Monday, July 28, 2025

ಸತ್ಯ | ನ್ಯಾಯ |ಧರ್ಮ

ಕೇಜ್ರಿವಾಲ್‌ಗೆ ಮತ್ತೆ ನೋಟೀಸ್‌ ನೀಡಿದ ಇಡಿ

ಇದೀಗ ರದ್ದಾಗಿರುವ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಕರೆದಿದೆ.

ಡಿಸೆಂಬರ್ 21ರಂದು ಏಜೆನ್ಸಿಯ ಮುಂದೆ ಹಾಜರಾಗುವಂತೆ ನೋಟೀಸಿನಲ್ಲಿ ತಿಳಿಸಲಾಗಿದೆ. ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಕಳುಹಿಸಿದ್ದು ಇದು ಎರಡನೇ ಬಾರಿ. ನವೆಂಬರ್ 2ರಂದು ತನ್ನ ಮುಂದೆ ಹಾಜರಾಗುವಂತೆ ಇಡಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೇಳಿದೆ. ಆದರೆ ಆಮ್ ಆದ್ಮಿ ಪಕ್ಷದ ಮುಖ್ಯಸ್ಥರು ಸಮನ್ಸ್ ಅನ್ನು ನಿರ್ಲಕ್ಷಿಸಿದ್ದರು, ಮತ್ತು ಅವರು ಅದನ್ನು ಇದು ಕಾನೂನುಬಾಹಿರ ಮತ್ತು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದರು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅರವಿಂದ್ ಕೇಜ್ರಿವಾಲ್ ಅವರ ಪಕ್ಷದ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಅವರನ್ನು ಕೇಂದ್ರ ತನಿಖಾ ಸಂಸ್ಥೆಗಳು ಬಂಧಿಸಿವೆ. ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನು ಕೂಡ ವಿಚಾರಣೆಗೆ ಒಳಪಡಿಸಿತ್ತು. ದೆಹಲಿಯ ಸಿಬಿಐ ಕೇಂದ್ರ ಕಚೇರಿಯಲ್ಲಿ ಒಂಬತ್ತು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅರವಿಂದ್ ಕೇಜ್ರಿವಾಲ್, ತನಿಖಾ ಸಂಸ್ಥೆ ತಮಗೆ 56 ಪ್ರಶ್ನೆಗಳನ್ನು ಕೇಳಿತ್ತು ಎಂದು ಮಾಹಿತಿ ನೀಡಿದ್ದರು. ಒಂಬತ್ತೂವರೆ ಗಂಟೆಗಳ ಕಾಲ ಸಿಬಿಐ ವಿಚಾರಣೆ ನಡೆಸಿದೆ. ಅಂದು ಎಲ್ಲಾ ಪ್ರಶ್ನೆಗಳಿಗೆ ಕೇಜ್ರಿವಾಲ್ ಉತ್ತರಿಸಿದ್ದರು.

ಆರೋಪಿತ ಮದ್ಯ ಹಗರಣವು ಸುಳ್ಳಾಗಿದ್ದು, ಇದೊಂದು ಸಂಚಿನ ರಾಜಕಾರಣದ ಭಾಗವೆಂದು ಅವರು ಆರೋಪಿಸಿದ್ದಾರೆ. ಆಮ್‌ ಆದ್ಮಿ ಪಕ್ಷವನ್ನು ಮುಗಿಸುವ ರಾಜಕೀಯ ಸಂಚೇ ಈ ಹಗರಣದ ಆರೋಪವಾಗಿದ್ದು ತಾವು ಇದಕ್ಕೆಲ್ಲ ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ. ಜನರು ನಮ್ಮೊಂದಿಗಿದ್ದು ಯಾವ ಶಕ್ತಿಗಳೂ ನಮ್ಮನ್ನು ನಾಶ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page