Monday, June 17, 2024

ಸತ್ಯ | ನ್ಯಾಯ |ಧರ್ಮ

ಚಪ್ಪಲಿ‌ ಕಾಯಿರಿ ಎನ್ನುವ ಪ್ರಭುತ್ವ ಪ್ರಾಯೋಜಿತ  ʼಅಪರಾಧʼ ಕ್ಕೆ ಶಿಕ್ಷೆ ಬೇಡವೆ?!

ಸರ್ಕಾರವು ೨-೧೧-೨೦೨೨ ರಂದು ದೇವಸ್ಥಾನದ ಚಪ್ಪಲಿ ಸ್ಟಾಂಡ್‌ ನಿರ್ವಹಣೆಗೆ ಪರಿಶಿಷ್ಟರಿಂದ ಅರ್ಜಿ ಅಹ್ವಾನಿಸಿರುವುದು ಅಸ್ಪೃಶ್ಯತೆ ಆಚರಣೆಯನ್ನು ಪೋಷಿಸುವುದರ ಜೊತೆಗೆ ಇದೊಂದು ದೌರ್ಜನ್ಯವೂ ಕೂಡ ಆಗಿದೆ ಎಂದು ಕೆ ಎನ್‌ ರವಿಕುಮಾರ್ ಖಡಕ್‌ ಆಗಿ ಪ್ರತಿಕ್ರಿಯಿಸುತ್ತಾರೆ.

ಸರ್ಕಾರದ ಮುಜರಾಯಿ ಇಲಾಖೆಯ ಅಧೀನದ ಬೆಂಗಳೂರಿನ ದೊಡ್ಡಗಣಪತಿ ದೇವಸ್ಥಾನ ಮತ್ತು ಅದರ ಸಮೂಹ ದೇವಸ್ಥಾನಗಳಿಗೆ  ಪೂಜಾ ಸಾಮಗ್ರಿ ಮಾರಾಟ ಸ್ಥಳ, ಈಡುಗಾಯಿ ಆಯುವುದು, ಎಳನೀರು ಮಾರಾಟ ಮಾಡುವ ಹಕ್ಕುಗಳನ್ನು ಸಾಮಾನ್ಯ ಜಾತಿಗೆ ನಿಗದಿ ಪಡಿಸಿ, ಚಪ್ಪಲಿ ಕಾಯುವ ಸ್ಥಳದ ಹಕ್ಕನ್ನು ಪರಿಶಿಷ್ಟ ಜಾತಿಗೆ ಮೀಸಲಿರಿಸಿ ಟೆಂಡರ್ ಕರೆಯಲಾಗಿತ್ತು. ಸರ್ಕಾರಿ ಅಧೀನ ಇಲಾಖೆಯೇ ಇಂತಹದ್ದೊಂದು ಜಾತಿ ತಾರತಮ್ಯವನ್ನು ಅನುಸರಿಸುವುದಕ್ಕೆ ವ್ಯಾಪಕವಾಗಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಸದರಿ ಟೆಂಡರ್ ನ್ನು ಮುಜರಾಯಿ ಇಲಾಖೆ ರದ್ದುಗೊಳಿಸಿದೆ. ಈ

ಹೀಗೆ ವಿವಿಧ ಕಸುಬು(ಹಕ್ಕು)ಗಳನ್ನು ಜಾತಿ ಆಧಾರಿತವಾಗಿ ನಿಗದಿ ಪಡಿಸಿ ಟೆಂಡರ್ ಕರೆದಿರುವುದು ಪರಂಪರಾಗತವಾಗಿ ಬಂದ ಜಾತಿ ಆಧಾರಿತ ಶ್ರೇಣೀಕೃತ ವ್ಯವಸ್ಥೆಯನ್ನು ಜೀವಂತವಾಗಿಡುವ ಹುನ್ನಾರವೆಂದು ಯಾರಿಗಾದರೂ ಅನಿಸಿದರೆ ಅದೇನು ಆಶ್ಚರ್ಯ ಕರ ಸಂಗತಿ ಅಲ್ಲ. 

 ಮುಜರಾಯಿ ಇಲಾಖೆ ಎಂದರೆ ಅದು ಸರ್ಕಾರ ಎಂದೇ ಅರ್ಥ. ಮುಜರಾಯಿ ಇಲಾಖೆಯಲ್ಲಿ ಪರಿಶಿಷ್ಟ ಜಾತಿಯ ಅರ್ಚಕರನ್ನು ನೇಮಕಗೊಳಿಸುವ ಪ್ರಸ್ತಾವವನ್ನು ಮೂಲೆ ಗುಂಪು ಮಾಡಿರುವ ರಾಜ್ಯ ಸರ್ಕಾರ ಮುಜರಾಯಿ ಅಧೀನದ ದೇವಸ್ಥಾನಗಳಲ್ಲಿ  ಜಾತಿ ಆಧಾರಿತವಾಗಿ ಟೆಂಡರ್ ಹಕ್ಕುಗಳನ್ನು ನಿರ್ಧರಿಸಿ ಬಹಿರಂಗವಾಗಿ ಅಧಿಸೂಚನೆ ಹೊರಡಿಸುವ ಮೂಲಕ  ಸರ್ಕಾರವೇ ಖುಲ್ಲಾಂ ಖುಲ್ಲಾ ಅಸ್ಪೃಶ್ಯತೆಯ ಆಚರಣೆಯನ್ನು ಪ್ರೋತ್ಸಾಹಿಸಿದಂತಾಗಿದೆ.

