದು, ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯವೇ ಇದನ್ನು 2021ರಲ್ಲಿ ಬಿಡುಗಡೆ ಮಾಡಿತ್ತು.

ಆದರೆ ಈ ವರದಿಯಲ್ಲಿ ನೀಡಿರುವ ದತ್ತಾಂಶಗಳಿಗೂ, ಸರ್ಕಾರ ಸಂಸತ್ತಿನಲ್ಲಿ ಮತ್ತು ತನ್ನ ಅಧಿಕೃತ ದಾಖಲೆಗಳಲ್ಲಿ ಒದಗಿಸಿರುವ ಮಾಹಿತಿಗಳಿಗೂ ಅಪಾರ ಅಂತರ ಇರುವುದನ್ನು ಗಮನಿಸಬಹುದು. ಕೆಲವು ಉದಾಹರಣೆಗಳನ್ನು ನೀಡುವುದಾದರೆ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಉಜ್ವಲ ಯೋಜನೆಯಡಿ ದೇಶದ ಶೇ 98ಕ್ಕೂ ಹೆಚ್ಚು ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕವನ್ನು ಒದಗಿಸಲಾಗಿದೆ ಎಂದು ಸರ್ಕಾರ ಸಂಸತ್ತಿನಲ್ಲಿ ಹೇಳಿತ್ತು. ಆದರೆ NFHS ಸಮೀಕ್ಷೆಯ ಅನುಸಾರ ಶೇ 40ಕ್ಕೂ ಹೆಚ್ಚು ಕುಟುಂಬಗಳು ಅಡುಗೆ ಅನಿಲದಿಂದ ವಂಚಿತರಾಗಿವೆ. 2019ರಲ್ಲಿ ಅತ್ಯುತ್ಸಾಹದಿಂದ ಆರಂಭವಾದ ಸ್ವಚ್ಚ ಭಾರತ ಅಭಿಯಾನದ ಮೂಲಕ ಭಾರತ ಸರ್ಕಾರ  ಭಾರತವು ಬಯಲು ಶೌಚ ಮುಕ್ತವಾಗಿದೆ ಎಂದು ಘೋಷಿಸಿತ್ತು. ಬಯಲು ಬಹಿರ್ದೆಸೆಯಿಂದ ಎಲ್ಲ ಗ್ರಾಮಗಳನ್ನೂ ಮುಕ್ತಗೊಳಿಸುವುದು ಹಾಗೂ ಪ್ರತಿಯೊಂದು ಮನೆಗೂ ಶೌಚಾಲಯ ಒದಗಿಸುವುದು ಈ ಅಭಿಯಾನದ ಉದಾತ್ತ ಗುರಿಯೂ ಆಗಿತ್ತು.  ಆದರೆ ಇದೇ ಅವಧಿಯಲ್ಲಿ ಬಿಡುಗಡೆಯಾದ NFHS ಸಮೀಕ್ಷೆಯ ಅನುಸಾರ ದೇಶದ ಶೇ 30ರಷ್ಟು ಜನರಿಗೆ ಶೌಚಾಲಯ ವ್ಯವಸ್ಥೆ ಲಭ್ಯವಾಗಿಲ್ಲ. ಸಾಮಾಜಿಕ ನ್ಯಾಯ ಮತ್ತು ಉತ್ತಮ ಆರೋಗ್ಯ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಪೌಷ್ಟಿಕತೆಯ ದತ್ತಾಂಶಗಳೂ ಸರ್ಕಾರದ ಹೇಳಿಕೆಗಳಿಗೆ ವಿರುದ್ಧವಾಗಿಯೇ ಇದೆ. ಇದೇ ಸಮೀಕ್ಷೆಯ ಅನುಸಾರ ದೇಶದಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿರುವ ಜನರ ಪ್ರಮಾಣ 2015-19ರ ಅವಧಿಯಲ್ಲಿ ಏರಿಕೆಯಾಗಿದೆ.  2015-16ರಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವ ಮಹಿಳೆಯರ ಪ್ರಮಾಣ ಶೇ 53ರಷ್ಟಿದ್ದುದು  2019ರಲ್ಲಿ ಶೇ 67ಕ್ಕೆ ಏರಿಕೆಯಾಗಿದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.

