ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ಮತ್ತು ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜಿ20 ಔತಣಕೂಟದ ಅತಿಥಿಗಳ ಪಟ್ಟಿಯಿಂದ ಹೊರಗಿಟ್ಟ ನಂತರ ತಮಿಳುನಾಡಿನ ಕಾಂಗ್ರೆಸ್ ನಾಯಕ ಮೋಹನ್ ಕುಮಾರಮಂಗಲಂ ಅವರು ಮೋದಿ ಸರ್ಕಾರ ಜಾತಿ ತಾರತಮ್ಯವನ್ನು ಮಾಡುತ್ತಿದೆ ಎಂದು ಆರೋಪಿಸಿ, ‘ಮೋದಿ ಹೈ ತೋ ಮನು ಹೈ’ ( ಮೋದಿ ಅವರು ಮನು ಆಗಿದ್ದಾರೆ) ಎಂದು ಟೀಕಿಸಿದ್ದಾರೆ.
ಈ ಕುರಿತು X ನಲ್ಲಿ ಟ್ವೀಟ್ ಮಾಡಿರುವ ಅವರು, ಮನುಸ್ಮೃತಿಯನ್ನು ರಚಿಸಿದ ಮನುವಿನ ಪರಂಪರೆಯನ್ನು ಪ್ರಧಾನಿ ಮೋದಿ ಎತ್ತಿಹಿಡಿಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮುಂದುವರೆದು, ಅಯೋಧ್ಯೆಯ ರಾಮ ಮಂದಿರದ ಭೂಮಿ ಪೂಜೆಗೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ಆಹ್ವಾನಿಸಿರಲಿಲ್ಲ, ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಆಹ್ವಾನಿಸಿರಲಿಲ್ಲ ಎಂದು ಹೇಳುವ ಮೂಲಕ ಪ್ರಮುಖ ಕಾರ್ಯಕ್ರಮಗಳಿಗೆ ಹಿಂದುಳಿದ ವರ್ಗಗಳ ನಾಯಕರನ್ನು ಆಹ್ವಾನಿಸದ ಹಿಂದಿನ ಹಲವಾರು ನಿದರ್ಶನಗಳನ್ನು ಕುಮಾರಮಂಗಲಂ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಟೀಕಿಸಿದ್ದಾರೆ.
ಮನುಸ್ಮೃತಿ ಅನ್ನು ‘ಹಿಂದೂ ಧರ್ಮದ ಮಾರ್ಗದರ್ಶಿ’ ಎಂದು ವೈದಿಕರು ಹಿಂದಿನಿಂದಲೂ ಹೇಳಿಕೊಂಡು ಬಂದರು ಅದರಲ್ಲಿ ಎಷ್ಟು ಅಸಮಾನತೆ ಇದೆ ಎಂಬುದನ್ನು ಅನೇಕ ಹೋರಾಟಗಾರರು, ವಿದ್ವಾಂಸರು, ಚಿಂತಕರು ವಿಶ್ಲೇಷಿಸುತ್ತಾ ವಿರೋಧಿಸುತ್ತಾ ಬಂದಿದ್ದಾರೆ.