Friday, April 26, 2024

ಸತ್ಯ | ನ್ಯಾಯ |ಧರ್ಮ

ವೆಂಕಟೇಶ್ ಮೇಲೆ ಆನೆ ದಾಳಿ ; ಪ್ರೋಟೋಕಾಲ್ ಉಲ್ಲಂಘಿಸಿತೇ ಅರಣ್ಯ ಇಲಾಖೆ?

ಅರಣ್ಯ ಇಲಾಖೆಯ ಬೇಜಾವಬ್ದಾರಿಯಿಂದ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಹಳ್ಳಿಯೂರಿನಲ್ಲಿ ಶಾರ್ಪ್‌ ಶೂಟರ್‌ ವೆಂಕಟೇಶ್ವರ್‌ ಅವರು ಅಗಸ್ಟ್‌ 31 ರಂದು ಆನೆ ದಾಳಿಗೆ ಒಳಗಾಗಿ ಮೃತರಾಗಿದ್ದಾರೆ. ಅರೆವಳಿಕೆ ಚುಚ್ಚುಮದ್ದು ನೀಡುವ ಶಾರ್ಪ್‌ ಶೂಟರ್ ಆಗಿ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ ವೆಂಕಟೇಶ್‌ ಅವರಿಗೆ ತಮ್ಮ ವೃತ್ತಿಯೇ ಮುಳುವಾಯಿತು.

ಆಗಿದ್ದೇನು?
ಸಕಲೇಶಪುರ ವ್ಯಾಪ್ತಿಯಲ್ಲಿ ನಡೆದ ಕಾಡಾನೆಗಳ ಕಾಳಗದಲ್ಲಿ ಸುಮಾರು ನಲ್ವತ್ತು ವರ್ಷ ಪ್ರಾಯದ ಆನೆ ಭೀಮನಿಗೆ ಗಾಯವಾಗಿತ್ತು. ಚಿಕಿತ್ಸೆ ನೀಡಿದರೂ ಗಾಯ ಹೆಚ್ಚುತ್ತಲೇ ಇದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳ ಕೋರಿಕೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿ) ಅನುಮತಿ ನೀಡಿದ್ದರು.

ಅಗಸ್ಟ್‌ 31, ಗುರುವಾರ ಬೆಳಿಗ್ಗೆ ಆಲೂರು ತಾಲ್ಲೂಕಿನ ಹಳ್ಳಿಯೂರಿನಲ್ಲಿ ಕಂಡು ಬಂದ ಕಾಡಾನೆ ಭೀಮನಿಗೆ ಚಿಕಿತ್ಸೆ ನೀಡಲು  ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದರು. ಇತರ ನಾಲ್ಕು ಸಾಕು ಆನೆಗಳ ಜೊತೆಗೆ ಭೀಮನಿಗೆ ಅರೆವಳಿಕೆ ನೀಡಲು ಖ್ಯಾತ ಶಾರ್ಪ್‌ ಶೂಟರ್‌ ವೆಂಕಟೇಶ್‌ ಆವರನ್ನೂ ಕೆರಸಿಕೊಳ್ಳಲಾಗಿತ್ತು. 

ಮಧ್ಯಾಹ್ನ ಸುಮಾರು 12 ಗಂಟೆಗೆ ಕಾರ್ಯಾಚರಣೆ ನಡೆಯುತ್ತಿದ್ದ ಸ್ಥಳಕ್ಕೆ ಬೇಟಿ ನೀಡಿದ ವೆಂಕಟೇಶ್ ಭೀಮನಿಗೆ ಎರಡು ಬಾರಿ ಅರವಳಿಕೆ ಚುಚ್ಚುಮದ್ದನ್ನು ಶೂಟ್ ಮಾಡಿದ್ದಾರೆ. ಅರೆವಳಿಕೆ ನೀಡಿದ ತಕ್ಷಣ ಹಿಂದೆ ತಿರುಗಿ ವೆಂಕಟೇಶ್‌ ಆವರ ಮೇಲೆ ದಾಳೊ ಮಾಡಿದೆ. ಈ ಸಂದರ್ಭದಲ್ಲಿ ಹೊಟ್ಟೆ, ತಲೆ, ಕಾಲಿಗೆ ಗಾಯಗಳಾಗಿ, ತಕ್ಷಣ ವೆಂಕಟೇಶ್‌ ಅವನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅದೇ ದಿನ ವೆಂಕಟೇಶ್‌ ನಿಧನ ಹೊಂದಿದರು.

