Friday, June 20, 2025

ಸತ್ಯ | ನ್ಯಾಯ |ಧರ್ಮ

ಮೋದಿಯ ಹಾದಿಯಲ್ಲಿ ಚುನಾವಣಾ ಆಯೋಗ: ಪತ್ರಿಕಾ ಗೋಷ್ಟಿ ನಡೆಸುವಂತೆ ಪತ್ರಕರ್ತರ ಆಗ್ರಹ

ಹೊಸದೆಹಲಿ: ಸಾರ್ವತ್ರಿಕ ಚುನಾವಣೆಯ ಮೂರು ಹಂತಗಳು ಪೂರ್ಣಗೊಂಡಿದ್ದರೂ ಚುನಾವಣಾ ಆಯೋಗ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಿಲ್ಲ ಎಂದು ಐದು ಪತ್ರಕರ್ತರ ಸಂಘಗಳು ಟೀಕಿಸಿವೆ.

ಈ ನಿಟ್ಟಿನಲ್ಲಿ ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಭಾರತೀಯ ಮಹಿಳಾ ಪತ್ರಿಕಾ ನಿಗಮ, ಪ್ರೆಸ್ ಅಸೋಸಿಯೇಷನ್, ವಿದೇಶಿ ವರದಿಗಾರರ ಕ್ಲಬ್ ಮತ್ತು ದೆಹಲಿ ಪತ್ರಕರ್ತರ ಒಕ್ಕೂಟವು ಜಂಟಿಯಾಗಿ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿವೆ.

ಕಳೆದ ಮೂರು ಹಂತದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ನಿಖರ ಸಂಖ್ಯೆಯನ್ನು ಚುನಾವಣಾ ಆಯೋಗ ಇನ್ನೂ ಬಹಿರಂಗಪಡಿಸಿಲ್ಲ ಎಂದು ಸಂಘಗಳು ತಮ್ಮ ಪತ್ರದಲ್ಲಿ ನೆನಪಿಸಿವೆ. ಈ ಹಿಂದೆ ಈ ರೀತಿ ಆಗಿರಲಿಲ್ಲ ಎಂದು ಅವು ಆಘಾತ ಮತ್ತು ಅಚ್ಚರಿ ವ್ಯಕ್ತಪಡಿಸಿವೆ. ಈ ಬೆಳವಣಿಗೆಗಳು ಜನರ ಮನಸ್ಸಿನಲ್ಲಿ ನಿಷ್ಪಕ್ಷಪಾತ ಚುನಾವಣೆಯ ಬಗ್ಗೆ ಆತಂಕ ಮೂಡಿಸಿವೆ.

ʼ2019ರ ಚುನಾವಣೆವರೆಗೂ ಪ್ರತಿ ಹಂತದ ಮತದಾನ ಮುಗಿದ ಬಳಿಕ ಪತ್ರಿಕಾಗೋಷ್ಠಿ ಆಯೋಜಿಸುವುದು ವಾಡಿಕೆಯಾಗಿತ್ತು. ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗದಿಂದ ಮತದಾನದ ದಿನದಂದು ಏನಾಯಿತು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ನಾಗರಿಕರಿಗೆ ಇದೆ. ಮತದಾನದ ನಂತರ ಅವರ ಅನುಮಾನಗಳನ್ನು ನಿವಾರಿಸಲು ಪತ್ರಿಕಾಗೋಷ್ಠಿ ನಡೆಸಲಾಗುತ್ತಿತ್ತು. ಇದರಿಂದ ಪತ್ರಿಕೆಗಳ ಓದುಗರಿಗೆ ಯಾವುದೇ ತಪ್ಪುಗಳಾಗುವ ಸಾಧ್ಯತೆ ಇಲ್ಲದೇ ಮಾಹಿತಿ ಸಿಗುತ್ತಿತ್ತು’ ಎಂದು ಪತ್ರಕರ್ತರ ಸಂಘಗಳು ಪತ್ರದಲ್ಲಿ ವಿವರಿಸಿವೆ.

ಪ್ರತಿ ಹಂತದ ಮತದಾನದ ನಂತರ ಪತ್ರಿಕಾಗೋಷ್ಠಿ ನಡೆಸಿ ಎಷ್ಟು ಮತ ಚಲಾವಣೆಯಾಗಿದೆ, ಶೇಕಡವಾರು ಮತದಾನ ಮುಂತಾದ ಎಲ್ಲ ವಿವರ ನೀಡಬೇಕು ಎಂದು ಆಗ್ರಹಿಸಿದರು. ಜನರು ಚುನಾವಣಾ ವ್ಯವಸ್ಥೆಯಲ್ಲಿ ವಿಶ್ವಾಸ ಹೊಂದಲು ಇಂತಹ ಪಾರದರ್ಶಕತೆ ಅಗತ್ಯ ಎಂದು ಪತ್ರದ್ಲಲಿ ಒತ್ತಿ ಹೇಳಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page