Saturday, April 27, 2024

ಸತ್ಯ | ನ್ಯಾಯ |ಧರ್ಮ

ಹುಡುಗಿಯರು ಭಾವನಾತ್ಮಕ ಅವಲಂಬನೆಯಿಂದ ಹೊರಬರಬೇಕು

ಮೊದಲು ಮೆಸೇಜ್ ಮಾಡಿದ್ದು ಅವನೇ, ಕ್ಲೋಸ್ ಆಗಿ ಮಾತಾಡಿದ್ದು  ಕೂಡ ಅವನೇ, ಊಟಕ್ಕೆ ಕರೆದದ್ದು ಸಹ ಅವನೇ, ಈಗ ಅವಾಯ್ಡ್ ಮಾಡಿದ್ದು ಸಹ ಅವನೇ! ಈ ಮೊದಲ “ಅವನು” ಗಳಿಗೆ importance ಕೊಟ್ಟ ನನ್ನ ಬುದ್ಧಿಯ ಬಗ್ಗೆ ನಾನು ಯೋಚನೆ ಮಾಡ್ತಿರೋದು ಕಣೇ ಎಂದಳು. – ದಿವ್ಯಶ್ರೀ ಅದರಂತೆ ಇಂಗ್ಲಿಷ್‌ ಸಾಹಿತ್ಯದ ವಿದ್ಯಾರ್ಥಿನಿ

 
ಅವತ್ಯಾಕೊ ಆಕೆ ತೀರಾ ಮಬ್ಬಾಗಿದ್ದಳು. ನಗು, ಲವಲವಿಕೆ ಅವಳಿಂದ ಬಹುದೂರ ಸರಿದಿತ್ತು. ನಮ್ಮೊಟ್ಟಿಗೆ ಮಾತಾಡುವ ಉತ್ಸಾಹ ಅವಳಿಗಿರಲಿಲ್ಲ. ಗುಂಪಿನ ನಾವೈವರು, ಅವತ್ತು ನಡೆದ ತರಗತಿ, ಕ್ಲಾಸಿನಲ್ಲಿ ನಿದ್ದೆ ಬರುವಂತೆ ಪಾಠ ಮಾಡಿದ ಪ್ರೊಫೆಸರ್  ಮತ್ತೆ ಒಂದು ವರ್ಷದಿಂದ ಅವನು ನನ್ನ ಕ್ರಶ್ ಕಂಡ್ರೋ ಅಂತ  ತಿರುಗಾಡ್ತಾ ಆದರೆ ಅವನ ಮುಂದೆ ನಿಂತು ಅವನ ಹೆಸರನ್ನೂ ಕೇಳಲಿಕ್ಕಾಗದ ನನ್ನ ಅಧೈರ್ಯದ ಬಗ್ಗೆ ಆಡಿಕೊಳ್ಳುತ್ತಾ ನಗೆ ಚಾಟಾಕಿ ಹಾರಿಸುತ್ತಿದ್ದರೆ, ಅವಳು ಮಾತ್ರ ಆಗಸಕ್ಕೆ ಕೈ ಚಾಚಿ, ನಕ್ಷತ್ರ ಹಿಡಿದು ತರುವವಳಂತೆ ತೀರಾ ಗಂಭೀರವಾಗಿ ಮುಗಿಲತ್ತ ಮುಖ ಮಾಡಿದ್ದಳು.

