Home ದೇಶ ದೆಹಲಿ ಎಂಸಿಡಿ: ಎಎಪಿ ಕೌನ್ಸಿಲರ್‌ ಗಳನ್ನು ಖರೀದಿಸಲು ಬಿಜೆಪಿ ಯತ್ನ

ದೆಹಲಿ ಎಂಸಿಡಿ: ಎಎಪಿ ಕೌನ್ಸಿಲರ್‌ ಗಳನ್ನು ಖರೀದಿಸಲು ಬಿಜೆಪಿ ಯತ್ನ

0

ನವದೆಹಲಿ: ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ (ಎಂಸಿಡಿ) ಇತ್ತೀಚೆಗೆ ಆಯ್ಕೆಯಾದ ಕೌನ್ಸಿಲರ್‌ಗಳನ್ನು ಭಾರತೀಯ ಜನತಾ ಪಕ್ಷವು “ಖರೀದಿಸಲು” ಪ್ರಯತ್ನಿಸುತ್ತಿದ್ದು ಆಪರೇಷನ್‌ ಕಮಲ ನಡೆಸುತ್ತಿದೆ ಎಂದು ಆಮ್ ಆದ್ಮಿ ಪಕ್ಷವು ಇಂದು ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಎಎಪಿ ನಾಯಕರು, ಬಿಜೆಪಿ ತನ್ನ “ಕೊಳಕು ಆಟ”ವನ್ನು ದೆಹಲಿಯಲ್ಲಿ ಮುಂದುವರೆಸಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ಡಿ.4ರಂದು ನಡೆದು ಚುನಾವಣೆಯಲ್ಲಿ ಗೆದ್ದಿರುವ ಮೂವರು ಎಎಪಿ ಕೌನ್ಸಿಲರ್‌ಗಳಾದ ಡಾ ರೋನಾಕ್ಷಿ ಶರ್ಮಾ, ಅರುಣ್ ನವಾರಿಯಾ ಮತ್ತು ಜ್ಯೋತಿ ರಾಣಿ ಅವರೊಂದಿಗೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಹಿರಿಯ ಆಪ್ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎಂಸಿಡಿ ಚುನಾವಣೆಯಲ್ಲಿ  ಹಿನ್ನೆಡೆ ಅನುಭವಿಸಿರುವ ಬಿಜೆಪಿಯು “ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಕರ್ನಾಟಕ, ಗೋವಾ ಮತ್ತು ಗುಜರಾತ್‌ನಲ್ಲಿ ನಡೆಸಿದಂತೆಯೇ ಶಾಸಕರ ಕುದುರೆ ವ್ಯಾಪಾರಕ್ಕೆ ಇಳಿದಿದೆ ಎಂದು ಆರೋಪಿಸಿದ್ದಾರೆ.

ದೆಹಲಿಯಲ್ಲಿ ಚುನಾಯಿತ ಪ್ರತಿನಿಧಿಗಳನ್ನು ಖರೀದಿಸಲು ಬೆದರಿಕೆ ಮತ್ತು ಹಣದ ಮೂಲಕ ಪ್ರಯತ್ನಿಸಲಾಗುತ್ತಿದ್ದು “ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಮತ್ತು ಜನಾದೇಶವನ್ನು ಅವಮಾನಿಸಲು” ಪ್ರಯತ್ನಿಸುತ್ತಿರುವವರನ್ನು ಬಂಧಿಸಿ ಜೈಲಿಗಟ್ಟುವಂತೆ ದೆಹಲಿ ಪೊಲೀಸ್ ಕಮಿಷನರ್‌ಗೆ ಸಂಜಯ್‌ ಸಿಂಗ್ ಮನವಿ ಮಾಡಿದ್ದಾರೆ.

“ಬಿಜೆಪಿ ನಾಚಿಕೆಯಿಲ್ಲದ ಪಕ್ಷ, ಎಎಪಿಗಿಂ 30 ಕಡಿಮೆ ಸ್ಥಾನಗಳನ್ನು ಪಡೆದ ನಂತರವೂ ಮೇಯರ್ ನಮ್ಮವರೇ ಆಗುತ್ತಾರೆ ಎಂದು ಹೇಳಿಕೊಳ್ಳುತ್ತಾರೆ ಎಂದು ಅವರು ಕಟಕಿಯಾಡಿದರು.

