Wednesday, September 17, 2025

ಸತ್ಯ | ನ್ಯಾಯ |ಧರ್ಮ

ಹಾಸನದ ಹೊಸ ಮೇಯರ್ ಆಗಿ ಗಿರೀಶ್ ಚನ್ನವೀರಪ್ಪ ಅವಿರೋಧವಾಗಿ ಆಯ್ಕೆ

ಹಾಸನ : ಬಾರಿ ಕುತುಹಲ ಕೆರಳಿಸಿದ್ದ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಜೆಡಿಎಸ್‌ನ ೮ನೇ ವಾರ್ಡ್ ಸದಸ್ಯ ಗಿರೀಶ್ ಚನ್ನವೀರಪ್ಪ ಅವರು ನಿರೀಕ್ಷೆಯಂತೆಯೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಚುನಾವಣೆಯಲ್ಲಿ ಗಿರೀಶ್ ಅವರೇ ಏಕೈಕ ನಾಮಪತ್ರ ಸಲ್ಲಿಸಿದ್ದು, ಮಧ್ಯಾಹ್ನ ೧.೩೦ರ ನಂತರ ಚುನಾವಣಾಧಿಕಾರಿಗಳಾದ ಮೈಸೂರು ಪ್ರಭಾರಿ ಪ್ರಾದೇಶಿಕ ಆಯುಕ್ತ ವೆಂಕಟರಾಜ ಅವರು ಅವರ ಆಯ್ಕೆ ಘೋಷಿಸಿದರು.

ಹೊಸ ಮೇಯರ್ ಗಿರೀಶ್ ಅವರನ್ನು ಸ್ಥಳೀಯ ಶಾಸಕ ಹೆಚ್.ಪಿ. ಸ್ವರೂಪ್, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, ಉಪ ಮೇಯರ್ ಹೇಮಲತಾ, ಜೆಡಿಎಸ್ ಸದಸ್ಯರು ಹಾಗೂ ಕುಟುಂಬದವರು ಹಾರೈಸಿದರು. ಹಿಂದಿನ ಮೇಯರ್ ಎಂ. ಚಂದ್ರೇಗೌಡ ಅವರ ಸದಸ್ಯತ್ವ ಅನರ್ಹಗೊಂಡ ಹಿನ್ನಲೆಯಲ್ಲಿ ಖಾಲಿಯಾದ ಸ್ಥಾನಕ್ಕೆ ಮೊದಲು ಸೆಪ್ಟೆಂಬರ್ ೧೦ರಂದು ಚುನಾವಣೆ ನಿಗದಿಯಾಗಿದ್ದರೂ, ಮೈಸೂರು ಪ್ರಾದೇಶಿಕ ಆಯುಕ್ತರ ವರ್ಗಾವಣೆಯಿಂದ ಇಂದಿಗೆ ಮುಂದೂಡಲಾಗಿತ್ತು. ಮೇಯರ್ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣವಾಗಿ ಹಿಂದೆ ಸರಿದಿದ್ದು, ಅವರ ಯಾವುದೇ ಸದಸ್ಯರು ಸಭೆಗೆ ಹಾಜರಾಗಲಿಲ್ಲ. ಪಾಲಿಕೆಯಲ್ಲಿ ಒಟ್ಟು ೩೪ ಸದಸ್ಯರಿದ್ದು, ಜೆಡಿಎಸ್ ೧೬, ಬಿಜೆಪಿ ೧೩, ಕಾಂಗ್ರೆಸ್ ೨ ಹಾಗೂ ಪಕ್ಷೇತರ ೩ ಮಂದಿ ಸದಸ್ಯರು ಇದ್ದಾರೆ. ಬಿಜೆಪಿ ಇತರರ ಬೆಂಬಲ ಪಡೆದು ಸ್ಪರ್ಧಾ ಅಖಾಡಕ್ಕಿಳಿಯಬಹುದೆಂದು ನಿರೀಕ್ಷಿಸಲ್ಪಟ್ಟರೂ, ಕೊನೆಯಲ್ಲಿ ತಟಸ್ಥತೆಯನ್ನು ಆರಿಸಿಕೊಂಡಿತು.

ವಿಧಾನ ಪರಿಷತ್ತು ಸದಸ್ಯ ಡಾ. ಸೂರಜ್ ರೇವಣ್ಣ ಮಾಧ್ಯಮದೊಂದಿಗೆ ಮಾತನಾಡಿ, ಇಂದು ಒಮ್ಮತವಾಗಿ ಮೇಯರ್ ಚುನಾವಣೆ ನಡೆದಿದೆ. ನೂತನ ಮೇಯರ್‌ಗೆ ಅಭಿನಂದನೆಗಳು, ಉತ್ತಮ ಕೆಲಸ ಮಾಡಲಿ ಎಂದರು. ಎಂ.ಚಂದ್ರೇಗೌಡ ಅವರ ಬಗ್ಗೆ ನಮಗೆ ಸಿಟ್ಟಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರಿಂದ ಅವರ ವಿರುದ್ಧ ಕೊರ್ಟ್‌ಗೆ ಹೋಗಬೇಕಾಯಿತು ಎಂದರು. ರಾಷ್ಟ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದರೂ ಸ್ಥಳೀಯವಾಗಿ ಒಮ್ಮತ ಸಾಧ್ಯವಾಗಿಲ್ಲ. ಇದನ್ನು ಮಾಜಿ ಶಾಸಕರು ಅರಿಯಬೇಕು. ಸಭೆ, ಸಮಾರಂಭಗಳಲ್ಲಿ ೩ ಸಂಸದರು ಸಹ ಮಾಜಿ ಶಾಸಕರೊಂದಿಗೆ ಕುಣಿದು ಕುಪ್ಪಳಿಸುತ್ತಾರೆ. ಇದು ಪವಿತ್ರ ಮೈತ್ರಿಯೋ ಅಪವಿತ್ರ ಮೈತ್ರಿಯೋ ಎಂಬುದನ್ನು ಜನರೇ ನಿರ್ಧರಿಸಲಿ ಎಂದು ಪರೋಕ್ಷವಾಗಿ ಮಾಜಿ ಶಾಸಕ ಪ್ರೀತಂಗೌಡ-ಸಂಸದ ಶ್ರೇಯಸ್ ಪಟೇಲ್ ನಡೆಗೆ ಕಿರಿ ಕಾರಿದರು.

ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಮಾತನಾಡಿ, ಈ ಹಿಂದೆ ನಮ್ಮ ತಂದೆ ಶಾಸಕರಾಗಿದ್ದಾಗ ಹಿರಿಯರಾದ ಚನ್ನವೀರಪ್ಪ ಅವರು ಅಧ್ಯಕ್ಷರಾಗಿದ್ದರು. ಅವರು ಹಲವು ಉತ್ತಮ ಕೆಲಸ ಮಾಡಿದ್ದರು. ಈಗ ಅವರ ಪುತ್ರ ಗಿರೀಶ್ ಅವರು ಅಧ್ಯಕ್ಷರಾಗಿದ್ದಾರೆ. ನಮ್ಮೆಲ್ಲರಿಗೂ ಸಂತೋಷ ತಂದಿದೆ. ಅವರೂ ಕೂಡ ನಗರದ ಜನರ ಪರವಾಗಿ ಕೆಲಸ ಮಾಡಲಿ. ಹಿಂದೆ ಚಂದ್ರೇಗೌಡರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಇದೇ ಜೆಡಿಎಸ್ ಪಕ್ಷ, ಆ ಬಿಜೆಪಿ ಸದಸ್ಯರಿಗೆ ಉಪಾಧ್ಯಕ್ಷ ಸ್ಥಾನ ನೀಡಿದ್ದೆವು.ಆದರೆ ಅವರು ಒಪ್ಪಂದದಂತೆ ಅಧಿಕಾ ಅಧಿಕಾರ ಬಿಟ್ಟು ಕೊಡದೇ ಇದ್ದಾಗ ಅವಿಶ್ವಾಸ ನಿರ್ಣಯ ಮಂಡಿಸಿದ್ದೆವು. ಆಗ ಅವರು ಬಿಜೆಪಿ-ಕಾಂಗ್ರೆಸ್ ಸಹಕಾರ ಪಡೆದು ಮೇಯರ್ ಆಗುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು. ಇದರ ವಿರುದ್ದ ನಾವು ಕೋರ್ಟ್ ಮೊರೆ ಹೋದಾಗ ನಮಗೆ ನ್ಯಾಯ ಸಿಕ್ಕಿತ್ತು. ಇಂದು ನಡೆದ ಚುನ ಚುನಾವಣೆಯಲ್ಲಿಯಲಿ ಆ ರೀತಿಯ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಯಲಿಲ್ಲ. ಆದರೆ ಬಿಜೆಪಿಯವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ ಎಂದರು.

ನೂತನ ಮೇಯರ್ ಗಿರೀಶ್ ಚನ್ನವೀರಪ್ಪ ಮಾತನಾಡಿ, ನಮ್ಮ ಪಕ್ಷ ನಾಯಕರ ಸೂಚನೆಯಂತೆ ಇಂದು ನಾನು ಮೇಯರ್ ಆಗಿ ಅವಿರೋಧ ಆಯ್ಕೆಯಾಗಿದ್ದೇನೆ. ಇದಕ್ಕೆ ಸಹಕಾರ ನೀಡಿದ ಮಾಜಿ ಸಚಿವ ಎಚ್.ಡಿ. ರೇವಣ್ಣ, ಶಾಸಕ ಸ್ವರೂಪ್ ಪ್ರಕಾಶ್, ಎಂಎಲ್‌ಸಿ ಸೂರಜ್ ರೇವಣ್ಣ ಸೇರಿದಂತೆ ಹಾಸನ ಜನತೆಗೆ ವಿಶೇಷವಾಗಿ, ನನ್ನನ್ನು ಗೆಲ್ಲಿಸಿರುವ ೮ನೇ ವಾರ್ಡ್ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಪಾಲಿಕೆಯಲ್ಲಿ ಏನೆಲ್ಲ ಕೆಲಸ ಮಾಡಬೇಕು ಎಂಬ ಬಗ್ಗೆ ನನ್ನದೇ ಆದ ಕನಸುಗಳಿವೆ. ಪಕ್ಷದ ನಾಯಕರು, ಶಾಸಕರು ಹಾಗೂ ಸದಸ್ಯರ ವಿಶ್ವಾಸ ಪಡೆದು ಅಭಿವೃದ್ಧಿ ಕಾಮಗಾರಿ ಮಾಡುವೆ, ಜನರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನುಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page