ಬಿಹಾರದ ಬಕ್ಸರ್ನಲ್ಲಿ ಒಂದೇ ವಾರದೊಳಗೆ ಎರಡು ರೈಲು ಅಪಘಾತ ಸಂಭವಿಸಿದೆ. ಸೋಮವಾರ ರಾತ್ರಿ ಬಕ್ಸರ್ ಪಟ್ಟಣದಲ್ಲಿ ಗೂಡ್ಸ್ ರೈಲು ಹಳಿತಪ್ಪಿದೆ.
ಬಕ್ಸರ್: ವಾರ ಕಳೆಯುವ ಮುನ್ನವೇ ಬಿಹಾರದ ಬಕ್ಸರ್ ನಲ್ಲಿ ಮತ್ತೊಂದು ರೈಲು ಅಪಘಾತ ಸಂಭವಿಸಿದೆ. ಸೋಮವಾರ ರಾತ್ರಿ ಬಕ್ಸರ್ ಪಟ್ಟಣದಲ್ಲಿ ಗೂಡ್ಸ್ ರೈಲು ಹಳಿತಪ್ಪಿದೆ. ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ನಿಂದ ಬಕ್ಸರ್ ಮೂಲಕ ಫತುಹಾಗೆ ಗೂಡ್ಸ್ ರೈಲೊಂದು ಹೋಗುತ್ತಿದ್ದಾಗ ಬಕ್ಸರ್ನ ಡುಮ್ರಾನ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ಮಾಹಿತಿ ಪಡೆದ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದರು. ಹಳಿತಪ್ಪಿದ ಬೋಗಿಯನ್ನು ಹಳಿಯಿಂದ ಸ್ಥಳಾಂತರಿಸಲು ಮತ್ತು ರೈಲು ಮಾರ್ಗವನ್ನು ಸರಿಪಡಿಸಲು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಏತನ್ಮಧ್ಯೆ, ಈ ಅಪಘಾತದ ಕಾರಣಗಳ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡಿಲ್ಲ.
ಬಕ್ಸರ್ ಜಿಲ್ಲೆಯ ರಘುನಾಥಪುರ ರೈಲು ನಿಲ್ದಾಣದ ಬಳಿ ಇದೇ ತಿಂಗಳ 11ರಂದು ಈಶಾನ್ಯ ಎಕ್ಸ್ಪ್ರೆಸ್ ರೈಲು ಹಳಿತಪ್ಪಿತ್ತು. ಬುಧವಾರ ರಾತ್ರಿ 9.53ಕ್ಕೆ ದೆಹಲಿಯ ಆನಂದ್ ವಿಹಾರ್ನಿಂದ ಅಸ್ಸಾಂನ ಕಾಮಾಖ್ಯ ಜಂಕ್ಷನ್ಗೆ ಹೋಗುತ್ತಿದ್ದ ಈಶಾನ್ಯ ಎಕ್ಸ್ಪ್ರೆಸ್ನ 21 ಬೋಗಿಗಳು ರಘುನಾಥಪುರ ಬಳಿ ಹಳಿತಪ್ಪಿದವು. ಈ ಅಪಘಾತದಲ್ಲಿ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇನ್ನೂ 70 ಜನರು ಗಾಯಗೊಂಡಿದ್ದಾರೆ.