ಸರ್ಕಾರದ ವಿವಿಧ ಸಚಿವಾಲಯಗಳು ಸಂಸತ್ತಿನಲ್ಲಿ ಮಂಡಿಸುವ ಮಾಹಿತಿಗಳು, ಸರ್ಕಾರಿ ಸಂಸ್ಥೆಗಳೇ ನಡೆಸುವ ಸಮೀಕ್ಷೆಯಲ್ಲಿ ಒದಗಿಸಲಾಗಿರುವ ದತ್ತಾಂಶಗಳಿಗೂ ಅಪಾರ ವ್ಯತ್ಯಾಸ ಇರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ದುರಾದೃಷ್ಟವಶಾತ್‌ NFHS ಸಮೀಕ್ಷೆಯ ನೇತೃತ್ವ ವಹಿಸಿದ್ದ IIPS ನಿರ್ದೇಶಕರನ್ನೇ ಅನ್ಯ ಕಾರಣಗಳಿಗಾಗಿ ಅಮಾನತುಗೊಳಿಸಲಾಗಿತ್ತು. ಈಗ ಕೆ. ಎಸ್.‌ ಜೇಮ್ಸ್‌ ತಮ್ಮ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಮೀಕ್ಷೆಯ ಸತ್ಯಾಸತ್ಯತೆಗಳನ್ನು ಸರ್ಕಾರವೇ ನಿರಾಕರಿಸಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯ ಸರ್ಕಾರಗಳು ತಮ್ಮದೇ ಸಂಸ್ಥೆಗಳು ನಡೆಸುವ ಸಮೀಕ್ಷೆಗಳನ್ನೂ ಅಲ್ಲಗಳೆಯುವುದಲ್ಲದೆ, ಸ್ವತಂತ್ರವಾಗಿ ನಡೆಸಲಾಗುವ ಹಲವು ಸಮೀಕ್ಷೆಗಳ ವರದಿಗಳನ್ನು ಸಾರಾಸಗಟಾಗಿ ನಿರಾಕರಿಸಿವೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭಲ್ಲಿ ಮಡಿದ ವಲಸೆ ಕಾರ್ಮಿಕರ ಸಂಖ್ಯೆ ಹಾಗೂ ಕೋವಿಡ್‌ ನಿಂದಾಗಿ ಸಾವಿಗೀಡಾದ ಜನರ ಸಂಖ್ಯೆ ನಿಖರ ಮಾಹಿತಿಯನ್ನು ಈವರೆಗೂ ಒದಗಿಸಲಾಗಿಲ್ಲ.