ಈ ನನ್ನ ಬೆಂಗಳೂರಿನ ಫ್ರೆಂಡ್ಸ್ ಮನಸುಗಳು ಸ್ವಲ್ಪ ವಿಶಿಷ್ಟ. ಯಾರ ವೈಯಕ್ತಿಕ ವಿಷಯಕ್ಕೂ ತಲೆ ಹಾಕುವ ಚಾಳಿ ಅವರಿಗಿದ್ದಂತಿಲ್ಲ. ಅವಳನ್ನ ಅವಳ ಪಾಡಿಗೆ ಬಿಟ್ಟಿದ್ದರು. ಏನಾಯ್ತು ಎಂತ ಅಂತ ಮಾತಿಗೂ ಸಹ ಕೇಳಲಿಲ್ಲ. ಅವಳೂ ಈ ಪರಿಸರಕ್ಕೆ ಒಗ್ಗಿಕೊಂಡಿದ್ದರಿಂದ, ನಾವೆಲ್ಲಾ ಅವಳ ಬೇಸರದ ಕುರಿತು ವಿಚಾರಿಸಬೇಕು, ಒಂದಿಷ್ಟು ಸಮಾಧಾನ ಪಡಿಸಬೇಕು ಅಂತೆಲ್ಲಾ ಯೋಚಿಸುವ ಹುಡುಗಿಯೂ ಅವಳಲ್ಲ. ಗುಂಪಿನಲ್ಲಿ ಯಾರೇ ಹೀಗೇ ವರ್ತಿಸಿದರೂ ಅವರನ್ನ ಒಬ್ಬಂಟಿಯಾಗಿ ಬಿಟ್ಟು ಬಿಡುತ್ತಾರೆ. ಆದರೆ ವಿಶೇಷ ಅಂದ್ರೆ, ಹಾಗೇ ಮಂಕಾದ ಮನಸಿನ ಇಷ್ಟದ ವಿಷಯವನ್ನೇ ಚರ್ಚೆಗೆ ಎಳೆದುಕೊಂಡು, ಅವರನ್ನೂ ತಮ್ಮೊಳಗೇ ಎಳೆದುಕೊಳ್ಳುವ ವಿಶಿಷ್ಟ ಗುಣ ಇವರಿಗುಂಟು. 

ಅವತ್ತೂ ಸಹ ಇದೇ ಸಾಹಸಕ್ಕೆ ಕೈ ಹಾಕಿದ್ದೆವು. ಅವಳು ಮಾತ್ರ ಕಿಂಚಿತ್ತೂ ನಮ್ಮ ಕಡೆ ಕಿವಿಗೊಡಲಿಲ್ಲ, ಸುಮಾರು ಒಂದು ತಾಸು ಕಳೆದರೂ ಅವಳು ನಮ್ಮೆಡೆಗೆ ನೋಡಿ ನಗು ಚೆಲ್ಲಲಿಲ್ಲ. ಸೆಕ್ಯೂರಿಟಿ ಸೀಟಿ ಹೊಡೆಯುತ್ತಾ ಕ್ಯಾಂಟೀನ್ ಕಡೆ ಬಂದಿದ್ದರಿಂದ ನಾವು ಅಲ್ಲಿಂದ ಜಾಗ ಖಾಲಿ ಮಾಡಲೇಬೇಕಿತ್ತು. ಒಬ್ಬರನ್ನೊಬ್ಬರು ಆಲಂಗಿಸಿ ಎಲ್ಲರೂ ಬೀಳ್ಕೊಟ್ಟರು. ಅವಳು ನನ್ನೊಟ್ಟಿಗೆ ಲೈಬ್ರರಿಗೆ ಬರುವುದಾಗಿ ಹೇಳಿ, ಹೆಜ್ಜೆ ಹಾಕಿದಳು. ಇನ್ನೇನು ಲೈಬ್ರರಿಯ ಒಳಹೋಗಬೇಕೆನ್ನುವಷ್ಟರಲ್ಲಿ, ಕೈ ಹಿಡಿದು ಎಳೆದಳು. ನಾನೂ ಅವಳ ಹೆಜ್ಜೆಯನ್ನೇ ಹಿಂಬಾಲಿಸಿದೆ. “ಕಾಲೇಜ್ ಕ್ಯಾಂಪಸ್ ಸುತ್ತಾಡುವ, ಮೈಂಡ್ ಯಾಕೋ ತುಂಬಾ ಡಿಸ್ಟರ್ಬ್ ಆಗಿದೆ” ಅಂದಳು. ಸರಿ ಅಂದೆ.

