ಹೊಸದೆಹಲಿ: ಇಂದು (ಅ.09) ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಸಮಿತಿಯು ಹಲವು ನಿರ್ಣಯಗಳನ್ನು ಘೋಷಿಸಿದೆ. ಅದು ತಾನು ಅಧಿಕಾರಕ್ಕೆ ಬಂದರೆ ನ್ಯಾಯಯುತ ಸಾಮಾಜಿಕ ಪ್ರಾತಿನಿಧ್ಯವನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ, ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ನಡೆಸುವುದಾಗಿ ಹೇಳಿದೆ.
ಈ ಕುರಿತು ಸಮಿತಿಯು ತನ್ನ ನಿರ್ಧಾರದಲ್ಲಿ “ಬಿಹಾರ ಸರ್ಕಾರವು ಜಾತಿ ಗಣತಿಯ ವರದಿಯನ್ನು ಬಿಡುಗಡೆ ಮಾಡಿರುವುದನ್ನು ಸಿ.ಡಬ್ಲ್ಯು.ಸಿ. ಸ್ವಾಗತಿಸುತ್ತದೆ. ಸಮೀಕ್ಷೆಯ ಅಂಕಿ ಅಂಶಗಳಿಂದ ವಿವಿಧ ಜಾತಿಗಳ ಜನಸಂಖ್ಯೆ ಪ್ರಮಾಣ ಹಾಗೂ ಪ್ರಾತಿನಿಧ್ಯದ ನಡುವೆ ಭಾರಿ ಅಂತರ ಇರುವುದು ಬಹಿರಂಗಗೊಂಡಿದ್ದು, ಸಾಮಾಜಿಕ ನ್ಯಾಯ ಖಾತರಿಪಡಿಸುವ ಕ್ರಮಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದೆ ಎನ್ನುವುದನ್ನು ತೋರಿಸುತ್ತದೆ. ಹಿಂದುಳಿದ ವರ್ಗಗಳ ಉಪ-ವರ್ಗೀಕರಣ ಕುರಿತಂತೆ ನ್ಯಾಯಮೂರ್ತಿ ರೋಹಿಣಿ ಆಯೋಗದ ಧ್ಯೇಯೋದ್ದೇಶವನ್ನು ಸಿಡಬ್ಲ್ಯುಸಿ ಸ್ವಾಗತಿಸುತ್ತದೆ. ಆದರೆ ವಿವಿಧ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಕುರಿತಂತೆ ಸವಿವರವಾದ ದತ್ತಾಂಶವಿಲ್ಲದೆ ಈ ಪ್ರಕ್ರಿಯೆ ಅಪೂರ್ಣವಾಗಲಿದೆ ಎಂದು ಸಿಡಬ್ಲ್ಯುಸಿ ಗಮನಿಸಿದ್ದಲ್ಲದೆ, ಇದನ್ನು ಕೇಂದ್ರ ಸರ್ಕಾರವು 2011ರಲ್ಲಿ ನಡೆಸಿದ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿಯ ದತ್ತಾಂಶದಿಂದ ಪಡೆಯಬಹುದು ಅಥವಾ ಹೊಸದಾಗಿ ಜಾತಿ ಸಮೀಕ್ಷೆ ನಡೆಸಬಹುದು” ಎಂದು ಅಭಿಪ್ರಾಯಪಟ್ಟಿದೆ.
