ಮುಂಬೈ: ಮ್ಯಾನ್ಮಾರ್ನಲ್ಲಿ ‘ಸೈಬರ್ ಗುಲಾಮಗಿರಿ’ಗೆ ತಳ್ಳಲ್ಪಟ್ಟ 60ಕ್ಕೂ ಹೆಚ್ಚು ಭಾರತೀಯರನ್ನು ಮಹಾರಾಷ್ಟ್ರ ಪೊಲೀಸರ ಸೈಬರ್ ವಿಭಾಗವು ರಕ್ಷಿಸಿದೆ.
ಈ ಸಂಬಂಧ ಐದು ಏಜೆಂಟ್ಗಳನ್ನು ಬಂಧಿಸಲಾಗಿದೆ. ಅವರಲ್ಲಿ ಒಬ್ಬ ವಿದೇಶಿ ಪ್ರಜೆಯೂ ಇದ್ದಾನೆ. ಈ ಕುರಿತುಮಹಾರಾಷ್ಟ್ರ ಸೈಬರ್ ಇಲಾಖೆ ಮೂರು ಎಫ್ಐಆರ್ಗಳನ್ನು ದಾಖಲಿಸಿದೆ ಎಂದು ಸಂಬಂಧಪಟ್ಟ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಸಂತ್ರಸ್ತರನ್ನು ಸಂಪರ್ಕಿಸಿದ ಈ ಏಜೆಂಟರು, ಥೈಲ್ಯಾಂಡ್ ಮತ್ತು ಇತರ ಪೂರ್ವ ಏಷ್ಯಾದ ದೇಶಗಳಲ್ಲಿ ಹೆಚ್ಚಿನ ಸಂಬಳದ ಉದ್ಯೋಗಗಳ ಭರವಸೆ ನೀಡಿ ಅವರನ್ನು ಈ ಕೆಲಸಕ್ಕೆ ಆಕರ್ಷಿಸಿದರು ಎಂದು ಅಧಿಕಾರಿ ಹೇಳಿದರು.
ಏಜೆಂಟರು ಸಂತ್ರಸ್ತರಿಗೆ ಪಾಸ್ಪೋರ್ಟ್ಗಳು ಮತ್ತು ವಿಮಾನ ಟಿಕೆಟ್ಗಳನ್ನು ವ್ಯವಸ್ಥೆ ಮಾಡಿ ಪ್ರವಾಸಿ ವೀಸಾಗಳಲ್ಲಿ ಥೈಲ್ಯಾಂಡ್ಗೆ ಕಳುಹಿಸಿದರು. ಅವರು ದೇಶವನ್ನು ಪ್ರವೇಶಿಸಿದ ತಕ್ಷಣ, ಮ್ಯಾನ್ಮಾರ್ ಗಡಿಗೆ ಕರೆದೊಯ್ಯಲಾಯಿತು. ಅಲ್ಲಿಂದ ಸಣ್ಣ ದೋಣಿಗಳಲ್ಲಿ ನದಿಯನ್ನು ದಾಟಿದರು. ಮ್ಯಾನ್ಮಾರ್ ಪ್ರವೇಶಿಸಿದ ನಂತರ, ಎಲ್ಲಾ ಸಂತ್ರಸ್ತರನ್ನು ಸಶಸ್ತ್ರ ಬಂಡಾಯ ಗುಂಪುಗಳ ನಿಯಂತ್ರಣದಲ್ಲಿರುವ ಆವರಣಗಳಿಗೆ ಕರೆದೊಯ್ಯಲಾಯಿತು.
ಈ ಆವರಣಗಳು ಭಾರೀ ಭದ್ರತಾ ವ್ಯವಸ್ಥೆಗಳನ್ನು ಹೊಂದಿವೆ. ಅಲ್ಲಿಂದ ಅವರು ಅವರಿಗೆ ನಕಲಿ ಕರೆಗಳನ್ನು ಮಾಡಿಸುವುದು ಮತ್ತು ಡಿಜಿಟಲ್ ಬಂಧನಗಳಿಂದ ಹಿಡಿದು ಮೋಸದ ಹೂಡಿಕೆ ಯೋಜನೆಗಳವರೆಗೆ ವಿವಿಧ ಸೈಬರ್ ಅಪರಾಧಗಳನ್ನು ಮಾಡುವಂತೆ ಒತ್ತಡ ಹೇರುವುದನ್ನು ಮಾಡುತ್ತಿದ್ದರು.
ಮ್ಯಾನ್ಮಾರ್ನಲ್ಲಿ ಪೊಲೀಸ್ ಕಾರ್ಯಾಚರಣೆ ಹೇಗೆ ನಡೆಯಿತು ಎಂಬುದರ ವಿವರಗಳನ್ನು ಬಹಿರಂಗಪಡಿಸದೆ, ಸಂತ್ರಸ್ತರ್ನನು ರಕ್ಷಿಸಲಾಗಿದೆ ಎಂದು ಮಾತ್ರ ಅಧಿಕಾರಿ ಹೇಳಿದರು. ಮಹಾರಾಷ್ಟ್ರ ಸೈಬರ್ ಇಲಾಖೆ ಮತ್ತು ಇತರ ಸಂಸ್ಥೆಗಳು ಜಂಟಿಯಾಗಿ ಈ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿವೆ ಎಂದು ಅವರು ಹೇಳಿದರು.
ನೇಮಕಾತಿ ಏಜೆಂಟ್ಗಳಾಗಿ ಕಾರ್ಯನಿರ್ವಹಿಸಿದವರಲ್ಲಿ ನಟ ಮನೀಶ್ ಗ್ರೇ ಅಲಿಯಾಸ್ ಮ್ಯಾಡಿ ಕೂಡ ಸೇರಿದ್ದಾರೆ, ಅವರು ವೆಬ್ ಸರಣಿಗಳು ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭಾರತದಲ್ಲೂ ಇದೇ ರೀತಿಯ ಘಟಕವನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮತ್ತೊಬ್ಬ ಏಜೆಂಟ್ ಹೇಳಿದ್ದಾನೆ ಮತ್ತು ಈ ನಿಟ್ಟಿನಲ್ಲಿ ತನಿಖೆ ಮುಂದುವರೆದಿದೆ ಎಂದು ಅವರು ಹೇಳಿದರು.
ಸಂತ್ರಸ್ತರನ್ನು ವಿಚಾರಿಸಿದಾಗ, ಅಂತಹ ನಕಲಿ ಕಾಲ್ ಸೆಂಟರ್ ಕಂಪನಿಗಳ ಜಾಲವಿದೆ ಮತ್ತು ಕೆಲವು ಕಂಪನಿಗಳು ಉದ್ಯೋಗ ಏಜೆನ್ಸಿಗಳ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ.