ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಸ್ಟೂಟ್ ಆಫ್ ಸಯನ್ಸ್ (Indian Institute of Science) ನಲ್ಲಿ ಕೋಮು ಸೌಹಾರ್ದತೆ ಮತ್ತು ನ್ಯಾಯದ ಕುರಿತು ಉಪನ್ಯಾಸ ನೀಡಲು ಬಂದಿದ್ದ ನಾಗರಿಕ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಪ್ರವೇಶ ನಿರಾಕರಿಸಲಾಗಿದ್ದು, ಸ್ವತಃ ತೀಸ್ತಾ ಈ ಬಗ್ಗೆ ಆರೋಪಿಸಿದ್ದಾರೆ.
ಅಗಸ್ಟ್ 16, ಬುಧವಾರದಂದು ಸಂಜೆ ಐಐಎಸ್ಸಿ ಕ್ಯಾಂಪಸ್ನಲ್ಲಿ ‘ಬ್ರೇಕ್ ದಿ ಸೈಲೆನ್ಸ್’ ಎಂಬ ವಿದ್ಯಾರ್ಥಿಗಳ ಗುಂಪು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಸಿಸಿಇ ಲೆಕ್ಚರ್ ಹಾಲ್ ಅನ್ನು ನಿಗದಿಪಡಿಸಲಾಗಿತ್ತು.
ಈ ಕಾರ್ಯಕ್ರಮದ ಆರಂಭವಾಗುವ ಕೊನೆಯ ಗಳಿಗೆಯಲ್ಲಿ ಅಧಿಕಾರಿಗಳು ತೀಸ್ತಾ ಅವರ ಉಪನ್ಯಾಸಕ್ಕೆ ನಿರಾಕರಿಸಿ ವೇದಿಕೆ ಏರದಂತೆ ತಡೆದರು. ಐಐಎಸ್ಸಿ ಕ್ಯಾಂಟೀನ್ನ ಹೊರಗಿನ ಪಾರ್ಕ್ ನಲ್ಲಿ ಕಾರ್ಯಕ್ರಮ ನಡೆಸುವಂತೆ ಒತ್ತಾಯಿಸಿದರು ಎಂದು ಸೆಟಲ್ವಾಡ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿನ್ನೆ (ಬುಧವಾರ), ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನನಗೆ ವಿಚಿತ್ರ ಅನುಭವವಾಯಿತು. ಕೆಲವು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ‘ಕೋಮು ಸೌಹಾರ್ದತೆ ಮತ್ತು ನ್ಯಾಯ’ ಕುರಿತು ಸಿಸಿಇ ಹಾಲ್ನಲ್ಲಿ ಉಪನ್ಯಾಸ ನೀಡಲು ನನ್ನನ್ನು ಕರೆದಿದ್ದರು. ಆದರೆ ಸಂಸ್ಥೆಯ ಆಡಳಿತ ಮಂಡಳಿಯು ಸಭೆಯನ್ನು ಕೊನೆ ಸಂದರ್ಭದಲ್ಲಿ ನಿಲ್ಲಿಸಿ, ಇನ್ಸ್ಟಿಟ್ಯೂಟ್ನ ಗೇಟ್ ಪ್ರವೇಶಿಸದಂತೆ ತಡೆದರು ತೀಸ್ತಾ ಎಂದು ಹೇಳಿದ್ದಾರೆ.
ನಂತರ 40 ಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಕ್ಯಾಂಟೀನ್ನ ಹೊರಗಿನ ಪಾರ್ಕ್ ನಲ್ಲಿ ಸೇರಿ ಭಾರತದಲ್ಲಿ ನ್ಯಾಯ, ಶಾಂತಿ, ನಿರ್ಣಾಯಕ ಘಟ್ಟದ ಬಗ್ಗೆ ಚರ್ಚೆ ಮಾಡಿದೆವು ಎಂದು ತೀಸ್ತಾ ಹೇಳಿದ್ದಾರೆ.