ಒಂದತ್ತು ಹೆಜ್ಜೆ ಹಾಕಿರಬೇಕು, ನಿಧಾನವಾಗಿ ಮಾತು ಚೆಲ್ಲಿದಳು. ನೋವು, ಹತಾಶೆ, ಕಳೆದುಕೊಂಡ ಕೆಟ್ಟ ಅನುಭವ ಎಲ್ಲದರ ಮಿಶ್ರಣ ಎಂಬಂತೆ ಒಮ್ಮೊಮ್ಮೆ ಕಣ್ಣೀರಾಕಿ, ಕೊನೆಗೆ ತನಗೆ ತಾನೇ ಸಮಾಧಾನ ಮಾಡಿಕೊಂಡು ಅವಳ ಕತೆ ಹೇಳಿ ಮುಗಿಸುವಷ್ಟರಲ್ಲಿ ಅರ್ಧ ತಾಸು ಕಳೆದಿದ್ದವು. ಅವಳ ಕತೆಯ ಸಾರಾಂಶ ಹೇಳಬೇಕೆಂದರೆ, ಮೂರುನಾಲ್ಕು ದಿನಗಳ ಹಿಂದೆ, ಸೋಶಿಯಲ್ ಮೀಡಿಯಾವೊಂದರಲ್ಲಿ  ಒಬ್ಬರ ಪರಿಚಯವಾಗಿ ಮೊಬೈಲ್ ನಂಬರ್ exchange ಆಗಿತ್ತು. ಮಾತಾಡುತ್ತಾ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದ್ದವರು ಎಂಬುದು ತಿಳಿಯಿತು. ಹಾಗಿದ್ದಮೇಲೆ ತಾವು ಓದಿದ ಕಾಲೇಜ್, ಪಾಠ ಮಾಡಿದ ಉಪನ್ಯಾಸಕರ ಬಗ್ಗೆ ಒಂದಿಷ್ಟು ಮಾತುಗಳು ಶೇರ್ ಆಗಿದ್ದವು. ಇಬ್ಬರೂ ಒಂದೇ ಮನಸ್ಥಿತಿಯವರಾದ್ದರಿಂದಲೇ, ಇಪ್ಪತ್ನಾಲ್ಕು ಗಂಟೆಯಲ್ಲಿ, ಎಷ್ಟೋ ವರ್ಷದ ಗೆಳೆಯ ಗೆಳತಿ ಎಂಬಂತೆ ಹತ್ತಿರವಾಗಿದ್ದರು. ಬೆಂಗಳೂರಿಗೆ ಬಂದಾಗಿನಿಂದ ಒಂಟಿಯಾಗಿದ್ದವಳಿಗೆ, ಕಾಲೇಜಿನ ಹೊರಗೆ ಒಬ್ಬ ಗೆಳೆಯ ಸಿಕ್ಕಿದ್ದು ಖುಷಿ ಕೊಟ್ಟಿದೆ. ಮರುದಿನ  ಮಧ್ಯಾಹ್ನ ಇಬ್ಬರೂ ಒಟ್ಟಿಗೆ ಊಟಕ್ಕೆ ಹೋಗಿದ್ದಾರೆ. ಆತ ಸ್ವಲ್ಪ ಮೃದು, ತೀರಾ ಗಂಭೀರ, ಹೊರಜಗತ್ತಿನ ಬಗ್ಗೆ ಹೆಚ್ಚಿನ ಆಸಕ್ತಿ ಉಳ್ಳವ, ಹೆಚ್ಚು ಮೌನಿ. ಇವಳು ಸ್ವಲ್ಪ ತದ್ವಿರುದ್ದ, ತೀರಾ ತಲೆಹರಟೆ, ತನ್ನ ಪ್ರಪಂಚದಲ್ಲೆ ಮುಳುಗಿ ಹೋಗುವಂತವಳು. ಆದರೂ ಇಬ್ಬರೂ ಒಂದೆರಡು ತಾಸು ಊಟ ಮಾಡುತ್ತಾ ಸಮಯ ಕಳೆದಿದ್ದಾರೆ. ಭೇಟಿಗೂ ಮುಂಚೆಯೇ ತುಂಬಾ ಮಾತುಗಳನ್ನ ಹಂಚಿಕೊಂಡಿದ್ದರಿಂದ, ಅಲ್ಲಿ ಮೌನವೇ ಹೆಚ್ಚು ಮಾತಾಡಿದೆ.

ಊಟ ಮುಗಿಸಿದ ನಂತರ, ಅವಳು ಆಟೋ ಹಿಡಿದು PG ಗೆ ಬಂದಿದ್ದಾಳೆ, ಆತ ತನ್ನ ಆಫೀಸ್ ಗೆ ಹೋದನಂತೆ. ರಾತ್ರಿ ಸಹಜವಾಗಿ ಇವಳಿಗೆ ಅವನೊಟ್ಟಿಗೆ ಮಾತಾಡಬೇಕೆನಿಸಿ, ಫೋನ್ ಹಚ್ಚಿದ್ದಾಳೆ. ಅವನಿಂದ ಉತ್ತರವಿಲ್ಲ. ಒಂದೈದು ಬಾರೀ ಪದೇ ಪದೇ ಕಾಲ್ ಮಾಡಿದ್ರೂ, ಆತ ಫೋನ್ ತೆಗೆದಿಲ್ಲ. ಒಂದೆರಡು msg ಹಾಕಿ, ಇವಳು ಮಲಗಿದ್ದಾಳೆ.

ಮರುದಿನ, ಬೆಳಿಗ್ಗೆ ಅವನ ಕಾಲ್ ಬರುವ ಸಹಜ ನೀರೀಕ್ಷೆ ಇವಳಿಗಿತ್ತು. ಆದರೆ ಅದು ಆಗಲಿಲ್ಲ.

ಪುನಃ ಕಾಲ್ ಮಾಡಿದಾಗ ಆತ ಕಾಲ್ ಕಟ್ ಮಾಡಿ, “ಏನಾಯ್ತು? ರಾತ್ರಿ ಅಷ್ಟೊಂದು ಕಾಲ್ ಮಾಡಿದ್ದೀರಾ”  ಅಂತ msg ಕಳುಹಿಸಿದ್ದಾನೆ. ಒಂದು ದಿನದಲ್ಲಿ ಅಷ್ಟು ಹತ್ತಿರವಾದ ವ್ಯಕ್ತಿ ಹೀಗೇ ಒಂದೇ ರಾತ್ರಿಲೀ ಅಪರಿಚಿತನಂತೆ ಹಾಕಿದ msg ನೋಡಿ ಇವಳಿಗೆ ಶಾಕ್ ಆಗಿದೆ. ಹಾಗಂತ she didn’t fall in love with him. But As a friend she likes him. The only reason for that he was listening her words and he gave respect to her feelings and thoughts. He has a great passion in travelling so she wanted to know wonderful experience of travelling.

