ನವದೆಹಲಿ: ಕಾಂಗ್ರೆಸ್ ಸೇರಿದಂತೆ ವಿರೋಧಪಕ್ಷಗಳು ಜಾರಿ ನಿರ್ದೇಶನಾಲಯವನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಲೋಕಸಭೆ ಅಧಿವೇಶನದ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ಇಂದು ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ, ಇಡಿ ನಡೆಸುತ್ತಿರುವ ರಾಜಕೀಯ ಪ್ರೇರಿತ ಕಾರ್ಯಾಚರಣೆಗಳ ಕುರಿತು ಪ್ರಶ್ನಿಸಿದರು. ಅಲ್ಲದೆ ಬೆಲೆಯೇರಿಕೆಯ ಕುರಿತು ಕೆಲವು ಸದಸ್ಯರು ಜೋರು ಧ್ವನಿಯಲ್ಲಿ ಗದ್ದಲವೆಬ್ಬಿಸಿದರು. ಕಾಂಗ್ರೆಸ್ ಸದಸ್ಯರು, ಘೋಷಣೆಗಳನ್ನು ಕೂಗುತ್ತ ಸದನದ ಬಾವಿಗೆ ಇಳಿದು ಪ್ರತಿಭಟಿಸಿದರು. ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ, ಸದಸ್ಯರು ತಮ್ಮ ಆಸನಗಳಿಗೆ ತೆರಳುವಂತೆ ವಿನಂತಿಸಿದರೂ ಪ್ರತಿಭಟನೆ ನಿಲ್ಲಲಿಲ್ಲ. ನಂತರ ಸ್ಪೀಕರ್ ಸದನವನ್ನು ಮಧ್ಯಾಹ್ನ 2 ಗಂಟೆಗೆ ಪುನಃ ಸೇರುವಂತೆ ಘೋಷಿಸಿ, ಕಲಾಪ ಮುಂದೂಡಿದರು. ನಿನ್ನೆಯಷ್ಟೆ ಜಾರಿ ನಿರ್ದೇಶನಲಾಯವು ಕಾಂಗ್ರೆಸ್ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಕಚೇರಿ ಆರವಣದಲ್ಲಿರುವ ಯಂಗ್ ಇಂಡಿಯಾ ಕಂಪೆನಿಗೆ ಬೀಗ ಜಡಿದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.