ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಗೆ 50 ವರ್ಷವಾಗಿರುವ ಈ ಸಂದರ್ಭದಲ್ಲಿ, ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎದುರಾಗುತ್ತಿದೆಯೇ ಎಂಬುದು ನಮ್ಮ ಪ್ರಶ್ನೆಯಲ್ಲ - ಬದಲಾಗಿ ಪ್ರಜಾಪ್ರಭುತ್ವ ಒಳಗಿನಿಂದಲೇ ನಿಧಾನವಾಗಿ ಕೊಳೆತು ನಾಶವಾಗುತ್ತಿದೆಯೇ ಎಂಬುದು - ಎಂ ಡಿ ಜೀಶನ್ ಅಹ್ಮದ್ , ದೆಹಲಿ ಮೂಲದ ವಕೀಲರು
ಇವತ್ತು, ಜೂನ್ 25, 2025, ಪ್ರಧಾನಿ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿಗೆ 50 ವರ್ಷಗಳಾಗಿವೆ – ಭಾರತ ಗಣರಾಜ್ಯದ ಇತಿಹಾಸದಲ್ಲಿ ಪ್ರಜಾಪ್ರಭುತ್ವವನ್ನೇ ಅಲುಗಾಡಿಸಿದ ಕಾಲಘಟ್ಟ ಅದು. 1975 ರಿಂದ 1977 ರವರೆಗೆ ಜಾರಿಯಲ್ಲಿದ್ದ ಘೋಷಿತ ತುರ್ತು ಪರಿಸ್ಥಿತಿಯು ಕೇವಲ ಪ್ರಜಾಪ್ರಭುತ್ವದ ಮಾನದಂಡಗಳಿಗೆ ಮಾತ್ರ ತೊಡಕಾಗಲಿಲ್ಲ, ಸಾಂವಿಧಾನಿಕತೆಯನ್ನು ಮಾತ್ರ ದುರ್ಬಲಗೊಳಿಸಲಿಲ್ಲ; ಅದು ಸಂವಿಧಾನವನ್ನು ಕಾನೂನುಬದ್ಧಗೊಳಿಸುವ ಪ್ರಕ್ರಿಯೆಯ ಆಳದಲ್ಲಿ ಹುದುಗಿದ್ದ ಕ್ರೂರ ಸರ್ವಾಧಿಕಾರಿ ಮನೋಭಾವವನ್ನು ಸ್ಪಷ್ಟವಾಗಿ ಬಹಿರಂಗಪಡಿಸಿತು. ಇಂದಿರಾ ಗಾಂಧಿಯವರ ಚುನಾವಣಾ ಅಕ್ರಮದ ಆರೋಪದ ಮೇಲೆ ಅಲಹಾಬಾದ್ ಹೈಕೋರ್ಟ್ 1971 ರ ಚುನಾವಣೆಯನ್ನು ಅಮಾನ್ಯಗೊಳಿಸಿದ್ದು ಅವರ ಈ ನಡೆಗೆ ತಕ್ಷಣದ ಪ್ರಚೋದನೆಯಾಗಿದ್ದರೂ, ವಿಶಾಲ ರಾಜಕೀಯ ಸಂದರ್ಭದಲ್ಲಿ – 1960 ರ ದಶಕದ ಅಂತ್ಯ ಮತ್ತು 1970 ರ ದಶಕದ ಆರಂಭದಲ್ಲಿ ಹೆಚ್ಚುತ್ತಿದ್ದ ಆರ್ಥಿಕ ಸಂಕಷ್ಟ ಮತ್ತು ಬೆಳೆಯುತ್ತಿದ್ದ ಸಾಮಾಜಿಕ ಅಶಾಂತಿ – ಅಂತಹ ಒಂದು ಪರಿಸ್ಥಿತಿಯನ್ನು ತಂದಿತ್ತು.
ಹೆಚ್ಚುತ್ತಿರುವ ಪ್ರತಿಭಟನೆಗಳು ಮತ್ತು ಜಾಗತಿಕ ಮಟ್ಟದ ಖಂಡನೆಯ ನಡುವೆಯೂ, ಇಂದಿರಾ ಗಾಂಧಿಯವರು ಅಂತಿಮವಾಗಿ 1977 ರಲ್ಲಿ ಚುನಾವಣೆಗಳಿಗೆ ಕರೆ ನೀಡಿದರು. ನಿರ್ಣಾಯಕವಾಗಿ ಸೋತರು, ಮತ್ತು ಭಾರತವು ಔಪಚಾರಿಕವಾಗಿ ಮತ್ತೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮರಳಿತು. ಆದರೂ, ಇಂದಿರಾರ ಆ ನಡೆಯಿಂದ ರಾಷ್ಟ್ರದ ರಾಜಕೀಯ ಸಂರಚನೆಯು ಎಂದೆಂದಿಗೂ ಬದಲಾಯಿಸಲಾಗದಂತೆ ಬದಲಾಯಿತು.
