ದಶಕಗಳ ಕಾಲ ನಿರಂತರವಾಗಿ ಸಂಘಟನೆ ಮಾಡಿ, ಕರ್ನಾಟಕದಲ್ಲಿ ತನಗೆ ಒಂದು ಅಸ್ತಿತ್ವವನ್ನು ತಂದುಕೊಟ್ಟ ಹಾಗೂ ಲಿಂಗಾಯತ ಸಮುದಾಯವನ್ನು ಸಾರಾಸಗಟಾಗಿ ತಮ್ಮ ಮತದಾರರನ್ನಾಗಿ ಪರಿವರ್ತಿಸಿದ ಯಡಿಯೂರಪ್ಪನವರನ್ನೇ ಬಳಸಿ ಬಿಸಾಡಿದ ಬಿಜೆಪಿಯು ಕುಮಾರಸ್ವಾಮಿಯವರನ್ನು ಮೆರೆಸುತ್ತಾ? ಖಂಡಿತ ಇಲ್ಲ! ಒಕ್ಕಲಿಗ ನಾಯಕತ್ವದ ಕದನ ಸೃಷ್ಟಿಸಿ, ಅದರ ಮೂಲಕ ಲಾಭ ಮಾಡಿಕೊಳ್ಳುವುದಷ್ಟೇ ಬಿಜೆಪಿ ಹೈಕಮಾಂಡ್ನ ಉದ್ದೇಶ – ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು
ಕುಮಾರಸ್ವಾಮಿಯವರು ಅಕ್ಷರಶಃ ಡಿ.ಕೆ.ಶಿವಕುಮಾರ್ ವಿರುದ್ಧ ದಾಳಿಗಿಳಿದಿದ್ದಾರೆ. ಈ ದಾಳಿಯಲ್ಲಿ ದೇವೇಗೌಡರೂ ಹಿಂದೆ ಬಿದ್ದಿಲ್ಲ. ಈ ಎಲ್ಲಾ ಬೆಳವಣಿಗೆಗಳು ಶುರುವಾದದ್ದು ಬಿಜೆಪಿ ಜೊತೆಗಿನ ಜೆಡಿಎಸ್ ಮೈತ್ರಿಯ ಮಾತುಕತೆಗಳು ಶುರುವಾದ ನಂತರ. ಅಲ್ಲಿಯವರೆಗೂ ಸಿಎಂ ಸಿದ್ದರಾಮಯ್ಯನವರನ್ನು ಟಾರ್ಗೆಟ್ ಮಾಡಿಕೊಂಡಿದ್ದ ಕುಮಾರಸ್ವಾಮಿಯವರು, ದಿಢೀರ್ ತಮ್ಮ ಗುರಿಯನ್ನು ಡಿ.ಕೆ.ಶಿವಕುಮಾರರತ್ತ ತಿರುಗಿಸಿದ್ದರ ಹಿಂದೆ ಬಿಜೆಪಿಯ ಮಾಸ್ಟರ್ಪ್ಲ್ಯಾನ್ ಇದೆ. ಅದು, ಭವಿಷ್ಯದಲ್ಲಿ ಒಕ್ಕಲಿಗ ಮತಗಳನ್ನು ಸಾರಾಸಗಟಾಗಿ ಬಿಜೆಪಿಯತ್ತ ಹರಿದುಬರುವಂತೆ ಮಾಡಿಕೊಳ್ಳುವ ದೂರಾಲೋಚನೆಯ ಐಡಿಯಾ!