ಜಾಗತಿಕ ಹಸಿವು ಸೂಚ್ಯಂಕವು (GHI) ವಿಶ್ವದಾದ್ಯಂತ 125 ದೇಶಗಳಲ್ಲಿ ಇರುವ ಹಸಿವಿನ ಪ್ರಮಾಣವನ್ನು ವೈಜ್ಞಾನಿಕ ಸಮೀಕ್ಷೆಯ ವಿಧಾನಗಳನ್ನು ಅನುಸರಿಸಿ ಪ್ರತಿ ವರ್ಷ ವರದಿ ಮಾಡುತ್ತದೆ.  2022ರ ವರದಿಯಲ್ಲಿ  ಭಾರತ 125 ದೇಶಗಳ ಪೈಕಿ 107ನೆಯ ಸ್ಥಾನದಲ್ಲಿತ್ತು. ಆದರೆ  ಇತ್ತೀಚೆಗೆ ಬಿಡುಗಡೆಯಾದ  2023ರ ವರದಿಯ ಅನುಸಾರ 111ನೆಯ ಸ್ಥಾನಕ್ಕೆ ಕುಸಿದಿದೆ. ಅಂದರೆ ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಸರಳವಾಗಿ ಹೇಳಬಹುದು. ಈ ಸಮೀಕ್ಷೆಯಲ್ಲಿ ಸೂಚಿಸುವ ʼಹಸಿವುʼ ಎಂದರೆ ಅನ್ನಾಹಾರದ ಕೊರತೆ ಎಂದು ಅರ್ಥವಲ್ಲ. ಸಾಮಾನ್ಯ ಮನುಷ್ಯನ ದೇಹಕ್ಕೆ ಅವಶ್ಯವಾದ ಕ್ಯಾಲೋರಿಗಳ ಆಹಾರ ಮತ್ತು ಪೌಷ್ಟಿಕಾಂಶಗಳ ಕೊರತೆಯನ್ನು ʼ ಹಸಿವು ʼ ಎಂದು ನಿಷ್ಕರ್ಷೆ ಮಾಡಲಾಗುತ್ತದೆ.  ಇದರಿಂದ ಮಕ್ಕಳಲ್ಲಿ ಉಂಟಾಗುವ ಕುಂಠಿತ ಬೆಳವಣಿಗೆ, ತಾಯಂದಿರಲ್ಲಿನ ಅಪೌಷ್ಟಿಕತೆ ಮತ್ತು ರಕ್ತಹೀನತೆಯಿಂದ ಮಕ್ಕಳಲ್ಲಿ ಉಂಟಾಗುವ ಬೆಳವಣಿಗೆಯ ಸಮಸ್ಯೆಗಳು, ಕಡಿಮೆ ತೂಕ ಇರುವುದು,  ಶಿಶುಮರಣ ಪ್ರಮಾಣ, ತಾಯಂದಿರ ಮರಣ ಪ್ರಮಾಣ ಇತ್ಯಾದಿ ಅಂಶಗಳನ್ನು ಇಂತಹ ಸಮೀಕ್ಷೆಗಳು ಬಿಂಬಿಸುತ್ತವೆ.

ಆಯಾ ಕಾಲಕ್ಕೆ ಸ್ವತಂತ್ರ ಜಾಗತಿಕ ಸಂಸ್ಥೆಗಳು ಮಾಧ್ಯಮ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ, ಬಡತನದ ಸೂಚ್ಯಂಕ, ಧಾರ್ಮಿಕ ಸ್ವಾತಂತ್ರ್ಯ  ಹೀಗೆ ಹಲವು ವಿಷಯಗಳಲ್ಲಿ ದತ್ತಾಂಶಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತವೆ. ವಿಶ್ವದ ಬಹುತೇಕ ರಾಷ್ಟ್ರಗಳು ಈ ವರದಿಗಳನ್ನು ಆಧರಿಸಿಯೇ ತಮ್ಮ ಆರ್ಥಿಕ-ಸಾಮಾಜಿಕ ನೀತಿ ಮತ್ತು ಯೋಜನೆಗಳನ್ನು ಪುನಾರಚನೆ ಮಾಡಿಕೊಳ್ಳುವುದು ವಾಡಿಕೆ. ಭಾರತದಲ್ಲೂ ಸಹ ಸರ್ಕಾರಗಳು ಇದೇ ಕ್ರಮವನ್ನು ಅನುಸರಿಸುತ್ತಾ ಬಂದಿವೆ. ಈ ಸಮೀಕ್ಷೆಗಳನ್ನು ಕೆಲವು ಸ್ವೀಕೃತ ವೈಜ್ಞಾನಿಕ ತಳಹದಿಯ ಮಾನದಂಡಗಳನ್ನು ಅನುಸರಿಸಿ ಮಾಡಲಾಗುತ್ತದೆ. ಬ್ರಿಟನ್ನಿನ ಪ್ರಧಾನಿಯಾಗಿದ್ದ  ಬೆಂಜಮಿನ್‌ ಡಿಸ್ರೇಲಿ ಒಮ್ಮೆ ಸಾಂಖ್ಯಿಕ ಮಾಹಿತಿಗಳನ್ನು ಕುರಿತು “ ಪ್ರಪಂಚದಲ್ಲಿ ಮೂರು ರೀತಿಯ ಸುಳ್ಳುಗಳಿವೆ : ಸುಳ್ಳು, ಕೆಟ್ಟ ಸುಳ್ಳು ಮತ್ತು ಸಂಖ್ಯಾಶಾಸ್ತ್ರ ” ಎಂದು ಹೇಳಿದ್ದರು. Statistics ಅಥವಾ ಸಂಖ್ಯಾಶಾಸ್ತ್ರ ಉಗಮಿಸಿದ ದಿನದಿಂದಲೇ ಅದನ್ನು ಸುಳ್ಳುಗಳ ಕಂತೆ ಎಂದೇ ವ್ಯಾಖ್ಯಾನಿಸುವ ಪರಂಪರೆಯೂ ಇದೆ.