ಯೋಗೇಂದ್ರ ಚಂದೋಲಿಯಾ ಎಂಬ ವ್ಯಕ್ತಿ ಶ್ರೀಮತಿ ಶರ್ಮಾ ಅವರಿಗೆ ಕರೆ ಮಾಡಿ ಬಿಜೆಪಿಯ ರಾಜ್ಯಾಧ್ಯಕ್ಷ ಆದೇಶ್ ಕುಮಾರ್ ಗುಪ್ತಾ ಅವರೊಂದಿಗೆ ಮಾತನಾಡಿಸುವ ಪ್ರಸ್ತಾಪ ಮಾಡುತ್ತಾರೆ. ಗುಪ್ತಾ ಮತ್ತು ಬಿಜೆಪಿ ಕಾರ್ಯಕರ್ತರು ಎಂಸಿಡಿ ಕೌನ್ಸಿಲರ್‌ಗಳನ್ನು ಖರೀದಿಸಲು ₹ 100 ಕೋಟಿ ಬಜೆಟ್ ಇಟ್ಟುಕೊಂಡಿದ್ದಾರೆ ಎಂದು ಅವರು ಹೇಳಿದರು.

ಎಎಪಿ ಕೌನ್ಸಿಲರ್‌ಗಳು ಮೇಯರ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವಂತೆ ಬೆದರಿಕೆಗಳು ಬರುತ್ತಿವೆ, ಕೆಲವರಿಗೆ ₹ 50 ಲಕ್ಷ ಆಫರ್‌ಗಳನ್ನು ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ನಮ್ಮ ಎಎಪಿ ಕೌನ್ಸಿಲರ್‌ಗಳು, ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಪ್ರಾಮಾಣಿಕತೆ ಮತ್ತು ಬದ್ಧತೆಯೊಂದಿಗೆ ನಿಲ್ಲಲಿದ್ದಾರೆ. ನಮ್ಮ ಕೌನ್ಸಿಲರ್‌ಗಳು ಅವರ ಎಲ್ಲಾ ಕುತಂತ್ರಗಳನ್ನು ಬಯಲುಗೊಳಿಸುತ್ತಿದ್ದಾರೆ ಎಂದರು.

ಈ ಹಿಂದೆ ಆಮ್ ಆದ್ಮಿ ಪಕ್ಷವು ಬಿಜೆಪಿಯ ಕೌನ್ಸಿಲರ್‌ಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು.

“ಟಿಕೆಟ್‌ಗಾಗಿ ಹಣದ ನಂತರ, ಎಎಪಿ ಕೌನ್ಸಿಲರ್‌ಗಾಗಿ ಹಣವನ್ನು ಪ್ರಯತ್ನಿಸುತ್ತಿದೆ, ಕೌನ್ಸಿಲರ್‌ಗಳನ್ನು ಸೆಳೆಯಲು ಅರವಿಂದ್ ಕೇಜ್ರಿವಾಲ್ ಅವರ ಏಜೆಂಟರು ದೆಹಲಿಯ ಬೀದಿಗಳಲ್ಲಿ ಅಲೆದಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಒಂದೆಡೆ ಬಿಜೆಪಿಯು ಆಪರೇಷನ್ ಕಮಲ ನಡೆಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸುತ್ತಿದ್ದರೆ, ಬಿಜೆಪಿಯು ಈಗ ಆಮ್ ಆದ್ಮಿ ಪಕ್ಷವು ಆಪರೇಷನ್ ಝಾಡು (ಪೊರಕೆ –ಎಎಪಿ ಚುನಾವಣಾ ಚಿಹ್ನೆ) ನಡೆಸುತ್ತಿದೆ ಎಂದು ಪ್ರತ್ಯಾರೋಪ ಮಾಡುತ್ತಿದೆ.

You cannot copy content of this page

Exit mobile version