ಬೆಂಗಳೂರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡರ ಬಣ ಕಡ್ಡಾಯ ಕನ್ನಡ ನಾಮಫಲಕದ ಹೋರಾಟದ ಬಗ್ಗೆ ಹಲವಷ್ಟು ರಾಜಕೀಯ ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆಶ್ಚರ್ಯ ಎಂದರೆ ಕಡ್ಡಾಯ ಕನ್ನಡ ನಾಮಫಲಕದ ಪರವಾಗಿ ಈ ಬಾರಿ ಬಿಜೆಪಿ ನಾಯಕರೂ ಸಹ ತಮ್ಮ ದನಿಗೂಡಿಸಿದ್ದಾರೆ.
ಈ ಬಗ್ಗೆ ಹಲವು ನಾಯಕರು ಕನ್ನಡ ಹೋರಾಟಗಾರರ ಪರವಾಗಿ ಮಾತನಾಡಿದ್ದು, ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರ ಮಾತುಗಳು ಈಗ ಸಾಮಾಜಿಕವಾಗಿ ಹಾಗೂ ಹೋರಾಟಗಾರರ ವಲಯದಲ್ಲಿ ಚರ್ಚೆಯ ವಸ್ತುವಾಗಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಕಡ್ಡಾಯ ಕನ್ನಡ ನಾಮಫಲಕ ಹೋರಾಟದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಕೆ.ಎಸ್.ಈಶ್ವರಪ್ಪ ಹಿಂದಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. “ಕನ್ನಡ ಮೇ ಕೌನ್ ಕೌನ್ ಬ್ಯುಸಿನೆಸ್ ಕರ್ತಾ ಹೈ ಬೋರ್ಡ್ ಸಬಿ ಕನ್ನಡ್ ಮೆ ರೆಹ್ನಾ. ಉನ್ಕಾ ಡಿಮ್ಯಾಂಡ್ ತೋ ಕರೆಕ್ಟ್ ಹೈ, ಲೇಕಿನ್, ಉನ್ಕೋ ಡಿಮ್ಯಾಂಡ್ ಕ್ಯೋಂ ರಾಜ್ಯ ಸರ್ಕಾರ್ ಅಬಿ ತಕ್ ಇಂಟರೆಸ್ಟ್ ದಿಕಾತಾ ಹೈ..” ಎನ್ನುವ ಮೂಲಕ ಅರೆಬರೆ ಹಿಂದಿ, ಇಂಗ್ಲೀಷಿನಲ್ಲಿ ಮಾತನಾಡಿದ್ದಾರೆ.
ಮಾತನಾಡುತ್ತಿರುವುದೇ ಕನ್ನಡ ಭಾಷೆಯ ಪರವಾಗಿ ಎಂದಾಗ, ಕೆ.ಎಸ್.ಈಶ್ವರಪ್ಪ ಅದನ್ನು ಕನ್ನಡದಲ್ಲೇ ಪ್ರಸ್ತುತ ಪಡಿಸುವ ಬದಲು ಕಷ್ಟಪಟ್ಟು ಹಿಂದಿಯಲ್ಲಿ ಹೇಳಿ, ಟ್ರೋಲ್ ಸರಕಾಗಿದ್ದಾರೆ.
ಮುಂದುವರಿದು ಹಿಂದಿಯಲ್ಲೇ ತಮ್ಮ ಮಾತು ಮುಂದುವರೆಸಿದ ಕೆ.ಎಸ್.ಈಶ್ವರಪ್ಪ ರಕ್ಷಣಾ ವೇದಿಕೆಯ ನಾರಾಯಣ ಗೌಡ ಅವರನ್ನು ಬಂಧಿಸಿರುವುದು ತಪ್ಪು. ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಮತ್ತು ಕನ್ನಡ ಪರ ಹೋರಾಟಗಾರರು ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸಿ, ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆ ಬಗ್ಗೆ ಸೂಕ್ತ ನಿರ್ಣಯ ತಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಹಿಂದಿಯಲ್ಲಿ ಹೇಳಿದ್ದಾರೆ.