Friday, April 26, 2024

ಸತ್ಯ | ನ್ಯಾಯ |ಧರ್ಮ

ಕಳಚಿದ ಚಿತ್ರರಂಗದ ಹಳೆಯ ಕೊಂಡಿ ದ್ವಾರಕೀಶ್‌  

ಕನ್ನಡ ಚಲಚಿತ್ರರಂಗದ ಹಿರಿಯ ನಟ, ನಿರ್ದೇಶಕ ನಿರ್ಮಾಪಕ, ಕಳ್ಳ ಕುಳ್ಳ ಎಂದೇ ಹೆಸರಾಗಿದ್ದ ದ್ವಾರಕೀಶ್‌ ಅವರು ಇಂದು ನಮ್ಮನ್ನು ಅಗಲಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳತ್ತಿದ್ದ ಅವರಿಗೆ ಅವರಿಗೆ 81 ವರ್ಷ ವಯಸ್ಸಾಗಿತ್ತು. ಕನ್ನಡ ಸಿನಿಮಾ ರಂಗಕ್ಕೆ, ಕನ್ನಡ-ನಾಡು- ನುಡಿ-ಸಂಸ್ಕೃತಿಗೆ ಅವರ ಕೊಟ್ಟ ಕೊಡುಗೆ ಅಪಾರ.

ಕನ್ನಡದ ಕುಳ್ಳ ಎಂದೇ ಜನಪ್ರಿಯರಾದ ದ್ವಾರಕೀಶ್ ರವರು ಆಗಸ್ಟ್ 19-1942 ರಂದು ಹುಣಸೂರು ನಲ್ಲಿ ಶಮಾರಾವ್ ಮತ್ತು ಜಯಮ್ಮರವರಿಗೆ ಜನಿಸಿದರು. ಶಾರದಾ ವಿಲಾಸ್ ಮತ್ತು ಬನುಮಯ್ಯ ಶಾಲೆಯಲ್ಲಿ ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ನಂತರ CPC ಪಾಲಿಟೆಕ್ನಿಕ್‌ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಮುಗಿಸಿದರು. ನಂತರ ಅವರ ಸೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಶುರು ಮಾಡಿದರು. ಮೈಸೂರಿನ ಗಾಂಧೀ ಚೌಕದಲ್ಲಿ ಭಾರತ್ ಆಟೋ ಸ್ಪೇರ್ಸ್ ಎಂಬ ಅಂಗಡಿ ಹೊಂದಿದ್ದ ದ್ವಾರಕೀಶ್ ಸಿನಿಮಾಗಳಲ್ಲಿ ನಟಿಸುವ ಕನಸು ಕಂಡಿದ್ದರು. 1963ರಲ್ಲಿ ವ್ಯಾಪಾರ ಬಿಟ್ಟು ಸಿನೆಮಾ ನಟನೆಯನ್ನು ಆಯ್ದುಕೊಂಡರು. ಸೋದರಮಾವ ಹುಣಸೂರು ಕೃಷ್ಣಮೂರ್ತಿ ಅವರ ಸಹಾಯದಿಂದ ಬಣ್ಣದ ಲೋಕಕ್ಕೆ ಕಾಲಿಟ್ಟರು.

ನಟ ದ್ವಾರಕೀಶ್‌ ಅವರು ಕನ್ನಡ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು ಮಾಡಿದ್ದಾರೆ. ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಅವರನ್ನು ಪರಿಗಣಿಸಿ ಬೆಂಗಳೂರು ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್‌ ನೀಡಿದೆ.

ನಟರಾಗಿ, ನಿರ್ದೇಶಕ, ನಿರ್ಮಾಪಕರಾಗಿ ಹಲವಾರು ಚಿತ್ರಗಳ ಕೊಡುಗೆ ನೀಡಿರುವ ಅವರು ಕನ್ನಡ ಚಿತ್ರರಂಗಕ್ಕೆ ಕಲಾಸೇವೆ ಸಲ್ಲಿಸಿದ್ದಾರೆ. ಡಾ. ವಿಷ್ಣುವರ್ಧನ್‌, ಡಾ. ರಾಜ್‌ಕುಮಾರ್‌ ಹಾಗೂ ಅಂಬರೀಶ್‌ರಂತಹ ಮೇರು ನಟರೊಂದಿಗೆ ಹಿರಿಯ ತೆರೆಯಲ್ಲಿ ಮಿಂಚಿರುವ ನಟ ದ್ವಾರಕೀಶ್‌ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಬರೋಬ್ಬರಿ 40ಕ್ಕೂ ಹೆಚ್ಚು ಸಿನಿಮಾಗಳ ನಿರ್ಮಾಣ ಮಾಡಿ ಸೈ ಎನಿಸಿಕೊಂಡವರು.