ಸಿಕ್ಕಿಂನಲ್ಲಿ ಪ್ರಸ್ತುತ ಪ್ರಾಕೃತಿಕ ವಿಕೋಪದ ಕುರಿತು ಸಮಿತಿಯು ತನ್ನ ಅಭಿಪ್ರಾಯವನ್ನು ತಿಳಿಸಿದ್ದು, “ಸಿಕ್ಕಿಂ, ಡಾರ್ಜಿಲಿಂಗ್, ಕಾಲಿಂಪಾಂಗ್ ಮತ್ತು ಕುರ್ಸಿಯೊಂಗ್ ಬೆಟ್ಟ ಪ್ರದೇಶದಲ್ಲಿ ಸಂಭವಿಸಿದ ತೀವ್ರ ಪ್ರವಾಹ ಹಾಗೂ ಭಾರತೀಯ ಸೇನಾಪಡೆಗಳ ಸಿಬ್ಬಂದಿಯೂ ಸೇರಿದಂತೆ ಸಂಭವಿಸಿದ ಜೀವಹಾನಿಗೆ ಸಿ.ಡಬ್ಲ್ಯು.ಸಿ. ತೀವ್ರ ಸಂತಾಪ ವ್ಯಕ್ತಪಡಿಸುತ್ತದೆ. ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಇಂತಹ ದುರ್ಘಟನೆಗಳು ಮರುಕಳಿಸದಂತೆ ಸಾಮೂಹಿಕ ಮತ್ತು ವಿಶ್ವಾಸಾರ್ಹ ಪರಿಸರ ಪರಿಣಾಮ ಮೌಲ್ಯಮಾಪನವನ್ನು ಸೂಕ್ಷ್ಮವಾದ ಹಿಮಾಲಯನ್ ಪ್ರದೇಶಗಳಲ್ಲಿ ಕೈಗೊಳ್ಳುವುದರ ಅಗತ್ಯತೆಯನ್ನು ಸಿ.ಡಬ್ಲ್ಯುಸಿ ಒತ್ತು ನೀಡುತ್ತದೆ. ಕೇಂದ್ರ ಸರ್ಕಾರವು ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಉತ್ತರ ಭಾಗದ ಪರ್ವತ ಶ್ರೇಣಿಗಳ ಪ್ರದೇಶದಲ್ಲಿ ಎಲ್ಲ ಅಗತ್ಯ ನೆರವು ಒದಗಿಸುವಂತೆ ಸಿಡಬ್ಲ್ಯುಸಿಯು ಒತ್ತಾಯಿಸುತ್ತದೆ. ಜೊತೆಗೆ ರಾಜಕೀಯ ಪಕ್ಷಪಾತ ಧೋರಣೆಯನ್ನು ಬದಿಗಿಟ್ಟು ಕಳೆದ ತಿಂಗಳು ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು” ಎಂದು ಅದು ಒತ್ತಾಯಿಸಿದೆ.
ಜಾತಿ ಗಣತಿ ಕುರಿತು ಮುಂದುವರೆದು ಮಾತನಾಡಿದ ಸಮಿತಿಯು “2021 ರಲ್ಲಿ ನಡೆಸಬೇಕಾಗಿದ್ದ ಜನಗಣತಿಯನ್ನು ಮುಂದೂಡುವ ಮೂಲಕ ತನ್ನ ಸಾಂವಿಧಾನಿಕ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ. ಜಿ20 ರಾಷ್ಟ್ರಗಳಲ್ಲಿ ಜನಗಣತಿ ಮಾಡಲು ವಿಫಲವಾದ ಏಕೈಕ ದೇಶವೆನಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ. ಇದಲ್ಲದೆ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪ್ರತಿ ರಾಜ್ಯದಲ್ಲಿಯೂ ಜಾತಿ ಸಮೀಕ್ಷೆಯ ಅಗತ್ಯದ ಕುರಿತು ಹಲವಾರು ನಿಯೋಗಗಳು ತಮ್ಮ ಅಭಿಪ್ರಾಯ ತಿಳಿಸಿದ್ದು, 85ನೇ ಕಾಂಗ್ರೆಸ್ ಅಧಿವೇಶನದ ರಾಯ್ಪುರ್ ಘೋಷಣೆಯಲ್ಲಿಯೂ ಸ್ಥಾನ ಪಡೆದಿದೆ.” ಎಂದಿದೆ.
