Sunday, June 8, 2025

ಸತ್ಯ | ನ್ಯಾಯ |ಧರ್ಮ

ಕೋಲಾರದಲ್ಲಿ ಇನ್ನೊಂದು ಮರ್ಯಾದೆಗೇಡು ಹತ್ಯೆ: ಯುವತಿಯ ತಂದೆ, ಸಂಬಂಧಿಕರ ಬಂಧನ

ಕೋಲಾರ: ‌ಹೆತ್ತ ಮಗಳು ಇನ್ನೊಂದು ಜಾತಿಯ ಹುಡುಗನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಆಕೆಯನ್ನು ಕೊಂದಿರುವ ಘಟನೆ ಕೋಲಾರದ ತೊಟ್ಲಿ ಗ್ರಾಮದಿಂದ ವರದಿಯಾಗಿದೆ.

ಕೊಲೆಯಾದ ಯುವತಿಯನ್ನು ರಮ್ಯಾ (19) ಎಂದು ಗುರುತಿಸಲಾಗಿದ್ದು. ಆರೋಪಿ ವೆಂಕಟೇಶಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಯುವತಿ ಬೇರೆ ಜಾತಿಯ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದು, ಈ ವಿಷಯ ತಿಳಿದು ಮನೆಯವರು ಅವನ ಜೊತೆ ಮಾತನಾಡದಂತೆ ನಿರ್ಬಂಧಿಸಿದ್ದರೂ ಆಕೆ ಮಾತು ಮುಂದುವರೆಸಿದ್ದಳು. ಇದರಿಂದ ಆಕ್ರೋಶಗೊಂಡ ಯುವತಿಯ ಕುಟುಂಬದವರು ಆ. 25 ರಂದು ಆಕೆಯನ್ನು ಕೊಂದು ತರಾತುರಿಯಲ್ಲಿ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಂತರ ಊರಿನಲ್ಲಿ ಕೊಲೆ ‌ಮಾಡಿರುವ ಕುರಿತು ಗುಸು ಗುಸು ಶುರುವಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಯುವತಿಯ ತಂದೆ ವೆಂಕಟೇಶ ಗೌಡನನ್ನು ಠಾಣೆಗೆ ಕೆರದು ವಿಚಾರಣೆ ಮಾಡಿದಾಗ ಪ್ರಕರಣ ಬಯಲಾಗಿದೆ. ಇಂದು ಬೆಳ್ಳಂಬೆಳಿಗ್ಗೆ ತಹಸೀಲ್ದಾರ್ ಹರ್ಷವರ್ಧನ್ ಅವರ ಸಮ್ಮುಖದಲ್ಲಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಮಗಳನ್ನು ಕೊಲೆ ಮಾಡಿದ ವೆಂಕಟೇಶ್‌ಗೌಡನ ಅಣ್ಣ ಮೋಹನ್‌ಗೌಡ, ತಮ್ಮ ಚೌಡೇಗೌಡ ಹಾಗೂ ಬಾಮೈದ ಆಂಜನೇಯರೆಡ್ಡಿ ಸಹಾಯ ಪಡೆದು ಅಂತ್ಯಕ್ರಿಯೆ ಮಾಡಲಾಗಿದೆ. ತಮ್ಮ ಜಮೀನಿನಲ್ಲಿ ಅವರಸರದಲ್ಲಿ ಕುಟುಂಬಸ್ಥರು ಮಣ್ಣು ಮಾಡಿ ಬಂದಿದ್ದಾರೆ. ಈ ಬಗ್ಗೆ ಅಕ್ಕಪಕ್ಕದ ಮನೆಯವರು ವಿಚಾರ ಮಾಡಿದರೂ ಯಾರೊಬ್ಬರೂ ಬಾಯಿಬಿಟ್ಟಿಲ್ಲ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ಗೌಪ್ಯ ತನಿಖೆ ಮಾಡಿದಾಗ ಸತ್ಯ ಹೊರಬಂದಿದೆ. ಇನ್ನು ಮಗಳನ್ನು ಕೊಲೆ ಮಾಡಿದ ಆರೋಪಿ ತಂದೆ ಹಾಗೂ ಮಣ್ಣು ಮಾಡಲು ಸಹಕರಿಸಿದವರನ್ನು ಸೇರಿಸಿ ಒಟ್ಟು 4 ಜನರ ವಿರುದ್ಧವೂ ಎಫ್‌ಐಆರ್‌ ದಾಖಲಿಸಿ ಬಂಧನ ಮಾಡಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page