ಆದರೆ ಯಾವಾಗ್ ಅವಳಿಗೆ ಆತ ತನ್ನನ್ನ ಅವಾಯ್ಡ್ ಮಾಡ್ತಿದಾನೆ ಅಂತ ಗೊತ್ತಾಯಿತೋ, ಇವಳಿಗೆ ಗಿಲ್ಟ್ ಶುರು ಆಗಿದೆ. ಆಕೆ  ಅವಳಾಗೆ ಯಾವತ್ತೂ ಹೀಗೇ ಯಾರನ್ನು ಫ್ರೆಂಡ್ ಮಾಡ್ಕೊಂಡು, ತುಂಬಾ ಕ್ಲೋಸ್ ಆಗಲ್ಲ.. ಹಾಗಿರೋದು ಸಹ ಅವಳಿಗೆ ತನ್ನ ಫ್ರೀಡಂನ್ನ ಕಳ್ಕೊಂಡ ಹಾಗೇ ಫೀಲ್ ಕೊಡುತ್ತಂತೆ. So ಯಾವಾಗ್ಲೂ ಒಂಟಿಯಾಗಿ, ಎಲ್ಲವನ್ನು ಫೇಸ್ ಮಾಡೋ ಗೀಳು ಅವಳಿಗಿದೆ. ಹೀಗೇ ಒಬ್ಬ ಅಚಾನಕ್ಕಾಗಿ ತನ್ನ ಲೈಫ್ನೊಳಗೆ ಬಂದು, 24 ಗಂಟೇಲಿ ಕ್ಲೋಸ್ ಆಗಿ, within 6 to 7 hours ಲ್ಲಿ ಅಪರಿಚಿತನಂತೆ ಆಗೋದು ಇದೆಯಲ್ಲ ಇದ್ರ ಬಗ್ಗೆ ಅವಳು ತಲೆಕೆಡಿಸಿಕೊಂಡದ್ದು.

ಕೊನೆಯದಾಗಿ ಆತನಿಗೆ, ಇವಳು ಒಂದ್ ಮೆಸೇಜ್ ಹಾಕಿದಾಳೆ. “ಸರ್ ನನ್ನಿಂದ ಏನಾದ್ರೂ ತಪ್ಪಾಗಿದ್ರೆ ಹೇಳಿ. ನೀವು ನನ್ನ ಹೀಗೇ ಅವಾಯ್ಡ್ ಮಾಡ್ಲಿಕ್ಕೆ ರೀಸನ್ ಏನು?”

ಅದಕೆ ಆತ, “ನಾನು ವರ್ಕ್ ಮಾಡ್ತಿರುವಾಗ, ವರ್ಕ್ ಬಗ್ಗೆ ಅಷ್ಟೇ ಯೋಚ್ನೆ ಇರತ್ತೆ. ಬೇರೆ distraction ಆಗದೆ ಇರೋ ಹಾಗೇ ಎಚ್ಚರ ವಹಿಸ್ತೇನೆ, ನನ್ನ ಹಚ್ಚಿಕೊಳ್ಳೋದನ್ನ ಬಿಡು. ಚೆನ್ನಾಗಿ ಓದು. ನಿದ್ದೆ ಮಾಡು” .. ಹೀಗೇ… ಉದ್ದ ಮೆಸೇಜ್.ಇವಳು ಹೂ ಅಂದು ಸುಮ್ಮನಾದಳಂತೆ.

“ಅಯ್ಯೋ ಇಷ್ಟೇನಾ? ಬಿಟ್ಟು ಹಾಕು ಮಾರಾಯ್ತಿ, ಅವರು ಹೇಳಿದ್ರಲ್ಲೂ ಸರಿಯಿದೆ ಅಲ್ವಾ. ನಮ್ ಟೈಮ್ ಸೇವ್ ಆಗತ್ತೆ, ಸುಮ್ನೆ ಚಾಟಿಂಗ್, ಕಾಲ್ ಅಂತ ಕಾಲಹರಣ ಇರಲ್ಲ”  ಅಂದೆ.

