Thursday, June 19, 2025

ಸತ್ಯ | ನ್ಯಾಯ |ಧರ್ಮ

30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ನಿರಂತರ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳಿ – ಡಾ.ನಂದಕುಮಾರ

ಕೊಪ್ಪಳ ಮೇ 19: 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ನಿರಂತರ ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಧೀಕ ರಕ್ತದೊತ್ತಡ ಕಂಡುಬಂದರೆ ನಿಯಂತ್ರಣಕ್ಕಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಕೊಪ್ಪಳ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ ಹೇಳಿದರು,

ಅವರು ಶನಿವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗಿಯ ಕಛೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ಘಟಕ, ಜಿಲ್ಲಾ ಎನ್.ಸಿ.ಡಿ ವಿಭಾಗ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಕ್ತದೊತ್ತಡ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವನ ಶೈಲಿಯಿಂದ ಬರುವ ರೋಗಗಳಾದ, ಮಧುಮೇಹ, ಕ್ಯಾನ್ಸರ್, ಅಧೀಕ ರಕ್ತದೊತ್ತಡ, ಹೃದಯಘಾತ ಹಾಗೂ ಪಾರ್ಶ್ವವಾಯುಗಳಲ್ಲಿ ಅಧೀಕ ರಕ್ತದೊತ್ತಡ ಒಂದಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯು ರಕ್ತದೊತ್ತ್ತಡದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ 17 ರಂದು ವಿಶ್ವ ರಕ್ತದೊತ್ತಡ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲು ನಿರ್ದೇಶನ ನೀಡಿರುತ್ತದೆ. ಸಾರ್ವಜನಿಕರಿಗೆ ಅಧೀಕ ರಕ್ತದೊತ್ತಡ ನಿಯಂತ್ರಣ ಹಾಗೂ ಉತ್ತಮ ಜೀವನ ಶೈಲಿಯ ಕುರಿತು ಅರಿವು ಮೂಡಿಸುವುದು ಈ ಕಾರ್ಯಕ್ರಮದ ಇದರ ಉದ್ದೇಶವಾಗಿದೆ. “ನಿಮ್ಮ ರಕ್ತದೊತ್ತಡವನ್ನು ನಿಖರವಾಗಿ ಅಳೆಯಿರಿ ಅದನ್ನು ನಿಯಂತ್ರಿಸಿ, ಹೆಚ್ಚು ಕಾಲ ಬದುಕಿ” ಎಂಬ ಈ ವರ್ಷದ ಘೋಷವಾಖ್ಯದೊಂದಿಗೆ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ ಎಂದರು.

ಅಧೀಕ ರಕ್ತದೊತ್ತ್ತಡ ಭಾರತದಲ್ಲಿ ಒಂದು ದೊಡ್ಡ ಸಾರ್ವಜನಿಕ ಆರೋಗ್ಯ ಸವಾಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ಜನಸಂಖ್ಯೆಯಲ್ಲಿ ಇದರ ವ್ಯಾಪಕತೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಇದರಿಂದ ಹೃದಯಘಾತ ಮತ್ತು ಪಾರ್ಶ್ವವಾಯುನಂತಹ ಆರೋಗ್ಯ ಸಮಸ್ಯಗಳು ಉಂಟಾಗುತ್ತವೆ. 30 ವರ್ಷ ಮೇಲ್ಪಟ್ಟವರು ರಕ್ತದೊತ್ತಡ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಧೀಕ ರಕ್ತದೊತ್ತಡ ಕಂಡುಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ವಿವಿಧ ಹಂತಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಆರೋಗ್ಯದ ಕಡೆ ನಿರ್ಲಕ್ಷ್ಯ ಮಾಡದೇ ನಿರಂತರ ಪರೀಕ್ಷೆ ಮಾಡಿಸಿಕೊಳ್ಳಬೇಕು. ದಿನನಿತ್ಯ ಸೇವಿಸುವ ಆಹಾರದಲ್ಲಿ ಉಪ್ಪು ಮತ್ತು ಕೊಬ್ಬಿನಾಂಶಗಳು ಸೀಮಿತವಾಗಿರಬೇಕು. ಪೌಷ್ಠಿಕ ಆಹಾರ ಸೇವಿಸಬೇಕು. ಪ್ರತಿದಿನ ಕನಿಷ್ಠ ಪಕ್ಷ ಒಂದುಗಂಟೆ ಕಾಲ ದೈಹೀಕ ಚಟುವಟಿಕೆ ನಡೆಸುವುದು, ಯೋಗ, ದ್ಯಾನ ಮಾಡುವುದು ಮತ್ತು ಹೊರಗಿನ ಆಹಾರ ಪದಾರ್ಥಗಳ ಸೇವನೆ ಮಾಡಬಾರದು. ಧೂಮಪಾನ-ಮಧ್ಯಪಾನ ತೆಜಿಸಿ, ಉತ್ತ್ತಮ ಆಹಾರ ಪದ್ದತಿಯನ್ನು ಅನುಸರಿಸಬೇಕೆಂದು ಹೇಳಿದರು.