ಒಕ್ಕಲಿಗ ಸಮುದಾಯದ ಪ್ರಾಬಲ್ಯವಿರುವ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ನೆಲೆ ಕಂಡುಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿದೆಯಾದರೂ ಬೆಂಗಳೂರು ನಗರದಿಂದಾಚೆಗೆ ವಿಸ್ತರಣೆಗೊಳ್ಳಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ, ಈ ಭಾಗದಲ್ಲಿ ನಿರ್ಣಾಯಕರೆನಿಸಿರುವ ಒಕ್ಕಲಿಗರು, ಕಳೆದ ಚುನಾವಣೆಯವರೆಗೂ ದೇವೇಗೌಡರ ಮೇಲಿನ ಅಭಿಮಾನದ ಕಾರಣಕ್ಕೆ ಜೆಡಿಎಸ್ ಪಕ್ಷಕ್ಕೆ ನಿಷ್ಠರಾಗಿರುವುದು. ಆದರೆ ಇತ್ತೀಚಿನ ದಿನಗಳಲ್ಲಿ ಆ ನಿಷ್ಠೆ ಸಣ್ಣಗೆ ಕದಲಾಡಲು ಶುರುವಾಗಿದೆ. ಅದಕ್ಕೆ ಕಾರಣ, ಕೆಪಿಸಿಸಿ ಸಾರಥ್ಯ ವಹಿಸಿರುವ ಡಿ.ಕೆ.ಶಿವಕುಮಾರ್! ಭವಿಷ್ಯದಲ್ಲಿ ಡಿಕೆ ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಬಹುದು ಎಂಬ ಲೆಕ್ಕಾಚಾರಗಳು ಶುರುವಾದ ತರುವಾಯ, ಒಕ್ಕಲಿಗರು ಸ್ವಲ್ಪ ಮಟ್ಟಿಗೆ ಕಾಂಗ್ರೆಸ್ನತ್ತ ಮುಖ ಮಾಡುತ್ತಿದ್ದಾರೆ. ಆ ಪ್ರಮಾಣ ಕಡಿಮೆ ಇರಬಹುದಾದರೂ, ಮುಂದಿನ ದಿನಗಳಲ್ಲಿ ಅದು ಹೆಚ್ಚಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ರಾಜ್ಯ ಬಿಜೆಪಿ ನಾಯಕರ ವಿರೋಧದ ನಡುವೆಯೂ ಬಿಜೆಪಿ ಹೈಕಮಾಂಡ್ ಜೆಡಿಎಸ್ ಜೊತೆ ಮೈತ್ರಿಗೆ ಮುಂದಾಗಲು ಈ ಅಂಶವೇ ಕಾರಣ. ಒಂದುವೇಳೆ, ಡಿ.ಕೆ.ಶಿವಕುಮಾರ್ ಒಕ್ಕಲಿಗರ ಲೀಡರ್ ಆಗಿ ಒಲವು ಹೆಚ್ಚಿಸಿಕೊಂಡರೆ ಹಳೇ ಮೈಸೂರು ಪ್ರಾಂತ್ಯದಲ್ಲಿ ತನ್ನ ಪ್ರಾಬಲ್ಯ ವಿಸ್ತರಿಸಬೇಕು ಎಂಬ ಅದರ ಯತ್ನಕ್ಕೆ ದೊಡ್ಡ ಅಡ್ಡಿ ಎದುರಾದಂತಾಗುತ್ತದೆ. ಅದಕ್ಕೆ ತಡೆಯೊಡ್ಡಲು ಬಿಜೆಪಿಯೊಳಗೆ ಸಮರ್ಥವೆನಿಸುವ ಒಕ್ಕಲಿಗ ಲೀಡರ್ಗಳ ಕೊರತೆ ಕಾಡುತ್ತಿದೆ. ಆರ್.ಅಶೋಕ್ ಬೆಂಗಳೂರಿನಿಂದಾಚೆ ಹಿಗ್ಗಲು ಆಸಕ್ತಿ ತೋರುತ್ತಿಲ್ಲ. ಡಿ.ವಿ.ಸದಾನಂದಗೌಡರನ್ನು ಕೇಂದ್ರ ಮಂತ್ರಿ ಮಾಡಿದರೂ ಅವರಲ್ಲಿ ಆ ಛಾತಿ ಕಾಣಿಸಲಿಲ್ಲ. ಬಿಜೆಪಿ ಅಶ್ವತ್ಥ್ ನಾರಾಯಣರನ್ನು ಡಿಸಿಎಂ ಮಾಡಿದ್ದು ಕೂಡಾ ಇದೇ ಕಾರಣಕ್ಕೆ. ಆದರೆ ಅಲ್ಲೂ ನಿರೀಕ್ಷಿತ ಫಲ ಸಿಗಲಿಲ್ಲ. ಉರೀಗೌಡ, ನಂಜೇಗೌಡ ಕಲ್ಪಿತ ಪ್ರಕರಣವನ್ನು ಮುನ್ನೆಲೆಗೆ ತಂದಾಗ, ಅದನ್ನು ಒಕ್ಕಲಿಗರ ಅಸ್ಮಿತೆಯಾಗಿ ಬ್ರ್ಯಾಂಡ್ ಮಾಡಿ ರಾಜಕೀಯ ಲಾಭ ತರುವಂತಹ ಒಬ್ಬನೇ ಒಬ್ಬ ಲೀಡರ್ ಬಿಜೆಪಿಗೆ ಇಲ್ಲವಾದದ್ದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿತ್ತು.
