Home ಬ್ರೇಕಿಂಗ್ ಸುದ್ದಿ ನ್ಯೂಸ್ ಕ್ಲಿಕ್‌ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

ನ್ಯೂಸ್ ಕ್ಲಿಕ್‌ ಮುಖ್ಯ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ

0

ನ್ಯೂಸ್‌ಕ್ಲಿಕ್‌ನ ಸಂಸ್ಥಾಪಕ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರಿಗೆ ಸುಪ್ರೀಂ ಕೋರ್ಟ್ ದೊಡ್ಡ ರಿಲೀಫ್ ನೀಡಿದೆ. ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಯ ಕಟ್ಟುನಿಟ್ಟಿನ ಸೆಕ್ಷನ್‌ಗಳ ಅಡಿಯಲ್ಲಿ ಬಂಧಿತರಾಗಿರುವ ಪುರ್ಕಾಯಸ್ಥ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಲಾಗಿದೆ. ನ್ಯೂಸ್‌ಕ್ಲಿಕ್ ಸಂಪಾದಕರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದ ಸುಪ್ರೀಂ ಕೋರ್ಟ್, ‌ಬಂಧನದ ಸಮಯದಲ್ಲಿ ಪೊಲೀಸ್ ಅನುಸರಿಸಿದ ವಿಧಾನಗಳ ಬಗ್ಗೆಯೂ ಗಂಭೀರವಾದ ಟೀಕೆಗಳನ್ನು ಮಾಡಿದೆ.

ಈ ಹಿಂದೆ ಪ್ರಬೀರ್ ಪುರ್ಕಾಯಸ್ಥ ಬಂಧನದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಹೇಳಿಕೆ ನೀಡಿತ್ತು. ಸುಪ್ರೀಂ ಕೋರ್ಟ್ ಹಲವು ಪ್ರಶ್ನೆಗಳನ್ನು ಎತ್ತಿತ್ತು. ಪ್ರಬೀರ್ ಪುರ್ಕಾಯಸ್ಥ ಅವರನ್ನು ಬಂಧಿಸಿದ ನಂತರ ಅವರ ವಕೀಲರಿಗೆ ತಿಳಿಸದೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲು ದೆಹಲಿ ಪೊಲೀಸರು ಏಕೆ ಅವಸರ ಮಾಡಿದರು ಎಂದು ನ್ಯಾಯಾಲಯ ಕೇಳಿದೆ.

ದೆಹಲಿ ಪೊಲೀಸರು ಪ್ರಬೀರ್ ಪುರ್ಕಾಯಸ್ಥ ವಿರುದ್ಧ ಚೀನಾದಿಂದ ಹಣ ಪಡೆದ ಆರೋಪದ ಮೇಲೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ನ್ಯೂಸ್ ಕ್ಲಿಕ್‌ನ ಮಾನವ ಸಂಪನ್ಮೂಲ ಮುಖ್ಯಸ್ಥರಾಗಿದ್ದ ಅಮಿತ್ ಚಕ್ರವರ್ತಿ ಅವರು ಸರ್ಕಾರಿ ಸಾಕ್ಷಿಯಾಗಿರುವುದರಿಂದ ಅವರನ್ನು ಆರೋಪಿಯನ್ನಾಗಿ ಮಾಡಲಾಗಿಲ್ಲ.

ಈ ವರ್ಷದ ಮಾರ್ಚ್‌ನಲ್ಲಿ ದೆಹಲಿ ಪೊಲೀಸರು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ನ್ಯಾಯಾಲಯದಲ್ಲಿ ಯುಎಪಿಎ ಅಡಿಯಲ್ಲಿ ಪುರ್ಕಾಯಸ್ಥ ಅವರ ಬಂಧನವನ್ನು ಅನುಮೋದಿಸುವ ಆದೇಶವನ್ನು ಮಂಡಿಸಿದ್ದರು.

ಪುರ್ಕಾಯಸ್ಥ ಮತ್ತು ನ್ಯೂಸ್ ಕ್ಲಿಕ್‌ನ ಮಾನವ ಸಂಪನ್ಮೂಲ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಂಧಿಸಲಾಗಿತ್ತು. ನವೆಂಬರ್‌ನಲ್ಲಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಚಕ್ರವರ್ತಿ ಈ ವರ್ಷದ ಜನವರಿಯಲ್ಲಿ ಈ ಪ್ರಕರಣದಲ್ಲಿ ಸರ್ಕಾರಿ ಸಾಕ್ಷಿಯಾಗಿದ್ದರು. ನ್ಯೂಸ್ ಕ್ಲಿಕ್, ಪುರ್ಕಾಯಸ್ಥ, ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಮ್ ಮತ್ತು ವರ್ಲ್ಡ್‌ವೈಡ್ ಮೀಡಿಯಾ ಹೋಲ್ಡಿಂಗ್ಸ್‌ನ ಜೇಸನ್ ಫೆಚರ್ ವಿರುದ್ಧ ಯುಎಪಿಎ ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ನ್ಯೂಸ್ ಕ್ಲಿಕ್ ಗೆ ಅಮೆರಿಕದ ಮೂಲಕ ಚೀನಾದಿಂದ ಅಕ್ರಮ ಹಣ ಬಂದಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. ಎಲ್ಗರ್ ಪರಿಷದ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಗೃಹಬಂಧನದಲ್ಲಿರುವ ಕಾರ್ಯಕರ್ತ ಗೌತಮ್ ನವ್ಲಾಖಾ ಅವರೊಂದಿಗೆ 1991ರಿಂದ ಪುರ್ಕಾಯಸ್ಥ ಅವರ ಸ್ನೇಹವನ್ನು ಸಹ ಎಫ್‌ಐಆರ್ ಉಲ್ಲೇಖಿಸಿದೆ.

ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರ ಪೀಠವು ಪ್ರಬೀರ್ ಪುರ್ಕಾಯಸ್ಥ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಬುಧವಾರ ಆದೇಶಿಸಿದೆ.

ಯುಎಪಿಎ ಅಡಿಯಲ್ಲಿ ತನ್ನ ಬಂಧನವನ್ನು ಪ್ರಶ್ನಿಸಿ ಪ್ರಬೀರ್ ಪುರ್ಕಾಯಸ್ಥ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುಪ್ರೀಂ ಕೋರ್ಟ್ ಅವರ ಅರ್ಜಿಯನ್ನು ಸ್ವೀಕರಿಸಿ ಬಿಡುಗಡೆಗೆ ಆದೇಶಿಸಿದೆ.

You cannot copy content of this page

Exit mobile version