ಆದಾಗ್ಯೂ ಒಂದು ದೇಶದ ಅಥವಾ ಪ್ರದೇಶದ ಜನಸಾಮಾನ್ಯರ ಜೀವನಮಟ್ಟ, ಜೀವನೋಪಾಯದ ಮಾರ್ಗಗಳು ಹಾಗೂ ಜೀವನಶೈಲಿಯನ್ನು ಅಳೆಯಲು ಯಾವುದೇ ಒಂದು ಮಾನದಂಡ ಇದ್ದರೆ ಅದು ಅಂಕಿಅಂಶಗಳೇ ಆಗಿವೆ. ಆಧುನಿಕ ಪ್ರಪಂಚದ ಎಲ್ಲ ಆಳ್ವಿಕೆಗಳಲ್ಲೂ ಸಹ ಇಂತಹ ಅಂಕಿ ಅಂಶಗಳ ಸೂಚ್ಯಂಕಗಳನ್ನು ಅವಲಂಬಿಸಿಯೇ ಜನರ ಜೀವನಮಟ್ಟ ಸುಧಾರಿಸುವಂತಹ ಆರ್ಥಿಕ ನೀತಿ-ಯೋಜನೆಗಳನ್ನು ರೂಪಿಸುವುದು ರೂಢಿಗತವಾಗಿ ಬಂದಿದೆ. ಸಂಖ್ಯಾಶಾಸ್ತ್ರ ತಜ್ಞರು, ಅರ್ಥಶಾಸ್ತ್ರಜ್ಞರು ಹಾಗೂ ಸಮಾಜಶಾಸ್ತ್ರೀಯ ವಿದ್ವಾಂಸರು ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸುವ ಮೂಲಕ ಯಾದೃಚ್ಛಿಕ ಸಮೀಕ್ಷೆಗಳನ್ನು (Random Survey) ನಡೆಸುತ್ತಾರೆ. ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ವಾಸಿಸುವ ಜನತೆಯನ್ನು ಸಂಪರ್ಕಿಸುವ ಮೂಲಕ ಸೌಲಭ್ಯಗಳ ಲಭ್ಯತೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಾರೆ. ಇಂತಹ ಸಮೀಕ್ಷೆಗಳು ಇಲ್ಲದೆ ಹೋದರೆ ಸರ್ಕಾರಗಳಿಗೂ ಸಹ ತಮ್ಮ ಆಡಳಿತ ನೀತಿಗಳ ಫಲಪ್ರದತೆಯಾಗಲೀ, ಫಲಾನುಭವಿಗಳ ಮಾಹಿತಿಯಾಗಲೀ ಲಭ್ಯವಾಗುವುದೇ ಇಲ್ಲ.