ಅರಣ್ಯ ಇಲಾಖೆಯ ಬೇಜಾವಬ್ದಾರಿಗೆ ವೆಂಕಟೇಶ್‌ ಜೀವ ಬಲಿ!
ಆದರೆ ಅಗಸ್ಟ್‌ 31 ರಂದು ನಡೆದೆ ಕಾರ್ಯಾಚರಣೆಯಲ್ಲಿ ಒಂದು ಹಿಂದೆ ಅಪಾಯಕಾರಿಯಲ್ಲ ಎಂದು ಊಹಿಸಿಕೊಂಡು, ಭೀಮಾ ಆನೆಯನ್ನು ಹಿಡಿಯಲು ಯೋಜನೆ ಹಾಕಲಾಗಿತ್ತು. ಈ ನಿರ್ಲಕ್ಷ್ಯದಿಂದಲೇ ಆನೆ ಯಾರೂ ಭಾವಿಸಿರದಂತೆ ವೆಂಕಟೇಶ್‌ ಆವರ ಮೇಲೆ ಧಾಳಿ ಮಾಡಿದೆ. ಈ ಸಂದರ್ಭದಲ್ಲಿ ವೆಂಕಟೇಶ್‌ ಅವರಿಗೆ ಓಡಲಾಗದೆ ಆನೆ ಧಾಳಿಗೆ ಒಳಗಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಆನೆಗೆ ಯಾವ ಅರೆವಳಿಕೆ ನೀಡಲಾಗಿತ್ತು ಎಂಬುದು ತಿಳಿದಿಲ್ಲ. ಅಲ್ಲದೇ ನಿವೃತ್ತರಾಗಿರುವ ವೆಂಕಟೇಶ್‌ ಅವರ ವಯಸ್ಸು ಹಾಗೂ ದೈಹಿಕ ಬಲವನ್ನು ಗಣನೆಗೆ ತೆಗೆದುಕೊಳ್ಳದೆ ಅರಣ್ಯ ಇಲಾಖೆ ಅವರನ್ನು ಈ ಕೆಲಸಕ್ಕೆ ಇಳಿಸಿದೆ. ಅಲ್ಲದೇ, ಆನೆ ಕಾರ್ಯಾಚರಣೆಯ ಸಂದರ್ಭದಲ್ಲಿ ಆ ಪ್ರದೇಶ ಸೂಕ್ತವೇ ಎಂಬುನ್ನು ಗಮನಿಸಿದಂತೆ ತೋರುತ್ತಿಲ್ಲ. ಅರಣ್ಯ ಇಲಾಖೆ ಆನೆಗಳನ್ನು ಹಿಡಿಯಲು ಇರುವ ಕಾರ್ಯಸೂಚಿಯನ್ನೂ ಸಹ ಉಲ್ಲಂಘಿಸಿದ್ದು ಸ್ಪಷ್ಟವಾಗಿದೆ.

ಆನೆಗಳಿಗೆ ಅರೆವಳಿಕೆ ನೀಡಿ ಅವುಗಳನ್ನು ಹಿಡಿಯಲು ಕ್ರಮಗಳಿವೆ. ಇಲ್ಲಿ ಆನೆಯನ್ನು ಆಯ್ಕೆ ಮಾಡಿ ಗುರುತಿಸಬೇಕು. ನಂತರ ಅದರ ಆರೋಗ್ಯ ಮತ್ತು ಶಾರೀರಿಕ ಲಕ್ಷಣಗಳನ್ನು ನೋಡಬೇಕು. ಅದರ ಆವಾಸಸ್ಥಾನದ ಪರಿಸರ ಮತ್ತು ಭೌತಿಕ ಲಕ್ಷಣಗಳನ್ನು ಅರ್ಥಮಾಡಿಕೊಳ್ಳಬೇಕು. ನಂತರ ಸೂಕ್ತವಾದ ಔಷಧದ ಆಯ್ಕೆ ಮತ್ತು ಎಷ್ಟು ಡೋಸ್‌ ನೀಡಬೇಕು ಎಂಬುದನ್ನು ನಿರ್ಧರಿಸಬೇಕು.  ಸೂಕ್ತವಾದ ರಿಮೋಟ್ ಇಂಜೆಕ್ಷನ್ ಡಿವೈಸ್‌ ಆರಿಸಿ ರಿಮೋಟ್ ಡ್ರಗ್ ಡೆಲಿವರಿ ಸಿಸ್ಟಂ ಮೂಲಕ ವ್ಯವಸ್ಥೆಯ ಮೂಲಕ ಗುರಿ ಇಡಬೇಕು. ಆನೆಯನ್ನು ಟ್ರ್ಯಾಕ್‌ ಮಾಡಿ ಅರಿವಳಿಕೆ ಮಟ್ಟವನ್ನು ಪರೀಕ್ಷಿಸಬೇಕು. ನಿಶ್ಚಲವಾದ ಆನೆ ಸುರಕ್ಷಿತವಾಗಿ ಸ್ಥಾನದಲ್ಲಿದೆಯೇ ಎಂದು ಪರಿಶೀಲಿಸಬೇಕು. ನಂತರವೇ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಕು.

