Saturday, June 21, 2025

ಸತ್ಯ | ನ್ಯಾಯ |ಧರ್ಮ

ಸಂವಿಧಾನ ಅರ್ಪಿಸುವ ಸಂದರ್ಭದಲ್ಲಿನ ಡಾ. ಅಂಬೇಡ್ಕರ್ ಅವರ ಆತಂಕದ ನುಡಿಗಳು

ಡಾ.ಅಂಬೇಡ್ಕರರು ಹೇಳುತ್ತಾರೆ…

“ನನ್ನ ಅಭಿಪ್ರಾಯದಲ್ಲಿ, ಒಂದು ಸಂವಿಧಾನ ಅದೆಷ್ಟೇ ಉತ್ತಮದ್ದಾಗಿರಬಹುದು ಆದರೆ ಅದನ್ನು ಜಾರಿಗೊಳಿಸುವ ಜನ ಕೆಡುಕಿನವರಾದರೆ ಖಂಡಿತ ಆ ಸಂವಿಧಾನ ಕೂಡ ಕೆಡುಕಿನ ರೂಪ ತಾಳುತ್ತದೆ. ಹಾಗೆಯೇ ಒಂದು ಸಂವಿಧಾನ ಅದೆಷ್ಟೇ ಕೆಟ್ಟದ್ದಾಗಿರಬಹುದು ಆದರೆ ಅದನ್ನು ಜಾರಿಗೊಳಿಸುವ ಜನ ಎಷ್ಟು ಸಾಧ್ಯವೋ ಅಷ್ಟು ಒಳ್ಳೆಯವರಾದರೆ ಆಗ ಆ ಸಂವಿಧಾನ ಕೂಡ ಒಳ್ಳೆಯ ರೂಪ ಪಡೆಯುತ್ತದೆ. ಆದ್ದರಿಂದ ಸಂವಿಧಾನದ ಕಾರ್ಯವಿಧಾನ ಸಂಪೂರ್ಣವಾಗಿ ಆ ಸಂವಿಧಾನದ ಗುಣಲಕ್ಷಣಗಳನ್ನು ಅವಲಂಬಿಸುವುದಿಲ್ಲ. ಹೆಚ್ಚೆಂದರೆ ಸಂವಿಧಾನ ಆಡಳಿತ ವ್ಯವಸ್ಥೆಯ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳನ್ನು ಒದಗಿಸಬಹುದು. ಆಡಳಿತ ವ್ಯವಸ್ಥೆಯ ಈ ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪ್ರಭಾವ ಬೀರುವ ಅಂಶಗಳು ಜನಸಾಮಾನ್ಯರು ಮತ್ತು ಆ ಜನಸಾಮಾನ್ಯರು ತಮ್ಮ ರಾಜಕೀಯ ಮತ್ತು ಹಿತಾಸಕ್ತಿಗಳ ರಕ್ಷಣೆಗಾಗಿ ಸ್ಥಾಪಿಸಿಕೊಳ್ಳುವ ರಾಜಕೀಯ ಪಕ್ಷಗಳು. ಈ ನಿಟ್ಟಿನಲ್ಲಿ (ಸಂವಿಧಾನದ ಆಶಯಗಳ ರಕ್ಷಣೆಯ ನಿಟ್ಟಿನಲ್ಲಿ) ಭಾರತದ ಜನಸಾಮಾನ್ಯರು ಮತ್ತವರ ರಾಜಕೀಯ ಪಕ್ಷಗಳು ಹೀಗೆಯೇ ವರ್ತಿಸುತ್ತವೆ ಎಂದು ಯಾರು ತಾನೆ ಹೇಗೆ ಹೇಳಲು ಸಾಧ್ಯ?…”

