ತಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಇಬ್ಬರು ಸಚಿವರು ಮತ್ತು ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಲೈಂಗಿಕ ಹಗರಣದಲ್ಲಿ ಭಾಗಿಯಾಗಿರುವ ಮಾಜಿ ಮುಖ್ಯಮಂತ್ರಿ ಒಬ್ಬರ ಬಗ್ಗೆ ವಕೀಲ ಜಗದೀಶ್ ಕೆ ಎನ್ ಗಂಭೀರ ಆರೋಪ ಮಾಡಿದ್ದಾರೆ. ಈ ಹಗರಣವನ್ನು ಸುಪ್ರೀಂಕೋರ್ಟ್ ನಿಗಾವಣೆಯಲ್ಲಿ ತನಿಖೆಗೆ ಒತ್ತಾಯಿಸುವುದಾಗಿ ವಕೀಲ ಜಗದೀಶ್ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿಗೆ ಹೊರರಾಜ್ಯದಿಂದ ಹೆಣ್ಣು ಮಕ್ಕಳನ್ನು ಒದಗಿಸಿದ ಆರೋಪಕ್ಕೆ ಈಗ ಮಾಜಿ ಸಚಿವರಿಬ್ಬರ ಹೆಸರು ಸೇರ್ಪಡೆಗೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲದೇ ಇದನ್ನು ಖಾಸಗಿಯಾಗಿಯೂ ಬಳಸಿಕೊಂಡಿರುವ ಸಚಿವರು, ವಯಕ್ತಿಕವಾಗಿ ಲಾಭ ಪಡೆದುಕೊಂಡಿರುವ ಬಗ್ಗೆಯೂ ವಕೀಲ ಜಗದೀಶ್ ಆರೋಪಿಸಿದ್ದಾರೆ.
ಸಚಿವರು, ಅಧಿಕಾರಿಗಳು ಕೋಟ್ಯಂತರ ರೂ. ಲಾಭ ಮಾಡಿಕೊಂಡಿದ್ದಾರೆ. ಅಕ್ರಮ ಮಾಡಿದವರು, ಅಕ್ರಮವಾಗಿ ಹಣ ಸಂಪಾದನೆ ಮಾಡಿದವರು ಪ್ರಕರಣಗಳಿಂದ ರಕ್ಷಣೆ ಪಡೆದಿದ್ದಾರೆ. ಮುಖ್ಯಮಂತ್ರಿ ಜೊತೆಗೆ ಆಗಿನ ಇನ್ನಿಬ್ಬರು ಸಚಿವರು ಈ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದು, ಅವರಲ್ಲಿ ಒಬ್ಬರು ಈಗ ಸಂಸದರಾಗಿದ್ದಾರೆ ಎಂದು ಸುಳಿವು ನೀಡಿದ್ದಾರೆ.
ಲೈಂಗಿಕ ಹಗರಣದಲ್ಲಿ ಮಾಜಿ ಸಚಿವರು ನಟಿಯರನ್ನು ಬಳಸಿಕೊಂಡು ಕೋಟ್ಯಂತರ ಲಾಭ ಮಾಡಿಕೊಂಡಿರುವುದೂ ಅಲ್ಲದೇ, ನಟಿಯರು ಮತ್ತು ಮಾಜಿ ಸಿಎಂ ಜೊತೆಗಿನ ಖಾಸಗಿ ಕ್ಷಣಗಳನ್ನು ಸೆರೆ ಹಿಡಿದಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಅಗತ್ಯ ಬಿದ್ದರೆ ಇದನ್ನು ಬಳಸಿಕೊಂಡು ಮಾಜಿ ಸಿಎಂ ಅವರಿಗೆ ಬ್ಲಾಕ್ಮೇಲ್ ಮಾಡುವ ಉದ್ದೇಶ ಹೊಂದಿರಬಹುದೇ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ.
ಈ ಬಗ್ಗೆ ವಕೀಲ ಜಗದೀಶ್ ತಿಳಿಸಿದ್ದು, ಹೆಣ್ಣು ಮಕ್ಕಳಿಂದ ದೂರು ಕೊಡಿಸುವುದಾಗಲಿ ಅಥವಾ ಹಾಸನದ ಮಾದರಿಯಲ್ಲಿ ಸಿ.ಡಿ ಬಿಡುಗಡೆ ಮಾಡಿಸುವುದಾಗಲಿ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಅಧಿಕಾರದಲ್ಲಿದ್ದಾಗ ಈ ರೀತಿಯ ಅಶ್ಲೀಲ ಹಗರಣದಲ್ಲಿ ತೊಡಗಿ, ಮಾಜಿ ಸಚಿವರು ಯಾವೆಲ್ಲ ರೀತಿಯ ಲಾಭ ಪಡೆದಿರಬಹುದು, ಹಾಗೂ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟವೇನು ಎಂಬುದರ ಬಗ್ಗೆ ಗಂಭೀರ ತನಿಖೆ ಆಗಬೇಕು, ಈ ಬಗ್ಗೆ ಸುಪ್ರೀಂಕೋರ್ಟ್ ನಿಗಾವಣೆಯಲ್ಲೇ ತನಿಖೆ ಆಗಬೇಕು. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ವಕೀಲರ ತಂಡ ಕಡತಗಳನ್ನು ಸಜ್ಜುಗೊಳಿಸುತ್ತಿದೆ ಎಂದು ಹೇಳಿದ್ದಾರೆ.
ಮಾಜಿ ಸಚಿವ, ಹಾಲಿ ಶಾಸಕ ರಮೇಶ್ ಜಾರಕೀಹೋಳಿ ಅವರ ಸಿಡಿ ಪ್ರಕರಣದ ನಂತರ ರಾಜ್ಯಾದ್ಯಂತ ದೊಡ್ಡ ಸುದ್ಧಿಯಾಗಿದ್ದ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ ವಕೀಲ ಜಗದೀಶ್ ಆ ನಂತರ ಇದ್ದಕ್ಕಿದ್ದಂತೆಯೇ ಕಣ್ಮರೆಯಾಗಿದ್ದರು. ಈಗ ಮತ್ತೊಂದು ಲೈಂಗಿಕ ಹಗರಣದ ಹಿನ್ನೆಲೆಯಲ್ಲಿ ಸುದ್ದಿಯಾಗುತ್ತಿದ್ದು, ಇದನ್ನು ತಾರ್ಕಿಕ ಅಂತ್ಯಕ್ಕೆ ತಗೆದುಕೊಂಡು ಹೋಗುವರೇ ಎಂಬುದು ಈಗಿರುವ ಚರ್ಚಾರ್ಹ ವಿಚಾರವಾಗಿದೆ.