ಇದೆಲ್ಲಾ ಆಗಿ ಅರ್ಧ ಶತಮಾನ ಕಳೆದಿದೆ, ಭಾರತವು ವಿಭಿನ್ನ ರೀತಿಯ ಬಿಕ್ಕಟ್ಟನ್ನು ಎದುರಿಸುತ್ತಿದೆ – ಚಿಂತಕರು, ಸಾಹಿತಿಗಳು, ಸಾಮಾಜಿಕ ಕಾರ್ಯಕರ್ತರು, ವಿದ್ವಾಂಸರು ಮತ್ತು ಸಾಮಾಜಿಕ ವಿಮರ್ಶಕರು ಈಗಿನ ಕಾಲಘಟ್ಟವನ್ನು “ಅಘೋಷಿತ ತುರ್ತುಸ್ಥಿತಿ” ಎಂದು ಕರೆಯುತ್ತಿದ್ದಾರೆ. 1975 ಕ್ಕಿಂತ ಇದು ಭಿನ್ನ, ಇಂದಿರಾ ಕಾಲದಂತೆ ಈಗ ನಾಗರಿಕರ ಹಕ್ಕುಗಳನ್ನು ಔಪಚಾರಿಕ ಅಮಾನತುಗೊಳಿಸುತ್ತಿಲ್ಲ, ಬದಲಿಗೆ ಚುನಾವಣಾ ನ್ಯಾಯಸಮ್ಮತತೆಯ ಸೋಗಿನಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ನಿಧಾನವಾಗಿ, ವ್ಯವಸ್ಥಿತವಾಗಿ ಮಣ್ಣು ಮಾಡಲಾಗುತ್ತಿದೆ.
ಸಮಕಾಲೀನ ಭಾರತದಲ್ಲಿ ಪ್ರಜಾಪ್ರಭುತ್ವಕ್ಕೆ ಹಿನ್ನಡೆ!
ವಿ-ಡೆಮ್ (V- Dem) ಮತ್ತು ಫ್ರೀಡಂ ಹೌಸ್ನ 2025 ರ ವರದಿಗಳ ಪ್ರಕಾರ, ಭಾರತವನ್ನು ಸದ್ಯ ಕ್ರಮವಾಗಿ “ಚುನಾವಣಾ ನಿರಂಕುಶಾಧಿಕಾರ – electoral autocracy” ಮತ್ತು “ಅರ್ಧ ಸ್ವತಂತ್ರದ – partly free” ದೇಶ ಎಂದು ವರ್ಗೀಕರಿಸಲಾಗಿದೆ. ಈ ಗಂಭೀರವಾದ ಪದಗಳು 2014 ರಿಂದ ಆಡಳಿತದಲ್ಲಿ ಇರುವ ನರೇಂದ್ರ ಮೋದಿ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ಬೆಳವಣಿಗೆಯೊಂದಿಗೆ ಹೊಂದಿಕೆಯಾಗುವ ಪ್ರಜಾಪ್ರಭುತ್ವದ ವ್ಯವಸ್ಥಿತ ಹಿನ್ನಡೆಯನ್ನು ತೋರಿಸುತ್ತವೆ.
ಇದಕ್ಕಿರುವ ಪ್ರಮುಖ ಕಾರಣಗಳಲ್ಲಿ ಕೆಲವೆಂದರೆ: ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಸಾಂಸ್ಥಿಕ ಧ್ವಂಸ, ಕಾನೂನನ್ನು ಬಳಸಿಕೊಂಡು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವುದು ಮತ್ತು ಹಿಂದುತ್ವ ಪ್ರಣೀತ ರಾಷ್ಟ್ರೀಯತೆಯ ಸಿದ್ಧಾಂತದ ಜೊತೆಗೆ ಬಹಿರಂಗವಾಗಿ ಗುರುತಿಸಿಕೊಳ್ಳುವುದು. ಈ ಬೆಳವಣಿಗೆಗಳು ಭಾರತವು ದೊಡ್ಡ ಮಟ್ಟದ ಸಾಂವಿಧಾನಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದನ್ನು ತೋರಿಸುತ್ತವೆ. ಇವು 1975 ರಲ್ಲಿ ಇದ್ದ ಪರಿಸ್ಥಿತಿಗಿಂತ ಕಡಿಮೆ ಎಂಬಂತೆ ಕಂಡು ಬಂದರೂ, ಈಗಿನದ್ದು ತುಂಬಾ ಅಪಾಯಕಾರಿ ಬೆಳವಣಿಗೆಗಳಾಗಿವೆ.
