ಉಜಿರೆ: ಇದೀಗ ಅಗತೆ ನಡೆಯುತ್ತಿರುವ ಜಾಗ ಅರಣ್ಯ ಇಲಾಖೆಗೆ ಸೇರಿದ್ದು, ಈ ಮೊದಲು ಅದನ್ನು ಹೆಗ್ಗಡೆಯವರಿಗೆ ಸೇರಿದ ಜಾಗವೆನ್ನುವಂತೆ ಬಿಂಬಿಸಲಾಗಿತ್ತು ಎಂದು ತಿಮರೋಡಿ ಮಹೇಶ್ ಶೆಟ್ಟಿ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇದೀಗ ಅಗೆತ ನಡೆಸುತ್ತಿರುವ ಸ್ಥಳದಲ್ಲಿ ಕಳೇಬರಗಳು ಸಿಗುತ್ತಿಲ್ಲ ಎಂದಾದರೆ ಆ ಕಳೇಬರಗಳು ಎಲ್ಲಿ ಹೋಗಿವೆ ಎಂದು ಅವರು ಪ್ರಶ್ನಿಸಿದ್ದಾರೆ.
ಅಗೆತ ಮಾಡುತ್ತಿರುವ ಸ್ಥಳದಲ್ಲಿ ಎಟಿಮ್ ಕಾರ್ಡ್, ಎಲುಬು ಎಲ್ಲ ಸಿಗುತ್ತಿದೆಯೆಂದಾದರೆ ಅತ್ಯಾಚಾರಿಗಳು ಈ ಸ್ಥಳವನ್ನು ದೊಡ್ಡ ಮಟ್ಟದಲ್ಲಿ ಅತ್ಯಾಚಾರ ಎಸಗುವುದಕ್ಕೆ ಬಳಸಿಕೊಂಡಿರುವುದು ಸಾಬೀತಾಗುವಂತಿದೆ ಎಂದು ಅವರು ಹೇಳಿದ್ದಾರೆ.
ಮೊದಲು ಈ ಜಾಗವನ್ನು ವಿರೇಂದ್ರ ಹೆಗಡೆಯವರ ಜಾಗ ಎಂದು ಊರಿನವರನ್ನು ನಂಬಿಸಲಾಗಿತ್ತು. ಸೌಜನ್ಯ ಸತ್ತ ನಂತರ ಜನರಿಗೆ ಇದು ಅರಣ್ಯ ಇಲಾಖೆಯ ಜಾಗ ಎನ್ನುವುದು ತಿಳಿಯಿತು. ಮುಂದೆ ಈ ಸ್ಥಳವನ್ನು ಅರಣ್ಯ ಇಲಾಖೆ ತನ್ನ ವಶಕ್ಕೆ ತೆಗೆದುಕೊಂಡಿತು. ಈ ಮೊದಲು ಅ ಜಾಗವನ್ನು ಅತ್ಯಾಚಾರಕ್ಕೆ ಬಳಸಲಾಗುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ.
ಆ ಗುಡ್ಡೆ ಪೂರ್ತಿಯಾಗಿ ಹೆಣಗಳೇ ತುಂಬಿವೇ ಅಷ್ಟೂ ಪಾಯಿಂಟುಗಳನ್ನು ಅಗೆಯಬೇಕು. ಅಗೆದ ನಂತರ ನಾವು ಮಾತನಾಡುತ್ತೇವೆ. ಇದಾದ ನಂತರ ಈ ವಿಷಯ ವಿಶ್ವ ಗಮನ ಮಾತ್ರವಲ್ಲ, ವಿಶ್ವಸಂಸ್ಥೆಗೂ ತಲುಪುತ್ತದೆ ಅದೇ ಇಲ್ಲಿಗೆ ಬರುತ್ತದೆ ಎಂದರು.
ಜನರು ಈ ಗುಡ್ಡೆಯತ್ತ ಹೋಗದಂತೆ ತಡೆಯಲು ಈ ಹಿಂದೆ ಅಲ್ಲಿ ಹಾವು ಇದೆ ಹೆಬ್ಬಾವು ಇದೆ ಎಂದೂ ಹೆದರಿಸಲಾಗುತ್ತಿತ್ತು ಎಂದೂ ಈ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು.
ಬಂಗಲೆ ಗುಡ್ಡದಲ್ಲಿ ಎಲ್ಲಿ ಅಗೆದರೂ ಮೂಳೆ ಸಿಗುತ್ತದೆ, ಇದರಲ್ಲಿ ಅನುಮಾನವಿಲ್ಲ. ಆದರೆ ಈ ಅಗೆಯುತ್ತಿರುವವರು ಸರಿಯಾದ ಮನಸ್ಸು ಮಾಡಬೇಕಷ್ಟೇ ಎಂದು ಮಹೇಶ್ ಶೆಟ್ಟಿ ಹೇಳಿದ್ದಾರೆ.