Thursday, June 13, 2024

ಸತ್ಯ | ನ್ಯಾಯ |ಧರ್ಮ

120 ದಿನಗಳಲ್ಲಿ 5,000 ಎಕರೆ ಭೂಪ್ರದೇಶ ಮೀಸಲು ಅರಣ್ಯಕ್ಕೆ ; ಮಲೆನಾಡಿಗರಿಗೆ ಶಾಪವಾದ ಒತ್ತುವರಿ ತೆರವು ಕಾರ್ಯಾಚರಣೆ

ಅರಣ್ಯ ಪ್ರದೇಶವನ್ನೇ ಕಾಣದ ಶಾಸಕರನ್ನು ಅರಣ್ಯ ಸಚಿವರನ್ನಾಗಿ ಮಾಡಿದರೆ ಏನೆಲ್ಲಾ ಯಡವಟ್ಟುಗಳನ್ನು ರಾಜ್ಯದ ಜನ ಕಾಣಬಹುದೋ ಅದೆಲ್ಲವನ್ನೂ ಈಗ ರಾಜ್ಯದ ಜನ ಕಾಣುವಂತಾಗಿದೆ. ಯಾವುದು ಇಲ್ಲಿನ ಜನರ ಹಿತವನ್ನು ಬಲಿ ಕೊಡುವಂತಹ ವಿಚಾರವೋ, ಅದನ್ನು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೆಮ್ಮೆಯ ಸಂಗತಿ ಎಂಬಂತೆ ಹೇಳಿಕೊಂಡಿದ್ದಾರೆ‌.

ಸಧ್ಯ ಹೊಸ ಸರ್ಕಾರ ರಚನೆ ಆದ ದಿನದಿಂದ ಬೇರೆಲ್ಲಾ ಇಲಾಖೆಗಳಿಗಿಂತ ಅರಣ್ಯ ಇಲಾಖೆ ಮಾತ್ರ ಸ್ಪಷ್ಟವಾಗಿ ರಾಜ್ಯದ ಜನರ ಹಿತವನ್ನು ಬಲಿ ಕೊಡಲು ಸಕಲ ಸಿದ್ಧತೆ ನಡೆಸಿದೆ ಎಂದು ವಿಶೇಷವಾಗಿ ಮಲೆನಾಡಿನ ರೈತರು ಆಡಿಕೊಳ್ಳುತ್ತಿದ್ದಾರೆ. ಈ ಹಿಂದೆ ಮಲೆನಾಡು, ಮಲೆನಾಡು ಭಾಗದ ರೈತರು, ಇಲ್ಲಿನ ಜನ ಜೀವನದ ಬಗ್ಗೆ ಅರಿವೇ ಇರದ ವ್ಯಕ್ತಿ ಅರಣ್ಯ ಸಚಿವರಾದರೆ ಏನೆಲ್ಲಾ ಯಡವಟ್ಟುಗಳನ್ನು ಎದುರಿಸಬಹುದೋ ಅದನ್ನೇ ಮಲೆನಾಡು ಭಾಗದ ಜನ ಎದುರಿಸುತ್ತಿದ್ದಾರೆ ಎಂದು ಮಲೆನಾಡಿನ ಮಂದಿ ಹಿಡಿಶಾಪ ಹಾಕುತ್ತಿದ್ದಾರೆ.

ಕರ್ನಾಟಕದಲ್ಲಿ ರಾಜ್ಯದಲ್ಲಿ ಸದ್ಯ ಇರುವ ಅರಣ್ಯ ಪ್ರದೇಶಕ್ಕೆ ಹೊಸ ಪ್ರದೇಶಗಳ ಸೇರ್ಪಡೆ ಮಾಡಲಾಗಿದೆ. ರಾಜ್ಯಾದ್ಯಂತ ಬರೋಬ್ಬರಿ 5,729 ಎಕರೆ ಭೂ ಪ್ರದೇಶವನ್ನು ಮೀಸಲು ಅರಣ್ಯವನ್ನಾಗಿ ಪರಿವರ್ತನೆ ಮಾಡಲಾಗಿದೆ. ಅದೂ ಕೂಡಾ ಕೇವಲ 120 ದಿನಗಳ ಅವಧಿಯಲ್ಲಿ ಈ ತೀರ್ಮಾನ ಮಾಡಲಾಗಿದೆ.