……

“ಈ ಸಂದರ್ಭದಲ್ಲಿ ನಾನು ಸಾಂವಿಧಾನಿಕ ಮಹತ್ವದ ಒಂದು ಅಂಶದ ಬಗ್ಗೆ ಪ್ರಸ್ತಾಪಿಸಲು ಉದ್ದೇಶಿಸುತ್ತೇನೆ. ಒಂದು ಗಂಭೀರ ಆರೋಪ ಮಾಡಲಾಗುತ್ತಿದೆ, ಅದೆಂದರೆ ಕೇಂದ್ರೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ, ರಾಜ್ಯ ಸರ್ಕಾರಗಳನ್ನು ಮುನಿಸಿಪಾಲಿಟಿಗಳ ಮಟ್ಟಕ್ಕೆ ಇಳಿಸಲಾಗಿದೆ ಎಂಬುದು. ನನ್ನ ಸ್ಪಷ್ಟನೆ ಏನೆಂದರೆ ಈ ದೃಷ್ಟಿಕೋನ ಅತಿಶಯೋಕ್ತಿಯಲ್ಲದೆ ಸಂವಿಧಾನ ಏನನ್ನು ಹೆಣೆಯಲು ಹೊರಟಿದೆಯೇ ಅದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವುದರಿಂದ ಆಗಿದೆ ಎಂಬುದು. 

ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಬಂಧ ಅದು ಯಾವ ಮೂಲಭೂತ ತತ್ವದ ಆಧಾರದ ಮೇಲೆ ಸ್ಥಾಪಿತಗೊಂಡಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳುವ ಅಗತ್ಯವಿದೆ. ಒಕ್ಕೂಟ ವ್ಯವಸ್ಥೆಯ ಮೂಲತತ್ವವೆಂದರೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರಗಳ ವಿಭಜನೆ ಮುಂದೆ ಕೇಂದ್ರ ಸರ್ಕಾರ ಮಾಡಬಹುದಾದ ಯಾವುದೇ ಕಾನೂನಿನಿಂದ ಮಾಡಲ್ಪಡುವುದಿಲ್ಲ! ಬದಲಿಗೆ ಸ್ವತಃ ಸಂವಿಧಾನದಿಂದಲೇ ಅದು ಮಾಡಲ್ಪಟ್ಟಿದೆ. ಈ ನಿಟ್ಟಿನಲ್ಲಿ ಸಂವಿಧಾನ ಮಾಡಿರುವುದೇ ಇದನ್ನು. ಆದ್ದರಿಂದ ನಮ್ಮ ಸಂವಿಧಾನದಡಿಯಲ್ಲಿ ರಾಜ್ಯಗಳು ತಮ್ಮ ಶಾಸಕಾಂಗ ಮತ್ತು ಕಾರ್ಯಾಂಗದ ಅಧಿಕಾರಗಳಿಗಾಗಿ ಯಾವುದೇ ರೀತಿಯಲ್ಲೂ ಕೇಂದ್ರದ ಮೇಲೆ ಅವಲಂಬಿತವಾಗುವ ಯಾವುದೇ ಸಂದರ್ಭ ಬರುವುದಿಲ್ಲ. ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯಗಳೆರಡೂ ಒಬ್ಬರು ಮತ್ತೊಬ್ಬರ ಜೊತೆ ಸಮಾನತೆಯನ್ನು ಹೊಂದಿವೆ, ಸಮ ಆದ್ಯತೆಯನ್ನು ಹೊಂದಿವೆ ಅಥವಾ ಒಂದೇ ಶ್ರೇಣಿಯನ್ನು (co-equal) ಹೊಂದಿವೆ”.

