Home ಬ್ರೇಕಿಂಗ್ ಸುದ್ದಿ ಬಿಜೆಪಿ ತೊರೆಯುವ ಭರದಲ್ಲಿ ಅಸೂಕ್ಷ್ಮವಾಗಿ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ

ಬಿಜೆಪಿ ತೊರೆಯುವ ಭರದಲ್ಲಿ ಅಸೂಕ್ಷ್ಮವಾಗಿ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ

0

ಮಾಜಿ ಸಂಸದ ಎಲ್​ಆರ್​ ಶಿವರಾಮೇಶಗೌಡ ಬಿಜೆಪಿ ತೊರೆದು ಕಾಂಗ್ರೆಸ್​ ಸೇರುವ ನಿರ್ಧಾರ ಮಾಡಿರುವ ಸಂದರ್ಭದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತೀರಾ ಅಸೂಕ್ಷ್ಮತೆಯಿಂದ ಮಾತನಾಡಿ ಈಗ ರಾಜಕೀಯ ವಲಯದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಮಂಡ್ಯ ಜನತೆ ಬಗ್ಗೆ ವಿವಾದಾತ್ಮ ಹೇಳಿಕೆ ನೀಡಿದ್ದಾರೆ.

“ಮಂಡ್ಯದವರೆಲ್ಲ ನರಸತ್ತವರು, ಗಂಡಸರಾಗ್ರಪ್ಪ, ಕೈಗೆ ಬಳೆ‌ ತೊಟ್ಟುಕೊಳ್ಳಬೇಡಿ” ಎಂಬ ಪದ ಪ್ರಯೋಗಗಳ ಮೂಲಕ ಒಬ್ಬ ರಾಜಕಾರಣಿ ಎಂಬ ಪ್ರಜ್ಞೆಯೂ ಇಲ್ಲದೇ ಮಾಜಿ ಸಂಸದ ಶಿವರಾಮೇಗೌಡ ಸೂಕ್ಷ್ಮತೆ ಮರೆತು ಮಾತನಾಡಿದ್ದಾರೆ.

ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರನ್ನು ರಾಮನಗರದಿಂದ ಓಡಿಸಿದ್ದಾರೆ. ಆದರೆ ಮಂಡ್ಯದವರೆಲ್ಲ ನರಸತ್ತವರು ಎಂದು ಇಲ್ಲಿಗೆ ಬಂದಿದ್ದಾರೆ. ಮಂಡ್ಯ ಜಿಲ್ಲೆಯ ಮುಖಂಡರು ಮತ್ತು ಜನತೆ ಈಗಲಾದರೂ ಎಚ್ಚೆತ್ತುಕೊಳ್ಳಿ. ಮಂಡ್ಯ ಜಿಲ್ಲೆಯ ಜನತೆಗೆ ಕರೆ‌ ಕೊಡುತ್ತೇನೆ “ಗಂಡಸರಾಗ್ರಪ್ಪ, ಕೈಗೆ ಬಳೆ‌ ತೊಟ್ಟುಕೊಳ್ಳಬೇಡಿ” ಎನ್ನುವ ಮೂಲಕ ಕುಮಾರಸ್ವಾಮಿ ಕುಟುಂಬದ ವಿರುದ್ದ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಮಂಡ್ಯ ಜನತೆ ಬಗ್ಗೆ ಆಡಿದ ಮಾತು ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಎಡೆಮಾಡಿಕೊಟ್ಟಿದೆ.

ನಾನು ಬಿಜೆಪಿಗೆ ರಾಜೀನಾಮೆ ನೀಡಿದ್ದೇನೆ, ಕಾಂಗ್ರೆಸ್ ಸೇರಲು ನಿರ್ಧಾರ ಮಾಡಿದ್ದೇನೆ. ಸಿ.ಪಿ.ಯೋಗೇಶ್ವರ್ ರೀತಿ ನಾನು ಕೂಡ ಜಂಪಿಂಗ್ ಸ್ಟಾರ್‌‌. ಸಂಸದ ಡಾ. ಮಂಜುನಾಥ್ ಅವರನ್ನು ಅಭ್ಯರ್ಥಿ ಮಾಡಲು ಸಿಪಿ ಯೋಗೇಶ್ವರ್​ ಶ್ರಮವಹಿಸಿದರು. ಆದರೆ ಚನ್ನಪಟ್ಟಣದಲ್ಲಿ ಯೋಗೇಶ್ವರ್‌ ಗೆ ಎನ್‌ಡಿಎ ಟಿಕೆಟ್ ಕೊಡದೇ ಅವರನ್ನೇ ಬಲಿ ಪಡೆದಿದ್ದಾರೆ. ಚನ್ನಪಟ್ಟಣ ಜನ ದಡ್ಡರಲ್ಲ, ಸಿ.ಪಿ.ಯೋಗೇಶ್ವರ್ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ.

ಶಿವರಾಮೇಗೌಡರ ಬಾಯಿಂದ ಇಂತಹ ಮಾತನ್ನಾಡುವುದು ಇದೇ ಮೊದಲಲ್ಲ. ಈ ಹಿಂದೆ ಸುಮಲತಾ ಅಂಬರೀಷ್ ಚುನಾವಣೆ ನಿಂತಾಗಲೂ, ಅವರ ವಿರುದ್ದ ಅತ್ಯಂತ ಕೆಟ್ಟ ರೀತಿಯ ಮಾತನ್ನಾಡುತ್ತಾ, ರಾಜಕೀಯ ವೇದಿಕೆ ಎಂಬುದನ್ನೂ ಮರೆತು ನಾಲಿಗೆ ಹರಿಬಿಟ್ಟಿದ್ದರು. ಅವರ ಭಾಷಾ ಪ್ರಯೋಗದ ಬಗ್ಗೆ ಟೀಕೆಗಳು ಬಂದಾಗಲೂ ಕಿಂಚಿತ್ ಪಶ್ಚಾತ್ತಾಪ ತೋರದೇ ತನ್ನ ಮಾತನ್ನು ಸಮರ್ಥಿಸಿಕೊಂಡಿದ್ದರು ಇದೇ ಶಿವರಾಮೇಗೌಡ. ಈಗ ಕುಮಾರಸ್ವಾಮಿ ಕುಟುಂಬದ ವಿರುದ್ದ ಮಾತನಾಡುವ ಭರದಲ್ಲಿ ಕೀಳು ಪದ ಪ್ರಯೋಗ ತೀವ್ರ ಟೀಕೆಗೆ ಎಡೆಮಾಡಿಕೊಟ್ಟಿದೆ.

You cannot copy content of this page

Exit mobile version