ಯಾವುದೇ ಹೊಸ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ಸಚಿವಾಲಯ ಮಟ್ಟದಲ್ಲಿ ಕೈಗೊಂಡ ಹೊಸ ಬಗೆಯ ತೀರ್ಮಾನ ಇದು ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹೇಳುತ್ತಾರೆ. ತಮ್ಮ ಅನುಭವದ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ನಿರ್ಧಾರಗಳನ್ನು ನೋಡುತ್ತಿದ್ದೇವೆ ಎಂದು ಅಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಮೇಲ್ನೋಟಕ್ಕೆ ಇದೊಂದು ದಿಟ್ಟ ನಿರ್ಧಾರ ಎಂದು ಕಂಡುಬಂದರೆ, ಮಲೆನಾಡು ಭಾಗದ ರೈತರ ಹಿತದೃಷ್ಟಿಯಿಂದ ಯೋಚಿಸಿದರೆ, ಇದೊಂದು ಈ ಭಾಗದ ರೈತರ ಬದುಕಿಗೆ ಕೊಳ್ಳಿ ಇಡುವ ನಿರ್ಧಾರ ಎಂದೇ ಹೇಳಬಹುದು. ಅಷ್ಟರ ಮಟ್ಟಿಗೆ ಮಲೆನಾಡಿಗರು ಅರಣ್ಯ ಪ್ರದೇಶಕ್ಕೆ ಅವಲಂಬಿತರಾಗಿದ್ದಾರೆ. ಅಷ್ಟೆ ಅಲ್ಲದೆ ಮಲೆನಾಡು ಭಾಗದಲ್ಲಿ ಅತಿ ಹೆಚ್ಚು ಕೇಳಿ ಬರುತ್ತಿರುವ ಬಗರ್ ಹುಕುಂ ಸಾಗುವಳಿ ಕೂಡಾ ಅರಣ್ಯ ಪ್ರದೇಶದಲ್ಲೇ ಮಲೆನಾಡಿನ ರೈತರು ಕೃಷಿ ವ್ಯವಸಾಯ ಮಾಡಿಕೊಂಡು ಬಂದಿದ್ದಾರೆ.

ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಉತ್ತರ ಕನ್ನಡ ಸೇರಿದಂತೆ ಮಲೆನಾಡಿನ ಪ್ರಮುಖ ಪ್ರದೇಶಗಳು ಇಂತಹ ಬಗರ್ ಹುಕುಂ ಜಮೀನಿನಲ್ಲಿ ಒಳಪಡುವಂತಿವೆ. ಬಹುತೇಕ ಮಲೆನಾಡಿಗರು ಇದೇ ಜಮೀನುಗಳನ್ನು ನಂಬಿಕೊಂಡು ಬಂದಿದ್ದಾರೆ. ಬಯಲುನಾಡು ಹಾಗೂ ಉತ್ತರ ಕರ್ನಾಟಕ ಪ್ರದೇಶಗಳು ಇಂತಹ ಬಗರ್ ಹುಕುಂ ಜಾಗಗಳನ್ನು ಹೆಚ್ಚಾಗಿ ಒಳಪಟ್ಟಿಲ್ಲ. ಇದೇ ಕಾರಣಕ್ಕೆ ಅರಣ್ಯ ಇಲಾಖೆ ಮಲೆನಾಡಿನ ಜಮೀನನ್ನು ಬಯಲುನಾಡಿಗೆ ಹೋಲಿಸಿ ಜಾಗಗಳನ್ನು ವಶಪಡಿಸಿಕೊಳ್ಳುತ್ತಿವೆ ಎಂದು ಮಲೆನಾಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

