ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ರಾಜ್ಯದ ಗಡಿ ದಾಟಿ ಹೋಗಲು ಪ್ರಯತ್ನಿಸಿರಬಹುದು ಎಂಬ ಸುದ್ದಿಯ ಬೆನ್ನಲ್ಲೇ ಈಗ ಹಾವೇರಿ ಜಿಲ್ಲಾ ಪೊಲೀಸರು ಶ್ರೀಗಳನ್ನು ಚಿತ್ರದುರ್ಗಕ್ಕೆ ಮತ್ತೆ ಕರೆ ತಂದಿದ್ದಾರೆ. ಆದರೆ ಶ್ರೀಗಳು ನಿಜಕ್ಕೂ ನೆರೆ ರಾಜ್ಯದ ಅಜ್ಞಾತ ಸ್ಥಳಕ್ಕೆ ಹೊರಟಿದ್ದರೇ? ಈ ಬೆಳವಣಿಗೆಯಿಂದ ಪೊಲೀಸರಿಗೆ ಎದುರಾದ ಸವಾಲುಗಳೇನು? ಸಂತ್ರಸ್ತ ಹೆಣ್ಣು ಮಕ್ಕಳ ಆರೋಪದಿಂದ ಶಿವಮೂರ್ತಿ ಶರಣರಿಗೆ ಎದುರಾಗುವ ಸಂಕಷ್ಟವೇನು? ಇಂದು ನಡೆದ ವಿವಿಧ ಮಠಾಧೀಶರ ಸಭೆಯಲ್ಲಿ ಮಠಾಧೀಶರು ಯಾವ ತೀರ್ಮಾನಕ್ಕೆ ಬರಬಹುದು? ಪ್ರಕರಣದ ಮುಂದಿನ ಹಂತ ಎತ್ತ ಸಾಗಲಿದೆ?
ಸಧ್ಯಕ್ಕೆ ರಾಜ್ಯದ ಮಟ್ಟಿಗೆ ಇದೊಂದು ಕುತೂಹಲಕಾರಿ ಸುದ್ದಿಯಾಗಿದ್ದು ಇಂತಹ ಹತ್ತು ಹಲವು ಪ್ರಶ್ನೆಗಳು ಎಲ್ಲೆಡೆ ಚರ್ಚಿತ ವಿಷಯವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಶಿವಮೂರ್ತಿ ಶರಣರ ಮೇಲೆ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯದಂತಹ ಗಂಭೀರ ಪ್ರಕರಣ ದಾಖಲಾಗಿದ್ದರೂ ಶರಣರು ಚಿತ್ರದುರ್ಗ ಬಿಟ್ಟು ಹೊರ ಹೋಗಬೇಕಿತ್ತೇ? ಅದೆಂತಹ ತುರ್ತು ಕೆಲಸಗಳಿದ್ದರೂ ಅದೆಲ್ಲಕ್ಕಿಂತ ಗಂಭೀರ ವಿಚಾರ ಇದಾಗಿದ್ದು, ತನಿಖೆಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಾಗಿದ್ದು ಸಮಾಜದ ಜವಾಬ್ದಾರಿಯುತ ಜಾಗದಲ್ಲಿರುವ ಶಿವಮೂರ್ತಿ ಶರಣರ ಕರ್ತವ್ಯ. ಈ ಹಿನ್ನೆಲೆಯಲ್ಲಿ ಶ್ರೀಗಳು ಅಜ್ಞಾತ ಸ್ಥಳಕ್ಕೆ ಹೋಗುವ (ವದಂತಿ) ಅಗತ್ಯ ಏನಿತ್ತು.? ಮೇಲ್ನೋಟಕ್ಕೆ ಶಿವಮೂರ್ತಿ ಶರಣರು ಮಹಾರಾಷ್ಟ್ರ ಅಥವಾ ಗೋವಾ ರಾಜ್ಯದ ಅಜ್ಞಾತ ಸ್ಥಳಕ್ಕೆ ಹೋಗುತ್ತಿರಬಹುದು ಎಂದೂ ಸಹ ಈ ಪ್ರಕರಣದ ಅಡಿಯಲ್ಲಿ ಆರೋಪಿಸಲಾಗುತ್ತಿದೆ.