ಅತ್ಯಂತ ಕಳವಳಕಾರಿ ಅಂಶವೆಂದರೆ, ರಾಜಕೀಯದ ತುಂಬಾ ಕೋಮುವಾದವನ್ನು ತುಂಬುವುದು, ಇದರ ಫಲವನ್ನು ನಾವು ಹೆಚ್ಚಾಗಿ ಮುಸಲ್ಮಾನರನ್ನು ಗುರಿಯಿಟ್ಟುಕೊಂಡು ನಡೆಯುವ ಜನಾಂಗೀಯ ಹತ್ಯೆಯಲ್ಲಿ ನೋಡಬಹುದು. ಜಿನೊಸೈಡ್ ವಾಚ್ನ ಸಂಸ್ಥಾಪಕ ಗ್ರೆಗೊರಿ ಸ್ಟಾಂಟನ್, “ಭಾರತದಲ್ಲಿ ನರಮೇಧದ ಆರಂಭಿಕ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿವೆ” ಎಂದು ಎಚ್ಚರಿಸಿದ್ದಾರೆ .
1975 ಮತ್ತು 2014 ರ ನಂತರದ ಅವಧಿಯ ತುಲನೆ
ಇಂದಿರಾ ಗಾಂಧಿಯವರು ತಮ್ಮ ರಾಜಕೀಯ ಅಸ್ತಿತ್ವವನ್ನು ರಕ್ಷಿಸಿಕೊಳ್ಳಲು 1975 ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಸಾಂವಿಧಾನಿಕ ಕಾರ್ಯವಿಧಾನಗಳ ಮೂಲಕ ನಾಗರಿಕ ಸ್ವಾತಂತ್ರ್ಯಗಳನ್ನು ಅಮಾನತುಗೊಳಿಸಿದರು, ಮಾಧ್ಯಮಗಳಿಗೆ ಸೆನ್ಸಾರ್ ಹಾಕಿದರು ಮತ್ತು ಸಾಂಸ್ಥಿಕ ಸ್ವಾತಂತ್ರ್ಯವನ್ನು ಬಲಿಕೊಟ್ಟರು. ಇತಿಹಾಸಕಾರ ಜ್ಞಾನ್ ಪ್ರಕಾಶ್ ಇದನ್ನು “ಕಾನೂನುಬದ್ಧ ಕಾನೂನು ಅಮಾನತು – lawful suspension of law” ಎಂದು ಕರೆದರು. ಆದರೂ, ಅದೊಂದು ಬಹಿರಂಗ ಬಿಕ್ಕಟ್ಟಾಗಿತ್ತು – ಅದರೆ ಘೋಷಣೆ ಮಾಡುವಾಗ ಪಾರದರ್ಶಕತೆಯನ್ನು ಕಾಯ್ದುಕೊಂಡಿತು. 1977 ರಲ್ಲಿ, ಭಾರತೀಯ ಮತದಾರರು ಇದಕ್ಕೆ ತಕ್ಕುದಾದ ಉತ್ತರವನ್ನು ನೀಡಿದರು, ಇಂದಿರಾ ಗಾಂಧಿಯವರನ್ನು ಅಧಿಕಾರದಿಂದ ಕಿತ್ತು ಹಾಕಿ, ಪ್ರಜಾಪ್ರಭುತ್ವದ ಶಕ್ತಿಯನ್ನು ತೋರಿಸಿದರು.
ಈಗಿನ ಕಾಲ ಇಂದಿರೆಯ ಕಾಲಕ್ಕಿಂತ ಭಿನ್ನವಾಗಿದೆ, ಮೋದಿ ಯುಗವು ಹೆಚ್ಚು ಹೆಚ್ಚು ಕಪಟತೆಯಿಂದ ಕೂಡಿದೆ. ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸಿಲ್ಲ. ಬದಲಾಗಿ, ಕಾನೂನುಬದ್ಧವಾಗಿ ನಿರಂಕುಶವಾಗಿ ವರ್ತಿಸುವುದು ಮತ್ತು ಅಧಿಕಾರವನ್ನು ಕಸಿದುಕೊಳ್ಳುವ ಮೂಲಕ ಸಾರ್ವಜನಿಕ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ. ನ್ಯಾಯಾಂಗ ಸ್ವಾತಂತ್ರ್ಯ ದುರ್ಬಲಗೊಂಡಿದೆ, ಭಿನ್ನಾಭಿಪ್ರಾಯವನ್ನು ಅಪರಾಧವೆಂಬಂತೆ ಬಿಂಬಿಸಲಾಗುತ್ತಿದೆ ಮತ್ತು ಕಾನೂನುಗಳನ್ನು ಸರ್ವಾಧಿಕಾರದ ಆಯುಧಗಳೆಂಬಂತೆ ಬಳಸಲಾಗುತ್ತಿದೆ. ಇನ್ನೊಂದು ಕಡೆ ಇದಕ್ಕೆ ಸಮಾನಾಂತರವಾಗಿ ಸಾಂವಿಧಾನಿಕ ಕ್ರಮಗಳನ್ನು ಕಾನೂನುಬದ್ಧವಾಗಿ ಜಾರಿಗೆ ತಂದರೂ ನೈತಿಕವಾಗಿ ಶೂನ್ಯವಾಗಿರುತ್ತದೆ.
