ಮಗಳು ಪರಜಾತಿಯವನನ್ನು ಪ್ರೀತಿಸಿದಳು ಎನ್ನುವ ಕಾರಣಕ್ಕೆ ಹುಟ್ಟಿಸಿದ ತಂದೆಯೇ ಮಗಳನ್ನು ಉಸಿರುಗಟ್ಟಿಸಿ ಕೊಂದಿರುವ ಘಟನೆ ಕೋಲಾರ ಜಿಲ್ಲೆ ಬಂಗಾರ ಪೇಟೆ ತಾಲ್ಲೂಕಿನ ಬೋಡಗುರ್ಕಿ ಎನ್ನುವಲ್ಲಿ ನಡೆದಿದೆ.
ಬೋಡಗುರ್ಕಿಯ ಪರಿಶಿಷ್ಟ ಜಾತಿಯಡಿ ಬರುವ ಸಮುದಾಯದ ಹುಡುಗನೊಬ್ಬ ಗೊಲ್ಲ ಸಮುದಾಯದ ಹುಡುಗಿಯನ್ನು ಪ್ರೀತಿಸಿದ್ದು ವಿಷಯ ಮನೆಯಲ್ಲಿ ಗೊತ್ತಾಗಿ ಈ ದುರಂತ ಸಂಭವಿಸಿದೆ. ತನ್ನ ಗೆಳತಿ ಸತ್ತ ಸುದ್ದಿ ತಿಳಿದು ಯುವಕ ಕೂಡಾ ಮೈಸೂರು – ಚೆನೈ ಎಕ್ಸ್ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೊದಲು ದೂರದ ಉತ್ತರ ಭಾರತ ಕಡೆಯಿಂದ ಸುದ್ದಿಯಾಗುತ್ತಿದ್ದ ಮರ್ಯಾದೆಗೇಡು ಹತ್ಯೆಗಳು ಈಗ ಪದೇಪದೇ ಕರ್ನಾಟಕದಲ್ಲೂ ಸುದ್ದಿಯಾಗುತ್ತಿರುವುದು ನಿಜಕ್ಕೂ ದುರಂತ.
ಪರಸ್ಪರ ಪ್ರೇಮದಲ್ಲಿದ್ದ ಗಂಗಾಧರ (23) ಮತ್ತು ಕೀರ್ತಿ ನೆರೆಹೊರೆಯವರಾಗಿದ್ದರು. ಗಂಗಾಧರ ದ್ವಿತೀಯ ವರ್ಷದ ಪಿಯುಸಿ ಫೇಲಾಗಿ ಗಾರೆ ಕೆಲಸ ಮಾಡುತ್ತಿದ್ದರೆ, ಕೀರ್ತಿ ಕೆಜಿಎಫ್ನ ಕಾಲೇಜ್ ಒಂದರಲ್ಲಿ ಎರಡನೇ ವರ್ಷದ ಪದವಿ ತರಗತಿಯಲ್ಲಿ ಓದುತ್ತಿದ್ದರು.
ʼಮನೆಯಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ವಿಷಯ ತಿಳಿದು ಗಲಾಟೆ ಎದ್ದ ಕಾರಣ ಕೀರ್ತಿ ತಾನು ಗಂಗಾಧರನನ್ನೇ ಮದುವೆಯಾಗುವುದಾಗಿ ಹೇಳಿದ್ದಾರೆ. ಇದರಿಂದ ಕೆರಳಿದ ಕೀರ್ತಿಯ ತಂದೆ ಕೃಷ್ಣಮೂರ್ತಿ ಬೆಳಗಿನ ಜಾವದಲ್ಲಿ ತನ್ನ ಮಗಳನ್ನೇ ಉಸಿರುಗಟ್ಟಿಸಿ ಕೊಂದಿದ್ದಾನೆʼ ಎಂದು ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಧರಣಿದೇವಿ ಮಾಲಗತ್ತಿ ತಿಳಿಸಿದ್ದಾರೆ.