ಈ ಬಣ್ಣಗಳೇ ಹೀಗೆ, ಬೆರೆಸಿದಷ್ಟು ಗಾಢ, ಚಿತ್ರ – ವಿಚಿತ್ರ. ಈ ಬೆರಕೆಯ ಕ್ರಿಯೆಯೂ ಧ್ಯಾನದಂತೆ ಚಿತ್ತ ನಿಮ್ಮಳವಾಗಿದ್ದರೆ – ರೂಪ ರೂಪಾಂತರಗಳನ್ನೇ ಸೃಷ್ಟಿಸಬಹುದು.
ಅದೊಂದು ಪುಟ್ಟ ಬಾಡಿಗೆ ಮನೆ, ಸುಮಾರು ಇಪ್ಪತ್ತು ವರ್ಷದ ಹಿಂದಿನ ಮಾತು ಬೆಂಗಳೂರಿನಂತಹ ಶೆಹರದಲ್ಲಿ ಇದ್ದಾರೆ ಎಂದರೆ ಹಳ್ಳಿ ಬದಿಯ ಜನರಿಗೆ ಒಂದು ರೀತಿಯ ಕೆಣಕುವಂತಹ ಕುತೂಹಲ. ಇದು ಈಗಲೂ ಸ್ವಲ್ಪ ಕಾಮನ್ ಆದ ವಾಡಿಕೆಯಂತಹ ಪರ್ಸಪೆಕ್ಟಿವ್. ಪ್ರೋಸಿ ಹುಟ್ಟಿದ್ದು ಇಂತಹ ಕಾಂಕ್ರೀಟ್ ಊರಿನಲ್ಲಿ. ಈಗ ಅದಕ್ಕಿರುವ ಬಿರುದುಗಳ ಪಟ್ಟಿಯನ್ನು ಒಂದು ಕಡೆ ಲಿಸ್ಟ್ ಮಾಡುವ ಪುರುಸತ್ತು ಯಾರಿಗೂ ಇಲ್ಲದಿರಬಹುದು.ಅಂದು ಡಿಸೆಂಬರ್ ನ ನಡು ರಾತ್ರಿ, ವಾಣಿವಿಲಾಸ ಆಸ್ಪತ್ರೆ ಹೆಚ್ಚಾಗಿ ಹೆಸರಾಗಿತ್ತು.
ಹೆರಿಗೆ ನೋವು ಕಂಡರೂ ಡಾಕ್ಟರ್ಸ್ ನ ನೋವಿನ ಸ್ಟ್ರೈಕ್ ನಿಂದಾಗಿ ಪ್ರೋಸಿಯನ್ನು ಹೊತ್ತುಕೊಂಡು ಅವಳಮ್ಮ ಅಪ್ಪ ಸಾಲದಕ್ಕೆ ಗೆಳೆಯರು ಒಂದೆರೆಡು ಆಸ್ಪತ್ರೆಗಳ ಸುತ್ತಬೇಕಾಯ್ತು. ಕೊನೆಗೂ ವಿ.ವಿ ಆಸ್ಪತ್ರೆ ಯಲ್ಲಿ ಒಂದು ಹಾಸಿಗೆ ಸಿಕ್ಕಿತು. ವಾಕರಿಕೆ, ಲೇಬರ್ ಪೇನ್ ಗಳಿದ್ದರೂ ಪ್ರೋಸಿ ಮಾತ್ರ ಬೆಚ್ಚಗೆ ಅಮ್ಮನ ಒಡಲಲ್ಲೇ ಇದ್ದದ್ದಕ್ಕೆ ರಾತ್ರಿ ಇಡೀ ಆಸ್ಪತ್ರೆಯ ಚೇರ್ಗಳ ಕೆಳಗೆ ಉಟ್ಟ ಪಂಚೆಯನ್ನೇ ಸುತ್ತುಕೊಂಡು ಪ್ರೋಸಿಯ ಬರುವಿಕೆಗೆ ಕಾದು ಕಾದು ಸಾಕಾಗಿದ್ದರು ಅವಳ ಮಾಮಂದಿರು. ಆದರೂ ಅವಳಪ್ಪನಿಗೆ ಅವಳ ಹೆಸರಿನ ಗೋಜು.