2016 ರಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು  ಸರ್ಕಾರಿ ಕಾಮಗಾರಿಗಳಲ್ಲಿ ಶೇ. 24 ರಷ್ಟು ಕಾಮಗಾರಿಗಳನ್ನು ಗರಿಷ್ಠ 50 ಲಕ್ಷದವರೆಗಿನ ಕಾಮಗಾರಿಗಳನ್ನು  ಎಸ್ಸಿ/ಎಸ್ಟಿ ಸಮುದಾಯಕ್ಕೆ ಸೇರಿದ ಗುತ್ತಿಗೆದಾರರಿಗೆ ಮೀಸಲಿರಿಸಿ “Karnataka transparency in public procurement Bill 2016” (KTPPB) ಜಾರಿಗೆ ತರಲಾಗಿತ್ತು. ಪರಿಶಿಷ್ಟಜಾತಿ/ವರ್ಗಗಳ ಗುತ್ತಿಗೆದಾರರನ್ನು ಉದ್ಯಮಶೀಲತೆ ದೃಷ್ಟಿಯಿಂದ ಉತ್ತೇಜಿಸುವ ಮತ್ತು ಸಾಮಾಜಿಕ ನ್ಯಾಯದ ಮೂಲಕ ಆರ್ಥಿಕವಾಗಿ ಸಶಕ್ತಗೊಳಿಸುವ ಆಶಯ ಈ ಕಾಯಿದೆಯದ್ದಾಗಿತ್ತು. ಈ ಕಾಯಿದೆಗೆ ರಾಜ್ಯಪಾಲ ವಜುಬಾಯಿವಾಲಾ ಅವರು ಅನುಮೋದಿಸದೆ ರಾಷ್ಟ್ರಪತಿಗಳ ಅಂಗಳಕ್ಕೆ ಸಾಗುಹಾಕಿದ್ದರು.  ಅಂತಿಮವಾಗಿ ಆವತ್ತಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಿಯೋಗದೊಂದಿಗೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಈ ಕಾಯಿದೆಯ ಮಹತ್ವ ಮತ್ತು ಆಶಯವನ್ನು ಮನವರಿಕೆ ಮಾಡಿಕೊಟ್ಟ ಪರಿಣಾಮ 2017 ರಲ್ಲಿ ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಪರಿಶಿಷ್ಟಜಾತಿ/ವರ್ಗಗಳ ಗುತ್ತಿಗೆ ದಾರರಿಗೆ ಶೇ. 24 ರಷ್ಟು ಕಾಮಗಾರಿಗಳನ್ನು ಮೀಸಲಿಡುವ ಈ ಕಾಯ್ದೆ ಅನುಷ್ಠಾನಗೊಳ್ಳುತ್ತಾ ಬರುತ್ತಿದೆ.

ಈಗಿನ ಸರ್ಕಾರದ ಮುಜರಾಯಿ ಇಲಾಖೆ ಬಹುಶಃ  KTPPA ಕಾಯಿದೆಯಡಿ  ಟೆಂಡರ್ ಕರೆಯಲಾಗಿದೆ ಎನ್ನುವುದಾದರೆ  ಈ ಕಾಯ್ದೆಯನ್ನು ಆಡಳಿತ ಪಕ್ಷದ  ಸಿದ್ಧಾಂತಕ್ಕೆ ಅನುಗುಣವಾಗಿ ಅರ್ಥೈಸಿಕೊಂಡು  ಆಳುವವರನ್ನು ಸಂಪ್ರೀತಿಗೊಳಿಸಲು ಮುಜರಾಯಿ ಅಧಿಕಾರಿಗಳು ಉತ್ಸುಕರಾಗಿದ್ದರಾ? ಈ ಕಾಯಿದೆಯಂತೆ ಒಟ್ಟಾರೆ ಸರ್ಕಾರಿ ಕಾಮಗಾರಿಗಳಲ್ಲಿ  ಶೇ. 24 ರಷ್ಟು ಕಾಮಗಾರಿಗಳನ್ನು ಪರಿಶಿಷ್ಟ ಜಾತಿ./ವರ್ಗಗಳಿಗೆ ಮೀಸಲಿಡಬೇಕೆಂದಿದೆಯೇ ಹೊರತು ಕಾಮಗಾರಿಗಳಲ್ಲಿ ಜಾತಿಯನ್ನು ಅಳವಡಿಸುವಂತಿಲ್ಲ ಎಂಬ ಸಾಮಾನ್ಯ ಜ್ಞಾನವೂ ದೊಡ್ಡಗಣಪತಿ ದೇವಸ್ಥಾನದಲ್ಲಿ ಚಪ್ಪಲಿ ಕಾಯುವ ಟೆಂಡರ್ ಹಕ್ಕನ್ನು ಪರಿಶಿಷ್ಟ ಜಾತಿ/ವರ್ಗಗಳಿಗೆ ಮೀಸಲಿರಿಸಿದ ಮುಜರಾಯಿ ಇಲಾಖೆಗೆ ಇಲ್ಲದೇ ಹೋಗಿತ್ತಾ? ಒಂದು ಕಾಯಿದೆಯ ವ್ಯಾಖ್ಯಾನ  ಸರ್ಕಾರ ಬದಲಾದಂತೆ ಬದಲಾಗಿ ಹೋಗುತ್ತದಾ?

