Home ದೇಶ ʼಒಂದು ದೇಶ, ಒಂದು ಚುನಾವಣೆʼ ಪ್ರಸ್ತಾಪ ವಿರೋಧಿಸಿ ಸಮಿತಿಗೆ ಪತ್ರ ಬರೆದ ಡಿಎಂಕೆ

ʼಒಂದು ದೇಶ, ಒಂದು ಚುನಾವಣೆʼ ಪ್ರಸ್ತಾಪ ವಿರೋಧಿಸಿ ಸಮಿತಿಗೆ ಪತ್ರ ಬರೆದ ಡಿಎಂಕೆ

0

ಚೆನ್ನೈ: ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಮಾರ್ಗೋಪಾಯಗಳಿಗೆ ಸಂಬಂಧಿಸಿದಂತೆ ತಮಿಳುನಾಡಿನ ಆಡಳಿತಾರೂಢ ಪಕ್ಷವಾದ ದ್ರಾವಿಡ ಮುನ್ನೇಟ್ರ ಕಳಗಂ (ಡಿಎಂಕೆ) ಕೇಂದ್ರ ಕಾನೂನು ಸಚಿವಾಲಯ ರಚಿಸಿರುವ ಸಮಿತಿಗೆ ಪತ್ರ ಬರೆದಿದ್ದು, ಕೇಂದ್ರವು ತಂದಿರುವ ಕ್ರಮವು ವಿರೋಧವಾಗಿದೆ ಎಂದು ಹೇಳಿದೆ. ಇದು ಸಂವಿಧಾನದ ಮೂಲಭೂತ ಅಂಶ ಮತ್ತು ಕೇಂದ್ರ-ರಾಜ್ಯ ಸಂಬಂಧವನ್ನು ಒಳಗೊಂಡಿರುವ ಫೆಡರಲಿಸಂ ತತ್ವಕ್ಕೆ ವಿರುದ್ಧವಾಗಿದೆ ಮತ್ತು ಇದು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಎಂದು ಅದು ಹೇಳಿದೆ.

“ಒಂದು ರಾಷ್ಟ್ರ, ಒಂದು ಚುನಾವಣೆ” ಪ್ರಸ್ತಾಪವನ್ನು ಸಂಪೂರ್ಣವಾಗಿ ಅಪ್ರಾಯೋಗಿಕ ಎಂದು ಹೇಳಿರುವ ಡಿಎಂಕೆ, ಇದು ಸಂವಿಧಾನದಲ್ಲಿ ಉಲ್ಲೇಖಿಸಿರುವ “ಮುಕ್ತ ಮತ್ತು ನ್ಯಾಯಯುತ” ಚುನಾವಣೆಗಳಿಗೆ ವಿರುದ್ಧವಾಗಿದೆ ಮತ್ತು ಇದು ಅಸಂವಿಧಾನಿಕ ಎಂದು ಹೇಳಿದೆ.

ಏಕಕಾಲದ ಚುನಾವಣೆಗಳು ಜನರಿಂದ ಚುನಾಯಿತವಾದ ಶಾಸಕಾಂಗಗಳ ಅವಧಿಪೂರ್ವ ವಿಸರ್ಜನೆಗೆ ಕಾರಣವಾಗುತ್ತವೆ ಮತ್ತು ಅಂತಹ ವಿಸರ್ಜನೆಯು ರಾಜಕೀಯವಾಗಿ ಕಾನೂನುಬಾಹಿರ ಎಂದು ಡಿಎಂಕೆ ಹೇಳಿದೆ.

“ಒಂದು ದೇಶ ಒಂದು ಚುನಾವಣೆ” ಉಪಕ್ರಮವು ಅಪ್ರಾಯೋಗಿಕವಾಗಿದೆ, ಕೇಂದ್ರ ಸರ್ಕಾರವು ತನ್ನ ಬಹುಮತವನ್ನು ಕಳೆದುಕೊಂಡರೆ – ಸರ್ಕಾರ ಬೀಳುತ್ತದೆ ಮತ್ತು ಅಂತಹ ಸಂದರ್ಭದಲ್ಲಿ ಏಕಕಾಲಿಕ ಚುನಾವಣೆಗಳ ಪ್ರಕ್ರಿಯೆ ಮತ್ತೆ ತೊಂದರೆಗೊಳಗಾಗುತ್ತದೆ. ಏಕಕಾಲದ ಚುನಾವಣೆಗಳು ಚುನಾವಣೆಯ ಸಮಯದಲ್ಲಿ ರಾಷ್ಟ್ರೀಯ ಪಕ್ಷಗಳು ಮತ್ತು ರಾಜ್ಯ ಪಕ್ಷಗಳ ನಡುವೆ ಸಮಬಲದ ಸ್ಪರ್ಧೆಗೆ ಕಣವಾಗುವುದಿಲ್ಲ. ಸ್ಥಳೀಯ ಚುನಾವಣೆ, ವಿಧಾನಸಭೆ ಮತ್ತು ಸಂಸತ್ತಿನ ಚುನಾವಣೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಯತ್ನ ಇನ್ನೂ ಸಾಕ್ಷರತೆಯನ್ನು ಪಡೆಯದ ಗ್ರಾಮೀಣ ಜನರ ಮೇಲೆ ಅತ್ಯಂತ ಕೆಟ್ಟ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಡಿಎಮ್‌ಕೆ ತನ್ನ ಪತ್ರದಲ್ಲಿ ತಿಳಿಸಿದೆ.

ದ್ರಾವಿಡ ಪಕ್ಷವು ಚುನಾವಣಾ ಆಯೋಗದಿಂದ ಏಕಕಾಲದಲ್ಲಿ ಚುನಾವಣೆಗಳನ್ನು ಎದುರಿಸಬೇಕಾದರೆ – ಚುನಾವಣಾ ಆಯುಕ್ತರ ಸಂಖ್ಯೆ ಮತ್ತು ಮೂಲಸೌಕರ್ಯಗಳನ್ನು ಈಗಿರುವುದಕ್ಕಿಂತಲೂ 10 ಪಟ್ಟು ಹೆಚ್ಚಿಸಬೇಕಾಗುತ್ತದೆ ಮತ್ತು ಚುನಾವಣಾ ಅಧಿಕಾರಿಗಳ ಸಂಖ್ಯೆಯನ್ನು 3ರಿಂದ 5ಕ್ಕೆ ಹೆಚ್ಚಿಸಬೇಕಾಗುತ್ತದೆ. ಇದೊಂದು ಅಪ್ರಯೋಜಕ ಪರಿಕಲ್ಪನೆಯಾಗಿದ್ದು ಹಣದ ದುಂದುವೆಚ್ಚ ಬಿಟ್ಟು ಇದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದಿದೆ.

ರಾಜ್ಯ ವಿಧಾನಸಭೆಗಳು ಮತ್ತು ಸಂಸತ್ತಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಯನ್ನು ಅಧ್ಯಯನ ಮಾಡಲು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯನ್ನು ರಚಿಸುವುದಾಗಿ ಕೇಂದ್ರ ಸರ್ಕಾರ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಘೋಷಿಸಿತು.

You cannot copy content of this page

Exit mobile version