“ಸಾರ್ವಭೌಮ ಯಾರು ಎಂದರೆ ಕಾನೂನು ಯಾವಾಗ ಅನ್ವಯ ಆಗುತ್ತದೆ, ಯಾವಾಗ ಅಗುವುದಿಲ್ಲ ಎಂದು ನಿರ್ಧರಿಸುವವನು – sovereign is he who decides on the exception” ಎಂಬ ಕಾರ್ಲ್ ಸ್ಮಿತ್ ಹಿಂದೆಯೇ ಹೇಳಿದ್ದು ಇಂದಿಗೆ ಪ್ರಸ್ತುತವೆನಿಸುತ್ತದೆ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯಲ್ಲಿ ಕಾನೂನನ್ನು ತನಗೆ ಬೇಕಾದಂತೆ ವೈಯಕ್ತಿಕವಾಗಿ ಅನ್ವಯಿಸಿದರೆ ಇದಕ್ಕೆ, ಮೋದಿಯವರ ಆಡಳಿತದಲ್ಲಿ ಅಂತಹ ಒಂದು ಪ್ರವೃತ್ತಿಯನ್ನು ಸಾಮಾನ್ಯಗೊಳಿಸುತ್ತಿದೆ – ಕಾನೂನನ್ನು ಯಾವಾಗಲೂ ಬೇಕಾದಾಗ ಬಳಸಬಹುದಾದಂತ ಆಯುಧವಾಗಿ ಬದಲಾಯಿಸಲಾಗುತ್ತಿದೆ. ತತ್ವಜ್ಞಾನಿ ಜಾರ್ಜಿಯೊ ಅಗಾಂಬೆನ್ ಹೇಳಿದಂತೆ, “state of exception ನಲ್ಲಿ (ತುರ್ತು ಪರಿಸ್ಥಿತಿಯಂತೆ) ಕಾನೂನು ಮತ್ತು ಅಕ್ರಮದ ನಡುವಿನ ಗೋಡೆ ಕುಸಿಯುತ್ತದೆ – state of exception collapses the boundary between legality and illegality. ಸದ್ಯದ ಭಾರತದಲ್ಲಿ, ಆ ಕುಸಿತ ಬಹುತೇಕ ಪೂರ್ಣಗೊಂಡಂತೆ ಭಾಸವಾಗುತ್ತದೆ.
ಸಾಂವಿಧಾನಿಕ ಭರವಸೆಯನ್ನು ದುರ್ಬಲಗೊಳಿಸುವುದು:
ಕಾನೂನು ವಿದ್ವಾಂಸ ಅರವಿಂದ್ ನರೈನ್ ಅವರು ಮೋದಿಯವರ ಭಾರತವು “ಸರ್ವಾಧಿಕಾರವನ್ನು ಮೀರಿದ ಒಂದು ರೀತಿಯ ಸರ್ಕಾರ – a kind of State going beyond authoritarianism” ಎಂದು ಕರೆಯುತ್ತಾರೆ. ರಾಜಕೀಯ ವಿಜ್ಞಾನಿ ಕ್ರಿಸ್ಟೋಫ್ ಜಾಫ್ರೆಲಾಟ್ ಅವರು ಬೆಳೆಯುತ್ತಿರುವ ಹಿಂದೂ ರಾಷ್ಟ್ರದ ಬಗ್ಗೆ ಎಚ್ಚರಿಸಿದ್ದಾರೆ – ಅಲ್ಲಿ ಧಾರ್ಮಿಕ ಬಹುಸಂಖ್ಯಾತತೆಯು ಸರ್ವಾಧಿಕಾರ ಆಡಳಿತದೊಂದಿಗೆ ಸಂಬಂಧ ಹೊಂದಿರುತ್ತದೆ. ಈ ದೃಷ್ಟಿಕೋನವು ಬಹುತ್ವ, ಜಾತ್ಯತೀತತೆ ಮತ್ತು ಭ್ರಾತೃತ್ವದ ಸಾಂವಿಧಾನಿಕ ಆದರ್ಶಗಳಿಗೆ ನೇರವಾಗಿ ವಿರುದ್ಧವಾಗಿರುತ್ತದೆ.