ಮೋದಿ ಸರ್ಕಾರವು ಕೆಲವು ಪತ್ರಕರ್ತರು ಮತ್ತು ಬರಹಗಾರರ ಮೇಲೆ ನಡೆಸಿದ ದಾಳಿ ಹಾಗೂ ಭಯೋತ್ಪಾದನಾ ವಿರೋಧಿ ಕಾಯ್ದೆಗಳಡಿ ಪ್ರಕರಣ ದಾಖಲಿಸಿರುವುದನ್ನು ಸಿ.ಡಬ್ಲ್ಯು.ಸಿ. ಖಂಡಿಸುತ್ತದೆ. ಸರ್ಕಾರವೇ ಹರಿಯಬಿಟ್ಟ ಪಿತೂರಿಯ ಕತೆಗಳು ಪಿಎಂ ಕೇರ್ಸ್ ನಿಧಿಗೆ ಚೈನೀಸ್ ಕಂಪೆನಿಗಳಿಂದ ದೇಣಿಗೆ ಸ್ವೀಕಾರ, ಚೀನಾದ ಸರ್ಕಾರಿ ಸ್ವಾಮ್ಯದ ಕಂಪೆನಿಗಳಿಗೆ ಹೂಡಿಕೆ ಅವಕಾಶ, ಚೀನಾದಿಂದ ಆಮದಾಗುತ್ತಿರುವ ಸರಕುಗಳನ್ನು ನಿಯಂತ್ರಿಸಲು ಸರ್ಕಾರದ ಅಸಮರ್ಥತೆ ಹಾಗೂ ಇದೆಲ್ಲಕ್ಕಿಂತ ಹೆಚ್ಚಾಗಿ ಚೀನಾ ದೇಶ ನಮ್ಮ ಗಡಿ ಭಾಗದ ಅತಿಕ್ರಮಣ ಮಾಡಿರುವುದನ್ನು ನಿರಾಕರಿಸುವ ಮೂಲಕ ಪ್ರಧಾನಮಂತ್ರಿಗಳು 19-6-2020ರಂದು ಕ್ಲೀನ್ ಚಿಟ್ ನೀಡಿರುವುದು ಕೇಂದ್ರ ಸರ್ಕಾರದ ಬೂಟಾಟಿಕೆಯನ್ನು ಬಯಲಿಗೆಳೆದಿವೆ ಎಂದು ಹೇಳಿದೆ.
ಮೋದಿ ಸರ್ಕಾರವು ಕೇಂದ್ರ ಸರ್ಕಾರದ ನಿರ್ಧಾರ ಕ್ರಮಗಳನ್ನು ಪ್ರಶ್ನಿಸುವವರ ವಿರುದ್ಧ, ವ್ಯಾಪಕವಾಗಿ ಕಾನೂನಿನ ಹಾಗೂ ಕೇಂದ್ರೀಯ ಸಂಸ್ಥೆಗಳ ದುರ್ಬಳಕೆಯನ್ನು ಮಾಡಿಕೊಂಡಿದೆ. ಇಂತಹ ಬಲವಂತದ ಹಾಗೂ ಕಾನೂನು ಬಾಹಿರ ಕ್ರಮಗಳು ಮಾಧ್ಯಮಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತವೆ. ನಾಗರಿಕರ, ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನಿಸುವ ಪತ್ರಕರ್ತರು, ರಾಜಕಾರಣಿಗಳ ಮೂಲಭೂತ ಹಕ್ಕನ್ನು ಮೊಟಕುಗೊಳಿಸುತ್ತದೆ ಹಾಗೂ ಆಮೂಲಕ ವಿಶ್ವದಲ್ಲಿ ಪ್ರಜಾಪ್ರಭುತ್ವದ ದೇಶವಾಗಿ ಭಾರತ ಹೊಂದಿರುವ ಸ್ಥಾನ ಇಳಿಮುಖವಾಗುತ್ತಿದೆ. ಪ್ರಧಾನ ಮಂತ್ರಿ ಹಾಗೂ ಬಿಜೆಪಿಯವರು ರಾಜಕಾರಣವನ್ನು ಯಾವ ಮಟ್ಟಕ್ಕೆ ಒಯ್ದಿದ್ದಾರೆಂದರೆ, ನಾಥೂರಾಮ್ ಘೋಡ್ಸೆ ಮಹಾತ್ಮಾ ಗಾಂಧಿ ಮತ್ತಿತರ ಸ್ವಾತಂತ್ರ್ಯ ಹೋರಾಟಗಾರ ಕಾಂಗ್ರೆಸ್ ನಾಯಕರ ವಿರುದ್ಧ ನಡೆದುಕೊಂಡ ಮಾದರಿಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಹಿಂಸೆಯನ್ನು ಪ್ರಚೋದಿಸಲು ಅಧಿಕೃತ ಪೋಸ್ಟರುಗಳನ್ನು ಮಾಡಲಾಗುತ್ತದೆ. ಮೋದಿ ಸರ್ಕಾರದ ಈ ದಾಳಿಯು ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಹೆಚ್ಚುತ್ತಲೇ ಹೋಗುತ್ತಿದೆ ಎಂಬುದನ್ನು ಸಿಡಬ್ಲ್ಯುಸಿ ಗಮನಿಸಿದೆ. ಆದರೆ ಭಾರತೀಯರು ಇಂತಹ ತಂತ್ರಗಳಿಗೆ ಮರುಳಾಗುವುದಿಲ್ಲ.
ಮಣಿಪುರದಲ್ಲಿ ಸಾಂವಿಧಾನಿಕ ಸರ್ಕಾರದ ವ್ಯವಸ್ಥೆಯು ಕುಸಿದು ಬಿದ್ದಿರುವುದು ಹಾಗೂ ಅಮಾನವೀಯ ದುರಂತ ಮುಂದುವರೆದಿರುವ ಕುರಿತು ಸಿಡಬ್ಲ್ಯುಸಿ ತೀವ್ರ ಅತಂಕ ವ್ಯಕ್ತಪಡಿಸುತ್ತದೆ. ಐದು ತಿಂಗಳ ನಂತರವೂ ಪ್ರಧಾನಮಂತ್ರಿಗಳು ಮಣಿಪುರದ ಜನರನ್ನು ಹಾಗೂ ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಸಶಸ್ತ್ರ ಜನರ ಗುಂಪುಗಳಿಂದ ದೌರ್ಜನ್ಯ ಮತ್ತು ಬೆದರಿಕೆಗಳಂತಹ ಹಿಂಸಾತ್ಮಕ ಘಟನೆಗಳು ಹೆಚ್ಚಾಗಿವೆ. ಕೇಂದ್ರ ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಮುದಾಯಗಳ ನಡುವೆ ಸಾಮರಸ್ಯ ಬೆಸೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಮಣಿಪುರದಲ್ಲಿ ಸಾಂವಿಧಾನಿಕ ವ್ಯವಸ್ಥೆಯು ಕುಸಿದು ಬಿದ್ದಿದೆ. ಮಣಿಪುರ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಮುಖ್ಯಮಂತ್ರಿಯವರನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ತನ್ನ ಬೇಡಿಕೆಯನ್ನು ಸಿಡಬ್ಲ್ಯುಸಿ ಪುನರುಚ್ಛರಿಸುತ್ತದೆ ಎಂದು ಸಮಿತಿಯು ದೃಢವಾಗಿ ಹೇಳಿದೆ.
