18 ವರ್ಷಗಳಲ್ಲಿ 18 ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾರ್ತಿಕ್ ಅಲಿಯಾಸ್ ಎಸ್ಕೇಪ್ ಕಾರ್ತಿಕ್ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಸುಮಾರು 70 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ಘೋಷಿಸಿದ್ದಾರೆ.
ಕಾರ್ತಿಕ್ ವಿರುದ್ಧ ಹದಿನೆಂಟು ಜಾಮೀನು ರಹಿತ ವಾರಂಟ್ಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ. ಪ್ರತೀ ಬಾರಿಯೂ ಆತನನ್ನು ಬಂಧಿಸಲು ತಂತ್ರ ಹೆಣೆದಾಗಲೂ ಆತ ತನ್ನ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುತ್ತಿದ್ದ. ಆದರೆ ನಾವು ಆತನನ್ನು ಗೋವಾದಲ್ಲಿ ಬಂಧಿಸಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಸ್ಕೇಪ್ ಕಾರ್ತಿಕ್ ನ ಜೊತೆಗೆ ಆತನ ಸಹಚರರಾದ ದಿಲೀಪ್ (24) ಮತ್ತು ಅರ್ಜುನ್ ಕೆ (23) ಅವರನ್ನೂ ಮಂಗಳವಾರ ಬಂಧಿಸಲಾಗಿದೆ. ದಿಲೀಪ್ ಮತ್ತು ಅರ್ಜುನ್ 2020 ರಲ್ಲಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದರು ಮತ್ತು ಕಾರ್ತಿಕ್ ಇವರಿಬ್ಬರನ್ನು ಜೈಲಿನಲ್ಲಿ ಭೇಟಿಯಾಗಿದ್ದನು. ಜೈಲಿನಿಂದ ಹೊರಬಂದ ನಂತರ ಮೂವರನ್ನೂ ಒಳಗೊಂಡಂತೆ ಕಳ್ಳತನ ಮಾಡಲು ಶುರು ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ತಿಕ್ನಿಂದ 1.215 ಕೆಜಿ ಚಿನ್ನ ಮತ್ತು 3.5 ಕೆಜಿ ಬೆಳ್ಳಿ ಆಭರಣಗಳನ್ನು ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಬಿ ದಯಾನಂದ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ 83 ಕಳ್ಳತನ ಮಾಡಿರುವ ಆರೋಪ ಕಾರ್ತಿಕ್ ಮೇಲಿದೆ.
ಮೂಲದಿಂದ ಬಡ ಕುಟುಂಬದಲ್ಲಿ ಜನಿಸಿದ ಕಾರ್ತಿಕ್ 6ನೇ ತರಗತಿ ಓದುತ್ತಿದ್ದಾಗಲೇ ಶಾಲೆ ಬಿಟ್ಟಿದ್ದ. 2005ರಲ್ಲಿ 16ನೇ ವಯಸ್ಸಿನಲ್ಲಿ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಿಟಕಿ ಒಡೆದು 10 ಲಕ್ಷ ರೂ. ಕಳ್ಳತನ ಮಾಡಿದ್ದ. ನಂತರ ನಾಲ್ವರು ಸದಸ್ಯರ ತಂಡ ಕಟ್ಟಿಕೊಂಡು ಖಾಲಿ ಮನೆಗಳಲ್ಲಿ ಕಳ್ಳತನ ಮಾಡತೊಡಗಿದ. ದಿನಪತ್ರಿಕೆಗಳನ್ನು ಬಾಗಿಲು ಅಥವಾ ಗೇಟಿನ ಬಳಿ ಮುಟ್ಟದೆ ಬಿಟ್ಟರೆ, ಸಂಜೆಯ ವೇಳೆ ಬೈಕ್ಗಳಲ್ಲಿ ಹೋಗಿ ಖಾಲಿ ಮನೆಗಳನ್ನು ವೀಕ್ಷಿಸುತ್ತಿದ್ದರು. ರಾತ್ರಿ ವೇಳೆ ಕಳ್ಳತನ ಮಾಡಿ ನಂತರ ಲೂಟಿ ಮಾಡಿದ ವಸ್ತುಗಳನ್ನು ಗಿರವಿ ದಲ್ಲಾಳಿಗಳಿಗೆ ಮತ್ತು ಇತರರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.
2007ರಲ್ಲಿ ಮೊದಲ ಬಾರಿಗೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ನಾಲ್ಕು ಪ್ರಕರಣಗಳನ್ನು ಬಯಲಿಗೆಳೆದಿದ್ದರು. ಆತನನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು. ಅಲ್ಲಿಂದ ಕೆಲವೇ ದಿನಗಳಲ್ಲಿ ಆತ ಸಿನಿಮೀಯ ಶೈಲಿಯಲ್ಲಿ ಪರಾರಿಯಾಗಿದ್ದಾನೆ. ಕೈದಿಗಳಿಗೆ ಆಹಾರ ತಂದಿದ್ದ ಇಸ್ಕಾನ್ ವಾಹನದ ಚಾಸಿಸ್ ಕೆಳಗೆ ಸಿಲುಕಿ ಪರಾರಿಯಾಗಿದ್ದಾನೆ. ಮತ್ತೆ ಆತನನ್ನು ಬಂಧಿಸಲು ಪೊಲೀಸರಿಗೆ 45 ದಿನಗಳು ಬೇಕಾಯಿತು. ಹೀಗಾಗಿ ಅವರಿಗೆ ಎಸ್ಕೇಪ್ ಕಾರ್ತಿಕ್ ಎಂಬ ಅಡ್ಡಹೆಸರನ್ನು ಪೊಲೀಸರೇ ಇಟ್ಟಿದ್ದಾಗಿ ತಿಳಿದು ಬಂದಿದೆ.
ನಂತರ ವಿವಿಧ ಕಳ್ಳತನದ ಪ್ರಕರಣದಲ್ಲಿ ಐದಾರು ಬಾರಿ ಬಂದಿಸಿದರೂ ಪ್ರತೀ ಬಾರಿಯೂ ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಿದ್ದ. ಜನವರಿ 2022 ರಲ್ಲಿ, ಪಶ್ಚಿಮ ವಿಭಾಗದ ಪೊಲೀಸರು ಅವನನ್ನು ಕಳ್ಳತನಕ್ಕಾಗಿ ಹಿಡಿದಾಗ ಅವರನ್ನು ಬಂಧಿಸಲಾಯಿತು ಮತ್ತು ಅವನಿಂದ 11.43 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದರು.
ಇತ್ತೀಚೆಗೆ ಕಾರ್ತಿಕ್ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆತನ ಪತ್ನಿ ಮತ್ತು ಸಹೋದರ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.