ಬೆಂಗಳೂರು: ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಚೇದನ ಪಡೆದುಕೊಂಡ ಬೆನ್ನಲ್ಲೇ ಮತ್ತೊಂದು ವಿಚ್ಛೇದನ ಸುದ್ದಿ ಬಂದಿದೆ. ರಾಜುಕುಮಾರ್ ಕುಟುಂಬದ ಕುಡಿ, ಕನ್ನಡ ಚಿತ್ರರಂಗದ ನಟ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಬೈರಪ್ಪ ಸಂಸಾರದಲ್ಲಿ ಬಿರುಕು ಮೂಡಿದ್ದು, ಇಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಯುವರಾಜ್ ಪತ್ನಿ ಶ್ರೀದೇವಿ ಭೈರಪ್ಪಗೆ ಕೋರ್ಟ್ನಿಂದ ನೋಟಿಸ್ ಜಾರಿಯಾಗಿದೆ. ಜೂನ್ 6 ರಂದು ಯುವರಾಜ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಮುಂದಿನ ತಿಂಗಳು ಜುಲೈ 4ಕ್ಕೆ ವಿಚಾರಣೆಗೆ ದಿನಾಂಕ ನಿಗದಿಯಾಗಿದೆ.
ದೊಡ್ಮನೆ ಕುಟುಂಬದ ಕುಡಿ, ರಾಘವೇಂದ್ರ ರಾಜ್ಕುಮಾರ್ ಅವರ ಕಿರಿಯ ಪುತ್ರನಾಗಿರುವ ಯುವ ರಾಜ್ ಕುಮಾರ್ ಮತ್ತು ಮೈಸೂರು ಮೂಲದ ಶ್ರೀದೇವಿ ಭೈರಪ್ಪ ಈ ಮೊದಲು ಸ್ನೇಹಿತರಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿತು. 7 ವರ್ಷಗಳ ಕಾಲ ಪ್ರೀತಿಸಿ, ಮನೆಯವರನ್ನು ಒಪ್ಪಿಸಿ 2019, ಮೇ 26ರಂದು ಅದ್ಧೂರಿಯಾಗಿ ವಿವಾಹವಾಗಿದ್ದರು.
ಈಗ ಇಬ್ಬರ ನಡುವೆ ಬಿರುಕು ಮೂಡಿದ್ದು, ಅಧಿಕೃತವಾಗಿ ವಿಚ್ಚೇದನ ಪಡೆಯಲು ದಂಪತಿ ನಿರ್ಧಾರ ಮಾಡಿದ್ದಾರೆ. ಸೆಕ್ಷನ್ (13 (1) (ia) ಅಡಿಯಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಪತ್ನಿ ವಿರುದ್ಧ ಕ್ರೌರ್ಯದ ಆರೋಪ ಮಾಡಿ ಯುವರಾಜ್ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಯಾವ ಕಾರಣಕ್ಕೆ ಇವರಿಬ್ಬರ ಮಧ್ಯೆ ಬಿರುಕಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
ಶ್ರೀದೇವಿ 6-7 ತಿಂಗಳಿಂದ ದೊಡ್ಮನೆ ಕುಟುಂಬದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಶ್ರೀದೇವಿ ಅಣ್ಣಾವ್ರ ಕುಟುಂಬದ ಒಡೆತನದ ‘ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ’ ಉಸ್ತುವಾರಿ ವಹಿಸಿಕೊಂಡು, ರುವಾರಿಯಾಗಿ ನಿರ್ವಹಣೆ ಮಾಡುತ್ತಿದ್ದರು. ಒಂದು ವರ್ಷದಿಂದ ದಂಪತಿ ನಡುವೆ ಕಲಹ ಎನ್ನಲಾಗಿದೆ. ದಂಪತಿಗಳ ಕಲಹದ ಬಗ್ಗೆ ಎರಡೂ ಕುಟುಂಬದಿಂದ ಆಗಿರುವ ಭಿನ್ನಾಭಿಪ್ರಾಯ ಪರಿಹರಿಸಲು ಪ್ರಯತ್ನ ನಡೆದಿದೆ.
ಯುವರಾಜ್ಕುಮಾರ್ ಕಡೆಯಿಂದ ವಿಚ್ಚೇದನಕ್ಕೆ ಪಿಟಿಷನ್ ಅರ್ಜಿ ಹಾಕಿದ್ದು, ಶ್ರೀದೇವಿ ಭೈರಪ್ಪ ಅವರ ನಡೆ ಏನು? ಎಂಬುದು ಇನ್ನೂ ತಿಳಿದುಬಂದಿಲ್ಲ. ಯುವ ಸಿನಿಮಾದ ಮುಹೂರ್ತದಲ್ಲಿ ಇಬ್ಬರೂ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ಯುವ ರಿಲೀಸ್ ಸಮಯದಲ್ಲಿ ಶ್ರೀದೇವಿ ಒಟ್ಟಿಗೆ ಇರಲಿಲ್ಲ.
ಪುನಿತ್ ರಾಜಕುಮಾರ್ ನೇತೃವದ ಮದುವೆ: ಇಬ್ಬರ ಮದುವೆಗೆ ರಾಘವೇಂದ್ರ ರಾಜ್ಕುಮಾರ್ ದಂಪತಿಯ ವಿರೋಧ ಇತ್ತು. ಆದ್ರೆ ಪುನೀತ್ ರಾಜ್ ಕುಮಾರ್ ಅವರು ಎಲ್ಲರನ್ನು ಒಪ್ಪಿಸಿ ಅವರೇ ಮುಂದೆ ನಿಂತು ಇಬ್ಬರಿಗೂ ಮದುವೆ ಮಾಡಿಸಿದ್ದರು. ಇದೀಗ ಕಳೆದ ಆರೇಳು ತಿಂಗಳಿಂದ ದೊಡ್ಮನೆಯಿಂದ ದೂರಾಗಿರೋ ಶ್ರೀದೇವಿ ಬೈರಪ್ಪ ವಿದೇಶದಲ್ಲಿದ್ದಾರೆ ಎಂದು ತಿಳಿದು ಬಂದಿದೆ.