Saturday, June 21, 2025

ಸತ್ಯ | ನ್ಯಾಯ |ಧರ್ಮ

ಧ್ವೇಷ ಭಾಷಣ : ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ ಎಫ್ಐಆರ್ ದಾಖಲು

ಧಾರ್ಮಿಕ ಸಭೆಯೊಂದರಲ್ಲಿ ‘ಬ್ಯಾರಿ’ ಸಮುದಾಯದ ವಿರುದ್ಧ ಅವಹೇಳನಕಾರಿ ಪದ ಬಳಸಿದ ಹಾಗೂ ಧರ್ಮಗಳ ನಡುವೆ ದ್ವೇಷ ಹುಟ್ಟಿಸಲು ಯತ್ನಿಸಿದ ಬಗ್ಗೆ ಶಾಸಕ ಹರೀಶ್‌ ಪೂಂಜ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಶನಿವಾರ ರಾತ್ರಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ವೇದಿಕೆ ಸಭೆಯಲ್ಲಿ ಶಾಸಕ ಹರೀಶ್ ಪೂಂಜ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಮಾತನಾಡಿದ್ದರು.

ಸಭೆಯಲ್ಲಿ ‘ಕಂತ್ರಿ ಬ್ಯಾರಿಗಳು ನಾಲ್ಕು ಟ್ಯೂಬ್‌ಲೈಟ್ ಒಡೆದರೂ ನಾವು ಯಾರೂ ಎದೆಗುಂದಿಲ್ಲ. ದಿನ ಬೆಳಗಾಗುವಾಗ ಕಂತ್ರಿ ಬ್ಯಾರಿಗಳು ಟ್ಯೂಬ್‌ಲೈಟ್ ಒಡೆಯುತ್ತಿದ್ದಾರೆ, ಡೀಸೆಲ್ ಕದಿಯುತ್ತಿದ್ದಾರೆ ಎಂದು ಊರಿನ ಯುವಕರು ಬಂದು ಹೇಳಿದರು. ಯಾರೂ ತಲೆ ಬಿಸಿ ಮಾಡಬೇಡಿ. ಬ್ರಹ್ಮಕಲಶ ಮುಗಿದು ದೃಢಕಲಶ ಆಗುವ ಮುನ್ನ ಇದನ್ನು ಮಾಡಿದ್ದು ಯಾರೆಂದು ಗೊತ್ತಾಗುತ್ತದೆ. ಗೋಪಾಲಕೃಷ್ಣ ದೇವರು ತೋರಿಸಿಕೊಡುತ್ತಾನೆ’ ಎಂದು ಹರೀಶ್ ಪೂಂಜ ಹೇಳಿದ್ದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವರ್ತಕ ಇಬ್ರಾಹಿಂ ಎಸ್‌ಬಿ ಅವರು ದೂರು ನೀಡಿದ್ದು ಭಾರತೀಯ ನ್ಯಾಯಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್ 196 (ಧರ್ಮಗಳ ನಡುವೆ ದ್ವೇಷ ಹುಟ್ಟಿಸುವುದು) ಹಾಗೂ ಸೆಕ್ಷನ್ 353 (2)ರ (ಶಾಂತಿಭಂಗವನ್ನು ಉಂಟುಮಾಡಲು ಉದ್ದೇಶಪೂರ್ವಕವಾಗಿ ಅವಹೇಳನ ಮಾಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಬ್ಯಾರಿಗಳಲ್ಲಿ ಜಾತಿ ಇಲ್ಲ ಸರ್ಕಾರಿ ಅಂಕಿ ಅಂಶ ಹೇಳುತ್ತದೆ. ಆದರೆ ಅವರಲ್ಲೂ 70ರಿಂದ 74 ಜಾತಿಗಳಿವೆ. ಆದರೆ ನಮಗೆ ಯಾರಿಗೂ ಅವರ ಜಾತಿ ಯಾವುದು ಎಂದು ಗೊತ್ತಿಲ್ಲ. ನಮಗೆ ಉಸ್ಮಾನಕ್ಕ, ಅಬ್ದುಲ್ಲ, ಇಬ್ರಾಹಿಂ ಬ್ಯಾರಿಗಳೆಂದೇ ಅವರು ಎಂದೇ ಗೊತ್ತು. ನಮ್ಮಲ್ಲಿ ಹಾಗಲ್ಲ. ಅವ ಬ್ರಾಹ್ಮಣ, ಇವ ಬಿಲ್ಲವ, ಅವ ಗೌಡ, ಕುಲಾಲ ಎಂದು ಜಾತಿ ಆಧಾರದಲ್ಲಿ ಹಿಂದುಗಳನ್ನು ಒಡೆಯುವ ಕೆಲಸ ಮಾಡುತ್ತಾರೆ. ಹಿಂದೂಗಳಾಗಿ ನಾವೂ ಒಗ್ಗಟ್ಟಿನಿಂದ ಇರಬೇಕು. ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ‘ನೀನು ಹಿಂದೂವಾ ಮುಸ್ಲಿಮಾ ಎಂದು ಮಾತ್ರ ಕೇಳಿದ್ದರು. ‘ನೀವು ಶೆಟ್ರಾ, ಭಟ್ರಾ, ಬಿಲ್ಲವನಾ, ಗೌಡಾ, ದಲಿತನಾ’ ಎಂದು ಭಯೋತ್ಪಾದಕರು ಕೇಳಿದ್ದಾರೆಯೇ. ಹಿಂದುಗಳನ್ನು ಗುರಿಯಾಗಿಸಿ ಕೊಂದರು. ಆ ಕಾರಣಕ್ಕಾಗಿ ಜಾತಿ ವ್ಯವಸ್ಥೆ ಬಿಟ್ಟು ಹಿಂದೂಗಳಾಗಿ ದೇವಸ್ಥಾನ ಉಳಿಸಬೇಕು’ ಎಂದು ಹರೀಶ್ ಪೂಂಜ ಮಾತನಾಡಿದ ವಿಡಿಯೋ ವೈರಲ್ ಆಗಿತ್ತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page