Home ದೇಶ ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆ ಎಫೆಕ್ಟ್: ಪೋಟ್ಯಾಷ್, ಕಾಂಪ್ಲೆಕ್ಸ್ ಗೊಬ್ಬರ ಬೆಲೆ ದುಪ್ಪಟ್ಟು ಏರಿಕೆ, ರೈತರ ಆತಂಕ

ಪೆಟ್ರೋಲ್ ಡೀಸೆಲ್ ಬೆಲೆಯೇರಿಕೆ ಎಫೆಕ್ಟ್: ಪೋಟ್ಯಾಷ್, ಕಾಂಪ್ಲೆಕ್ಸ್ ಗೊಬ್ಬರ ಬೆಲೆ ದುಪ್ಪಟ್ಟು ಏರಿಕೆ, ರೈತರ ಆತಂಕ

0

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಬೆಲೆಯೇರಿಕೆಯ ಪರಿಣಾಮವಾಗಿ ಈಗ ಅದರ ನೇರ ಹೊಡೆತ ರಾಜ್ಯದ ರೈತ ಸಮುದಾಯಕ್ಕೂ ತಟ್ಟಿದೆ. ರಸಗೊಬ್ಬರಗಳ ಕೊರತೆ ಹಾಗೂ ದಿಢೀರ್ ದರ ಏರಿಕೆಯಿಂದ ಮುಂಗಾರು ಬಿತ್ತನೆಗೆ ಸಜ್ಜಾಗಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಿಶೇಷವಾಗಿ ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳ ಬೆಲೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ಬಾರಿ ಏರಿಕೆಯಾಗಿದೆ. ಮೇ ಮೊದಲ ವಾರದಲ್ಲಿ 50 ಕೆ.ಜಿ. ಚೀಲಕ್ಕೆ ₹1,400 ಇದ್ದ ದರ ಇದೀಗ ₹1,700ಕ್ಕೆ ತಲುಪಿದ್ದು, ಹೊಸ ದಾಸ್ತಾನುಗಳ ಬೆಲೆ ₹2,200ರವರೆಗೆ ಏರಿಕೆಯಾಗಿದೆ ಎಂದು ಗೊಬ್ಬರ ವಿತರಕರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಯೂರಿಯಾ ಹಾಗೂ ಡಿಎಪಿ (DAP) ರಸಗೊಬ್ಬರಗಳ ಅಂತರರಾಷ್ಟ್ರೀಯ ದರದಲ್ಲೂ ಏರಿಕೆಯಾಗಿದ್ದರೂ, ಕೇಂದ್ರ ಸರ್ಕಾರ ನೀಡುತ್ತಿರುವ ಸಬ್ಸಿಡಿಯಿಂದಾಗಿ ಸದ್ಯಕ್ಕೆ ಅವುಗಳ ಬೆಲೆ ನಿಯಂತ್ರಣದಲ್ಲಿದೆ. ಆದರೆ ಮುಕ್ತ ಮಾರುಕಟ್ಟೆಯ ಏರಿಳಿತ ಮುಂದುವರಿದರೆ ಸರ್ಕಾರಕ್ಕೆ ಈ ಸಬ್ಸಿಡಿ ಭಾರವನ್ನು ದೀರ್ಘಕಾಲ ನಿರ್ವಹಿಸುವುದು ಸವಾಲಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ಗೊಬ್ಬರಗಳಿಗೂ ಸಬ್ಸಿಡಿ ದೊರೆಯುತ್ತಿದೆಯಾದರೂ, ಅದು ನಿಗದಿತ ಮಿತಿಯಲ್ಲಿರುವುದರಿಂದ ಬೆಲೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುವ ಸಂದರ್ಭಗಳಲ್ಲಿ ಸಬ್ಸಿಡಿ ಪ್ರಮಾಣ ಹೆಚ್ಚಳವಾಗದ ಕಾರಣ, ವಿವಿಧ ಕಂಪನಿಗಳು ತಮ್ಮದೇ ದರ ನಿಗದಿ ಮಾಡುತ್ತಿವೆ. ಇದರಿಂದ ರೈತರ ಮೇಲಿನ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗಿದೆ.

ಮುಂಗಾರು ಹಂಗಾಮು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯಕ್ಕೆ ರಸಗೊಬ್ಬರ ಅತ್ಯಗತ್ಯವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಅಭಾವ ಹಾಗೂ ಕೈಗೆಟುಕದ ದರದಿಂದ ರೈತರು ತತ್ತರಿಸಿದ್ದಾರೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಹೆಚ್ಚುವರಿ ಸಬ್ಸಿಡಿ ಘೋಷಿಸಿ ರೈತರಿಗೆ ನೆರವಾಗಬೇಕು ಎಂಬ ಒತ್ತಾಯ ರೈತ ಸಂಘಟನೆಗಳಿಂದ ಕೇಳಿಬರುತ್ತಿದೆ.

You cannot copy content of this page

Exit mobile version