ಅದಕ್ಕೆ ಅವಳು, “ಹೌದು ಕಣೇ ನಿಜ, ಆದ್ರೆ ಮೊದಲು ಮೆಸೇಜ್ ಮಾಡಿದ್ದು ಅವನೇ, ಕ್ಲೋಸ್ ಆಗಿ ಮಾತಾಡಿದ್ದು  ಕೂಡ ಅವನೇ, ಊಟಕ್ಕೆ ಕರೆದದ್ದು ಸಹ ಅವನೇ, ಈಗ ಅವಾಯ್ಡ್ ಮಾಡಿದ್ದು ಸಹ ಅವನೇ! ಈ ಮೊದಲ ” ಅವನು” ಗಳಿಗೆ importance ಕೊಟ್ಟ “ನನ್ನ ” ಬುದ್ಧಿಯ ಬಗ್ಗೆ ನಾನು ಯೋಚನೆ ಮಾಡ್ತಿರೋದು ಕಣೇ ಅಂದ್ಲು.

ನಂಗೂ ಒಮ್ಮೆ ಲೈಟಾಗಿ ಕರೆಂಟ್ ಪಾಸ್ ಆಯ್ತು. ಮುಂದುವರಿಸಿ ಹೇಳಿದಳು “ಯಾಕೆ ಈ ಹುಡ್ಗೀರು ಅಷ್ಟು ಸಲೀಸಾಗಿ, emotional dependent ಆಗಿ ಬಿಡ್ತಾರೆ? ಅವನಷ್ಟೇ ಕೆಲಸ ನಂಗೂ ಇತ್ತು, ಅವನ ʼಮೊದಲುʼ ಗಳಿಗೆ ಉತ್ತರಿಸುವ ಮೊದ್ಲು ನಾನು ಸ್ವಲ್ಪ ಯೋಚ್ನೆ ಮಾಡಬೇಕಿತ್ತು ಅಲ್ವಾ? ಅವನಷ್ಟೇ ಸಲೀಸಾಗಿ ನಾನು ಅವಾಯ್ಡ್ ಮಾಡಬೇಕಿತ್ತು, ಆದ್ರೆ ನಂಗ್ ಅದು ಸಾಧ್ಯ ಆಗ್ಲಿಲ್ಲ. ಹತ್ತಿರದ ವ್ಯಕ್ತಿಯನ್ನ ಕಳ್ಕೊಂಡ ಫೀಲ್ ಆಗ್ತಿತ್ತು. It’s all depends on my emotions ಅಲ್ವಾ? ಹುಡ್ಗಿರು ಎಲ್ಲಿಯವರೆಗೆ emotionally dependent ಆಗಿರ್ತಾರೋ ಅಲ್ಲೀವರೆಗೂ ಅವರಿಗೆ  ಮಾನಸಿಕವಾಗಿ ಮತ್ತು ದೈಹಿಕವಾಗಿ ಶೋಷಣೆ ಆಗ್ತಾನೆ ಇರತ್ತೆ ಕಣೇ, ನಾನು ಮೊದ್ಲು ಅದ್ರಿಂದ ಹೊರಗ್ ಬರ್ಬೇಕು” ಅಂತ ತನ್ನನ್ನೇ ತಾನು ಬೈಕೊಂಡಳು.

ಅವಳ ಈ ಯೋಚನೆಗೆ ಒಂದ್ ಗಟ್ಟಿ ಅಪ್ಪುಗೆ ಬಿಟ್ರೆ ಮತ್ತೇನನ್ನೂ ಕೊಡೋಕೆ ನಂಗ್ ಸಾಧ್ಯ ಆಗ್ಲಿಲ್ಲ…

ದಿವ್ಯಶ್ರೀ ಅದರಂತೆ

ಬೆಂಗಳೂರಿನ ಸೈಂಟ್‌ ಜೋಸೆಫ್‌ ಕಾಲೇಜಿನ ಇಂಗ್ಲಿಷ್‌ ಸಾಹಿತ್ಯದ ವಿದ್ಯಾರ್ಥಿನಿ

ಇದನ್ನೂ ಓದಿ-<strong>ಗೆಳೆಯ ನಿಖಿಲನಿಗೊಂದು ಪತ್ರ</strong>

Related Articles

ಇತ್ತೀಚಿನ ಸುದ್ದಿಗಳು