ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾಪರಿವೀಕ್ಷಕ (DG&IGP) ಎಂ.ಎ. ಸಲೀಂ ಅವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ “ಸುಳ್ಳು ಸುದ್ದಿ” ಹಬ್ಬಿಸಿದ ಆರೋಪದ ಮೇಲೆ ಬೆಂಗಳೂರು ಪೊಲೀಸರು ಸ್ವಯಂಪ್ರೇರಿತ (suo motu) ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಎಫ್ಐಆರ್ ಪ್ರಕಾರ, ಜನವರಿ 22 ರಂದು ಕೊಲೆ ಆರೋಪಿ ಪುನೀತ್ ಕೆರೆಹಳ್ಳಿ ಮತ್ತು ಆತನ ಐವರು ಸಹಚರರು ಸೋಲದೇವನಹಳ್ಳಿ ಸಮೀಪದ ಸಕೀನಾ ತಸ್ಲೀಮ್ ಎಂಬುವವರಿಗೆ ಸೇರಿದ ಸ್ಥಳಕ್ಕೆ ಭೇಟಿ ನೀಡಿದ್ದರು ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಟ್ಟಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಲಭ್ಯವಾಗಿತ್ತು.
ಇತ್ತೀಚೆಗೆ ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾಗಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ಕೆರೆಹಳ್ಳಿ, ಸದರಿ ವ್ಯಕ್ತಿಯು ಬಾಂಗ್ಲಾದೇಶಿಯರನ್ನು ಬೆಂಗಳೂರಿಗೆ ಕರೆತಂದು, ಅವರಿಗೆ ಅಕ್ರಮವಾಗಿ ವಸತಿ ಕಲ್ಪಿಸಿದ್ದಾರೆ ಎಂದು ಆರೋಪಿಸಿದ್ದ. ಅಷ್ಟೇ ಅಲ್ಲದೆ, ಈ ಘಟನೆ ನಡೆಯುತ್ತಿರುವ ಸ್ಥಳವು ರಾಜ್ಯ ಪೊಲೀಸ್ ಮುಖ್ಯಸ್ಥರಾದ ಸಲೀಂ ಅವರ ‘ಬೇನಾಮಿ’ ಆಸ್ತಿಯಾಗಿದೆ ಎಂಬ ಸುಳ್ಳು ಸುದ್ದಿಯನ್ನೂ ಕೆರೆಹಳ್ಳಿ ಹಬ್ಬಿಸಿದ್ದ.
ಮುಂದುವರಿದು, ಬಾಂಗ್ಲಾದೇಶಿ ಮುಸ್ಲಿಮರು ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ ಎಂದು ಆರೋಪಿಸಿ, ಕೆರೆಹಳ್ಳಿ ಲೈವ್ ವಿಡಿಯೋ ಮಾಡಿ ಅದನ್ನು ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ.
“ಈ ರೀತಿ ಮಾಡುವ ಮೂಲಕ, ಅವರು ಸಾರ್ವಜನಿಕರನ್ನು ಪ್ರಚೋದಿಸುತ್ತಿದ್ದಾರೆ, ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಮೂಲಕ ಸಮಾಜದ ಶಾಂತಿಯನ್ನು ಕದಡುತ್ತಿದ್ದಾರೆ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ,” ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