Ministry of Environment, Forest and Climate Change ನೀಡಿರುವ ಸೂಚನೆಗಳ ಪ್ರಕಾರ ಆನೆ ಕಾರ್ಯಾಚರಣೆ ಆನೆಗೆ ಅರೆವಳಿಕೆಯನ್ನು ನೀಡುವ ಮೊದಲು ಸ್ಥಳವನ್ನು ಪರಿಶೀಲಿಸಬೇಕು. ಪ್ರಜ್ಞೆ ಕಳೆದುಕೊಳ್ಳದ ಆನೆಯಿಂದ ತಪ್ಪಿಸಿಕೊಳ್ಳಲು ಇದು ಅಗತ್ಯವಾಗಿ ಮಾಡಲೇ ಬೇಕಾದ ಕೆಲಸ. ಹಾಗಾಗಿ ಆನೆಗಳನ್ನು ಸಮತಟ್ಟಾದ ಜಾಗದಲ್ಲಿಯೇ ಕಡೆತಂದು ಹಿಡಿಯಬೇಕು.  ಸಾಮಾನ್ಯವಾಗಿ ಆನೆಗಳಿಗೆ ಎಟಾರ್ಫಿನ್‌ ಎಂಬ ಮಾರ್ಫಿನ್‌ ಡಿರೈವೇಟಿವ್‌ ಡ್ರಗ್‌ ನೀಡಲಾಗುತ್ತದೆ. ಇದನ್ನು ನೀಡಿ ಒಂದೆರಡು ನಿಮಿಷಗಳಲ್ಲೇ ಆನೆ ಪ್ರಜ್ಞೆ ಕಳೆದುಕೊಳ್ಳುತ್ತದೆ. ಆದರೆ ಕೆಟಾಮೈನ್‌ ಎಂಬ ಅರೆವಳಿಕೆಯನ್ನು ನೀಡಿದರೆ ಪ್ರಜ್ಞೆ ಕಳೆದುಕೊಳ್ಳಲು ಏಳರಿಂದ ಹದಿನೈದು ನಿಮಿಷ ತೆಗೆದುಕೊಳ್ಳುತ್ತದೆ.

ಅಲ್ಲದೇ ಅರೆವಳಿಕೆ ನೀಡಲು ಡಾರ್ಟ್‌ ಮಾಡಬೇಕು. ಇದು ವೈದ್ಯರ ಕೆಲಸ. ದೈಹಿಕವಾಗಿ ದುರ್ಬಲರಾಗಿರುವ ಇಲ್ಲವೇ ವಯಸ್ಸಾದ ವೈದ್ಯ ಬದಲಿಗೆ ಸಾರ್ಪ್‌ ಶೂಟರೊಬ್ಬರಿಂದ ಈ ಕೆಲಸ ಮಾಡಿಸಬಹುದು. ನಂತರ ಆನೆಯ ಬಳಿ ನಡೆದು ಬಾರದೇ ಅದಕ್ಕಿಂತ ಬಲಶಾಲಿಯಾದ ಇನ್ನೊಂದು ಆನೆಯ ಜೊತೆಗೆ ಬರಬೇಕು. ಆದರೆ ಇಲ್ಲಿ ಅದಾಗಿಲ್ಲ. ಬಹುಶಃ ಬಲಶಾಲಿ ಆನೆಗಳು ದಸರಾ ಉತ್ಸವದ ತಯಾರಿಗೆ ತೆರಳಿರಬಹುದಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ನೇರವಾಗಿ ತಾನೇ ಕಾರ್ಯಚರಣೆಗೆ ಇಳಿದಿದೆ. ಇಲ್ಲೂ ಸಹ ಅರಣ್ಯ ಇಲಾಖೆ ಪ್ರೋಟೋಕಾಲ್ ಉಲ್ಲಂಘನೆ ಮಾಡಿದ್ದು ಸ್ಪಷ್ಟವಾಗಿ ಘೋಚರಿಸುತ್ತಿದೆ.