ಈ ಕುಸಿತದ ಕಡೆಗೆ ಬೊಟ್ಟು ಮಾಡುತ್ತಾ, ರಾಜಕೀಯ ವಿದ್ವಾಂಸ ಪ್ರತಾಪ್ ಭಾನು ಮೆಹ್ತಾ – ಭಾರತವು 1950 ರ ದಶಕದಲ್ಲಿ ಪ್ರಜಾಪ್ರಭುತ್ವಕ್ಕೆ ಬದಲಾಗಿದ್ದು – “ಮಾನವ ಇತಿಹಾಸದಲ್ಲಿ ಯಾವುದೇ ಪೂರ್ವನಿದರ್ಶನವಿಲ್ಲದ ಒಂದು ನಂಬಿಕೆಯನ್ನು ಸ್ವೀಕರಿಸಿದ್ದು – a leap of faith for which there was no precedent in human history” ಎಂದು ಒಮ್ಮೆ ವಿವರಿಸಿದ್ದರು. ಇದು ನಮ್ಮಲ್ಲಿ ಕೆಲವು ಪ್ರಮುಖ ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುತ್ತದೆ: ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತೆ ಯಾಕೆ ಕುಸಿತಯುತ್ತಿದೆ? ಅದನ್ನು ಯಾವುದು ಉಳಿಸಿಕೊಳ್ಳುತ್ತದೆ? ಮತ್ತು ಅವು ಯಾವ ಸಾಂವಿಧಾನಿಕ ಭವಿಷ್ಯವನ್ನು ಸೂಚಿಸುತ್ತವೆ?
1950 ರಿಂದ ಇಂದಿನವರೆಗೆ: ಪ್ರಜಾಪ್ರಭುತ್ವದ ಮೇಲಿನ ಪ್ರಯೋಗ
ಭಾರತದ ಪ್ರಜಾಪ್ರಭುತ್ವ ಪ್ರಯೋಗವು ಆರಂಭದಿಂದಲೂ ಆಮೂಲಾಗ್ರವಾಗಿ ಮಹತ್ವಾಕಾಂಕ್ಷೆಯಿಂದ ಕೂಡಿತ್ತು. ಸ್ವಾತಂತ್ರ್ಯದ ಸಮಯದಲ್ಲಿ, ದೇಶದ ಅಗಾಧ ವೈವಿಧ್ಯತೆ, ಸಾಮಾಜಿಕ ಶ್ರೇಣಿಗಳು ಮತ್ತು ವಸಾಹತುಶಾಹಿ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಚಿಂತಕರು ಭಾರತ ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳುವ ಸಾಧ್ಯತೆಯನ್ನು ಅನುಮಾನಿಸಿದ್ದರು. ಆದರೂ, ಸಂವಿಧಾನವು ಸಾರ್ವತ್ರಿಕವಾಗಿ ಎಲ್ಲಾ ವಯಸ್ಕರಿಗೆ ಮತದಾನದ ಹಕ್ಕನ್ನು ನೀಡಿತು ಮತ್ತು ವಸಾಹತುಶಾಹಿ ಪ್ರಜೆಗಳಿಗೂ ಆ ಹಕ್ಕುಗಳನ್ನು ಹೊಂದಿರುವ ನಾಗರಿಕರನ್ನಾಗಿ ಮಾಡಿತು.
ಆದರೂ, ಬಿ.ಆರ್. ಅಂಬೇಡ್ಕರ್ ಎಚ್ಚರಿಸಿದಂತೆ- ಭಾರತೀಯ ಪ್ರಜಾಪ್ರಭುತ್ವವು ಪ್ರಜಾಪ್ರಭುತ್ವ ವಿರೋಧಿ ಅಡಿಪಾಯಗಳ ಮೇಲೆ ನಿರ್ಮಿಸಲ್ಪಟ್ಟಿದೆ – Indian democracy was built on undemocratic foundations. ಅದಕ್ಕಾಗಿ ಅವರು ಸಾಂವಿಧಾನಿಕ ನೈತಿಕತೆಯನ್ನು ಬೆಳೆಸಬೇಕೆಂದು ಕರೆ ನೀಡಿದರು, ಅದು ಇಂದಿಗೂ ಆಗಿಲ್ಲ. ಕಾಲಾನಂತರದಲ್ಲಿ, ಕಾಂಗ್ರೆಸ್ನ ಸ್ವಾತಂತ್ರ್ಯಾನಂತರದ ಪ್ರಾಬಲ್ಯವು ಪ್ರಾದೇಶಿಕ ವಿಘಟನೆಗೆ ದಾರಿ ಮಾಡಿಕೊಟ್ಟಿತು, ಪ್ರಜಾಪ್ರಭುತ್ವಕ್ಕೆ ಪ್ರತಿಕೂಲವಾದ ಸ್ವಜನ ಪಕ್ಷಪಾತ ಮತ್ತು ರಾಜಶ್ರಯಕ್ಕೆ ದಾರಿ ಮಾಡಿಕೊಟ್ಟಿತು.
