ಚಿಕ್ಕಮಗಳೂರು, ಜೂನ್ 12, 2025: ಕಾಂತರಾಜು ಜಾತಿ ಗಣತಿ ವರದಿ ವೈಜ್ಞಾನಿಕವಾಗಿಲ್ಲದಿದ್ದರೆ, ಅದಕ್ಕಾಗಿ ಖರ್ಚಾದ ಸಾರ್ವಜನಿಕ ಹಣವನ್ನು ವಸೂಲಿ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ರಾಜಕೀಯ ಲಾಭಕ್ಕಾಗಿ ಸರ್ಕಾರ ಜಾತಿ ಗಣತಿಯನ್ನು ಮತ್ತೆ ಮುನ್ನೆಲೆಗೆ ತಂದು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. ಕಾಂತರಾಜು ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ವೈಜ್ಞಾನಿಕ ಮತ್ತು ಮಹತ್ವಾಕಾಂಕ್ಷೆಯ ಯೋಜನೆ ಎಂದು ಸಮರ್ಥಿಸಿಕೊಂಡಿದ್ದರು. ಜಯಪ್ರಕಾಶ್ ಹೆಗ್ಡೆ ಅದನ್ನು ಪರಿಶೀಲಿಸಿದ್ದಾರೆ ಎಂದು ಹೇಳಿದ್ದರು. ಆದರೆ, ಈ ವರದಿಗಾಗಿ ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಈಗ ಮತ್ತೆ ಜಾತಿ ಗಣತಿ ನಡೆಸಲು ಸರ್ಕಾರ ಯೋಜಿಸುತ್ತಿದೆ. ಇದು ಕಾಂತರಾಜು ವರದಿಯು ಅವೈಜ್ಞಾನಿಕವೆಂದು ಒಪ್ಪಿಕೊಂಡಂತೆ,” ಎಂದು ಸರ್ಕಾರಕ್ಕೆ ಸವಾಲು ಹಾಕಿದರು.
“ಜಾತಿ ಮತ್ತು ಜನಸಂಖ್ಯಾ ಗಣತಿಯನ್ನು ನಡೆಸುವ ಸಾಂವಿಧಾನಿಕ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ, ರಾಜ್ಯ ಸರ್ಕಾರಕ್ಕೆ ಅಲ್ಲ. ಇದು ಕಾಂಗ್ರೆಸ್ನ ಹಣವಲ್ಲ, ತೆರಿಗೆದಾರರ ಹಣವಾಗಿದೆ. ಈ ಗಣತಿಯಿಂದ ದಲಿತರಿಗೋ, ಹಿಂದುಳಿದ ವರ್ಗಗಳಿಗೋ ಯಾವುದೇ ಪ್ರಯೋಜನವಾಗಿಲ್ಲ,” ಎಂದು ಸಿ.ಟಿ. ರವಿ ಆರೋಪಿಸಿದರು.