ಉತ್ತರ ಕರ್ನಾಟಕದಲ್ಲಿ ಯಡಿಯೂರಪ್ಪನವರನ್ನು ಮುಂದಿಟ್ಟುಕೊಂಡು ಲಿಂಗಾಯತ ಸಮುದಾಯದಲ್ಲಿ ಆಳವಾಗಿ ಬೇರೂರಿದಂತೆ ಹಳೇ ಮೈಸೂರು ಭಾಗದಲ್ಲೂ ಒಕ್ಕಲಿಗರನ್ನು ಸೆಳೆಯಲು ಯಶಸ್ವಿಯಾದರೆ, ಕರ್ನಾಟಕದ ರಾಜಕಾರಣವನ್ನು ಅನಾಯಾಸವಾಗಿ ತನ್ನ ಕೈವಶ ಮಾಡಿಕೊಳ್ಳಬಹುದೆನ್ನುವುದು ಬಿಜೆಪಿಯ ಬಹುದಿನಗಳ ಕನಸು. ಆದರೆ ಅದಕ್ಕೆ ಇಷ್ಟು ದಿನ ಪ್ರಾದೇಶಿಕವಾಗಿ ಜೆಡಿಎಸ್ ಅಡ್ಡಿಯಾಗಿತ್ತು. ಆದರೆ ಒಕ್ಕಲಿಗ ಸಮುದಾಯದ ನಡುವೆ, ಜೆಡಿಎಸ್ನ ಪ್ರಭಾವ ಕುಗ್ಗುತ್ತಿದೆ ಎನ್ನುವ ಸಮಯಕ್ಕೆ ಡಿ.ಕೆ.ಶಿವಕುಮಾರ್ ಹೊಸ ‘ಬಂಡೆ’ಯಾಗಿ ಬಿಜೆಪಿಗೆ ಕಾಣಿಸತೊಡಗಿದ್ದರು. ಅದೇ ಹೊತ್ತಿಗೆ ಸೋಲಿನ ಹತಾಶೆಯಲ್ಲಿ ಕುದಿಯುತ್ತಿರುವ ಎಚ್.ಡಿ.ಕುಮಾರಸ್ವಾಮಿಯವರು ಮೈತ್ರಿ ಪ್ರಸ್ತಾಪದೊಂದಿಗೆ ಬಿಜೆಪಿ ಹೈಕಮಾಂಡ್ ಎಡತಾಕಿದ್ದು, ಅವರ ಪಾಲಿಗೆ ರೋಗಿ ಬಯಸಿದ ಹಾಲು-ಅನ್ನವೇ ಹುಡುಕಿ ಬಂದಂತಾಗಿದೆ.