1970 ರ ದಶಕದ ಆರಂಭದ ಸ್ವಜನ ಪಕ್ಷಪಾತ ತುರ್ತು ಪರಿಸ್ಥಿತಿಯಲ್ಲಿ ಪರಾಕಾಷ್ಠೆಗೆ ತಲುಪಿತು. ಇಂದು, ಇದೇ ರೀತಿಯ ಸ್ವಜನ ಪಕ್ಷಪಾತವನ್ನು – ಈಗಿನ ಡಿಜಿಟಲ್ ಪ್ಲಾಟ್ಫಾರ್ಮ್ಗಳು ಮತ್ತು ಸಮೂಹ ಸಂವಹನದಲ್ಲಿ ಉತ್ತೇಜಿಸಲಾಗುತ್ತಿದೆ – ಮೋದಿ ಆಡಳಿತವು ಇದಕ್ಕಾಗಿ ಕೆಲಸ ಮಾಡುತ್ತದೆ. ಆದರೆ ಈ ಬಾರಿ, ಅವು ವಿಶಾಲ ಮತ್ತು ಹೆಚ್ಚು ಶಾಶ್ವತ ಪರಿಣಾಮಗಳನ್ನು ಉಂಟುಮಾಡಬಲ್ಲ ಆಳವಾದ ಸೈದ್ಧಾಂತಿಕ ಯೋಜನೆಯನ್ನು ಹಾಕಿಕೊಂಡಿದೆ.
ಮೋದಿಯ ಭಾರತದಲ್ಲಿ ಸರ್ವಾಧಿಕಾರ ಕಾನೂನುಬದ್ಧ!
ಹಂಗೇರಿಯ ದೇಶಕ್ಕೆ ಸಂಬಂಧಿಸಿ ಕಿಮ್ ಲೇನ್ ಶೆಪ್ಪೆಲೆ ನೀಡಿದ ವ್ಯಾಖ್ಯಾನ “ಸರ್ವಾಧಿಕಾರದ ಕಾನೂನುಬದ್ಧತೆ”ಯ ಪರಿಕಲ್ಪನೆಯು ಇಲ್ಲಿಗೆ ಹೆಚ್ಚು ಪ್ರಸ್ತುತ ಎನಿಸುತ್ತದೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ನಾಯಕರು ಸರ್ವಾಧಿಕಾರದ ಗುರಿಗಳನ್ನು ಕಾರ್ಯಗತಗೊಳಿಸಲು ಕಾನೂನು ಸಾಧನಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಇದು ವಿವರಿಸುತ್ತದೆ. ಇದರಲ್ಲಿ ಸಂಸ್ಥೆಗಳನ್ನು ವಶಪಡಿಸಿಕೊಳ್ಳುವುದು, ನಿಯಮಗಳನ್ನು ತಿರುಚಿ ಬರೆಯುವುದು ಮತ್ತು ಕಾನೂನಿನ ಹೆಸರಿನಲ್ಲಿ ನಾಗರಿಕರನ್ನು ನಿಯಂತ್ರಿಸುವುದು.
ಮೋದಿ ನೇತೃತ್ವದ ಭಾರತವು ಶೆಪ್ಪೆಲೆ ನೀಡಿದ ವ್ಯಾಖ್ಯಾನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತದೆ, ಇದು ಆತಂಕಕಾರಿ!
- * 370 ನೇ ವಿಧಿಯನ್ನು ರದ್ದುಗೊಳಿಸಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ್ದು ರಾಜಕೀಯ ಒಮ್ಮತವಿಲ್ಲದೆಯೇ ಕಾರ್ಯಗತಗೊಳಿಸಲಾಯಿತು – ಇದು ಭಾರತೀಯ ಸಾಂವಿಧಾನಿಕತೆಯ ಕೇಂದ್ರಬಿಂದುವಾಗಿರುವ ಫೆಡರಲ್ ಮಾನದಂಡಗಳನ್ನು ಉಲ್ಲಂಘಿಸಿದಂತೆ.
- * ಚುನಾವಣಾ ಹಣಕಾಸು ಸುಧಾರಣೆಯ ನೆಪದಲ್ಲಿ ಪರಿಚಯಿಸಲಾದ ಚುನಾವಣಾ ಬಾಂಡ್ ಯೋಜನೆಯು ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿತು ಮತ್ತು ಆಡಳಿತ ಪಕ್ಷಕ್ಕೆ ಹೆಚ್ಚಿನ ಪ್ರಯೋಜನವನ್ನು ನೀಡಿತು – ಈಗ ಅದನ್ನು ರದ್ದುಪಡಿಸಲಾಗಿದ್ದರೂ ಸಹ, ಇದರ ವಿಚಾರಣೆ ನ್ಯಾಯಾಲಯದಲ್ಲಿ ಅರ್ಧದಲ್ಲಿ ಬಾಕಿಯಾಗಿದೆ.
- * ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಪೌರತ್ವ ತಿದ್ದುಪಡಿ ಕಾಯ್ದೆ (2019) ಧರ್ಮವನ್ನು ಪೌರತ್ವಕ್ಕೆ ಮಾನದಂಡವಾಗಿ ಪರಿಚಯಿಸಿತು. ರಾಜಕೀಯ ತಜ್ಞ ನೀರಜ ಗೋಪಾಲ್ ಜಯಲ್ ಹೇಳಿದಂತೆ, ಈ ಕ್ರಮವು ಜನಾಂಗೀಯ-ಧಾರ್ಮಿಕ ಮಾರ್ಗಗಳಲ್ಲಿ ಭಾರತೀಯ ಪೌರತ್ವವನ್ನು ಮರು ವ್ಯಾಖ್ಯಾನಿಸುವ ಪ್ರಯತ್ನವನ್ನು ತೋರಿಸುತ್ತದೆ.
