ಬೆಂಗಳೂರು: ಹುಣಸಸಮಾರನಹಳ್ಳಿಯ ಕ್ವಾರಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಸ್ಫೋಟಕ ಕಾಯ್ದೆ ಮತ್ತು ಕರ್ನಾಟಕ ಭೂಕಂದಾಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಯಲಹಂಕ ತಹಶೀಲ್ದಾರ್ ಅನಿಲ್ ಅರೋಲಿಕರ್ ನೀಡಿದ ದೂರಿನ ಮೇರೆಗೆ ಚಿಕ್ಕಜಾಲ ಪೊಲೀಸರು ಮುನಿರತ್ನ, ಆನಂದನ್, ಗಣೇಶ್ ವಿ, ಮತ್ತು ರಾಧಮ್ಮ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸುವಂತೆ ಜೈ ಭೀಮ್ ಸೇನೆ ತಹಶೀಲ್ದಾರ್ ಅವರಿಗೆ ಮನವಿ ಮಾಡಿದೆ ಎಂದು ಎಫ್ಐಆರ್ ಮಾಹಿತಿಯಲ್ಲಿ ತಿಳಿಸಲಾಗಿದೆ. ಕಲ್ಲುಗಣಿಗಾರಿಕೆಗೆ ಸ್ಫೋಟಕಗಳನ್ನು ಬಳಸುವುದರ ವಿರುದ್ಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು, ದೂರಿನ ನಂತರ, ಕ್ಷೇತ್ರ ಸಮೀಕ್ಷೆಯನ್ನು ನಡೆಸಲಾಯಿತು, ಅಲ್ಲಿ ಕಲ್ಲು ಗಣಿಗಾರಿಕೆಗೆ ಸ್ಫೋಟಕಗಳನ್ನು ಬಳಸಲಾಗಿರುವುದು ಕಂಡುಬಂದಿದೆ. ಈ ಚಟುವಟಿಕೆಗಳು ಆ ಪ್ರದೇಶದಲ್ಲಿ ಭೂಮಿಯನ್ನು ಹಾನಿಗೊಳಿಸುತ್ತಿವೆ ಎನ್ನಲಾಗಿದೆ. ಕಲ್ಲುಗಳ ಮಾರಾಟವು ರಾಜ್ಯ ಸರ್ಕಾರಕ್ಕೆ ನಷ್ಟವನ್ನುಂಟುಮಾಡುತ್ತಿದೆ. ಕ್ವಾರಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವವರು ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಎಫ್ಐಆರ್ ತಿಳಿಸಿದೆ.
ಗಣಿಗಾರಿಕೆ ಅಂದ್ರೆ ಏನು ಅಂತ್ಲೇ ಗೊತ್ತಿಲ್ಲ ಎಂದ ಮುನಿರತ್ನ
ಗಣಿಗಾರಿಕೆ ವಿಚಾರದಲ್ಲಿ FIR ದಾಖಲಾಗಿರುವ ವಿಷಯದ ಕುರಿತು ಪ್ರತಿಕ್ರಿಯಿಸಿದ ಮುನಿರತ್ನ ಅವರು, ಗಣಿಗಾರಿಕೆ ಮಾಡುವ ವೃತ್ತಿ ನನ್ನದಲ್ಲ ಗಣಿಗಾರಿಕೆಯೆಂದರೆ ಏನು ಎನ್ನುವುದೂ ನನಗೆ ಗೊತ್ತಿಲ್ಲ ನಾನು ಮನೆ ಕಟ್ಟಲು ಪಾಯ ತೆಗೆಯುತ್ತಿದ್ದೇನೆ. ಗಣಿಗಾರಿಕೆಯೆಂದರೆ ಸರ್ಕಾರದಿಂದ ಲೈಸೆನ್ಸ್ ಪಡೆಯಬೇಕು. ನಾನು ಕಟ್ಟಡದ ಪಾಯ ತೆಗೆಯುವಾಗ ಕಲ್ಲು ಸಿಕ್ಕಿದ್ದನ್ನು ಒಡೆಯಲು ಲೈಸೆನ್ಸ್ ಪಡೆದವರ ಕೈಯಿಂದಲೇ ಜಿಲೆಟಿನ್ ಇಟ್ಟು ಒಡೆಸಿದ್ದು ಬಿಟ್ಟರೆ ಗಣಿಗಾರಿಕೆ ಮಾಡಿಲ್ಲ ಎಂದು ಹೇಳಿದ್ದಾರೆ.