……

ಅಂದಹಾಗೆ ಭಾರತೀಯರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಮೀರಿ ತಮ್ಮ ದೇಶವನ್ನು ಎತ್ತಿಹಿಡಿಯುವರೊ ಅಥವಾ ತಮ್ಮ ದೇಶಕ್ಕಿಂತ ತಮ್ಮ ಧಾರ್ಮಿಕ ನಂಬಿಕೆಗಳೇ ಶ್ರೇಷ್ಠ ಎನ್ನುವರೊ? ನನಗೆ ತಿಳಿಯುತ್ತಿಲ್ಲ. ಆದರೆ ಒಂದಂತು ನಿಜ, ರಾಜಕೀಯ ಪಕ್ಷಗಳು ದೇಶಕ್ಕಿಂತ ತಮ್ಮ ಧಾರ್ಮಿಕ ನಂಬಿಕೆಗಳೇ ಶ್ರೇಷ್ಠ ಎಂದರೆ ನಮ್ಮ ಸ್ವಾತಂತ್ರ್ಯ ಗಂಡಾಂತರಕ್ಕೆ ಸಿಲುಕಲಿದೆ, ಎರಡನೇ ಬಾರಿಗೆ ಸಿಲುಕಲಿದೆ, ಬಹುಶಃ ನಾವು ಅದನ್ನು ಶಾಶ್ವತವಾಗಿ ಕಳೆದುಕೊಳ್ಳಲಿದ್ದೇವೆ.

“…. ಮುಂದುವರಿದು 1950 ಜನವರಿ 26ರಂದು ಭಾರತ ಒಂದು ಸ್ವತಂತ್ರ ದೇಶವಾಗಲಿದೆ. ಅದರ ಈ ಸ್ವಾತಂತ್ರ್ಯಕ್ಕೆ ಭವಿಷ್ಯದಲ್ಲಿ ಏನಾಗಲಿದೆ? ಅದು ತನ್ನ ಸ್ವಾತಂತ್ರ್ಯವನ್ನು ಸದಾ ಕಾಲಕ್ಕು ಉಳಿಸಿಕೊಳ್ಳಲಿದೆಯೇ ಅಥವಾ ಮತ್ತೆ ಕಳೆದುಕೊಳ್ಳಲಿದೆಯೇ? ನನ್ನ ಮನಸ್ಸಲ್ಲಿ ಮೂಡಿಬರುತ್ತಿರುವ ಆಲೋಚನೆ ಇದೇ ಆಗಿದೆ. ಏಕೆಂದರೆ ಭಾರತ ಹಿಂದೆಂದೂ ಸ್ವತಂತ್ರ ದೇಶವಾಗಿಯೇ ಇರಲಿಲ್ಲವೇ? ಎಂದು ಪ್ರಶ್ನಿಸಿಕೊಳ್ಳುವುದಾದರೆ, ಗಮನಿಸತಕ್ಕ ಅಂಶ ಹಿಂದೆ ತಾನು ಹೊಂದಿದ್ದ ಸ್ವಾತಂತ್ರ್ಯವನ್ನು ಅದು ಕಳೆದುಕೊಂಡಿದೆ. ಪ್ರಶ್ನೆ ಎಂದರೆ ಅದು ಎರಡನೆಯ ಬಾರಿಗೆ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದೇ? ನನ್ನನ್ನು ಬಹಳ ಆತಂಕಕ್ಕೀಡುಮಾಡಿರುವುದೇ ಭವಿಷ್ಯದ ಬಗೆಗಿನ ನನ್ನ ಈ ಚಿಂತನೆ. 

