ಮಹಮ್ಮದ್ ಪೈಗಂಬರ್ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಮಾತನಾಡುವ ಉದ್ದೇಶ ಇರಲಿಲ್ಲ. ಮಹಮ್ಮದ್ ಅಲಿ ಜಿನ್ನಾ ಅವರ ಬಗ್ಗೆ ಮಾತನಾಡುವಾಗ ಮಾತಿನ ಭರದಲ್ಲಿ ಬಂದಿದ್ದು ತಪ್ಪಾಗಿದೆ ಎಂದು ಶಾಸಕ ಪ್ರತಿಕ್ರಿಯಿಸಿದ್ದಾರೆ.
ಪ್ರವಾದಿ ಮಹಮ್ಮದ್ ಪೈಗಂಬರ್ ಎಂದರೆ ಮಾತ್ರ ಇಸ್ಲಾಂ ಧರ್ಮದ ಸಂಸ್ಥಾಪಕರ ಹೆಸರು ತೆಗೆದುಕೊಂಡಂತೆ ಆಗುತ್ತದೆ. ಈ ಕುರಿತು ವಿಜಯಪುರದಲ್ಲಿ ಕಾಂಗ್ರೆಸ್ ನವರನ್ನು ಬಿಟ್ಟರೆ ಬೇರೆಯವರು ಮಾತನಾಡಿಲ್ಲ. ಕಾಂಗ್ರೆಸ್ಸಿಗರು ಹತಾಶೆಯಾಗಿದ್ದಾರೆ, ಒಂದು ಇಶ್ಯೂ ಬೇಕಿತ್ತು.. ಇದನ್ನು ಇಟ್ಟುಕೊಂಡಿದ್ದಾರೆ.. ಎಂದು ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ಬರೀ ಗೂಂಡಾಗಿರಿ, ಹಪ್ತಾ ವಸೂಲಿ ನಡೆಯುತ್ತಿದೆ. ದೇವರಿಗೆ ಬೈದಿದ್ದಾರೆ ಎಂದು ನೆಪ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರು ಮಾತ್ರ ವಿರೋಧ ಮಾಡುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಬೇರೆ ದೇವರ ಅವಹೇಳನ ಮಾಡುವುದುದು ಕಲಿಸಿಲ್ಲ. ರಾಮ, ಕೃಷ್ಣ, ಲಕ್ಷ್ಮೀ, ಸರಸ್ವತಿ ಅವಹೇಳನ ಮಾಡಿದಾಗ ಹೀಗೆ ಆಗಬೇಕಲ್ಲವೇ? ಇದೊಂದು ಸಂಚು ಎಂದು ಯತ್ನಾಳ್ ಹೇಳಿದರು.
ಯತ್ನಾಳ್ ಮುಗಿಸಲು ಹೋದರೆ ರಾಜ್ಯದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತೆ. ಇದು ನನ್ನನ್ನು ಮುಗಿಸಲು ಹೂಡಿದ ಸಂಚು. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಇದರ ಹಿಂದೆ ಯಾರಿದ್ದಾರೆ ಎಂಬುದು ಸದ್ಯದಲ್ಲೇ ಹೊರಬರುತ್ತದೆ. ಈ ಬಗ್ಗೆ ಎನ್ ಐಎ ತನಿಖೆಯೂ ಆಗಲಿ ಎಂದು ಹೇಳಿದರು.