ಇವು ಕೇವಲ ಕೆಲವು ಉದಾಹರಣೆಗಳು. ಇದನ್ನು ಸೂಕ್ಷ್ಮವಾಗಿ ನೋಡಿದರೆ ಇದರ ಹಿಂದಿರುವ ಲೆಕ್ಕಾಚಾರದ ತಂತ್ರ ಕಾಣುತ್ತದೆ: ಪ್ರಜಾಪ್ರಭುತ್ವ ವಿರೋಧಿ ಉದ್ದೇಶಗಳನ್ನು ಪೂರೈಸಲು ಪ್ರಜಾಸತ್ತಾತ್ಮಕ ವಿಧಾನಗಳ ಮೂಲಕ ದೇಶವನ್ನು ರೂಪಿಸುವುದು.
ಪ್ರಸ್ತುತ ಸಂದರ್ಭವನ್ನು ಅಪಾಯಕಾರಿಯನ್ನಾಗಿ ಮಾಡುವುದು ಸಂವಿಧಾನವನ್ನು ತಿರುಚುವುದು ಮಾತ್ರವಲ್ಲ, ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಹಕ್ಕನ್ನು ನೀಡುವುದು. ನಾಗರಿಕ ಸ್ವಾತಂತ್ರ್ಯಗಳನ್ನು ನಿಯಮಿತವಾಗಿ ಉಲ್ಲಂಘಿಸಲಾಗುತ್ತಿದೆ. ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ ಮತ್ತು ದೇಶದ್ರೋಹದಂತಹ ಕಾನೂನುಗಳನ್ನು ಬಳಸಲಾಗುತ್ತದೆ. 2019 ರ ಯುಎಪಿಎ ತಿದ್ದುಪಡಿಯು ಸರ್ಕಾರವು ಯಾರೇ ಒಬ್ಬನನ್ನು ಯಾವುದೇ ವಿಚಾರಣೆಯಿಲ್ಲದೆ “ಭಯೋತ್ಪಾದಕ” ಎಂದು ಹೆಸರಿಸಲು ಅನುಮತಿ ನೀಡುತ್ತದೆ.
ಮೂಲತಃ ಅಸಾಧಾರಣ ಸಂದರ್ಭಗಳ ಬಳಕೆಗಾಗಿ ತರಲಾಗಿರುವ ತುರ್ತು ಕಾನೂನುಗಳನ್ನು ಹೇಗೆ ಈಗಿನ ದೈನಂದಿನ ಆಡಳಿತದ ಆಯುಧಗಳಾಗಿ ಸಾಮಾನ್ಯೀಕರಿಸಲಾಗಿದೆ ಎಂಬುದನ್ನು ಕಾನೂನು ವಿದ್ವಾಂಸ ನಾಸರ್ ಹುಸೇನ್ ತೋರಿಸಿದ್ದಾರೆ. ಮೋದಿ ಆಡಳಿತದ ಅಡಿಯಲ್ಲಿ, ದಮನವೆಂಬುದು ಈ ಕಾನೂನು ವ್ಯವಸ್ಥೆಯ ಒಳಗೆ ನಾಟಕೀಯವಾಗಿ ಹರಡಿಕೊಂಡಿದೆ – ಕಾನೂನಾತ್ನಕ ಆಳ್ವಿಕೆಯ ಅಡಿಪಾಯವನ್ನೇ ಹಾಳುಮಾಡುತ್ತಿದೆ.
ಭಾರತವು ಸರ್ವಾಧಿಕಾರದತ್ತ ಸಾಗುತ್ತಿಲ್ಲ. ಅದನ್ನು ಸಾಂಸ್ಥಿಕಗೊಳಿಸುತ್ತಿದೆ.
ತೊಡಕಿನ ದಾರಿ
1975 ರ ತುರ್ತು ಪರಿಸ್ಥಿತಿ ಮತ್ತು 2014 ರ ನಂತರದ ಕಾಲಘಟ್ಟವನ್ನು ತುಲನೆ ಮಾಡಿ ನೋಡಿದರೆ ತೊಡಕಿನ ದಾರಿಯೊಂದು ನಮಗೆ ಕಾಣಿಸುತ್ತದೆ. ಇಂದಿರಾ ಗಾಂಧಿಯವರ ಸರ್ವಾಧಿಕಾರವು ವೈಯಕ್ತಿಕವಾಗಿತ್ತು, ಎಲ್ಲರ ಕಣ್ಣಿಗೆ ಕಾಣುವಂತಿತ್ತು ಮತ್ತು ಅಂತಿಮವಾಗಿ ಜನರೇ ಅದನ್ನು ಒದ್ದು ತಿರಸ್ಕರಿಸಿದರು. ಮೋದಿಯವರ ವರ್ಷನ್ ಇಂದಿರೆಗಿಂತ ಭಿನ್ನ, ಇದಕ್ಕೊಂದು ಉದ್ದೇಶ ಇದೆ, ಸೈದ್ಧಾಂತಿಕವಾಗಿದೆ ಮತ್ತು – ಅತ್ಯಂತ ಅಪಾಯಕಾರಿಯಾಗಿದೆ – ಸಮಾಜವೇ ಇದನ್ನು ಸಾಮಾನ್ಯೀಕರಿಸುತ್ತದೆ.
