Friday, April 26, 2024

ಸತ್ಯ | ನ್ಯಾಯ |ಧರ್ಮ

ಕೊಪ್ಪ ಬ್ಲಾಕ್ ಕಾಂಗ್ರೆಸ್ ನಲ್ಲಿ ಅಸಮಾಧಾನ ; ಜಿಲ್ಲಾಧ್ಯಕ್ಷರ ಏಕಪಕ್ಷೀಯ ನಿರ್ಧಾರಕ್ಕೆ ಆಕ್ರೋಶ

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಾತಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಅಧ್ಯಕ್ಷರ ನೇಮಕಾತಿಯನ್ನು ಕೂಡಲೇ ತಡೆಹಿಡಿಯುವಂತೆ ಕಾಂಗ್ರೆಸ್‍ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಕೆಪಿಸಿಸಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಕೊಪ್ಪದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್‍ ಪಕ್ಷದ ಪ್ರಮುಖರು ಸಭೆ ಸೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ  ನೇಮಕಗೊಂಡಿರುವ ಬಾಳೆಮನೆ ನಟರಾಜ್ ರವರಿಗೆ ಮಾಡಿರುವ ಆದೇಶವನ್ನು ತಕ್ಷಣವೇ ರದ್ದುಪಡಿಸಿ ಪಕ್ಷನಿಷ್ಠರಿಗೆ ಹುದ್ದೆ ನೀಡಬೇಕೆಂದು ಮನವಿ ಮಾಡಿದ್ದಾರೆ.

ಇದೇ ವೇಳೆ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಅಂಶುಮಂತ್ ಗೌಡ ಅವರ ಏಕಪಕ್ಷೀಯ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರು ಕಡಿವಾಣ ಹಾಕಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸೂಚನೆ ನೀಡಬೇಕೆಂಬ ಒಮ್ಮತದ ತೀರ್ಮಾನವನ್ನು ಸಭೆಯಲ್ಲಿ  ಕೈಗೊಳ್ಳಲಾಗಿದೆ.

ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ನಟರಾಜ್ ನೇಮಕ  ಮಾಡಿರುವ ಜಿಲ್ಲಾಧ್ಯಕ್ಷರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಆಕಾಂಕ್ಷಿಗಳಾಗಿದ್ದ ರವೀಂದ್ರ ಕುಕ್ಕೋಡಿಗೆ, ಮಂಜುನಾಥ್  ನುಗ್ಗಿಘಿ, ನವೀನ್ ಮಾವಿನಕಟ್ಟೆಘಿ, ರಾಜೇಂದ್ರ ಧರೇಕೊಪ್ಪಘಿ, ನವೀನ್ ಕರುವಾನೆ, ಶ್ರೀಹರ್ಷ ಹರಿಹರಪುರ, ಮಿತ್ರ ಕೋಡ್ತಾಳ್, ಅಶೋಕ್ ನಾರ್ವೆ, ರತ್ನಾಕರ್ ಒಣತೋಟ ಈ ಮುಖಂಡರ ನೇತೃತ್ವದಲ್ಲಿ   ಸುಮಾರು 500 ಕ್ಕೂ ಹೆಚ್ಚು  ಕಾರ್ಯಕರ್ತರ ಸಭೆ   ಸೇರಿಸಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡರು.

ಜಿಲ್ಲಾಧ್ಯಕ್ಷರಾದ ಅಂಶುಮಂತ್ ಗೌಡ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ಮಾಡುವ ಮುನ್ನ ಸೌಜನ್ಯಕ್ಕಾದರೂ ನಮ್ಮ ಅಭಿಪ್ರಾಯವನ್ನು ಕೇಳಲಿಲ್ಲ. 30 ವರ್ಷಗಳ ಹಿಂದೆ ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದ  ಹಾಗೂ ಪ್ರಸ್ತುತ ಕೆಪಿಸಿಸಿ ಸದಸ್ಯರೂ ಆಗಿರುವ ಬಾಳೆಮನೆ ನಟರಾಜ್ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದ್ದಾರೆ.

