ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶ ಮದನ್ ಬಿ ಲೋಕೂರ್, ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಪಿ ಶಾ ಮತ್ತು ಹಿರಿಯ ಪತ್ರಕರ್ತ ಎನ್ ರಾಮ್ ಅವರನ್ನು ಒಳಗೊಂಡ ತಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಬ್ಬರನ್ನೂ ಲೋಕಸಭೆ ಚುನಾವಣೆ 2024 ಕುರಿತು ಸಾರ್ವಜನಿಕ ಚರ್ಚೆಗೆ ಆಹ್ವಾನಿಸಿದ್ದರು. ಈ ಚರ್ಚೆಯ ಆಹ್ವಾನವನ್ನು ಸ್ವೀಕರಿಸಿದ ರಾಹುಲ್ ಗಾಂಧಿ ತಾನು ಯಾವ ಚರ್ಚೆಗೂ ಸಿದ್ಧ, ಪ್ರಧಾನಿ ನರೇಂದ್ರ ಮೋದಿ ಕೂಡ ಬರುವರೆಂದು ನಂಬಿದ್ದೇನೆ ಎಂದು ಪ್ರತಿಕ್ರಿಯೆ ನೀಡಿದ್ದರು.
ಆದರೆ ಈಗ ಈ ಒಂದು ಬಹಿರಂಗ ಚರ್ಚೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಹಿಂದೇಟು ಹಾಕಿದ್ದಾರೆ. ಇದರ ಜೊತೆಗೆ ತಮ್ಮ ಅನುಪಸ್ಥಿತಿಯಲ್ಲಿ ಚರ್ಚೆ ನಡೆದರೆ ರಾಷ್ಟ್ರದ ಜನತೆಗೆ ತಪ್ಪು ಸಂದೇಶ ಹೋಗಬಹುದು ಎಂಬ ಕಾರಣಕ್ಕಾಗಿ ಬಿಜೆಪಿ ಯುವ ಘಟಕದ ಉಪಾಧ್ಯಕ್ಷನನ್ನು ಚರ್ಚೆಗೆ ಕಳಿಸಲು ಬಿಜೆಪಿ ನಿರ್ಧರಿಸಿದೆ.
ಈ ಬಗ್ಗೆ ಪ್ರತಿಕ್ರಯಿಸಿರುವ ರಾಷ್ಟ್ರೀಯ ಕಾಂಗ್ರೆಸ್ ವಕ್ತಾರರಾದ ಜೈರಾಮ್ ರಮೇಶ್ “ಪ್ರಧಾನಮಂತ್ರಿ ಜೊತೆಗಿನ ಬಹಿರಂಗ ಚರ್ಚೆಗೆ ರಾಹುಲ್ ಗಾಂಧಿ ಸಮ್ಮತಿ ಸೂಚಿಸಿ ನಾಲ್ಕು ದಿನಗಳಾಗಿವೆ, 56 ಇಂಚಿನ ಎದೆಯು ಆಹ್ವಾನ ಸ್ವೀಕರಿಸುವ ಧೈರ್ಯ ಇನ್ನೂ ಮಾಡಿಲ್ಲ. ಭಯ ಬೇಡ” ಎಂಬ ರೀತಿಯಲ್ಲಿ ಟ್ವಿಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈವರೆಗೆ ಪತ್ರಕರ್ತರು ಕರೆದ ಒಂದೇ ಒಂದು ಪ್ರಶ್ನೆಗಳನ್ನು ಎದುರಿಸದೇ, ಕೇವಲ ತಮ್ಮ PR ತಂಡ ಆಯೋಜಿಸಿರುವ ಸಂದರ್ಶನಗಳನ್ನಷ್ಟೇ ಭಾಗವಹಿಸಿದ ಬಗ್ಗೆ ಈಗಾಗಲೇ ದೇಶದ ಜನತೆ ಮಾತನಾಡುತ್ತಿದೆ. ಪ್ರಧಾನಿ ಅನ್ನಿಸಿಕೊಂಡ ವ್ಯಕ್ತಿ ಕಳೆದ 25 ವರ್ಷಗಳಿಂದ ಪತ್ರಕರ್ತರಿಂದ ಅಂತರ ಕಾಯ್ದುಕೊಂಡೇ ಬಂದಿದ್ದ ಬಗ್ಗೆ ಈಗ ದೇಶದ ಜನತೆ ಪ್ರಧಾನಿಗಳನ್ನು ಪ್ರಶ್ನಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಕೇವಲ “ಮನ್ ಕಿ ಬಾತ್” ನಂತಹ ಮಾತುಗಳಲ್ಲೇ ತೊಡಗಿಕೊಂಡು, ಭಾಷಣಕ್ಕಷ್ಟೇ ಸೀಮಿತವಾದ ನರೇಂದ್ರ ಮೋದಿ ಪ್ರಶ್ನೆಗಳಿಗೆ ಅಕ್ಷರಶಃ ಹೆದರಿದ್ದಾರೆ ಎಂಬುದೇ ಎಲ್ಲೆಡೆ ಕೇಳಿ ಬರುತ್ತಿರುವ ಮಾತು. ಹೀಗಿರುವಾಗ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು ಹಾಗೂ ಹಿರಿಯ ಪತ್ರಕರ್ತರು ಕರೆದ ಈ ಚರ್ಚೆಗೆ ಬರುವ ಬಗ್ಗೆ ಅನುಮಾನಗಳಿದ್ದರೂ ಆಹ್ವಾನ ಮಾಡಲೇಬೇಕಿತ್ತು.
ಅಕಸ್ಮಾತ್ ಪ್ರಧಾನಿ ನರೇಂದ್ರ ಮೋದಿ ಈ ಚರ್ಚೆಗಳಲ್ಲಿ ಭಾಗಿಯಾಗಿದ್ದೇ ಆದರೆ ಅದೊಂದು ಐತಿಹಾಸಿಕ ಚರ್ಚೆಯಾಗುತ್ತಿತ್ತು. ಆದರೆ ಎಲ್ಲರ ನಿರೀಕ್ಷೆಯಂತೆ ಪ್ರಶ್ನೆ ಎದುರಿಸಲಾಗದ ಪ್ರಧಾನಿಗಳು ಈ ಒಂದು ಚರ್ಚೆಗೆ ಬರಲಾಗದೇ ದೂರ ಉಳಿದಿದ್ದು, ಮತ್ತೊಮ್ಮೆ ತಾವು ಪತ್ರಕರ್ತರು ಮತ್ತು ಪ್ರತಿಪಕ್ಷಗಳ ಪ್ರಶ್ನೆ ಎದುರಿಸಲಾಗದ ಪ್ರಧಾನಿ ಎಂಬುದನ್ನು ಸಾಭೀತುಪಡಿಸಿದ್ದಾರೆ.