“ಈಶ್ವರ ಖಂಡ್ರೆ ಎನ್ನುವ ಅರಣ್ಯ ಮಂತ್ರಿ 120 ದಿನದಲ್ಲಿ 5,000 ಕ್ಕೂ ಹೆಚ್ಚು ಎಕರೆ ಕಾಡನ್ನು ಮೀಸಲು ಅರಣ್ಯ ಮಾಡಿದ್ದಾರೆ ಎಂದು ಕೆಲವು ಮಾಧ್ಯಮಗಳು, NGO ಪರಿಸರವಾದಿಗಳು ಮತ್ತು ಕೆಲವು ಕಾಂಗ್ರೆಸ್ ಕಾರ್ಯಕರ್ತರು ಎಲ್ಲೆಡೆ ಡಂಗೂರ ಬಾರಿಸುತ್ತಿದ್ದಾರೆ. 120 ದಿನದಲ್ಲಿ 5,000 ಸಾವಿರ ಎಕರೆ ಕಾಡು ಬೆಳೆಸಿಲ್ಲ. ಇರುವ ಕಾಡನ್ನೇ ಮೀಸಲು ಎಂದು ಸಹಿ ಹಾಕಿದ್ದಾರೆ. ಈ ಸಹಿ ಹಾಕಲು 120 ದಿನ ಏಕೆ, ಬರೀ 120 ಸೆಕೆಂಡ್ ಸಾಕು. ಇಂತಹ ವಿವೇಚನರಹಿತ ನಿರ್ಧಾರಗಳಿಂದ ಕಾಡಿನಲ್ಲೇ ನೂರಾರು ವರ್ಷಗಳಿಂದ ವಾಸ ಮಾಡುತ್ತಿರುವ ಮತ್ತು ಬೇಸಾಯ ಮಾಡುತ್ತಿರುವ ಬಡ ಜನ ಬೀದಿ ಪಾಲಾಗುತ್ತಾರೆ. ಬೀದರ್ ನ ಖಂಡ್ರೆಗೆ ಮಲೆನಾಡಿನ ಜನ ಜೀವನ, ಸಮಸ್ಯೆಗಳ ಬಗ್ಗೆ ಏನು ಗೊತ್ತು? ಅವರು ಅಧಿಕಾರಿಗಳು ಕೊಟ್ಟ ಫೈಲ್ ಗೆ ಸಹಿ ಹಾಕಿದ್ದಾರೆ. ಇಂತಹ ನಿರ್ಧಾರಗಳಿಂದ NGO ಪರಿಸರವಾದಿಗಳಿಗೆ ಲಾಭ ಇದೆ. ಅದಕ್ಕೇ ಈ ಸಂಭ್ರಮ. ಮಲೆನಾಡಿನ ಶಾಸಕರನ್ನೇ ಕಾಡಿನ ಮಂತ್ರಿ ಮಾಡಬೇಕು. ಇಲ್ಲದಿದ್ದಲ್ಲಿ ಅವರ ಗತಿ ಶೋಚನೀಯ.” ಎಂದು ಹಿರಿಯ ಪತ್ರಕರ್ತ ಡಿ.ಪಿ.ಸತೀಶ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 4 ರ ಅಡಿ ಯಾವುದೇ ಭೂ ಪ್ರದೇಶವನ್ನು ಮೀಸಲು ಅರಣ್ಯ ಎಂದು ಸರ್ಕಾರ ಘೋಷಿಸಬಹುದಾಗಿದೆ. ಆದರೆ, ಕಾಯ್ದೆಯ ಪ್ರಕಾರ ಈ ಪ್ರಸ್ತಾವನೆ ಹಲವು ಹಂತಗಳನ್ನು ದಾಟಿ ಬರಬೇಕಿದೆ. ಯಾವುದೇ ಭೂ ಪ್ರದೇಶವನ್ನು ಮೀಸಲು ಅರಣ್ಯ ಎಂದು ಘೋಷಿಸುವ ಮುನ್ನ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಆ ಭೂಮಿಯ ಮೇಲೆ ಯಾರಿಗಾದರೂ ಹಕ್ಕು ಇದೆಯೇ ಎಂದು ನೋಡಬೇಕು. ಈ ಸಂಬಂಧ ಅಧಿಸುಚನೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ರವಾನಿಸಬೇಕಿದೆ. ಈ ರೀತಿಯ ಹಲವು ಕಾನೂನು ಪ್ರಕ್ರಿಯೆಗಳನ್ನು ಸರ್ಕಾರ ಅನುಸರಿಸಿದರೆ ಮಾತ್ರ ಅದೊಂದು ಕಾನೂನಾತ್ಮಕ ಪ್ರಕ್ರಿಯೆ ಅನ್ನಿಸಿಕೊಳ್ಳುತ್ತದೆ ಎಂದು ಹಿರಿಯ ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.