ಕೊಪ್ಪಳ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಹೆಚ್.ಪ್ರಕಾಶ ಅವರು, ಮನುಷ್ಯನ ಜೀವಿತ ಅವಧಿಯ ಬಗ್ಗೆ ಟೆಲಿ ಮನಸ್, ಇ-ಸಂಜೀವಿನ ಕುರಿತು ವಿವರವಾಗಿ ಮಾತನಾಡಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೊಪ್ಪಳ ವಿಭಾಗಿಯ ತಾಂತ್ರಿಕ ಶಿಲ್ಪಿ ಡಾ. ಬಿ.ವಿ ಭಟ್ಟರ್ ಅವರು ಮಾತನಾಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮ ಇಂದಿನ ಅಧಿಕಾರಿ, ಸಿಬ್ಬಂದಿಗಳಿಗೆ ಬಹಳ ಪ್ರಯೋಜನವಾಗಿವೆೆ. ನೌಕರರು ವಿವಿಧ ಅಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿಯ ಪಡೆದುಕೊಂಡು ತಮ್ಮ ತಮ್ಮ ಗ್ರಾಮಗಳಲ್ಲಿ, ವಾರ್ಡ್ ಗಳಲ್ಲಿ ಹಾಗೂ ಸುತ್ತ-ಮುತ್ತಲಿನ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ಕಮಿನ್ಯೂಟಿ ಮೆಡಿಸಿನ್ ವಿಭಾಗದ ವೈದ್ಯಾಧಿಕಾರಿಗಳಾದ ಡಾ.ಮನು, ಡಾ.ಅಂಜನಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ., ಕ.ಕ.ರ.ಸಾ.ನಿ ಕೊಪ್ಪಳ ವಿಭಾಗದ ಸಹಾಯಕ ಆಡಳಿತಾಧಿಕಾರಿ ಸಂಜೀವ್ ಕುಮಾರ, ಅಂಕಿಸಂಖ್ಯೆಗಳ ಅಧಿಕಾರಿ ಕೆ.ದೇವರಾಜ, ಭದ್ರತಾ ಅಧಿಕಾರಿ ಶ್ರೀದೇವಿ, ಎನ್.ಸಿ.ಡಿ ಕಾರ್ಯಕ್ರಮದ ಸಲಹೆಗಾರ ಡಾ. ಜಯಶ್ರೀ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಲ್.ವಿ ಸಜ್ಜನರ್, ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳಾದ ರಾಜಕುಮಾರ ಹಾಗೂ ಸುಧೀರ್, ಆಪ್ತಸಮಾಲೋಚಕಿ ಕೆ.ಶಾಂತಮ್ಮ ಸೇರಿದಂತೆ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ನಂತರ ಕ.ಕ.ರ.ಸಾ.ನಿ ಕೊಪ್ಪಳ ವಿಭಾಗದ ಕಛೇರಿಯ ಎಲ್ಲಾ ಅಧಿಕಾರಿ, ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡು, ಚಿಕಿತ್ಸೆ ನೀಡಲಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page