ದಾಖಲೆಗಳ ನಿರ್ಮಾತೃ

ಭಾರತದ ಹೊರಗೆ ಅಂದರೆ ವಿದೇಶಗಳಲ್ಲಿ  ಕನ್ನಡ ಚಲನ ಚಿತ್ರಗಳ ಚಿತ್ರೀಕರಣ ಮಾಡಿದ ನಿರ್ಮಾಪಕರು ಈ ದ್ವಾರಕೀಶ್‌, ಅವರು ನಿರ್ಮಿಸಿದ ಆಪ್ತಮಿತ್ರ ಕನ್ನಡ ಚಿತ್ರರಂಗದಲ್ಲಿ ಆಪ್ತಮಿತ್ರ ದಾಖಲೆ ನಿರ್ಮಿಸಿದೆ. ಬೆಂಗಳೂರಿನ ಸಂತೋಷ್ ಮತ್ತು ಮೈಸೂರಿನ ರಣಜಿತ್‌ನಲ್ಲಿ ಎರಡು ಚಿತ್ರಮಂದಿರಗಳಲ್ಲಿ ಒಂದು ವರ್ಷ ಪ್ರದರ್ಶನವನ್ನು ಆಚರಿಸಿದ ಮೊದಲ ಕನ್ನಡ ಚಲನಚಿತ್ರ ಇದಾಗಿದೆ. ಪ್ರತಿದಿನ ನಾಲ್ಕು ಪ್ರದರ್ಶನಗಳೊಂದಿಗೆ ಒಂದು ವರ್ಷ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿದ ಮೊದಲ ಕನ್ನಡ ಚಲನಚಿತ್ರ ಎಂದು ಆಪ್ತಮಿತ್ರ ಹೆಸರು ಮಾಡಿದೆ.

ದ್ವಾರಕೀಶ್ 1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ದ್ವಾರಕೀಶ್, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಕನ್ನಡ ಸಿನಿ ಅಭಿಮಾನಿಗಳ ಹೃದಯದಲ್ಲಿ ಕುಳ್ಳನಾಗಿ, ಕಿಟ್ಟಿಯಾಗಿ ವಿಶೇಷ ಸ್ಥಾನ ಗಿಟ್ಟಿಸಿಕೊಂಡಿದ್ದರು. ದಿವಂಗತ ನಟ ವಿಷ್ಣುವರ್ಧನ್ ಮತ್ತು ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಎಂದೇ ಪ್ರಸಿದ್ಧವಾಗಿತ್ತು. ಇವರಿಬ್ಬರೂ ಉತ್ತಮ ಸ್ನೇಹಿತರಾಗಿದ್ದು, ದ್ವಾರಕೀಶ್ ವಿಷ್ಣು ಅಭಿನಯದ ಬಹುತೇಕ ಚಿತ್ರಗಳಲ್ಲಿ ತೆರೆ ಹಂಚಿಕೊಂಡಿದ್ದರು.

 1966ರಲ್ಲಿ ಮಮತೆಯ ಬಂಧನ ಸಿನಿಮಾವನ್ನು ದ್ವಾರಕೀಶ್ ಅವರು ಮತ್ತಿಬ್ಬರು ನಿರ್ಮಾಪಕರ ಜೊತೆ ಸೇರಿ ತುಂಬಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ್ದರು. 1969ರಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಎಂಬ ಸಿನಿಮಾಗೆ ಬಂಡವಾಳ ಹಾಕುವ ಮೂಲಕ ಸ್ವತಂತ್ರ ನಿರ್ಮಾಪಕರಾಗಿ ಯಶಸ್ವಿಯಾದರು. 1985ರಲ್ಲಿ ನೀ ಬರೆದ ಕಾದಂಬರಿ ಎಂಬ ಚಿತ್ರಕ್ಕೆ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟರು. ಇದು ಸೂಪರ್‌ ಹಿಟ್ ಆಗಿತ್ತು. ಕ್ಯಾಮೆರಾ ಹಿಂದೆಯೂ ದ್ವಾರಕೀಶ್ ಯಶಸ್ವಿಯಾದರು.ಡಾನ್ಸ್ ರಾಜ ಡಾನ್ಸ್, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ ಸೇರಿ ಸುಮಾರು  ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