ಆದರೆ ಈ ಬಾರಿ ಯಾವುದೇ ತಕರಾರು ಅರ್ಜಿಗಳನ್ನೂ ಸ್ವೀಕರಿಸದೇ ಅರಣ್ಯ ಇಲಾಖೆ ಏಕಾಏಕಿ ಅರಣ್ಯ ಪ್ರದೇಶಕ್ಕೆ ಕೃಷಿ ಜಮೀನುಗಳನ್ನು ವಶಪಡಿಸಿಕೊಂಡಿದೆ. ಸರ್ಕಾರದ ಅಂಕಿ ಅಂಶಗಳ ಆಧಾರದಲ್ಲಿ ಹೇಳುವುದಾದರೆ, 2023ರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಅರಣ್ಯ ಇಲಾಖೆಯು 29 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. 2008 ರಿಂದ 2023ರ ಅವಧಿಯಲ್ಲಿ ಅರಣ್ಯೇತರ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡಲಾಗಿದ್ದ ಭೂಮಿಯ ಪೈಕಿ ಶೇ. 40ರಷ್ಟು ಭೂ ಪ್ರದೇಶವನ್ನು ಮತ್ತೆ ಮೀಸಲು ಅರಣ್ಯ ಪ್ರದೇಶವನ್ನಾಗಿ ಹೆಸರಿಸಲು ಸರ್ಕಾರ ಸಮ್ಮತಿಸಿದೆ. ಈ ಮೂಲದ ರಾಜ್ಯದ ಒಟ್ಟು ಅರಣ್ಯ ಪ್ರದೇಶದ ವ್ಯಾಪ್ತಿಗೆ 5 ಸಾವಿರ ಎಕರೆಗೂ ಹೆಚ್ಚು ಹೊಸ ಪ್ರದೇಶ ಸೇರ್ಪಡೆ ಆಗುವಂತಾಗಿದೆ.

ಸರ್ಕಾರದ ಯಾವುದೇ ಇಲಾಖೆ ಕೆಲವೊಂದು ಕ್ರಾಂತಿಕಾರಿ ನಿಲುವು ತಗೆದುಕೊಳ್ಳುವುದಕ್ಕಿಂತ ಮುನ್ನ, ಸ್ಥಳೀಯ ಜನರ ಜೀವನ ವಿಧಾನ, ಅವರ ಅವಲಂಬನೆಗಳನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಹಲವಷ್ಟು ಬಾರಿ ಸರ್ಕಾರ ತಗೆದುಕೊಳ್ಳುವ ನಿರ್ಧಾರಗಳು ಸ್ಥಳೀಯ ಮಟ್ಟದಲ್ಲಿ ಜನರ ಜೀವನ ಬೀದಿಗೆ ಬರುವಂತೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದೇ ರೀತಿ ಮುಂದುವರಿದರೆ, ಸಧ್ಯ ಅರಣ್ಯ ಇಲಾಖೆ ಮತ್ತು ಅರಣ್ಯ ಸಚಿವರು ತಗೆದುಕೊಂಡಿರುವ ನಿರ್ಧಾರ ಸಹ ಇಂತದ್ದೇ ಹಲವು ಯಡವಟ್ಟುಗಳನ್ನು ಮೈಮೇಲೆ ಎಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.

Related Articles

ಇತ್ತೀಚಿನ ಸುದ್ದಿಗಳು