Home ಜನ-ಗಣ-ಮನ ಧರ್ಮ- ಸಂಸ್ಕೃತಿ ಮಿತಿಮೀರಿದ ಗೋರಕ್ಷಕರ ಹಾವಳಿ ; ರೈತರ ಗೋಳು ಕೇಳುವುದು ಯಾರು?

ಮಿತಿಮೀರಿದ ಗೋರಕ್ಷಕರ ಹಾವಳಿ ; ರೈತರ ಗೋಳು ಕೇಳುವುದು ಯಾರು?

0

ರಾಜ್ಯದಲ್ಲಿ ಇತ್ತೀಚೆಗೆ ಗೋರಕ್ಷಣೆಯ ನೆಪದಲ್ಲಿ ಅನೈತಿಕ ಪೊಲೀಸ್ ಗಿರಿಯವರ ಕಾಟ ತೀರಾ ಹೆಚ್ಚಾಗಿದೆ. ಅದರಲ್ಲೂ ಹಿಂದೂಪರ ಸಂಘಟನೆಯ ಹಣೆಪಟ್ಟಿ ಹೊತ್ತು ಬಂದರೆ ಏನು ಬೇಕಾದರೂ ಮಾಡಬಹುದು ಎಂಬ ‘ಉತ್ತರ ಪ್ರದೇಶ’ ಮಾದರಿಯ ಗೂಂಡಾ ಪ್ರವೃತ್ತಿ ಎಲ್ಲೆಡೆ ಕಂಡು ಬರುತ್ತಿದೆ. ಅದಕ್ಕೆ ಸರಿಯಾಗಿ ಶುಕ್ರವಾರದ ದಿನ ಅರಸೀಕೆರೆ ವ್ಯಾಪ್ತಿಯಲ್ಲಿ ಶಿಕಾರಿಪುರ ಮೂಲದ ರೈತರಿಗೆ ಹಿಂದೂಪರ ಸಂಘಟನೆಯವರು ಹಿಗ್ಗಾಮುಗ್ಗಾ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದು ಈಗ ಎಲ್ಲೆಡೆ ಹಿಂದೂಪರ ಸಂಘಟನೆಗಳ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ಹಿನ್ನೆಲೆ : ರಾಜ್ಯದ ಕೆಲವು ಕಡೆ ಜಾನುವಾರುಗಳ ಸಾಕಾಣಿಕೆ ಫಾರಂ ಗಳಿದ್ದು, ಜಾನುವಾರುಗಳನ್ನು ಬಿಟ್ಟು ದೊಡ್ಡ ಬಯಲು ಪ್ರದೇಶ, ಹೊಲಗಳಲ್ಲಿ ಮೇವು ಸಂಗ್ರಹ ಮಾಡಿ ಸಾಕಲಾಗುತ್ತದೆ. ಇಂತಹ ಫಾರಂಗಳಲ್ಲಿ ವರ್ಷದಲ್ಲಿ ಒಮ್ಮೆ ನಡೆಯುವ ಹರಾಜು ಪ್ರಕ್ರಿಯೆಗೆ ರಾಜ್ಯದ ನಾನಾ ಭಾಗದ ರೈತ ಸಮುದಾಯಗಳಿಗೆ ಕರೆ ನೀಡಲಾಗುತ್ತದೆ.

