Sunday, June 23, 2024

ಸತ್ಯ | ನ್ಯಾಯ |ಧರ್ಮ

ಕರಾವಳಿಯ ನೈಜ ಘಟನೆಯನ್ನು ಬಿಚ್ಚಿಟ್ಟ ಚಿತ್ರ 19.20.21

ಸ್ವಾತಂತ್ರ್ಯ, ಸಮಾನತೆಯ ಹಕ್ಕುಗಳಿದ್ದರೂ ಸಹ ಇಂದಿಗೂ ಸ್ತ್ರೀಯರು, ದಲಿತರು, ಶೋಷಿತ ವರ್ಗದವರು ದಿನ ದಿನಕ್ಕೂ ಮೇಲ್ವರ್ಗದವರ, ಅಧಿಕಾರಿಗಳ ದಬ್ಬಾಳಿಕೆಗೆ ಒಳಗಾಗುವ ಪರಿಸ್ಥಿತಿ ಇದೆ. ಆಡಳಿತ ನಡೆಸುವವರು ಸಮಾನತೆಯತ್ತ ಕೆಲಸಮಾಡದೆ ತಮ್ಮ ಏಳಿಗೆಯನ್ನು ಮಾತ್ರ ಬಯಸುತ್ತಿರುವುದು ವಿಪರ್ಯಾಸ. ಇದೆಲ್ಲಾ ಎಂದು ಕೊನೆಗೊಳ್ಳುತ್ತದೋ?. 19.20.21 ಸಿನೆಮಾವು ಪತ್ರಿಕೋದ್ಯಮ ವಿದ್ಯಾರ್ಥಿ ಪ್ರದೀಪ್ ಶಾಕ್ಯ, ಕೊಲ್ಪೆದಬೈಲ್ ಇವರನ್ನು  ಹೀಗೆ ಚಿಂತಿಸುವಂತೆ ಮಾಡಿದೆ.

ಕನ್ನಡ ಚಿತ್ರರಂಗದಲ್ಲಿ ಭಾರಿ ಬೆಳವಣಿಗೆ ಆಗುತ್ತಿರುವುದು ಸಂತಸದ ಸಂಗತಿ. ಸಿನೆಮಾ ಎಂದರೆ ಮನರಂಜನೆಯ ಉದ್ಯಮ ಎಂದು ಭಾವಿಸಿದ್ದ ನನಗೆ, ಇತ್ತೀಚೆಗೆ ಬಂದ 19.20.21 ಚಿತ್ರವು ನನ್ನಲ್ಲಿದ್ದ ಸಿನಿಮಾ ಮೇಲಿನ ಅಭಿಪ್ರಾಯವನ್ನು ಬದಲಾಯಿಸಿತು. ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ನೈಜ ಘಟನೆ ಆಧಾರಿತ ಸಿನಿಮಾಗಳು ಬಂದಿವೆಯಾದರೂ, ಈ ಸಿನಿಮಾ ನೋಡಿದಾಗ ಸ್ವಲ್ಪ ಹೊತ್ತು ಭಾವುಕನಾದೆ ಜತೆಗೆ ಖುಷಿಯೂ ಆಯಿತು. 

 19.20.21 ಮಂಸೋರೆ ನಿರ್ದೇಶನದ ನೈಜ ಘಟನೆ ಆಧಾರಿತ ಸಿನಿಮಾ. ದಕ್ಷಿಣ ಕನ್ನಡ ಜಿಲ್ಲೆಯ ಕುತ್ಲೂರು ಎಂಬಲ್ಲಿ ಮಾರ್ಚ್ 2012ರಲ್ಲಿ ಮಲೆಕುಡಿಯ ಸಮುದಾಯದ ವಿಠ್ಠಲ್ ಮಲೆಕುಡಿಯ ಮತ್ತು ಅವರ ತಂದೆ ಹಾಗೂ ಸಮುದಾಯದವರಿಗೆ ನಡೆದ ಅನ್ಯಾಯವೇ ಈ ಸಿನಿಮಾ. 

 ನಾನು ಮೂಲತಃ ದಕ್ಷಿಣ ಕನ್ನಡ(ತುಲುನಾಡ್) ಜಿಲ್ಲೆಗೆ ಸೇರಿದವನಾಗಿದ್ದರೂ ಈ ಘಟನೆಯ ಕುರಿತು ಒಂದಿಷ್ಟೂ ಮಾಹಿತಿ ನನಗೆ ಇರಲಿಲ್ಲ. ಹಾಗಾಗಿ ಈ ಅನ್ಯಾಯವನ್ನು, ಅಲ್ಲಿ ನಡೆದ ಹೋರಾಟವನ್ನು ಎಲ್ಲರೆದುರು ತಂದ ಮಂಸೋರೆಗೆ ಧನ್ಯವಾದಗಳು.