ಈ ಬದಲಾವಣೆಯು ನಮ್ಮಲ್ಲಿ ಕೆಲವು ಕಠಿಣ ಪ್ರಶ್ನೆಗಳನ್ನು ಹಾಕಿಕೊಳ್ಳುವಂತೆ ಮಾಡುತ್ತದೆ: ಪ್ರಜಾಪ್ರಭುತ್ವ ಮೌಲ್ಯಗಳಿಲ್ಲದೆ ಪ್ರಜಾಪ್ರಭುತ್ವದ ಸಂಸ್ಥೆಗಳು ಉಳಿಯಬಹುದೇ? ಸಂವಿಧಾನದ ಚೈತನ್ಯ ನಿರಂತರವಾಗಿ ಖಾಲಿಯಾದಾಗ ಸಂವಿಧಾನ ಉಳಿಯಬಹುದೇ?
ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿಗೆ 50 ವರ್ಷವಾಗಿರುವ ಈ ಸಂದರ್ಭದಲ್ಲಿ, ಪ್ರಜಾಪ್ರಭುತ್ವಕ್ಕೆ ಬೆದರಿಕೆ ಎದುರಾಗುತ್ತಿದೆಯೇ ಎಂಬುದು ನಮ್ಮ ಪ್ರಶ್ನೆಯಲ್ಲ – ಬದಲಾಗಿ ಪ್ರಜಾಪ್ರಭುತ್ವ ಒಳಗಿನಿಂದಲೇ ನಿಧಾನವಾಗಿ ಕೊಳೆತು ನಾಶವಾಗುತ್ತಿದೆಯೇ ಎಂಬುದು.
ಬಲವಾದ ಮತ್ತು ಸ್ಥಿತಿಸ್ಥಾಪಕ ಪ್ರಜಾಪ್ರಭುತ್ವವು ಜಾಗರೂಕ ನಾಗರಿಕ ಸಮಾಜದ ಲಕ್ಷಣ. ಭಾರತದಲ್ಲಿ ಘೋಷಿತ ಮತ್ತು ಅಘೋಷಿತ ತುರ್ತು ಪರಿಸ್ಥಿತಿಗಳ ಅವಳಿ ಇತಿಹಾಸಗಳು ನಮಗೆ ಅಗತ್ಯದ ಪಾಠಗಳನ್ನು ಹೇಳುತ್ತವೆ: ಪ್ರಜಾಪ್ರಭುತ್ವವನ್ನು ಹಗುರವಾಗಿ ನೋಡುವಂತಿಲ್ಲ. ಈ ದಿನದಂದು, ನಾವು ಮತ್ತೊಮ್ಮೆ – ಪ್ರಜಾಪ್ರಭುತ್ವವನ್ನು ಸರ್ವಾಧಿಕಾರದ ಹಿಡಿತದಿಂದ ರಕ್ಷಿಸಲು ಮತ್ತು ಅದನ್ನು ಅದರ ಸರಿಯಾದ ಹಾದಿಗೆ ಕೊಂಡೊಯ್ಯಲು ಸಂಕಲ್ಪ ಮಾಡಬೇಕು: ಸಾಂವಿಧಾನಿಕ ಮೌಲ್ಯಗಳಲ್ಲಿ ಬೇರೂರಿದ, ಸಾರ್ವಜನಿಕ ಹೊಣೆಗಾರಿಕೆಯಿಂದ ಬೆಳೆದಿರುವ ಮತ್ತು ಬಹುಸಂಖ್ಯಾತವಾದದಿಂದ ಪೋಷಿಸಲ್ಪಟ್ಟಿರುವ ಸರ್ವಾಧಿಕಾರದಿಂದ ಪ್ರಜಾಪ್ರಭುತ್ವವನ್ನು ಉಳಿಸಬೇಕು.
ಲೇಖನ: ಎಂ ಡಿ ಜೀಶನ್ ಅಹ್ಮದ್ ,ದೆಹಲಿ ಮೂಲದ ವಕೀಲರು.
(ಇದು ದಿ ವೈರ್ ಪ್ರಕಟಿಸಿದ Democracy in Retreat: Comparing the Emergency with Modi’s India ಲೇಖನದ ಕನ್ನಡ ಭಾವಾನುವಾದ)