ಮನಸ್ಸಿನ ತುಂಬಾ ಸಿದ್ದರಾಮಯ್ಯನವರ ಮೇಲೆ ಸಿಟ್ಟು ತುಂಬಿಕೊಂಡು ಬಂದಿದ್ದ ಕುಮಾರಸ್ವಾಮಿಯವರ ಬೇಗುದಿಯನ್ನು ಚೆನ್ನಾಗಿ ಎನ್ಕ್ಯಾಶ್ ಮಾಡಿಕೊಂಡ ಬಿಜೆಪಿ ಹೈಕಮಾಂಡ್, ’ನಾವು ಸಿದ್ದರಾಮಯ್ಯನವರನ್ನು ಎಷ್ಟೇ ಟಾರ್ಗೆಟ್ ಮಾಡಿದರೂ ಸರ್ಕಾರದಲ್ಲಿ ಅಸ್ಥಿರತೆ ಮೂಡಿಸಲು ಸಾಧ್ಯವಾಗಲ್ಲ. ಅಷ್ಟರಮಟ್ಟಿಗೆ ಅವರು ಕ್ಲೀನ್ಹ್ಯಾಂಡ್ ಎಂಬ ಹೆಸರು ಮಾಡಿದ್ದಾರೆ. ಆದರೆ ಸರ್ಕಾರವನ್ನು ನಾವು ಯಾವುದೇ ರೀತಿಯಲ್ಲಿ ಕಾಡುವ ಸಾಧ್ಯತೆಯೇನಾದರು ಇದ್ದರೆ, ಅದು ಡಿಕೆ ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಿಕೊಳ್ಳುವ ಮೂಲಕ ಮಾತ್ರ ಸಾಧ್ಯ. ಯಾಕೆಂದರೆ ಅವರ ಮೇಲೆ ಈಗಾಗಲೇ ಕೇಸುಗಳಿವೆ. ಡಿಕೆಶಿ ಅಸ್ಥಿರತೆಗೆ ತುತ್ತಾದರೆ, ಖಂಡಿತ ಅವರು ಸರ್ಕಾರವನ್ನೂ ಅಸ್ಥಿರತೆಗೆ ತಳ್ಳಿ ಸೇಡು ತೀರಿಸಿಕೊಳ್ಳಲು ಮುಂದಾಗುತ್ತಾರೆ. ಆಗ ನಾವು ದಾಳಗಳನ್ನು ಉರುಳಿಸಬಹುದು’ ಎಂಬ ಲೆಕ್ಕಾಚಾರವನ್ನು ಕುಮಾರಣ್ಣನ ಮುಂದಿಟ್ಟಿದೆ ಎನ್ನಲಾಗುತ್ತಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಎಚ್ಡಿಕೆ ತನ್ನ ದಾಳಿಯನ್ನು ಸಿದ್ದರಾಮಯ್ಯನವರಿಂದ ಡಿಕೆಶಿಯತ್ತ ತಿರುಗಿಸಿದ್ದಾರೆ. ‘ಇನ್ನು ಸ್ವಲ್ಪ ದಿನಗಳಲ್ಲಿ ಡಿಕೆಶಿ ಮತ್ತೆ ತಿಹಾರ್ ಜೈಲಿಗೆ ಹೋದರೂ ಅಚ್ಚರಿಯಿಲ್ಲ ಎಂದು ಹೇಳುತ್ತಿರುವುದು ಈ ಅಭಿಪ್ರಾಯವನ್ನು ಖಾತ್ರಿ ಪಡಿಸುತ್ತದೆ. ಆದರೆ ಬಿಜೆಪಿಯ ಜಾಲವೇ ಬೇರೆಯಿದೆ. ಒಂದುಕಡೆಯಿಂದ, ತಾವು ಮೈತ್ರಿ ಮಾಡಿಕೊಂಡ ಬಲಿಷ್ಠ ಪ್ರಾದೇಶಿಕ ಪಕ್ಷಗಳನ್ನು ಶಿಥಿಲಗೊಳಿಸುತ್ತಾ ಬಂದ ಬಿಜೆಪಿಗೆ ಕರ್ನಾಟಕದಲ್ಲಿ ಮಾತ್ರ ಜೆಡಿಎಸ್ಗೆ ಮರುಜೀವ ನೀಡುವ ಉದ್ದೇಶ ಖಂಡಿತ ಇರಲಾರದು. ಒಕ್ಕಲಿಗ ಸಮುದಾಯವನ್ನು ರಾಜಕೀಯವಾಗಿ ಪ್ರಭಾವಿಸಿರುವ ಇಬ್ಬರು ನಾಯಕರು ಪರಸ್ಪರ ಕಿತ್ತಾಡಿಕೊಳ್ಳುವಂತೆ ಮಾಡಿದರೆ, ಆ ಸಮುದಾಯದ ನಡುವೆ ರಾಜಕೀಯ ಗೊಂದಲ, ನಿರ್ವಾತ ಸೃಷ್ಟಿಯಾಗುತ್ತದೆ. ಆ ಅವಕಾಶವನ್ನು ಬಳಸಿಕೊಂಡು ತಾನು ಒಕ್ಕಲಿಗರ ನಡುವೆ ಗಟ್ಟಿ ನೆಲೆ ಕಂಡುಕೊಳ್ಳಬಹುದೆನ್ನುವುದು ಬಿಜೆಪಿಯ ಲೆಕ್ಕಾಚಾರ. ಈ ಹುನ್ನಾರವನ್ನು ಅರ್ಥ ಮಾಡಿಕೊಳ್ಳದ ಎಚ್ಡಿಕೆ, ಸೋಲಿನ ಹತಾಶೆ ಮತ್ತು ಕಾಂಗ್ರೆಸ್ ಸರ್ಕಾರದ ಮೇಲಿನ ಸಿಟ್ಟಿನಿಂದ ಬಿಜೆಪಿಯ ದಾಳವಾಗಿ ಬಳಕೆಯಾಗುತ್ತಿದ್ದಾರೆ.
