ಬೆಂಗಳೂರು: ಪ್ರಸ್ತುತ ದಿನಮಾನಗಳಲ್ಲಿ ದಲಿತ ದಮನಿತರಿಗೆ ನೀಡಿದ್ದ ಸವಲತ್ತುಗಳನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದು, ಇದಕ್ಕೆ ಏಕೈಕ ಪರಿಹಾರ ಡಾ.ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಪಡೆಯುವುದು ಮತ್ತು ಹೋರಾಟ ಮಾಡುವುದು ಎಂದು ಹೋರಾಟಗಾರ್ತಿ ರಮಾಬಾಯಿ ಅಂಬೇಡ್ಕರ್ ಹೇಳಿದರು.
ನ್ಯಾಷನಲ್ ಕಾಲೇಜು ಮೈದಾನದಲ್ಲಿ ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅಂಬೇಡ್ಕರರ ಪರಿನಿರ್ವಾಣದ ದಿನ. ಅವರು ಎಲ್ಲರಿಗೂ ಮತದಾನದ ಹಕ್ಕು ನೀಡಿದ್ದಾರೆ. ಬಡವರಿಗೆ, ಬಲ್ಲಿದರಿಗೆಲ್ಲರಿಗೂ ಒಂದು ಮತದಾನದ ಹಕ್ಕು ನೀಡಿದ್ದಾರೆ. ಅದನ್ನು ಸಮರ್ಪಕವಾಗಿ ಬಳಸುವುದು ನಮ್ಮ ಜವಾಬ್ದಾರಿ ಎಂದರು.
ಮಹಿಳಾ ಶಿಕ್ಷಣದ ಬಗ್ಗೆ ಬಾಬಾ ಸಾಹೇಬರು ಹೇಳಿದ್ದಾರೆ. ಮಹಿಳಾ ಶಿಕ್ಷಣದಿಂದ ಇಡೀ ಸಮಾಜದ ಶಕ್ತಿಯಾಗುತ್ತಾಳೆ ಎಂದರು. ಒಂದು ಸಮಾಜದ ಅಭಿವೃದ್ದಿ ಅಲ್ಲಿನ ಮಹಿಳೆಯರ ಶಿಕ್ಷಣದಿಂದ ಅಳೆಯಬೇಕು ಎಂದರು. ಹೀಗಾಗಿ ನಾವು ಬಾಬಾ ಸಾಹೇಬರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುವುದೆಂದರೆ ಶಿಕ್ಷಣಕ್ಕಾಗಿ ಹೋರಾಡುವುದಾಗಿದೆ ಎಂದು ಹೇಳಿದರು.
ನೀವು ಬಾಬಾ ಸಾಹೇಬರು ಹೇಳಿದಂತೆ ನಿಮ್ಮ ನಾಯಕರನ್ನು ಆಯ್ಕೆ ಮಾಡಿಕೊಂಡು ಸಂಘಟನೆ ಕಟ್ಟಿ, ಸಂಘರ್ಷ ಮಾಡಬೇಕು. ಇಂದು ಕೇಂದ್ರ ಸರ್ಕಾರ ದಲಿತ ದಮನಿತರ ವಿದ್ಯಾರ್ಥಿ ವೇತನ ಕಿತ್ತುಕೊಳ್ಳುತ್ತಿದ್ದಾರೆ. ಶಿಕ್ಷಣ ಕಿತ್ತುಕೊಳ್ಳುತ್ತಿದ್ದಾರೆ. ಹಾಗಾಗಿ ಬಾಬಾ ಸಾಹೇಬರು ಹೇಳಿದಂತೆ ಹೋರಾಟವೇ ಮುಖ್ಯವಾಗಿದೆ ಎಂದರು.
ಸಂವಿಧಾನವನ್ನು ಇಂಚಿಂಚೆ ಕಸಿಯಲಾಗುಗತ್ತಿದೆ. ಸವಲತ್ತುಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ತಿಳಿಯಬೇಕು. ಅದರ ವಿರುದ್ಧ ಐಕ್ಯ ಹೋರಾಟ ನಡೆಸಬೇಕು. ಇದಕ್ಕೆ ಅನೇಕ ದಲಿತ ಸಂಘಟನೆಗಳು ಒಂದಾಗುತ್ತಿರುವುದು ಭರವಸೆ ಮೂಡಿಸಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಬಹು ಸಂಖ್ಯೆಯಲ್ಲಿ ಜನರು ಸೇರಿರುವುದನ್ನು ನೋಡಿ ಸಂತೋಷವಾಗಿದೆ. ನಾವು ಸಂಘರ್ಷದ ಹಾದಿ ತುಳಿಯಬೇಕಿದೆ. ಡಾ. ಆನಂದ್ ತೇಲ್ತುಂಬ್ದೆಯವರು ಜೈಲಿನಲ್ಲಿದ್ದಾಗ ನೀವೆಲ್ಲ ಹೋರಾಟ ಮಾಡಿ ನಮ್ಮ ಜೊತೆಯಲ್ಲಿದ್ದೀರಿ. ಜೊತೆಗೆ ನನ್ನನ್ನು ಇಲ್ಲಿ ಕರೆಸಿ ಗೌರವ ಕೊಟ್ಟಿದ್ದೀರಿ ಎಂದು ಧನ್ಯವಾದಗಳನ್ನು ತಿಳಿಸಿದರು.