ಅದೇ ರೀತಿ ತುರುವೇಕೆರೆ ತಾಲ್ಲೂಕಿನ ಕುಣಿಕೇನಹಳ್ಳಿ ಇರುವ ಜಾನುವಾರುಗಳ ಫಾರಂನಲ್ಲಿ ಜಾನುವಾರುಗಳ ಹರಾಜು ಮಾಡುವುದಾಗಿ ರೈತ ಸಮುದಾಯಕ್ಕೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿಕಾರಿಪುರ ತಾಲ್ಲೂಕು ಭಾಗದಿಂದಲೂ ಹಲವಷ್ಟು ಮಂದಿ ರೈತರು ವಾಹನಗಳನ್ನು ತಗೆದುಕೊಂಡು ಹರಾಜು ನಡೆಯವ ಊರಿಗೆ ಹೋಗಿದ್ದರು. ನಂತರ ತಮ್ಮ ಅನುಕೂಲಕ್ಕೆ ತಕ್ಕಂತೆ ಜಾನುವಾರುಗಳನ್ನು ಕೊಂಡುಕೊಂಡು ತಮ್ಮ ಊರಿಗೆ ಮರಳಿದ್ದಾರೆ.
ಸಧ್ಯ ಶಿಕಾರಿಪುರ ತಾಲ್ಲೂಕಿನ ಬಟ್ಟಿಕೋಟೆ ಎಂಬ ಊರಿನ ರಾಜು ಎಂಬ ಯುವ ರೈತ ಹರಾಜು ಪ್ರಕ್ರಿಯೆ ಮುಗಿಸಿಕೊಂಡು ಊರಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಅರಸೀಕೆರೆ ಮತ್ತು ಬಾಣಾವರ ನಡುವಿನ ಆಸುಪಾಸಿನ ಊರಿನಲ್ಲಿ ಹಿಂದೂಪರ ಸಂಘಟನೆ ಸೋಗಿನಲ್ಲಿ ಗುರುತಿಸಿಕೊಂಡಿರುವ, ಈ ಹಿಂದೆ ಹೆಣ್ಣು ಮಕ್ಕಳ ಕಳ್ಳಸಾಗಣೆ ನೆಪಜೈಲು ಸೇರಿ ಹೊರಬಂದ ಪುನೀತ್ ಕೆರೆಹಳ್ಳಿ ಎಂಬುವವ ಮತ್ತು ಆತನ ಜೊತೆಗಿನ ಪುಂಡರ ಗುಂಪೊಂದು ಯುವ ರೈತ ರಾಜು ಅವರಿದ್ದ ಜಾನುವಾರು ವಾಹನವನ್ನು ಅಡ್ಡಗಟ್ಟಿದ್ದಾರೆ.

ವಾಹನದಲ್ಲಿ ಇದ್ದ ರಾಜು ಮತ್ತು ಡ್ರೈವರ್ ಹತ್ತಿರ ಬಂದು ನೀನು ಯಾವ ಜಾತಿ ಮತ್ತು ಧರ್ಮದವರು ಕೇಳಿದ್ದಾರೆ. ರಾಜು ತಾನು ಕುರುಬ ಸಮುದಾಯ ಎಂದಿದ್ದಾರೆ. ನಂತರ ಜಾತಿಯ ಹೆಸರನ್ನು ಉಲ್ಲೇಖಿಸಿ ಸೂ.ಮಕ್ಕಳಾ ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ನಾನೊಬ್ಬ ರೈತ, ಇದು ನನ್ನ ಕೃಷಿ ಚಟುವಟಿಕೆಗಾಗಿ ಹರಾಜು ಹಿಡಿದು ತಂದ ಜಾನುವಾರುಗಳು, ಇದಕ್ಕೆ ಬೇಕಾದ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ. ಕಾನೂನು ಪ್ರಕಾರವಾಗಿಯೇ ನಾನು ಇದನ್ನು ಕೊಂಡುಕೊಂಡಿದ್ದೇನೆ ಎಂದು ರಾಜು ಅವರು ಪರಿಪರಿಯಾಗಿ ಬೇಡಿಕೊಂಡರೂ ಪುನೀತ್ ಕೆರೆಹಳ್ಳಿ ನೇತೃತ್ವದ ಪುಂಡರ ಗುಂಪು ಅದನ್ನು ಕಿಂಚಿತ್ ಕೇಳುವ ಸೌಜನ್ಯ ತೋರಿಲ್ಲ.