ಶಿವಮೂರ್ತಿ ಶರಣರ ಇವತ್ತಿನ ನಡೆ ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಕ್ಷಣಕ್ಷಣಕ್ಕೂ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು ಈ ಹಂತದಲ್ಲೇ ಶರಣರು ಚಿತ್ರದುರ್ಗ ಮಠ ಬಿಟ್ಟು ತೆರಳಿರುವುದರಿಂದ ಪೊಲೀಸರು ಪ್ರಕರಣದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸುವ ಅನಿವಾರ್ಯತೆ ಎದುರಾಗಿದೆ. ಪೋಕ್ಸೊದಂತಹ ಗಂಭೀರ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾದರೂ ಶ್ರೀಗಳನ್ನು ಬಂಧಿಸದಿರುವುದು ಅಥವಾ ವಿಚಾರಣೆಗೆ ಒಳಪಡಿಸದೇ ಇರುವುದರ ಬಗ್ಗೆ ಸಾರ್ವಜನಿಕವಾಗಿ ಅನುಮಾನಕ್ಕೆ ಆಸ್ಪದ ಮಾಡಿಕೊಟ್ಟಂತಾಗಿದೆ. ಸಮಾಜದ ಎಲ್ಲಾ ವಲಯಗಳಲ್ಲೂ ಮುರುಘಾ ಮಠದ ಭಕ್ತರಿದ್ದು ಶ್ರೀಗಳು ಬೇರೆ ಬೇರೆ ಕಡೆಯಿಂದ ಒತ್ತಡ ತರಬಹುದು ಎಂಬುದಕ್ಕೆ ಸರಿಯಾಗಿ ಪ್ರಕರಣ ಕೂಡಾ ಆಮೆಗತಿಯಲ್ಲಿ ಸಾಗುತ್ತಿರುವುದು ಈ ಎಲ್ಲಾ ಅನುಮಾನಗಳಿಗೆ ಪ್ರಮುಖ ಕಾರಣವಾಗಿದೆ. ಸಧ್ಯ ಪೊಲೀಸರು ತನಿಖೆ ಚುರುಕುಗೊಳಿಸಿದರೆ ಶೀಘ್ರದಲ್ಲಿ ಶರಣರ ಬಂಧನ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಇನ್ನು ಸಂತ್ರಸ್ತ ಹೆಣ್ಣು ಮಕ್ಕಳಲ್ಲಿ ಒಬ್ಬಾಕೆ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು ಪೋಕ್ಸೊ ಕಾಯ್ದೆಯ ಜೊತೆಗೆ ಅಟ್ರಾಸಿಟಿ ಕಾಯ್ದೆ ಅಡಿಯಲ್ಲೂ ಮತ್ತೊಂದು ಪ್ರಕರಣ ದಾಖಲಾದರೆ ಶಿವಮೂರ್ತಿ ಶರಣರಿಗೆ ಬಂಧನದ ಭೀತಿ ಇನ್ನಷ್ಟು ಹೆಚ್ಚಲಿದೆ. ಸಂತ್ರಸ್ತ ಹೆಣ್ಣು ಮಕ್ಕಳು ಈಗಾಗಲೇ ಚಿತ್ರದುರ್ಗದ ಬಾಲಮಂದಿರದಲ್ಲಿ ಆಶ್ರಯ ಪಡೆಯುತ್ತಿದ್ದು, ಪೊಲೀಸರು ಹೆಣ್ಣು ಮಕ್ಕಳ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಪ್ರತೀ ಹಂತವನ್ನೂ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಸಂತ್ರಸ್ತ ಬಾಲಕಿಯರು ಯಾವುದೇ ದ್ವಂತ್ವ ಹೇಳಿಕೆ ನೀಡಿಲ್ಲ ಎಂಬುದು ತಿಳಿದು ಬಂದಿದೆ. ಈಗಾಗಲೇ ಮೈಸೂರಿನ ನಜರಾಬಾದ್ ಪೊಲೀಸರಿಗೆ ಕೊಟ್ಟ ಮಾಹಿತಿಯನ್ನೇ ಸಂತ್ರಸ್ತ ಬಾಲಕಿಯರು ಪುನರುಚ್ಛರಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇನ್ನೊಂದು ಕಡೆ ಚಿತ್ರದುರ್ಗದ ಮುರುಘಾ ಮಠದಲ್ಲಿ ವೀರಶೈವ ಲಿಂಗಾಯತ ಮಠಾಧೀಶರು ನಡೆಸಿದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸಧ್ಯಕ್ಕೆ ಕಾನೂನು ಪಂಡಿತರೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆದಿದ್ದು ಬಂಧನದ ಸಾಧ್ಯತೆಯಿಂದ ತಪ್ಪಿಸಿಕೊಳ್ಳಲು ಇರುವ ಮಾರ್ಗದ ಬಗ್ಗೆ ಚರ್ಚಿಸಲಾಗಿದೆ. ಆ ಹಿನ್ನೆಲೆಯಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕಬಹುದು ಎನ್ನಲಾಗಿದೆ.
ಮುರುಘಾ ಶ್ರೀಗಳು ರಾಜ್ಯದ ಪ್ರಭಾವಿ ಮಠಾಧೀಶರಾಗಿದ್ದು ಹಲವಷ್ಟು ಮಠಗಳ ಅನುಯಾಯಿಗಳು, ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ಉದ್ಯಮಿಗಳು ಮಠದ ಭಕ್ತರಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಕೊನೆಯ ಹಂತದ ಬೆಳವಣಿಗೆಯಂತೆ ದೊಡ್ಡ ಮಟ್ಟದ ಒತ್ತಡ ಹೇರುವ ಸಾಧ್ಯತೆಗಳನ್ನು ಕೂಡಾ ತಳ್ಳಿ ಹಾಕುವಂತಿಲ್ಲ. ಈ ಬಗ್ಗೆ ಬಿಜೆಪಿ ಪಕ್ಷದ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸರ್ಕಾರಕ್ಕೆ ಮತ್ತು ಉನ್ನತ ಮಟ್ಟದ ಅಧಿಕಾರಿಗಳಿಗೆ ಪತ್ರ ಬರೆದಿದ್ದು ಸಂತ್ರಸ್ತ ಬಾಲಕಿಯರಿಗೆ ನ್ಯಾಯ ಸಿಗಬೇಕು. ಆ ಕಾರಣಕ್ಕಾಗಿ ಪ್ರಕರಣದ ತನಿಖೆಯನ್ನು ಬೇರೆ ರಾಜ್ಯಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಲೆಹರ್ ಸಿಂಗ್ ಬರೆದ ಪತ್ರ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರಕರಣದ ರಾಜಕೀಯ ಮಗ್ಗುಲಲ್ಲಿ ಹಲವಷ್ಟು ಚರ್ಚೆಗೆ ಕಾರಣವಾಗಿದೆ.