ದಶಕಗಳ ಕಾಲ ನಿರಂತರವಾಗಿ ಸಂಘಟನೆ ಮಾಡಿ, ಕರ್ನಾಟಕದಲ್ಲಿ ತನಗೆ ಒಂದು ಅಸ್ತಿತ್ವವನ್ನು ತಂದುಕೊಟ್ಟ ಹಾಗೂ ಲಿಂಗಾಯತ ಸಮುದಾಯವನ್ನು ಸಾರಾಸಗಟಾಗಿ ತಮ್ಮ ಮತದಾರರನ್ನಾಗಿ ಪರಿವರ್ತಿಸಿದ ಯಡಿಯೂರಪ್ಪನವರನ್ನೇ ಬಳಸಿ ಬಿಸಾಡಿದ ಬಿಜೆಪಿಯು ಕುಮಾರಸ್ವಾಮಿಯವರನ್ನು ಮೆರೆಸುತ್ತಾ? ಖಂಡಿತ ಇಲ್ಲ! ಒಕ್ಕಲಿಗ ನಾಯಕತ್ವದ ಕದನ ಸೃಷ್ಟಿಸಿ, ಅದರ ಮೂಲಕ ಲಾಭ ಮಾಡಿಕೊಳ್ಳುವುದಷ್ಟೇ ಬಿಜೆಪಿ ಹೈಕಮಾಂಡ್ನ ಉದ್ದೇಶ. ಅದಕ್ಕಾಗಿಯೇ, ರಾಜ್ಯ ಬಿಜೆಪಿ ನಾಯಕರ ವಿಪರೀತ ವಿರೋಧವನ್ನೂ ಲೆಕ್ಕಿಸದೆ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ನುರಿತ ರಾಜಕೀಯ ಪಟುವಲ್ಲದ ಕುಮಾರಸ್ವಾಮಿಯವರಿಗೆ ಇದು ಅರ್ಥವಾಗದೇ ಇರಬಹುದು, ಆದರೆ ರಾಜಕೀಯ ನಿಷ್ಣಾತ ಅಂತಲೇ ಗುರುತಿಸಿಕೊಂಡಿರುವ ದೇವೇಗೌಡರಿಗೂ ಇದು ಅರ್ಥವಾಗಿಲ್ಲ ಎನ್ನುವುದೇ ಆಶ್ಚರ್ಯದ ಸಂಗತಿ. ಅಥವಾ ಅರ್ಥವಾಗಿದ್ದರೂ, ವೃದ್ದಾಪ್ಯದಲ್ಲಿ ಮಗನ ಒತ್ತಡಕ್ಕೆ ಸಿಲುಕಿ, ಸಮ್ಮತಿಸಿರಬಹುದು.
ಮಾಚಯ್ಯ ಎಂ ಹಿಪ್ಪರಗಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ-ಮಹಿಳಾ ಮೀಸಲಾತಿ ಮಸೂದೆ: ಒಂದಿಷ್ಟು ಜಿಜ್ಞಾಸೆಗಳು