ಹಿಂದೂ ಮತ್ತು ಮುಸಲ್ಮಾನರ ಜನಸಂಖ್ಯೆ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮದ ವೇಳೆ ಮುಸಲ್ಮಾನರ ಚಿಹ್ನೆಯಾಗಿ ಪಾಕೀಸ್ತಾನದ ಬಾವುಟ ಪ್ರದರ್ಶನ ಮಾಡಿದ ಸುವರ್ಣ ನ್ಯೂಸ್ ಈಗ ಸಾರ್ವಜನಿಕವಾಗಿ ವಿಷಾದ ವ್ಯಕ್ತಪಡಿಸಿದೆ. ಆದರೆ ಇದು ದುರುದ್ದೇಶಪೂರ್ವಕ ಅಲ್ಲ, ಕಣ್ತಪ್ಪಿನಿಂದಾದ ತಪ್ಪು ಎಂದು ತಿಳಿಸಿದೆ.
ಎರಡು ದಿನಗಳ ಹಿಂದೆ ಸುವರ್ಣ ನ್ಯೂಸ್ ಪಾಕೀಸ್ತಾನ ಮತ್ತು ಭಾರತದ ಜನಸಂಖ್ಯೆ, ಅಲ್ಲಿನ ಬಹುಸಂಖ್ಯಾತರ ಪ್ರಮಾಣ, ಅಲ್ಪಸಂಖ್ಯಾತರ ಏರಿಕೆ ಹಾಗೂ ಕೆಲವು ಧಾರ್ಮಿಕ ವಿಚಾರಗಳ ಕುರಿತಾಗಿ ಕಾರ್ಯಕ್ರಮ ನಡೆಸಿತ್ತು. ಇದರಲ್ಲಿ ಹಿಂದೂ ಮತ್ತು ಮುಸ್ಲಿಮರ ಧಾರ್ಮಿಕ ಚಿಹ್ನೆ ಬಳಸುವ ಜಾಗದಲ್ಲಿ ಹಿಂದೂಗಳ ತೋರಿಸುವ ಜಾಗದಲ್ಲಿ ಭಾರತದ ಬಾವುಟ ಮತ್ತು ಮುಸಲ್ಮಾನರ ಉಲ್ಲೇಖಿಸುವ ಜಾಗದಲ್ಲಿ ಪಾಕೀಸ್ತಾನದ ಬಾವುಟ ಪ್ರದರ್ಶಿಸಲಾಗಿತ್ತು.
ಇದು ಪ್ರಸಾರವಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಷ್ಟೇ ಅಲ್ಲದೇ ಸರ್ಕಾರ ಸುವರ್ಣ ನ್ಯೂಸ್ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಸರ್ಕಾರವನ್ನು ಆಗ್ರಹಿಸುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ತಕ್ಷಣ ಎಚ್ಚೆತ್ತುಕೊಂಡ ಸುವರ್ಣ ನ್ಯೂಸ್ ಇದು ತಿಳಿಯದೇ ಆದ ಪ್ರಮಾದ ಎಂದು ವಿಷಾದ ವ್ಯಕ್ತಪಡಿಸಿದೆ.
ಅಷ್ಟಕ್ಕೂ ಈ ರೀತಿಯ ಚರ್ಚೆ ಅಪ್ರಸ್ತುತವಾದರೂ ಬಿಜೆಪಿ ಪಕ್ಷದ ಟ್ರೋಲ್ ಪೇಜುಗಳು ಹಾಗೂ RSS ಸಂಘಟನೆ ಹಿನ್ನೆಲೆಯ ವ್ಯಕ್ತಿಗಳ ಹೊಸ ಟೂಲ್ ಕಿಟ್ ಇದಾಗಿರುವ ಬಗ್ಗೆಯೂ ಮಾತುಗಳು ಕೇಳಿ ಬಂದಿದೆ. ಸುವರ್ಣ ನ್ಯೂಸ್ ಇಂತಹ ಸುದ್ದಿಯನ್ನೇ ಮುನ್ನೆಲೆಗೆ ತಂದು ಇನ್ಯಾವುದೋ ವಿಚಾರವನ್ನು ಮರೆಮಾಚುವ ತಂತ್ರ ನಡೆಸಿದೆ ಎಂದೂ ಸಹ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಅಷ್ಟಕ್ಕೂ ಕೇಂದ್ರ ಸರ್ಕಾರ ಕಳೆದ 14 ವರ್ಷಗಳಿಂದಲೂ ಜಾತಿ ಗಣತಿ ನಡೆಸಿಲ್ಲ. 2021 ರಲ್ಲೇ ನಡೆಯಬೇಕಿದ್ದ ಜಾತಿಯಾಧಾರಿತ ಜನಸಂಖ್ಯಾ ಗಣತಿಯನ್ನು ನಡೆಸದೇ ಇರುವ ಬಗ್ಗೆ ವಿರೋಧ ಪಕ್ಷಗಳೂ ಸಹ ಹಲವು ಬಾರಿ ತಮ್ಮ ಆಕ್ರೋಶ ವ್ಯಕ್ತಪಡಿಸಿವೆ. ಆದರೆ ಈ ಬಗ್ಗೆ ಎಳ್ಳಷ್ಟು ಚಕಾರವೆತ್ತದ ಹಾಗೂ ಜಾತಿ, ಧರ್ಮಾಧಾರಿತ ಗಣತಿಯನ್ನು ದೂರವೇ ಇಟ್ಟಂತಹ ಬಿಜೆಪಿ ಇದ್ದಕ್ಕಿದ್ದಂತೆಯೇ ಮುಸಲ್ಮಾನರ ಜನಸಂಖ್ಯೆಯನ್ನು ಅದ್ಯಾವ ಆಧಾರದ ಮೇಲೆ ಹೆಚ್ಚಾಗಿದೆ ಎಂದು ಪರಿಗಣಿಸಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.
ಸಧ್ಯಕ್ಕೆ ಇಂತದ್ದೊಂದು ಚರ್ಚೆ ಮುನ್ನೆಲೆಗೆ ತರುವ ಹಂತದಲ್ಲಿ ಸುವರ್ಣ ನ್ಯೂಸ್ ಮುಸಲ್ಮಾನರಿಗೆ ಅವಮಾನ ಆಗುವಂತೆ ನಡೆದುಕೊಂಡಿದೆ. ಅದು ಬೇಕಂತಲೇ ಮಾಡಿದೆಯೋ ಅಥವಾ ಕಣ್ತಪ್ಪಿನಿಂದಾದ ಯಡವಟ್ಟೋ ಗೊತ್ತಿಲ್ಲ. ಈ ಸನ್ನಿವೇಶದಲ್ಲಿ ಆದ ತಪ್ಪಿಗೆ ವಿಷಾದ ವ್ಯಕ್ತಪಡಿಸಿ, ಸರ್ಕಾರದ ಕಡೆಯಿಂದಲೋ ಅಥವಾ ಇನ್ನಾವುದೇ ಸಂಘಟನೆ ಕಡೆಯಿಂದ ಬೀಳಬಹುದಾದ ಕೇಸಿನಿಂದ ಸುವರ್ಣ ನ್ಯೂಸ್ ಬಚಾವಾಗಿದೆ ಅಷ್ಟೆ.