ಕಾಂಗ್ರೆಸ್ ತಾನು ಸರ್ಕಾರ ರಚಿಸಿ 45 ದಿನಗಳಾಗಿದ್ದರೂ ತನ್ನ ಭರವಸೆಗಳಾದ ಗ್ಯಾರಂಟಿಗಳನ್ನು ಈಡೇರಿಸದೆ ಕಾಲ ಹರಣ ಮಾಡುತ್ತಿದೆ. ಮತ್ತು ಈ ಕುರಿತು ಪ್ರಶ್ನಿಸುತ್ತಿರುವ ನಮ್ಮ ಪಕ್ಷವನ್ನು ತನಿಖೆಯ ಹೆಸರಿನಲ್ಲಿ ಹೆದರಿಸಲು ನೋಡುತ್ತಿದೆ ಎಂದು ಇಂದು ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ ಹೇಳಿದರು.
ಮುಂದುವರೆದು ಮಾತನಾಡಿದ ಅವರು “ನಮ್ಮ ಹಿಂದಿನ ಸರಕಾರದ ಸಚಿವರು ಹಗರಣ ಮಾಡಿದ್ದಲ್ಲಿ ಅದನ್ನು ತನಿಖೆ ನಡೆಸಲಿ. ಹಾಗೆಯೇ ಸರ್ಕಾರ ನೀಡಿದ್ದ ಭರವಸೆಗಳನ್ನೂ ಈಡೇರಿಸಲಿ. ಹಾಗೊಂದು ವೇಳೆ ಈಡೇರಿಸದೇ ಹೋದರೆ ಸದನದ ಒಳಗೂ, ಸದನದ ಹೊರಗೂ ನಮ್ಮ ಪಕ್ಷದ ವತಿಯಿಂದ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ. ಇವರ ಗೊಡ್ಡು ಬೆದರಿಕೆಗಳಿಗೆ ಹೆದರಲು ನಾವು ಬಾಳೆ ಹಣ್ಣು ತಿನ್ನುತ್ತಾ ಕುಳಿತಿಲ್ಲ” ಎಂದು ಗುಡುಗಿದರು.
“ಮನಸ್ಸಿಗೆ ಬಂದಂತೆ ಗ್ಯಾರಂಟಿಗಳನ್ನು ಘೋಷಿಸಿ ಈಗ ಅದರ ಜಾರಿಗೆ ಮೀನ ಮೇಷ ಎಣಿಸಿದರೆ ವಿರೋಧ ಪಕ್ಷವಾಗಿ ಹೋರಾಡಬೇಕಿರುವುದು ನಮ್ಮ ಕರ್ತವ್ಯವಾಗಿದೆ” ಎಂದು ಅವರು ಹೇಳಿದರು.
ನಿನ್ನೆಯಿಂದ ಸದನದ ಕಲಾಪ ಆರಂಭಗೊಂಡಿದ್ದು ವಿರೋಧ ಪಕ್ಷದ ನಾಯಕ ಯಾರು ಎನ್ನುವ ಗೊಂದಲ ಮುಂದುವರೆದಿರುವಾಗಲೇ, ಬಿಜೆಪಿ ಇತರ ನಾಲ್ಕು ರಾಜ್ಯಗಳಿಗೆ ಅಧ್ಯಕ್ಷರನ್ನು ಘೋಷಿಸಿದೆ. ಚುನಾವಣೆ ಎದುರು ನೋಡುತ್ತಿರುವ ರಾಜ್ಯಗಳಿಗೆ ಅಧ್ಯಕ್ಷರನ್ನು ನೇಮಿಸಿರುವ ಬಿಜೆಪಿ ರಾಜ್ಯ ಬಿಜೆಪಿಯ ವಿಷಯದಲ್ಲಿ ಕೈಯಾಡಿಸಲು ಹೆದರುತ್ತಿದೆ. ನಿನ್ನೆ ಬೆಂಗಳೂರಿಗೆ ಬರಬೇಕಿದ್ದ ವೀಕ್ಷಕರೂ ಬಾರದೆ ಇರುವುದು ಬಿಜೆಪಿಯೊಳಗಿನ ಒಳಜಗಳ ಯಾವ ಹಂತದಲ್ಲಿದೆಯೆನ್ನುವುದನ್ನು ತೋರಿಸುತ್ತಿದೆ ಎನ್ನುವುದು ಹಿರಿಯ ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.
ಸರಕಾರದ ವಿರುದ್ಧ ಯಡುಯೂರಪ್ಪ ಬಣದ ನಾಯಕರೇ ಸರಕಾರದ ಕುರಿತಾಗಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ನೋಡಿದರೆ ಬಿಜೆಪಿಯ ಇನ್ನೊಂದು ಬಣದ ʼಸಂತೋಷʼ ಪೂರ್ತಿಯಾಗಿ ಕುಗ್ಗಿರುವಂತಿದೆ. ಈ ನಡುವೆ ಶೋಭಾ ಕರಂದ್ಲಾಜೆ ಪಕ್ಷದ ಅಧ್ಯಕ್ಷರಾಗಲಿದ್ದಾರೆನ್ನುವ ಪುಕಾರು ಇದಕ್ಕೆ ಇನ್ನಷ್ಟು ಪುಷ್ಟಿ ನೀಡುವಂತಿದೆ.