ಅವರ ಮೇಲೆ ಜಾನುವಾರು ಕಳ್ಳಸಾಗಣೆ ಮಾಡುವ ಆರೋಪ ಹೊರಿಸಿ ಅತ್ಯಂತ ಕೆಟ್ಟ ಶಬ್ದಗಳ ಬೈಗುಳ ಬಳಸಿ ಬೈದಿದ್ದಾರೆ. ರಾಜು ಮತ್ತು ಡ್ರೈವರ್ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಪುನೀತ್ ಕೆರೆಹಳ್ಳಿ ಮತ್ತು ಪೂರ್ಣಿಮಾ ಮನೆಮನೆ ಎಂಬ ಪುಂಡರ ಗುಂಪು, ರಾಜು ಅವರನ್ನು ವಾಹನದ ಮೇಲಿಂದ ಎದೆಯ ಮೇಲೆ ಒದ್ದು ವಾಹನದಿಂದ ಕೆಳಗೆ ಬೀಳಿಸಿದ್ದಾರೆ. ಕಪಾಳಕ್ಕೆ ಹೊಡೆದಿದ್ದಾರೆ. ರಾಜು ಮತ್ತು ವಾಹನದ ಡ್ರೈವರ್ ಇಬ್ಬರಿಗೂ ಆ ಪುಂಡರ ಗುಂಪು ನೆಲದ ಮೇಲೆ ಹಾಕಿ ತುಳಿದಿದ್ದಾರೆ. ಮರ್ಮಾಂಗಕ್ಕೆ ಒದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ರಾಜು ಅವರು ರಸ್ತೆಯಲ್ಲೇ ಏಳಲು ಆಗದ ಸ್ಥಿತಿಯಲ್ಲಿ ಬಿದ್ದು ನರಳುವಂತೆ ಹಲ್ಲೆ ನಡೆಸಿದ್ದಾರೆ.

ನಂತರ ಜಾನುವಾರುಗಳಿದ್ದ ವಾಹನವನ್ನು ಏರಿ, ಹಗ್ಗದಿಂದ ಕಟ್ಟಿದ್ದ ಜಾನುವಾರುಗಳನ್ನು ಬಿಟ್ಟು ಓಡಿಸಿದ್ದಾರೆ. ಅದೇ ಸಂದರ್ಭದಲ್ಲಿ ವಾಹನದಲ್ಲಿ ಇದ್ದ ಲಕ್ಷಕ್ಕೂ ಹೆಚ್ಚು ಬೆಲೆಗೆ ಕೊಂಡಿದ್ದ ಜಾನುವಾರಿಗೆ ಕಾಲಿಗೆ ಪೆಟ್ಟಾಗಿದೆ. ಈ ಸಂದರ್ಭದಲ್ಲಿ ಜಾನುವಾರುಗಳನ್ನು ಕೊಂಡು ಇದ್ದ ಉಳಿಕೆ ಮೂರು ಲಕ್ಷಕ್ಕೂ ಹೆಚ್ಚಿನ ಹಣ, ಕೊರಳಲ್ಲಿ ಇದ್ದ ಚಿನ್ನದ ಸರ ಮತ್ತಿತರ ಬೆಲೆಬಾಳುವ ವಸ್ತುಗಳು ಕಾಣೆಯಾಗಿವೆ ಎಂದು ರಾಜು ಅವರು ಅಳಲು ತೋಡಿಕೊಂಡಿದ್ದಾರೆ.