ಸಾರ್ವಜನಿಕವಾಗಿ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದೊಡ್ಡಗಣಪತಿ ದೇವಸ್ಥಾನ ಮತ್ತದರ ಸಮೂಹ ದೇವಸ್ಥಾನಗಳ  ಟೆಂಡರ್ ರದ್ದುಗೊಳಿಸಿರುವುದು ಮೇಲ್ನೋಟಕ್ಕೆ  ಆದ ಪ್ರಮಾದಕ್ಕೆ ಪರಿಹಾರ ಎನ್ನಬಹುದು.   ಆದರೆ ಇಂತಹದ್ದೊಂದು “ಸಾಮಾಜಿಕ ಅಪರಾಧ” (social crime) ವನ್ನು  ಪ್ರಜ್ಞಾಪೂರ್ವಕವಾಗಿಯೇ ಅನುಸರಿಸಿಕೊಂಡು ಬರುತ್ತಿರುವುದಕ್ಕೆ  ಮುಜರಾಯಿ ಇಲಾಖೆಯ ಟೆಂಡರ್ ತಾಜಾ ಉದಾಹರಣೆಯಾಗಿ ಕಾಣುತ್ತದೆ.  ಸರ್ಕಾರದ ಪರಿಶಿಷ್ಟ ಜಾತಿ/ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಪರಮ ನಿರ್ಲಕ್ಷ್ಯಕ್ಕೆ ಅನುಸೂಚಿತ ಜಾತಿ /ಪಂಗಡಗಳ ಕಲ್ಯಾಣ ಸಮಿತಿಯೇ ತನ್ನ ವರದಿಯಲ್ಲಿ ಕನ್ನಡಿ ಹಿಡಿದೆ. ಕೇವಲ ಎಸ್ಸಿ/ಎಸ್ಟಿ ಸಮುದಾಯದ ಮೀಸಲಾತಿ ಹೆಚ್ಚಳದ ನಿರ್ಧಾರವನ್ನು ಮುಂದಿಟ್ಟುಕೊಂಡು ಮೆರವಣಿಗೆ ಹೊರಟವರಿಗೆ ಇದಾವುದು ಕಾಣುವುದಿಲ್ಲ.

ಅದಿರಲಿ, ಮುಜರಾಯಿ ಇಲಾಖೆಯು ಹೊರಡಿಸಿದ ಟೆಂಡರ್ ಪ್ರಕಟಣೆಯು ನೇರವಾಗಿ ಅಸ್ಪೃಶ್ಯತೆ ಆಚರಣೆಯಾಗಿದೆ. ಇದೊಂದು ಅಟ್ರಾಸಿಟಿಯೇ ಕೂಡ. ಇದಕ್ಕೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಕೇಸು  ದಾಖಲಿಸಬಾರದೇಕೆ? ಯಾವ ಆಧಾರದ ಮೇಲೆ ಇಂತಹ ಕಸುಬು ಆಧಾರಿತ  ಟೆಂಡರ್ ಕರೆಯಲಾಯಿತು.? ಎಲ್ಲವೂ ತನಿಖೆಯಾಗಬೇಕು. 

ಸಂವಿಧಾನ ಬದ್ಧ ಸರ್ಕಾರಗಳ ಮೂಗಿನಡಿಯಲ್ಲೆ ‘ಜಾತಿ’ ಮನಸ್ಥಿತಿ ಜಾಗೃತವಾಗಿದ್ದರೆ ಅದು ಇಡೀ ವ್ಯವಸ್ಥೆಯನ್ನೆ  ಜಾತಿಕೋರ ಸಮಾಜವನ್ನಾಗಿ ನಿರ್ಮಿಸುತ್ತದೆ. 

 

 ಎನ್.ರವಿಕುಮಾರ್

ʼಶಿವಮೊಗ್ಗ ಟೆಲೆಕ್ಸ್ʼ ಕನ್ನಡ ದಿನಪತ್ರಿಕೆಯ ಸಂಪಾದಕರು. ಸಾಮಾಜಿಕ ಹೋರಾಟಗಾರ, ಪ್ರಗತಿಪರ ಚಿಂತಕ, ರಾಜಕೀಯ ವಿಶ್ಲೇಷಣಾಕಾರ.

Related Articles

ಇತ್ತೀಚಿನ ಸುದ್ದಿಗಳು