ವಿಷ್ಣು ವರ್ಧನ್ ಮತ್ತು ದ್ವಾರಕೀಶ್ ಜೋಡಿಯಾಗಿ ನಟಿಸಿದ ಸೂಪರ್‌ ಹಿಟ್ ಚಿತ್ರಗಳ ಸಾಲೇ ಇದೆ. ಆಪ್ತಮಿತ್ರ, ಕಳ್ಳ ಕುಳ್ಳ, ಕಿಲಾಡಿಗಳು, ಸಿಂಗಾಪುರದಲ್ಲಿ ರಾಜ ಕುಳ್ಳ, ಕಿಟ್ಟು ಪುಟ್ಟು ರಾಯರು ಬಂದರು ಮಾವನ ಮನೆಗೆ, ಆಪ್ತಮಿತ್ರ ಮುತಾದವು ಜನ್ಮರಹಸ್ಯ, ಮಂಕುತಿಮ್ಮ,ಪೆದ್ದ ಗೆದ್ದ,ಕಿಟ್ಟು ಪುಟ್ಟು, , ಮನೆ ಮನೆ ಕಥೆ, ಆಫ್ರಿಕಾದಲ್ಲಿ ಶೀಲಾ, ಭಲೇ ಹುಡುಗ, ಬಂಗಾರದ ಮನುಷ್ಯ, ಗಲಾಟೆ ಸಂಸಾರ,ಪ್ರಚಂಡ ಕುಳ್ಳ, , ಗುರುಶಿಷ್ಯರು, ವಿಷ್ಣುವರ್ಧನ, ಮುದ್ದಿನ ಮಾವ,  ಮನೆಗೆ, ಆಟಗಾರ, ಚೌಕ, ಪ್ರೀತಿ ಮಾಡು ತಮಾಷೆ ನೋಡು ಮುಂತಾದ ಚಿತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಅದರಲ್ಲಿಯೂ ಗುರು ಶಿಷ್ಯರು ಚಿತ್ರದಲ್ಲಿ ಇವರ ಅಭಿನಯ ಇಂದಿಗೂ ಕನ್ನಡ ಚಿತ್ರ ರಸಿಕರ ಮನಸ್ಸಿನಲ್ಲಿದ್ದು, ಚಿತ್ರದ ಕೆಲವು ದೃಶ್ಯಗಳನ್ನು ನೆನಪಿಸಿಕೊಂಡು ಬಿದ್ದು ಬಿದ್ದು ನಗುವವರಿದ್ದಾರೆ.  

ದ್ವಾರಕೀಶ್  ಕೆಲವು ಸಿನಿಮಾಗಳ  ಗಲ್ಲಾಪೆಟ್ಟಿಗೆಯ ವೈಫಲ್ಯಗಳಿಂದ ದೊಡ್ಡ ನಷ್ಟವಾಗಿ ತೀವ್ರ  ಆರ್ಥಿಕ ಸಮಸ್ಯೆ ಎದುರಿಸಿದರು.ಇಷ್ಟೆಲ್ಲಾ ವೈಫಲ್ಯಗಳ ನಡುವೆಯೂ ದ್ವಾರಕೀಶ್ ಹತಾಶರಾಗಲಿಲ್ಲ. ಕನ್ನಡ ಚಿತ್ರರಂಗಕ್ಕೆ ಹೊಸ ಮುಖಗಳನ್ನು ಪರಿಚಯಿಸುವ ಸಿನಿಮಾಗಳನ್ನು ಮಾಡುವುದನ್ನು ಮುಂದುವರೆಸಿದರು. ನಿರ್ಮಾಪಕರಾಗಿ ಅನೇಕ ಹೊಸಬರನ್ನು ಚಿತ್ರರಂಗಕ್ಕೆ ಕರೆತಂದಿದ್ದಾರೆ. ನಟ-ನಟಿಯರಷ್ಟೇ ಅಲ್ಲ- ಹೊಸ ನಿರ್ದೇಶಕರು ಮತ್ತು ಇತರ ತಂತ್ರಜ್ಞರಿಗೂ ಅವಕಾಶ ಕೊಟ್ಟಿದ್ದಾರೆ. ಅವರೆಲ್ಲರೂ ಅವರನ್ನು ತಮ್ಮ “ಗಾಡ್ ಫಾದರ್” ಎಂದು ಪರಿಗಣಿಸುತ್ತಾರೆ.

Related Articles

ಇತ್ತೀಚಿನ ಸುದ್ದಿಗಳು