ನಾಳೆಯಿಂದ ಪುಷ್ಯ ಮಳೆ ಅಬ್ಬರ 11 ಜಿಲ್ಲೆಗೆ ಯೆಲ್ಲೋ – ಅಲರ್ಟ್ ಘೋಷಣೆ

ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಪುಷ್ಯ ಮಳೆ ಚುರುಕಾಗಿದ್ದು, ಜುಲೈ 22 ರಂದು ರಾಜ್ಯದಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಬಿರುಗಾಳಿ ಸಮೇತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬುಧವಾರ ಉತ್ತರ ಒಳನಾಡಿನ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ. ಬೆಂಗಳೂರು ಹವಾಮಾನ ಕೇಂದ್ರವು ಹವಾಮಾನ ಮುನ್ಸೂಚನೆಯನ್ನು ಬಿಡುಗಡೆ ಮಾಡಿದೆ. ಉತ್ತರ ಒಳನಾಡಿನಲ್ಲಿ ಜುಲೈ 22 ಕ್ಕೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಜೊತೆಗೆ ಬಲವಾದ ಬಿರುಗಾಳಿ ಬೀಸುವ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ.

ಯಾವೆಲ್ಲಾ ಜಿಲ್ಲೆಗೆ ಯೆಲ್ಲೋ ಅಲರ್ಟ್‌?

ಜುಲೈ 22 ರಂದು ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಕಡಿಮೆಯಾಗಲಿದೆ. ಆದರೆ, ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಮಾತ್ರ ಯೆಲ್ಲೋ ಅಲರ್ಟ್ ಮುಂದುವರಿಯಲಿದೆ.ಜುಲೈ 21 ರಂದು ದಕ್ಷಿಣ ಕನ್ನಡ ಜಿಲ್ಲೆಯನ್ನು ಹೊರತುಪಡಿಸಿ ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆಯು ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ಈ ಭಾಗಗಳಲ್ಲಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಜುಲೈ 23 ರಿಂದ ಮಳೆ ವಿರಾಮ

ಜುಲೈ 23 ರಿಂದ ಕೆಲ ದಿನಗಳ ಕಾಲ ಮಳೆ ಮರೆಯಾಗಲಿದೆ. ಮತ್ತೆ ಮಳೆಯಾಗಲು ವಾತಾಂತ್ಯದವರೆಗೂ ಕಾಯಬೇಕಿದೆ. ಬಿತ್ತನೆ ಮಾಡಿಕೊಳ್ಳುವ ರೈತರಿಗೆ ಇದು ಬಿಡುವಿನ ಸಮಯವಾಇದೆ. ವಾರಾಂತ್ಯದಲ್ಲಿ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ಕರಾವಳಿ, ಮಧ್ಯ ಕರ್ನಾಟಕದಲ್ಲಿ ಪುಷ್ಯ ಮಳೆ

ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಹಾಗೂ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ ಸೋಮವಾರ ಸಂಜೆಯಿಂದ ಮಂಗಳವಾರ ಬೆಳಿಗ್ಗೆಯವರೆಗೂ ಸಾಧಾರಣ ಮಳೆಯಾಗಿದ್ದು, ಇಷ್ಟು ದಿನಗಳ ಕಾಲ ಮಳೆ ಅಭಾವದಿಂದ ವರುಣನಿಗಾಗಿ ಆಗಸದತ್ತ ನೋಡುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ. ಪುಷ್ಯ ಮಳೆಯು ರೈತರಲ್ಲಿಆಶಾಭಾವನೆ ಮೂಡಿಸಿದ್ದು, ಬಾಡುತ್ತಿದ್ದ ಬೆಳೆ ಚಿಗುರಲು ಈ ಮಳೆ ಟಾನಿಕ್‌ ಸಿಕ್ಕಂತಾಗಿದೆ. ಅಲ್ಲದೇ, ಬಿತ್ತನೆಯಾಗದ ಬಹುಪಾಲು ಹೊಲಗದ್ದೆಗಳನ್ನು ಬಿತ್ತನೆಗೆ ಹದ ಮಾಡಿಕೊಂಡು ರಾಗಿ ಸೇರಿ ಇತರೆ ಸಿರಿಧಾನ್ಯ ಬೆಳೆಯಲು ಈ ಮಳೆ ಅನುಕೂಲ ಮಾಡಿಕೊಟ್ಟಂತಾಗಿದೆ.

Related Articles

ಇತ್ತೀಚಿನ ಸುದ್ದಿಗಳು