ಆದರೆ 2014ರ ನಂತರದಲ್ಲಿ ಕೇಂದ್ರ ಸರ್ಕಾರದ ಧೋರಣೆ ಬದಲಾಗಿದ್ದು, ಇಂತಹ ಸ್ವತಂತ್ರ ಹಾಗೂ ಸರ್ಕಾರಿ ಸಮೀಕ್ಷೆಗಳನ್ನೂ ಅಲ್ಲಗಳೆಯುವುದು ಸಾಮಾನ್ಯ ಸಂಗತಿಯಾಗಿದೆ. ಈ ಸಮೀಕ್ಷೆಗಳು ಹೇಳುವುದು ಪ್ರತಿಶತ ಸತ್ಯವೋ ಅಲ್ಲವೋ ಎಂದು ವಾದಿಸುವುದಕ್ಕಿಂತಲೂ,  ಈ ಸೂಚ್ಯಂಕಗಳಲ್ಲಿ ಬಿಂಬಿತವಾಗುವ ಜನಜೀವನದ ಚಿತ್ರಣವು ಸರ್ಕಾರಗಳನ್ನು ನಿದ್ರಾವಸ್ಥೆಯಿಂದ ಎಚ್ಚರಿಸುವ ಅಲಾರಂ ಗಡಿಯಾರಗಳಂತೆ ಪರಿಗಣಿಸುವುದು ಉಚಿತ. ನವ ಉದಾರವಾದ ಮತ್ತು ಮಾರುಕಟ್ಟೆ ಬಂಡವಾಳಶಾಹಿ ಆರ್ಥಿಕತೆಯು ಜಗತ್ತಿನಾದ್ಯಂತ ಸೃಷ್ಟಿಸುತ್ತಿರುವ ಅಸಮಾನತೆ ಮತ್ತು ಹೆಚ್ಚಿಸುತ್ತಿರುವ ಬಡವ-ಸಿರಿವಂತರ ನಡುವಿನ ಅಂತರವನ್ನು ಗಮನಿಸಿದಾಗ, ಈ ಸೂಚ್ಯಂಕಗಳು ಭವಿಷ್ಯದ ನೀತಿಗಳ ಅಡಿಪಾಯವಾಗಬೇಕು. ಹಸಿವು, ಬಡತನ ಇತ್ಯಾದಿಗಳ ಸೂಚಕಗಳಲ್ಲಿ ಜಾಗತಿಕ ಶ್ರೇಣಿಯನ್ನು ಮಾನಾಪಮಾನದ ಮಾನದಂಡವಾಗಿ ಕಾಣುತ್ತಾ, ಕಳಪೆ ಶ್ರೇಣಿಯನ್ನು ಅಪಮಾನಕರ ಎಂದು ಭಾವಿಸುವುದು ಆತ್ಮದ್ರೋಹವಾಗುತ್ತದೆ. ಇದರಿಂದ ಸರ್ಕಾರಗಳು ತಮ್ಮ ವರ್ಚಸ್ಸನ್ನು ಉಳಿಸಿಕೊಂಡು ಚುನಾವಣೆಯಲ್ಲಿ ಬಳಸಿಕೊಳ್ಳಬಹುದು ಆದರೆ ತಳಮಟ್ಟದ ವಾಸ್ತವಗಳನ್ನು ಬದಲಾಯಿಸಲಾಗುವುದಿಲ್ಲ. ಇಂತಹ ದತ್ತಾಂಶಗಳನ್ನು ವಸ್ತುನಿಷ್ಠವಾಗಿ ಪರಿಶೀಲಿಸಿ ಸೂಕ್ತ ಉಪಕ್ರಮಗಳನ್ನು ಕೈಗೊಳ್ಳುವುದು ಪ್ರಜಾಸತ್ತಾತ್ಮಕ ಕ್ರಮ ಎನಿಸಿಕೊಳ್ಳುತ್ತದೆ. ಸಾಮಾನ್ಯ  ಜನತೆಯ ಯೋಗಕ್ಷೇಮದ ದೃಷ್ಟಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಯೋಚಿಸಬೇಕಿದೆ.

ನಾ. ದಿವಾಕರ

ಚಿಂತಕರು

ಇದನ್ನೂ ಓದಿ-ಏಕ ಸಂಸ್ಕೃತಿಯ ಚಕ್ರವ್ಯೂಹದೊಳಗೆ ಭಾರತದ ನೈಜ ದುರ್ಬಲ ಬುಡಕಟ್ಟುಗಳು

You cannot copy content of this page

Exit mobile version