ಸಹಿ ಫೋರ್ಜರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಐಡಿ (CID) ತನಿಖೆಗೆ ಹಾಜರಾಗುವಂತೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರಿಗೆ ಕೋಲ್ಕತಾ ಹೈಕೋರ್ಟ್ ಗುರುವಾರ ಆದೇಶಿಸಿದೆ. ಆದರೆ, ಅವರು ತನಿಖೆಗೆ ಸಹಕರಿಸುವವರೆಗೂ ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಬಾರದು ಎಂದು ಸೂಚಿಸಿರುವ ನ್ಯಾಯಾಲಯ, ಬಂಧನದಿಂದ ಮೂರು ವಾರಗಳ ಕಾಲ ಮಧ್ಯಂತರ ರಕ್ಷಣೆ ನೀಡಿದೆ.
ರಾಜ್ಯ ವಿಧಾನಸಭೆಯಲ್ಲಿ ಸೋವನ್ದೇವ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಪ್ರಸ್ತಾಪಿಸಿ ಮೇ 20 ರಂದು ಸ್ಪೀಕರ್ಗೆ ಸಲ್ಲಿಸಲಾಗಿದ್ದ ಪತ್ರದಲ್ಲಿ ತಮ್ಮ ಸಹಿಗಳನ್ನು ಫೋರ್ಜರಿ ಮಾಡಲಾಗಿದೆ ಎಂದು ಆರೋಪಿಸಿ ಟಿಎಂಸಿ ಶಾಸಕರಾದ ರಿತಬ್ರತ ಬ್ಯಾನರ್ಜಿ ಮತ್ತು ಸಂದೀಪನ್ ಸಾಹಾ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ದಾಖಲಾಗಿರುವ ಎಫ್ಐಆರ್ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಅಭಿಷೇಕ್ ಬ್ಯಾನರ್ಜಿ ಅವರಿಗೆ ಹಲವು ಬಾರಿ ಸಮನ್ಸ್ ಜಾರಿ ಮಾಡಿದ್ದರು. ಆದರೆ, ಅನಾರೋಗ್ಯದ ಕಾರಣ ನೀಡಿ ವೈಯಕ್ತಿಕವಾಗಿ ಹಾಜರಾಗಲು ತಮಗೆ 15 ದಿನಗಳ ಕಾಲಾವಕಾಶ ಬೇಕು ಎಂದು ಅಭಿಷೇಕ್ ಕೋರಿದ್ದರು.
ಇದೇ ವೇಳೆ, ಜೂನ್ 9 ರಂದು ಕೋಲ್ಕತಾದ ಕಾಳೀಘಾಟ್ ಪ್ರದೇಶದಲ್ಲಿರುವ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಿವಾಸದ ಪಕ್ಕದಲ್ಲಿರುವ ಟಿಎಂಸಿ ಪ್ರಧಾನ ಕಚೇರಿಯ ಮೇಲೆ ಸಿಐಡಿ ನಡೆಸಿದ್ದ ದಾಳಿಯ ಕಾನೂನುಬದ್ಧತೆಯನ್ನು ಸವಾಲು ಮಾಡಿ ಟಿಎಂಸಿ ಬುಧವಾರ ಕೋಲ್ಕತಾ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ತನಿಖೆಗೆ ಹಾಜರಾಗುವಂತೆ ಅಭಿಷೇಕ್ ಅವರಿಗೆ ನಿರ್ದೇಶನ ನೀಡಿದೆ.