ನಂತರ ಸ್ಥಳೀಯರ ಸಹಾಯದಿಂದ ಅರಸೀಕೆರೆ ಪೊಲೀಸರ ಸಂಪರ್ಕ ಮಾಡಿದ್ದಾರೆ. ಆದರೆ ಅರಸೀಕೆರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ರಾಜು ಆರೋಪಿಸಿದ್ದಾರೆ. ಎಲ್ಲಾ ದಾಖಲೆಗಳ ಪರಿಶೀಲಿಸಿದ ನಂತರ ಏನೂ ಆಗಿಯೇ ಇಲ್ಲ ಎಂಬಂತೆ ಊರಿಗೆ ಕಳಿಸಿದ್ದಾರೆ. ಯಾರ ಮೇಲೂ ಸಹ ದೂರು ದಾಖಲು ಮಾಡಿಕೊಂಡಿಲ್ಲ. ರೈತ ರಾಜು ಅವರು ದೂರು ದಾಖಲು ಮಾಡದ ಪೊಲೀಸ್ ಕ್ರಮದ ಬಗ್ಗೆ ಕೇಳಿದಾಗ ಗೋರಕ್ಷಕರ ಮೇಲಿನ ಕೇಸುಗಳು ನಿಲ್ಲುವುದಿಲ್ಲ. ಸರ್ಕಾರವೇ ಅವರ ಬೆಂಬಲಕ್ಕೆ ಇದೆ. ಹಾಗಾಗಿ ದೂರು ನೀಡುವುದೂ ವ್ಯರ್ಥ ಎಂಬ ರೀತಿಯ ಪ್ರತಿಕ್ರಿಯೆ ಸ್ಥಳೀಯವಾಗಿ ಕೇಳಿ ಬಂದಿದೆ. ನಂತರ ಶಿಕಾರಿಪುರಕ್ಕೆ ಬಂದ ರಾಜು ಮತ್ತು ಡ್ರೈವರ್ ಆಸ್ಪತ್ರೆಗೆ ದಾಖಲಾಗಿ ಸ್ಥಳೀಯರಿಗೆ ವಿಚಾರ ತಿಳಿಸಿದ್ದಾರೆ.

ಸಾಮಾನ್ಯವಾಗಿ ಅರೆಮಲೆನಾಡು ಭಾಗಗಳಾದ ಶಿಕಾರಿಪುರ, ಸೊರಬ, ಭದ್ರಾವತಿ, ಹೊನ್ನಾಳಿ, ನ್ಯಾಮತಿ, ಹರಿಹರ, ರಾಣೆಬೆನ್ನೂರು ಕಡೆಗಳಲ್ಲಿ ಹಬ್ಬ ಹರಿದಿನದ ಸಂದರ್ಭದಲ್ಲಿ ಜಾನುವಾರುಗಳ ಸಿಂಗರಿಸವುದು, ಕೃಷಿ ಚಟುವಟಿಕೆಗೆ ಬಳಸುವುದು ಸಾಮಾನ್ಯವಾಗಿದೆ. ಇಂತಹ ಜಾನುವಾರುಗಳನ್ನು ದನದ ಜಾತ್ರೆಗಳಲ್ಲಿ ನೋಡಿ ತರಲಾಗುತ್ತದೆ. ಈ ಸಂದರ್ಭದಲ್ಲಿ ಜೋಡೆತ್ತುಗಳು, ಒಂಟಿ ಎತ್ತು, ವಿವಿಧ ತಳಿಯ ದನಗಳು, ಕರುಗಳು ಒಂದೊಂದು ಜಾನುವಾರುಗಳೂ ಅವುಗಳ ತಾಕತ್ತು, ಅವುಗಳ ಗುಣಲಕ್ಷಣಗಳ ಆಧಾರದಲ್ಲಿ ಲಕ್ಷಗಟ್ಟಲೆ ಹಣಕ್ಕೆ ಮಾರಾಟ ಮಾಡಲ್ಪಡುತ್ತವೆ.

ಹೇಳಿಕೇಳಿ ಬಯಲ ಪ್ರದೇಶದಲ್ಲಿ ಹೇಗೆ ಬೇಕೋ ಹಾಗೆ ಅಡ್ಡಾದಿಡ್ಡಿಯಾಗಿ ಬೆಳೆದುಕೊಂಡ ಜಾನುವಾರುಗಳು ಅವು. ಅವುಗಳನ್ನು ರೈತರು ತಮ್ಮ ಹಿಡಿತಕ್ಕೆ ತರಬೇಕೆಂದರೆ ಅವುಗಳನ್ನ ಪಳಗಿಸಬೇಕು. ಅವುಗಳಿಗೆ ಮೂಗುದಾರ ಹಾಕಿ ನಿಯಂತ್ರಣಕ್ಕೆ ತರಬೇಕು. ನಂತರ ಉಳುಮೆ, ಇನ್ನಿತರ ಕೆಲಸಗಳಿಗೆ ಇವು ಉಪಯೋಗಕ್ಕೆ ಬರುವಂತವು. ಹಾಗಿದ್ದರೆ ಮಾತ್ರ ರೈತರಿಗೆ ಜಾನುವಾರುಗಳು ತಂದದ್ದಕ್ಕೂ ಒಂದು ಸಾರ್ಥಕ.