ನನ್ನ ಮನಸ್ಸನ್ನು ಬಹಳವಾಗಿ ಕೊರೆಯುತ್ತಿರುವ ಅಂಶವೆಂದರೆ, ಇಂಡಿಯಾ ಹಿಂದೆ ತನ್ನ ಸ್ವಾತಂತ್ರ‍್ಯವನ್ನು ಕಳೆದುಕೊಂಡಿತ್ತು ಎಂಬುದಷ್ಟೇ ಅಲ್ಲ, ತನ್ನದೇ ಜನರ ದ್ರೋಹ ಮತ್ತು ವಿಶ್ವಾಸಘಾತುಕತನದಿಂದ ಅದು ಕಳೆದುಕೊಂಡಿತ್ತು ಎಂಬುದು. ಸಿಂಧ್ ಪ್ರಾಂತ್ಯವನ್ನು ಮಹಮ್ಮದ್ ಬಿನ್ ಖಾಸಿಂ ಆಕ್ರಮಿಸಲು ಬಂದಾಗ ರಾಜ ದಾಹರನ ಸೈನ್ಯದ ಸೇನಾಧಿಪತಿಗಳು ಮಹಮದ್ ಬಿನ್ ಖಾಸಿಂ ನಿಂದ ಲಂಚ ಪಡೆದು ರಾಜ ದಾಹರನ ಪರ ಹೋರಾಡಲು ನಿರಾಕರಿಸಿದರು. ಪೃಥ್ವಿರಾಜ್ ಚೌಹಾನನ ವಿರುದ್ಧ ಹೋರಾಡಿ ಭಾರತವನ್ನು ಆಕ್ರಮಿಸಲು ಮಹಮ್ಮದ್ ಘೋರಿಯನ್ನು ಭಾರತಕ್ಕೆ ಆಹ್ವಾನಿಸಿದ್ದು ರಾಜ ಜಯಚಂದ್ರ. ಈ ಸಂದರ್ಭದಲ್ಲಿ ಜಯಚಂದ್ರ ಮಹಮ್ಮದ್ ಘೋರಿಗೆ ತನ್ನ ಸಹಾಯವನ್ನಷ್ಟೆ ಅಲ್ಲ ಇಡೀ ಸೋಳಂಕಿ ರಾಜರುಗಳ ಬೆಂಬಲವನ್ನು ಒದಗಿಸುವುದಾಗಿ ಭರವಸೆ ಇತ್ತಿದ್ದ. ಇನ್ನು ಶಿವಾಜಿ ಹಿಂದೂಗಳ ವಿಮೋಚನೆಗಾಗಿ ಹೋರಾಡುತ್ತಿದ್ದಾರೆ. ಮರಾಠರ ಕೆಲವು ಶ್ರೇಷ್ಠ ವ್ಯಕ್ತಿಗಳು ಮತ್ತು ರಜಪೂತ ರಾಜರುಗಳು ಯುದ್ಧದಲ್ಲಿ ಮೊಗಲ್ ಚಕ್ರವರ್ತಿಗಳ ಪರ ಹೋರಾಡುತ್ತಿದ್ದರು. ಅದೇ ರೀತಿ ಬ್ರಿಟಿಷರು ಸಿಖ್ ಆಡಳಿತಗಾರರನ್ನು ಸರ್ವನಾಶಗೊಳಿಸಲು ಯತ್ನಿಸುತ್ತಿದ್ದರೆ ಅತ್ತ ಸಿಖ್ಖರ ಪ್ರಮುಖ ದಂಡನಾಯಕ ಗುಲಾಬ್ ಸಿಂಗ್ ಮೌನವಾಗಿ ಕುಳಿತಿದ್ದ, ಸಿಖ್ಖರ ಸಾಮ್ರಾಜ್ಯವನ್ನು ಉಳಿಸಲು ಆತ ಸಹಾಯ ಮಾಡಲಿಲ್ಲ. ಇನ್ನು 1857ರಲ್ಲಿ ಭಾರತದ ಬಹುತೇಕ ಭಾಗವು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಯುದ್ಧ ಘೋಷಿಸಿದ್ದರೆ ಸಿಖ್ಖರು ಒಂದೆಡೆ ನಿಂತು ಇಡೀ ಯುದ್ಧವನ್ನು ಸುಮ್ಮನೆ ನೋಡುತ್ತಾ ಮೂಕಪ್ರೇಕ್ಷಕರಂತಿದ್ದರು.

ಪ್ರಶ್ನೆಯೆಂದರೆ, ಇತಿಹಾಸ ಮರುಕಳಿಸದೇ? ನನ್ನ ಮನಸ್ಸಿನಲ್ಲಿ ತುಂಬಿರುವ ಆತಂಕದ ಪ್ರಶ್ನೆ ಇದೇ ಆಗಿದೆ. 