“ಭಾರತೀಯ ಕುಟುಂಬಗಳ ಒಟ್ಟಾರೆ ಹಣಕಾಸಿನ ಸಂಪತ್ತು 2022-23ರಲ್ಲಿ ಕಳೆದ ಐದು ದಶಕಗಳಲ್ಲೇ ಅತಿ ಕಡಿಮೆ ಅಂದರೆ ಶೇ. 5.1ಕ್ಕೆ ಇಳಿಕೆಯಾಗಿರುವುದಾಗಿ ರಿಸರ್ವ್ ಬ್ಯಾಂಕಿನ ದತ್ತಾಂಶವನ್ನು ಅತ್ಯಂತ ಕಳವಳಕಾರಿಯೆಂದು ಸಿಡಬ್ಲ್ಯುಸಿ ಗುರುತಿಸಿದೆ. ಅಂತೆಯೇ ಕಳೆದ ನಾಲ್ಕು ದಶಕಗಳಲಿಯೇ ಅತಿ ಕಡಿಮೆ ಆದಾಯ ಬೆಳವಣಿಯನ್ನೂ ದಾಖಲಿಸಲಾಗಿದೆ. ಏರಿಕೆಯಾಗದ ವೇತನ, ಹೆಚ್ಚಿನ ಹಣದುಬ್ಬರ ಹಾಗೂ ವ್ಯಾಪಕವಾದ ನಿರುದ್ಯೋಗ ಸಮಸ್ಯೆಯ ಪರಿಣಾಮವಾಗಿ ಭಾರತದ ಲಕ್ಷಾಂತರ ಕುಟುಂಬಗಳು ತಮ್ಮ ದೈನಂದಿನ ಅಗತ್ಯಗಳಿಗೆ ಸಾಲ ಮಾಡಿಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಮೋದಿ ಸರ್ಕಾರದ ಜನ ವಿರೋಧಿ ಹಾಗೂ ಉಳ್ಳವರ ಪರವಾದ ಆರ್ಥಿಕ ನೀತಿಗಳ ಫಲವಾಗಿ ಈ ಪರಿಸ್ಥಿತಿ ಉದ್ಭವಿಸಿದ್ದು, ಆರ್ಥಿಕತೆಯ ಪ್ರತಿ ವಲಯದಲ್ಲೂ ಸಂಪತ್ತು ಮತ್ತು ಅಧಿಕಾರ ಕೆಲವೇ ಜನರ ಕೈಯಲ್ಲಿ ಕ್ರೋಢೀಕರಣವಾಗಿದೆ ಎಂದು ಸಿ.ಡಬ್ಯು.ಸಿ. ಭಾವಿಸಿದೆ. ಮೋದಿ ಸರ್ಕಾರದ ಕೊಡುಗೆಯಾಗಿರುವ ನಿರುದ್ಯೋಗ ಸಮಸ್ಯೆ ಹಾಗೂ ಹೆಚ್ಚುತ್ತಿರುವ ಅಸಮಾನತೆಯ ನಿವಾರಣೆಗೆ ದೇಶದ ಆರ್ಥಿಕ ನೀತಿಯನ್ನು ಸಮಗ್ರವಾಗಿ ಪುನರ್ರಚಿಸುವ ಅಗತ್ಯವಿದೆ” ಎಂದು ತನ್ನ ರಾಯ್ಪುರದ ನಿರ್ಣಯವನ್ನು ಪುನರುಚ್ಛರಿಸಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಪ್ರಾರಂಭವಾಗಿರುವ ಕುರಿತು ಹಾಗೂ ಸಾವಿರಾರು ಜನರು ಸಾವನ್ನಪ್ಪಿರುವ ಕುರಿತು ತೀವ್ರ ಅಸಮಾಧಾನ ಹಾಗೂ ಆತಂಕ ವ್ಯಕ್ತಪಡಿಸುತ್ತದೆ. ಸಿಡಬ್ಲ್ಯುಸಿಯು ಪ್ಯಾಲೆಸ್ಟೀನ್ನ ಜನರ ಭೂಮಿ, ಸ್ವಯಂ ಆಡಳಿತ ಹಾಗೂ ಸ್ವಾಭಿಮಾನ ಮತ್ತು ಗೌರವಯುತ ಬದುಕು ನಡೆಸುವ ಹಕ್ಕುಗಳಿಗೆ ಸದಾ ಬೆಂಬಲ ನೀಡುತ್ತ ಬಂದಿದೆ. ಕೂಡಲೇ ಯುದ್ಧವಿರಾಮ ಘೋಷಿಸಿ ಮಾತುಕತೆಗಳ ಮೂಲಕ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಸಿ.ಡಬ್ಲ್ಯು.ಸಿ ಕರೆ ನೀಡಿದೆ.