ಬೆಂಗಳೂರು: ಮತಾಂತರ ಕಾಯ್ದೆಯ ಉದ್ದೇಶ ಸ್ವಾತಂತ್ರ ನೀಡುವುದಲ್ಲ, ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಕಸಿಯುವುದು ಎಂಬ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯ ವಿರುದ್ಧ ರಾಜ್ಯ ಬಿಜೆಪಿ ಘಟಕ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, ಸಂವಿಧಾನ ಕಲ್ಪಿಸಿದ ಧಾರ್ಮಿಕ ಸ್ವಾತಂತ್ರ್ಯ ದುರುಪಯೋಗ ಪಡಿಸಿಕೊಂಡು ಬಲವಂತದ ಮತಾಂತರದ ಮೂಲಕ ಸಂವಿಧಾನಕ್ಕೆ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಲಾಗುತ್ತಿದೆ ಇದಕ್ಕೆ ಕಾಂಗ್ರೆಸ್ ಬೆಂಬಲಿಸುತ್ತಿರುವುದೇಕೆ? ಎಂದು ಬಿಜೆಪಿ ಪ್ರಶ್ನಿಸಿದೆ.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಮತಾಂತರ ನಿಯಂತ್ರಣ ಕರಡು ಮಸೂದೆಗೆ ಸಿದ್ದರಾಮಯ್ಯ ಅವರು ಸಹಿ ಹಾಕಿದ್ದರು. ಈಗ ಕಾಂಗ್ರೆಸ್ ಪಕ್ಷ ಮಸೂದೆಯ ವಿಚಾರವಾಗಿ ರಾದ್ಧಾಂತ ಎಬ್ಬಿಸುತ್ತಿರುವುದು ವಿಪರ್ಯಾಸ. ಆದರೆ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಈಗ ವಿರೋಧಿಸುತ್ತಿರುವುದೇ? ಎಂದು ಬಿಜೆಪಿ ಅನುಮಾನಿಸಿದೆ.
ಮತಾಂತರ ನಿಯಂತ್ರಣ ಕಾಯ್ದೆ ಜಾರಿಗೆ ಕಾಂಗ್ರೆಸ್ ವಿರೋಧಿಸುತ್ತಿರುವುದೇಕೆ? ಕಾಂಗ್ರೆಸ್ ಪಕ್ಷ ಮತಾಂತರದ ಪರವಾಗಿದೆಯೇ? ಅಥವಾ ಮತಾಂತರ ನಿಯಂತ್ರಣವನ್ನು ಬೆಂಬಲಿಸಿದರೆ ಮತ ಕಳೆದುಕೊಳ್ಳುವ ಭಯವೇ? ಎಂದು ಕಾಂಗ್ರೆಸ್ ಕುರಿತು ಬಿಜೆಪಿ ವ್ಯಂಗ್ಯವಾಡಿದೆ.