19.20.21 ಇದು ಮೂರು ಮೂಲಭೂತ ಹಕ್ಕುಗಳ ಕುರಿತು ಮಾಹಿತಿ ನೀಡುತ್ತದೆ. ಜತೆಗೆ ಇಲ್ಲಿ ಈ ಹಕ್ಕುಗಳನ್ನು ಯಾವ ರೀತಿ ಆಗಿನ ಸರ್ಕಾರ, ವ್ಯವಸ್ಥೆ ಕಿತ್ತುಕೊಂಡಿದೆ ಎಂದು ನೋಡಬಹುದು. ಚಿತ್ರದ ಪ್ರತಿಕ್ಷಣವು ಬೇಸರ ಮೂಡಿಸುತ್ತದೆ. ವ್ಯವಸ್ಥೆಯ ಮೇಲೆ ಆಕ್ರೋಶ ಹುಟ್ಟಿಸುತ್ತದೆ. ವಿಠ್ಠಲ್ ರವರ ಕೈಗೆ ಬೇಡಿ ಹಾಕಿ ಪರೀಕ್ಷೆ ಬರೆಸಿದ್ದು, ಜೈಲಿನಲ್ಲಿ ಒಂದು ಹೊತ್ತು ನಿದ್ದೆ ಮಾಡಲೂ ಬಿಡದೇ ಟಾರ್ಚರ್ ನೀಡಿರುವುದನ್ನು ನೋಡುತ್ತಿದ್ದಾಗ ಆ ಪೋಲಿಸರಿಗೆ, ನಕ್ಸಲ್ ನಿಗ್ರಹ ದಳದವರಿಗೂ ಅದೇ ರೀತಿ ಟಾರ್ಚರ್ ನೀಡಿ ಶಿಕ್ಷಿಸ ಬೇಕೆಂದೆನಿಸಿತು. ಆದರೆ ಏನು ಮಾಡಲಿ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕಿದೆ ಎಂದು ಅರಿತವ ನಾನು. 

 ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿ, ಶಿಕ್ಷಣ, ಉದ್ಯೋಗ ಪಡೆಯಲು ಅನುಭವಿಸಿದ ಕಷ್ಟ ನೋಡಿ ಬೇಸರವಾದರೂ ಮುಂದಕ್ಕೆ ಪ್ರಜಾವಾಣಿ ದಿನ ಪತ್ರಿಕೆಯಲ್ಲಿ ಉದ್ಯೋಗ ಸಿಕ್ಕಿದ್ದು ಖುಷಿಯನ್ನೂ ತಂದಿದೆ. ನೈಜ ಘಟನೆಯ ನಾಯಕರಾದ ನವೀನ್ ಸೂರಿಂಜೆ, ಮುನೀರ್ ಕಾಟಿಪಳ್ಳ, ದಿನೇಶ್ ಹೆಗ್ಡೆ ಉಳೆಪಾಡಿ ಎಲ್ಲರಿಗೂ ನನ್ನ ನಮನಗಳು.

ಪತ್ರಕರ್ತ ನವೀನ್ ಸೂರಿಂಜೆಯವರ ‘ಕುತ್ಲೂರು ಕಥನ’ ಪುಸ್ತಕದಲ್ಲಿ ಈ ಘಟನೆಯ ಕುರಿತು ಇದೆ. 19.20.21 ಸಿನಿಮಾ ನೋಡಿದವರೂ, ನೋಡದೆ ಇದ್ದವರೂ, ಎಲ್ಲರೂ ಈ ಪುಸ್ತಕವನ್ನೂ ಓದಿ.

ಪ್ರಸ್ತುತ ಭಾರತದಲ್ಲಿಂದು ತಪ್ಪು ಮಾಡದಿದ್ದರೂ ಅದೆಷ್ಟೋ ಮಂದಿ ವ್ಯವಸ್ಥೆಯ ಮೋಸದ ಜಾಲಕ್ಕೆ ಸಿಕ್ಕಿ ತಮ್ಮ ಶಿಕ್ಷಣ, ಜೀವನ ಕಳೆದುಕೊಂಡವರನ್ನು ನಾವು ದಿನೇ ದಿನೇ ಪತ್ರಿಕೆಗಳಲ್ಲಿ, ಸುದ್ದಿ ವಾಹಿನಿಗಳಲ್ಲಿ ನೋಡುತ್ತಿರುತ್ತೇವೆ. ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳಾಗಿ ಸ್ವಾತಂತ್ರ್ಯ, ಸಮಾನತೆಯ ಹಕ್ಕುಗಳಿದ್ದರೂ ಸಹ ಇಂದಿಗೂ ಸ್ತ್ರೀಯರು, ದಲಿತರು, ಶೋಷಿತ ವರ್ಗದವರು ದಿನ ದಿನಕ್ಕೂ ಮೇಲ್ವರ್ಗ, ಅಧಿಕಾರಿಗಳ ದಬ್ಬಾಳಿಕೆಗೆ ಒಳಗಾಗುವ ಪರಿಸ್ಥಿತಿ ಇದೆ. ಆಡಳಿತ ನಡೆಸುವವರು ಸಮಾನತೆ ಬಯಸದೆ ತಮ್ಮ ಏಳಿಗೆಯನ್ನು ಮಾತ್ರ ಬಯಸುತ್ತಿರುವುದು ವಿಪರ್ಯಾಸ. ಇದೆಲ್ಲಾ ಎಂದು ಕೊನೆಗೊಳ್ಳುತ್ತದೋ? 

ಪ್ರದೀಪ್ ಶಾಕ್ಯ, ಕೊಲ್ಪೆದಬೈಲ್

ಪತ್ರಿಕೋದ್ಯಮ ವಿದ್ಯಾರ್ಥಿ

Related Articles

ಇತ್ತೀಚಿನ ಸುದ್ದಿಗಳು