1988 ರಿಂದ ಫಾರೆಸ್ಟ್ ವಾಚರ್ ಹುದ್ದೆಯಲ್ಲಿ ಗುತ್ತಿಗೆ ನೌಕರನಾಗಿ ಅರಣ್ಯ ಇಲಾಖೆಗೆ ಸೇರಿಕೊಂಡ ವೆಂಕಟೇಶ್‌ ಅವರಿಗೆ ಆನೆಗಳ ವರ್ತನೆ ಹಾಗೂ ಅವುಗಳನ್ನು ನಿಯಂತ್ರಿಸುವ, ಜೊತೆಗೆ ಕೋವಿ ಬಳಸುವ ಅನುಭವ ಕೂಡ ಹೊಂದಿದ್ದರು. ಹಾಗಾಗಿ ಅವರನ್ನು ಅರೆವಳಿಕೆ ನೀಡುವ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿತ್ತು. ರಾಜ್ಯದ ಮೂಲೆ ಮೂಲೆಗಳಲ್ಲಿ ಎಲ್ಲೇ ಆನೆ ಹಿಡಿಯುವುದಿದ್ದರೂ ವೆಂಕಟೇಶ್ ಹಾಜರು. ಸುಮಾರು ಅರವತ್ತಕ್ಕೂ ಅಧಿಕ ಆನೆಗಳಿಗೆ ಡಾಟ್‌ ಮಾಡಿ ಅರೆವಳಿಕೆ ನೀಡಿರುವ ಇವರು ಅರುಣಾಚಲ ಪ್ರದೇಶ ಸೇರಿದಂತೆ ಅನೇಕ ಕಡೆ ಈ ಕೆಲಸ ನಿರ್ವಹಿಸಿದ್ದಾರೆ. ಇವರ ಈ ಸೇವಗೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಕೂಡ ನೀಡಲಾಗಿತ್ತು. ಕ್ಷೇಮಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್‌ ಅವರನ್ನು ಕರ್ನಾಟಕ ಸರ್ಕಾರ (2013) ಖಾಯಂಗೊಳಿಸಿತ್ತು.  ಆದರೆ ಇದರ ನಂತರ ಐದೇ ವರ್ಷದಲ್ಲಿ ನಿವೃತ್ತರಾದರು.  ಹೊರಗುತ್ತಿಗೆ ಆದಾರದಲ್ಲಿ ಇವರು ಆನೆ ಕಾರ್ಯಾಚರಣೆಯ ತಂಡಕ್ಕೆ ತರಬೇತಿಯನ್ನು ನೀಡುತ್ತಿದ್ದರು.

2013 ರಲ್ಲಿ ವೆಂಕಟೇಶ್ ಅವರ ಸೇವೆಯನ್ನು ಸರ್ಕಾರ ಕಾಯಂಗೊಳಿಸಿತು. 2018 ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಅವ ಕಾರ್ಯಾಚರಣೆಯ ತಂಡಕ್ಕೆ ತರಬೇತಿಗಾರನಾಗಿ ಸೇವೆ ಸಲ್ಲಿಸುತ್ತಿದ್ದರು. ಹಾಗಾಗಿ ಅವರನ್ನು ಗುತ್ತಿಗೆ ಆಧಾರದಲ್ಲಿ ಅರಣ್ಯ ಇಲಾಖೆಯಲ್ಲಿ ನಿಯೋಜನೆ ಮಾಡಲಾಗಿತ್ತು.

ಇಷ್ಟೆಲ್ಲಾ ಅಸುರಕ್ಷಿತ ವ್ಯವಸ್ಥೆಯಲ್ಲಿ ಕಾರ್ಯಾಚರಣೆಗೆ ಇಳಿದದ್ದು ಅರಣ್ಯ ಇಲಾಖೆಯ ಮೊದಲ ತಪ್ಪು. ಆನೆ ಹಿಡಿಯುವುದರಲ್ಲಿ ವೆಂಕಟೇಶ್ ಎಷ್ಟೇ ಪರಿಣತರಾದರೂ ನಿವೃತ್ತಿ ವಯಸ್ಸನ್ನಾದರೂ ಇಲಾಖೆ ಪರಿಗಣಿಸಬಹುದಿತ್ತು. ಅದೂ ಸಹ ಇಲಾಖೆ ಮಾಡದೇ ಉಳಿದಿದೆ. ಕೊನೆಗೆ ಆನೆಗಗ ಕೊಡುವ ಅರೆವಳಿಕೆ ಬಗ್ಗೆಯೂ ಬಲವಾದ ಅನುಮಾನ ಮೂಡುತ್ತಿದೆ.

ಇಷ್ಟೆಲ್ಲಾ ನಿರ್ಲಕ್ಷ್ಯಕ್ಕೆ ಈಗ ವೆಂಕಟೇಶ್ ಜೀವ ಬಲಿಯಾಗಿದೆ. ಇಲಾಖೆ ಏನೋ ಅಷ್ಟೋ ಇಷ್ಟೋ ಪರಿಹಾರ ಕೊಟ್ಟು ಕೈತೊಳೆದುಕೊಳ್ಳಬಹುದು. ಆದರೆ ಪ್ರೊಟೋಕಾಲ್ ಉಲ್ಲಂಘನೆಗೆ ಯಾರು ಹೊಣೆ ಹೊರಬೇಕು?

Related Articles

ಇತ್ತೀಚಿನ ಸುದ್ದಿಗಳು