ಮಗನಾದರೆ ಗೌತಮ ಮಗಳಾದರೆ ಸಾಮ್ರಾಟ್ ಅಶೋಕನ ಮಗಳ ಹೆಸರಿಡಬೇಕೆಂದು ಫಿಕ್ಸ್ ಮಾಡಿಯೇ ಬಿಟ್ಟರು. ಗಂಟೆ ಸುಮಾರು ರಾತ್ರಿ ಹನ್ನೆರೆಡರ ಆಸುಪಾಸು , ಡಿಸೆಂಬರ್ ೩೦ , ೧೯೯೮ ಒಂದು ಕಡೆ ಹೊಸ ಬೇಕರಿ ಗಳಲ್ಲಿ ಹೊಸ ವರ್ಷದ ಕೇಕ್ ಗಳ ಡಿಸೈನ್ ನ ತಯಾರಿಸುವವರು,ಶಾಲೆಗೆ ರಜೆ ಸಿಗುತ್ತದೆಂಬ ಸಡಗರದ ಮಕ್ಕಳು, ಸಿಡಿ ಮದ್ದುಗಳ ಆಗಸಕ್ಕೆ ತಾಗಿಸುವ ಹಂಬಲದವರು, ಇವರೆಲ್ಲರ ನಡುವೆ ನಾನು ಅಂದರೆ ಪ್ರೋಸಿ ಹುಟ್ಟಿದೆ. ಹುಟ್ಟಿದ ಕೂಡಲೇ ನನ್ನಪ್ಪ ನನ್ನೆಸರ ಪತ್ರಿಕೆಯೊಂದರಲ್ಲಿ ಪ್ರಕಟಿಸಿ ಶುಭಾಶಯಗಳನ್ನು ಹೇಳಿಯಾಗಿತ್ತು.
ರಾತ್ರಿ ಇಡೀ ಕ್ರೀಮಿ ಕೀಟಗಳ ಕಾಟದ ನಡುವೆ ಕಾದು ಕುಳಿತಿದ್ದ ನನ್ನ ಮಾಮಂದಿರು ಮೊದಲು ನನ್ನ ನನ್ನಮ್ಮನ ನೋಡಲು ಧಾವಿಸಿದರು. ಆಗ ಅಮ್ಮನಿಗೆ ಮೆಡಿಸಿನ್ ತರಲೂ ಅಪ್ಪನ ಕಿಸೆಯಲ್ಲಿ ಕಾಸಿರಲಿಲ್ಲ. ಇದ್ದ ಒಂದು ರೂಪಾಯಿ ಕಾಯಿನ್ ನ ಹಲವು ಬಾರಿ ಯೋಚಿಸಿ ಅಲ್ಲೇ ಇದ್ದ ಕಾಯಿನ್ ಬೂತ್ ನಲ್ಲಿ ಮಾಮನಿಗೆ ಫೋನ್ ಹಾಯಿಸಿದ್ದರಂತೆ. ಆಗಿನ್ನೂ ಒಂದೆರೆಡು ವಾರದ ಹಿಂದೆಯಷ್ಟೇ ತಂದೆಯಾಗಿದ್ದ ಮಾಮ ಕೂಡ ಓಡೋಡಿ ಬಂದು ಬಿಲೇಟೆಡ್ ತಂದೆಯಾದ ನನ್ನಪ್ಪನ ಖುಷಿಗೆ ಹೆಗಲೊಡ್ಡಿದ್ದರು.
ಅಷ್ಟೊತ್ತಿಗಾಗಲೇ ಅಪ್ಪ ಸಿಹಿ ಹಂಚುವ ಬರದಲ್ಲಿ ಆಸ್ಪತ್ರೆಯ ಬಿಟ್ಟಾಗಿತ್ತು. ನಾನು ಸ್ವಲ್ಪ ಉಸಿರುಕಟ್ಟಿ ಎನ್ ಐ ಸಿ ಯು ನಲ್ಲಿ ಮಲಗಿದ್ದೆ. ನ್ಯಾಚುರಲ್ ಡೆಲಿವರಿ ಆಗಿದ್ದರು ಅಮ್ಮ ನನ್ನನ್ನು ಸರಿಯಾಗಿ ನೋಡಲಾಗಿರಲಿಲ್ಲ. ಲೇಬರ್ ರೂಂ ನಿಂದ ವಾಡ್೯ವರೆಗೂ ಅಮ್ಮ ಬರೋದ್ರೊಳ್ಗೆ ನಂಗೆ ಒದ್ದಾಡಿ ಒದ್ದಾಡಿ ಕಾಲು ಹಿಡಿದುಕೊಂಡಿತ್ತು. ಗಾಬರಿ ಆದ ಮಾಮಂದಿರೆಲ್ಲಾ ನಾನು ಕಾಲು ಸೊಟ್ಟ ಇರಬಹುದೇನೋ ಅಂತ ಪಿಡಿಯಾಟ್ರ್ಯನ್ ಹತ್ರ ಹೊತ್ಕಂಡು ಹೋಗಿದ್ರಂತೆ. ಡಾಕ್ಟರು ಮುಟ್ತಿದ್ದಂಗೆ ಕಾಲು ಬಿಡಿಸಿಕೊಂಡು ನಗ್ತಾ ಇದ್ನಂತೆ..
– ಸಂಘಮಿತ್ರೆ ನಾಗರಘಟ್ಟ