ಹಾಗಾಗಿ ರೈತರು ತಾವು ಆಯ್ಕೆ ಮಾಡಿಕೊಳ್ಳುವ ಜಾನುವಾರುಗಳಿಗೆ ಮಾರಾಟದ ಜಾಗದಲ್ಲೇ ಮೂಗುದಾರ, ಕಾಲಿಗೆ ಹಲ್ಲೆಕಟ್ಟುವುದು ಎಲ್ಲವನ್ನೂ ಮಾಡಿಸಿಯೇ ಜಾನುವಾರು ಜಾತ್ರೆಗಳಿಂದ ಹೊರಡುವುದು. ಆ ಸಂದರ್ಭದಲ್ಲಿ ಜಾನುವಾರುಗಳ ನಿಯಂತ್ರಣಕ್ಕೆ ತರುವಾಗ ಸಣ್ಣಪುಟ್ಟ  ತರಚಿದ ಗಾಯಗಳಾಗುವುದು ಸಹಜ. ಇಂತಹ ಗಾಯಗಳನ್ನೇ ಪುನೀತ್ ಕೆರೆಹಳ್ಳಿಯ ಪುಂಡರ ಗುಂಪು ಜಾನುವಾರುಗಳ ಹಿಂಸಿಸಿದ್ದು ಎಂದು ಆರೋಪಿಸಿದೆ.

ಸರ್ಕಾರ ಸ್ಪಷ್ಟಪಡಿಸಬೇಕು : ರೈತರು ತಮ್ಮ ಕೃಷಿ ಚಟುವಟಿಕೆಗೆ, ಹೈನುಗಾರಿಕೆಗೆ ಅಥವಾ ಸಾಕಾಣಿಕೆಗೆ ಮಾರಾಟ ಮತ್ತು ಕೊಂಡುಕೊಳ್ಳಲು ಜಾನುವಾರುಗಳನ್ನು ಒಂದೂರಿನಿಂದ ಇನ್ನೊಂದೂರಿಗೆ ಸಾಗಿಸಲೇಬೇಕು. ಇಂತಹ ಸಂದರ್ಭದಲ್ಲಿ ಗೋರಕ್ಷಕ ಪುಂಡ ಪೋಕರಿಗಳ ಗುಂಪು ಬಂದು ರೈತರಿಗೆ ಉಪಟಳ ಕೊಡುವುದು ಇತ್ತೀಚೆಗೆ ಜಾಸ್ತಿಯಾಗಿದೆ. ಕಳೆದ ವರ್ಷವೂ ಸಹ ತಮಿಳುನಾಡಿನಿಂದ ಶಿವಮೊಗ್ಗಕ್ಕೆ ಕೃಷಿ ಉಪಯೋಗಕ್ಕೆ ಜಾನುವಾರು ತಂದ ವಾಹನವನ್ನು ಇದೇ ಪುನೀತ್ ಕೆರೆಹಳ್ಳಿ ತಂಡ ಅಡ್ಡಗಟ್ಟಿ ಹಲ್ಲೆ ನಡೆಸಿತ್ತು. ಈಗಲೂ ಇದೇ ತಂಡ ರೈತರಿಗೆ ತೊಂದರೆ ನೀಡಿದ್ದಲ್ಲದೆ, ಮಾರಣಾಂತಿಕ ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ, ಜಾತಿ ನಿಂದನೆಯನ್ನೂ ಮಾಡಿದೆ.

ಇಂತಹ ಸಂದರ್ಭದಲ್ಲಿ ರೈತರಿಗೆ ನೆರವಾಗಬೇಕಿದ್ದ ಸರ್ಕಾರ ನೇರವಾಗಿ ಇಂತಹ ಪುಂಡರ ಗುಂಪನ್ನು ಹಿನ್ನೆಲೆಯಿಂದ ಬೆಂಬಲಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಸರ್ಕಾರ ನಿಜಕ್ಕೂ ಯಾರ ಪರವಾಗಿದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಸದಾ ಇಂತಹ ಅನೈತಿಕ ಪೋಲೀಸ್ ಗಿರಿ ಮಾಡುವವರ ಪರವಾಗಿಯೇ ನಿಲ್ಲುವ ಬಿಜೆಪಿ ಸರ್ಕಾರ ನಿಜವಾಗಿಯೂ ರೈತರ ಪರವಾಗಿಲ್ಲ ಎಂಬುದನ್ನು ನೇರವಾಗಿ ಸ್ಪಷ್ಟಪಡಿಸಲಿ. ಹಾಗೊಂದು ವೇಳೆ ಸ್ಪಷ್ಟಪಡಿಸಿದ್ದಾದರೆ ರೈತರು ಗತಿಯಿಲ್ಲ ಎಂಬಂತೆ ತಮ್ಮ ಕೃಷಿ ಚಟುವಟಿಕೆ, ಹೈನುಗಾರಿಕೆಯನ್ನು ಕೈಬಿಡಬಹುದು. ಇತ್ತ ರೈತಪರ ಎನ್ನುವುದೂ ಇವರೇ.. ಅತ್ತ ಗೋರಕ್ಷಕ ಗುಂಪಿಗೆ ಬೆಂಬಲಿಸಿ ರೈತರಿಗೆ ಉಪಟಳ ಕೊಡುವುದೂ ಇವರೇ ಆಗಿ ಮಗು ಚಿವುಟಿ ತೊಟ್ಟಿಲು ತೂಗುವ ದುರ್ಬುದ್ದಿ ಬಿಡಲಿ.

ಒಂದು ಕಡೆ ಪೊಲೀಸರೂ ಇವರ ವಿರುದ್ಧ ದೂರು ತಗೆದುಕೊಳ್ಳುವುದಿಲ್ಲ, ಇನ್ನೊಂದು ಕಡೆ ಸರ್ಕಾರದ ಕಡೆಯಿಂದಲೂ ರೈತರಿಗೆ ರಕ್ಷಣೆ ಇಲ್ಲ. ಸಧ್ಯ ಈ ಗುಂಪು ಘರ್ಷಣೆಯಿಂದ ಶಿಕಾರಿಪುರದ ಯುವ ರೈತ ರಾಜು ಅವರಿಗಾದ ನಷ್ಟ ಭರಿಸಿ ಕೊಡುವವರ್ಯಾರು? ಈಗಾಗಲೇ 3 ಲಕ್ಷಕ್ಕೂ ಮಿಕ್ಕ ಹಣ, ಕೊರಳಲ್ಲಿನ ಚಿನ್ನದ ಸರ ಕಳುವಾಗಿದ್ದು ಅದರ ಹೊಣೆ ಯಾರು ಹೊರಲಿದ್ದಾರೆ.? ಜೊತೆಗೆ ಜಾನುವಾರಿನ ಕಾಲಿಗೂ ಆ ಸಂದರ್ಭದಲ್ಲಿ ಪೆಟ್ಟಾಗಿದೆ ಎಂದು ರಾಜು ಆರೋಪಿಸಿದ್ದಾರೆ. ಈ ನಷ್ಟವನ್ನು ಯಾರು ಭರಿಸುವುದು ಎಂಬುದನ್ನೂ ಪೊಲೀಸರು ಮತ್ತು ಸರ್ಕಾರ ಸ್ಪಷ್ಟಪಡಿಸಬೇಕು.

You cannot copy content of this page

Exit mobile version