ಚಿಕ್ಕಮಗಳೂರು: ಸರ್ಕಾರಿ ಹಾಸ್ಟೆಲ್ನಲ್ಲಿ ಅಪ್ರಾಪ್ತ ಬಾಲಕಿಯರನ್ನು ಅರೆವೈದ್ಯಕೀಯ ಕೋರ್ಸ್ಗೆ ಪ್ರವೇಶ ಕೊಡಿಸುವ ನೆಪದಲ್ಲಿ ಆಮಿಷವೊಡ್ಡಿ ಲೈಂಗಿಕ ಶೋಷಣೆ ಮಾಡಿರುವ ಆಘಾತಕಾರಿ ಘಟನೆ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಶನಿವಾರ ಬೆಳಕಿಗೆ ಬಂದಿದೆ.
ವಂಚನೆಗೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಗ್ಯಾಂಗ್ ಕಟ್ಟಿಕೊಂಡು ಹಲವು ನರ್ಸಿಂಗ್ ವಿದ್ಯಾರ್ಥಿಗಳನ್ನು ಶೋಷಿಸುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ಬಂಧಿತರನ್ನು ವಸತಿ ನಿಲಯದ ಡಿ ಗ್ರೂಪ್ ಕಾರ್ಯಕರ್ತ ಸುರೇಶ್, ಮಹಿಳಾ ನರ್ಸ್ ಚಂದನಾ ಮತ್ತು ಆಕೆಯ ಪ್ರಿಯಕರ ವಿನಯ್ ಎಂದು ಗುರುತಿಸಲಾಗಿದೆ.
ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಂತ್ರಸ್ತರಿಗೆ ಪಾನೀಯ ಮತ್ತು ಆಹಾರದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟು, ನಂತರ ಲೈಂಗಿಕವಾಗಿ ಶೋಷಣೆ ಮಾಡಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಪ್ಯಾರಾಮೆಡಿಕಲ್ ಕೋರ್ಸ್ಗೆ ಪ್ರವೇಶ ನೀಡುವುದಾಗಿ ಹಾಸ್ಟೆಲ್ ಹುಡುಗಿಯರಿಗೆ ಸುರೇಶ್ ಆಮಿಷವೊಡ್ಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಪರೀಕ್ಷೆ ಮುಗಿದ ತಕ್ಷಣ ಕೆಲಸ ಸಿಗುತ್ತದೆ ಎಂದು ಹುಡುಗಿಯರನ್ನು ನಂಬಿಸಲಾಗಿತ್ತು.
ಹುಡುಗಿಯರಿಗೆ ಮನವರಿಕೆ ಮಾಡಿಕೊಟ್ಟ ನಂತರ ಅವರ ಪೋಷಕರ ಬಳಿಯೂ ಮಾತನಾಡಿ ಅವರ ಹೆಣ್ಣು ಮಕ್ಕಳಿಗೆ ಕೆಲಸ ಸಿಗುತ್ತದೆ ಎಂದು ಹೇಳಿ ಅವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ಸುರೇಶ್ ಅಂತಹ ಹೆಣ್ಣುಮಕ್ಕಳನ್ನು ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುವ ಚಂದನಾ ಬಳಿ ಕಳುಹಿಸುತ್ತಿದ್ದ.
ಹೆಣ್ಣು ಮಕ್ಕಳನ್ನು ಹೆಲ್ತ್ ಸೆಂಟರಿನಲ್ಲಿ ಇರುವಂತೆ ಮಾಡಿ ಅವರಿಗೆ ನಿದ್ರೆ ಮಾತ್ರೆ ಬೆರೆಸಿದ ಪಾನೀಯ ಮತ್ತು ಆಹಾರ ನೀಡುತ್ತಿದ್ದಳು. ಹೀಗೆ ಸಂತ್ರಸ್ತರು ಪ್ರಜ್ಞಾಹೀನರಾದ ಮೇಲೆ ಚಂದನಾಳ ಪ್ರೇಮಿ ವಿನಯ್ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ.
ಅವ್ಯವಹಾರದ ವಿಷಯ ತಿಳಿದ ಪೋಷಕರು ದೂರು ದಾಖಲಿಸಿದ್ದು, ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಹಗರಣ ಹೇಗೆ ಬೆಳಕಿಗೆ ಬಂತು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಮುಂದಿನ ತನಿಖೆ ನಡೆಯುತ್ತಿದೆ.