ಸಭೆಯ ನಿರ್ಣಯಗಳು:
1. ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಹಳ್ಳಿ ಹಳ್ಳಿಯಲ್ಲಿ ಪ್ರಚಾರ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಬೇಕು.
2. ಉಡುಪಿ-ಚಿಕ್ಕಮಗಳೂರು ಲೋಕಸಭಾ ಅಭ್ಯರ್ಥಿಯಾದ ಜಯಪ್ರಕಾಶ್  ಹೆಗಡೆ ತಾಲ್ಲೂಕಿಗೆ ಆಗಮಿಸುತ್ತಿದ್ದುಘಿ, ಅವರಿಗೆ ಅಭೂತಪೂರ್ವ ಸ್ವಾಗತಕ್ಕೆ ತಯಾರಿ ನಡೆಸುವುದು.
3. ತಾಲ್ಲೂಕು ಅಧ್ಯಕ್ಷರ ನೇಮಕಾತಿಯನ್ನು ರದ್ದುಪಡಿಸಿ  ಈಗಿರುವ  ಆಕಾಂಕ್ಷಿಗಳಲ್ಲಿ  ಯಾರನ್ನಾದರೂ ಒಬ್ಬರನ್ನು ನೇಮಕ  ಮಾಡುವಂತೆ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸುವುದು.
4. ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿರುವ ಜಿಲ್ಲಾಧ್ಯಕ್ಷರ ವಿರುದ್ಧ ರಾಜ್ಯಾಧ್ಯಕ್ಷರಿಗೆ ದೂರು ನೀಡುವುದು.
5. ನಿಕಟಪೂರ್ವ ಬ್ಲಾಕ್ ಅಧ್ಯಕ್ಷರಾದ ಸುಧೀರ್ ಕುಮಾರ್ ಮುರೊಳ್ಳಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ಅಧ್ಯಕ್ಷರಾದ ಕೆ.ಎಸ್. ರವೀಂದ್ರ, ಮಾಜಿ ಬ್ಲಾಕ್ ಅಧ್ಯಕ್ಷರುಗಳು, ಸಮನ್ವಯ ಸಮಿತಿಯ ಹಿರಿಯರುಗಳ ಕನಿಷ್ಟ ಗಮನಕ್ಕೂ ತರದೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಏಕಪಕ್ಷೀಯ ನಿಲುವನ್ನು ಖಂಡಿಸಲಾಯಿತು.
6. ಶಾಸಕರ ಅಭಿಪ್ರಾಯ ಪಡೆಯದೇ ಏಕಪಕ್ಷೀಯವಾಗಿ ಗ್ಯಾರಂಟಿ ಅನುಷ್ಠಾನ ಸಮಿತಿಯ ಪದಾಧಿಕಾರಿಗಳನ್ನು ನೇಮಕ ಮಾಡಿ ಗುಂಪುಗಾರಿಕೆಗೆ ಅವಕಾಶ ಮಾಡಿಕೊಡುತ್ತಿರುವ ಅಂಶುಮಂತ್ ಅವರ ನಡೆಯನ್ನು ಖಂಡಿಸಲು ತೀರ್ಮಾನಿಸಲಾಯಿತು.
7. ಈ ತಕ್ಷಣದಿಂದಲೇ ಅವರ ನೇಮಕಾತಿಯನ್ನು ತಡೆಹಿಡಿಯುವುದಲ್ಲದೇ ಹಾಲಿ ಇರುವ ಉಸ್ತುವಾರಿ ಸಮಿತಿಯ ನೇತೃತ್ವದಲ್ಲೇ ಲೋಕಸಭಾ ಚುನಾವಣೆಯನ್ನು ನಡೆಸುವಂತೆ ಒತ್ತಾಯಿಸುವುದು.

Related Articles

ಇತ್ತೀಚಿನ ಸುದ್ದಿಗಳು