ಕೆಲವು ವಾಸ್ತವಗಳನ್ನು ಅರಿತುಕೊಂಡಾಗ ಈ ಆತಂಕ ನನ್ನನ್ನು ಇನ್ನೂ ಆಳಕ್ಕಿಳಿಸುತ್ತದೆ. ಯಾಕೆಂದರೆ ಈಗಾಗಲೇ ಇರುವ ನಮ್ಮ ಹಳೆಯ ಶತ್ರುಗಳಾದ ಜಾತಿಗಳು ಮತ್ತು ಧಾರ್ಮಿಕ ನಂಬಿಕೆಗಳ ಜೊತೆ ಜೊತೆಗೆ ಪರಸ್ಪರ ವೈರುಧ್ಯದ, ವೈವಿಧ್ಯದ ರಾಜಕೀಯ ಚಿಂತನೆಗಳನ್ನು ಒಳಗೊಂಡ ಹಲವು ರಾಜಕೀಯ ಪಕ್ಷಗಳನ್ನು ಒಳಗೊಳ್ಳಲಿದ್ದೇವೆ. ಅಂದಹಾಗೆ ಭಾರತೀಯರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಮೀರಿ ತಮ್ಮ ದೇಶವನ್ನು ಎತ್ತಿಹಿಡಿಯುವರೊ ಅಥವಾ ತಮ್ಮ ದೇಶಕ್ಕಿಂತ ತಮ್ಮ ಧಾರ್ಮಿಕ ನಂಬಿಕೆಗಳೇ ಶ್ರೇಷ್ಠ ಎನ್ನುವರೊ? ನನಗೆ ತಿಳಿಯುತ್ತಿಲ್ಲ. ಆದರೆ ಒಂದಂತು ನಿಜ, ರಾಜಕೀಯ ಪಕ್ಷಗಳು ದೇಶಕ್ಕಿಂತ ತಮ್ಮ ಧಾರ್ಮಿಕ ನಂಬಿಕೆಗಳೇ ಶ್ರೇಷ್ಠ ಎಂದರೆ ನಮ್ಮ ಸ್ವಾತಂತ್ರ್ಯ ಗಂಡಾಂತರಕ್ಕೆ ಸಿಲುಕಲಿದೆ, ಎರಡನೇ ಬಾರಿಗೆ ಸಿಲುಕಲಿದೆ, ಬಹುಶಃ ನಾವು ಅದನ್ನು ಶಾಶ್ವತವಾಗಿ ಕಳೆದುಕೊಳ್ಳಲಿದ್ದೇವೆ. ಈ ನಿಟ್ಟಿನಲ್ಲಿ ಇಂತಹ ಸಂಭವನೀಯತೆಯನ್ನು ತಪ್ಪಿಸಲು ನಾವೆಲ್ಲರೂ ತಡೆಗೋಡೆಯಂತೆ ದೃಢನಿಶ್ಚಯದಿಂದಿರಬೇಕಾಗುತ್ತದೆ. ನಮ್ಮ ರಕ್ತದ ಕೊನೆಯ ಹನಿ ಇರುವವರೆಗೂ ನಮ್ಮ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡೇ ತೀರುತ್ತೇವೆ ಎಂಬ ದೃಢಸಂಕಲ್ಪವನ್ನು ನಾವಿಂದು ತಳೆಯಬೇಕಿದೆ.

ಸಂಗ್ರಹ ಮತ್ತು ಅನುವಾದ :ರಘೋತ್ತಮ ಹೊ.ಬ

ಇದನ್ನೂ ಓದಿ-ʼಸಂವಿಧಾನ ಅಪಾಯದಲ್ಲಿದೆ, ಎಚ್ಚರಿಕೆʼ https://peepalmedia.com/article-on-constitution-by-a-narayana/

Related Articles

ಇತ್ತೀಚಿನ ಸುದ್ದಿಗಳು

You cannot copy content of this page